ಬಂತು ಬಜೆಟ್ ಎರಡು ಸಾವಿರದೆಂಟು
ತಂದಿದೆ ಎಲ್ಲರಿಗೂ ಸಂತಸದ ಗಂಟು
ಖಚಿತ ಚುನಾವಣೆಯಾ ಮುನ್ಸೂಚನೆ
ಮತದಾತರೆಲ್ಲರನೊಲಿಸುವ ಆಚರಣೆ
ರೈಲ್ವೇ ಲಾಲು ರೈಲು ಬಿಟ್ಟ ನಂತರ
ವಿತ್ತ ಸಚಿವ ಚಿದಂಬರಂ ಚಮತ್ಕಾರ
ದೇಶದ ಸಮಗ್ರ ಆರ್ಥಿಕ ಅಭಿವೃದ್ದಿ
ಎಲ್ಲಾ ಕ್ಷೇತ್ರಗಳಿಗೆ ನೀಡಿ ಸಿಹಿಸುದ್ದಿ
ದೇಶಕೆ ಮೊಟ್ಟ ಮೊದಲ ಭಾರಿಗೆ
ಭಾರೀ ರಿಯಾಯಿತಿ ನಮ್ಮ ರೈತರಿಗೆ
ಕೃಷಿ ವಲಯ ಕುಸಿತದ ತಡೆಗೆ ಯತ್ನಿಸಿ
ರೈತರ ಮುಖದಲಿ ನಗುವ ಕಾಣಲಿಚ್ಚಿಸಿ
ಅಲ್ಪ ಸಂಖ್ಯಾತರಿಗೆ ದುಪ್ಪಟ್ಟು ಹಣಕಾಸು
ಶಿಕ್ಷಣ ಕ್ಷೇತ್ರಕೆ ನೀಡಿ ಸಾಕಷ್ಟು ಆಧ್ಯತೆ
ಆರೋಗ್ಯ ರಕ್ಷಣೆಗೆ ಮನಗೊಟ್ಟು ಕೊನೆಗೆ
ಎಲ್ಲರ ಮನವೊಲಿಸಿ ಮತಗಳಿಸುವಾಸೆಗೆ
ಕಡುಬಡವರಿಗೆ ಆರೋಗ್ಯ ವಿಮೆ ಯೋಜನೆ
ಮುವತೈದು ಸಾವಿರ ಸಬ್ಸಿಡಿ ಕಟ್ಟಲು ಮನೆ
ಸಾಲ ನೀಡಿ ಮಹಿಳಾ ಸ್ವಸಹಾಯ ಗುಂಪಿಗೆ
ಬಲ ಜೀವನ ಸುರಕ್ಷೆಗೆ, ಆರೋಗ್ಯ ರಕ್ಷಣೆಗೆ
ಶೇಕಡ ಐವತ್ತರ ಗೌರವಧನ ಏರಿಕೆ
ಅಂಗನವಾಡಿ ಕಾರ್ಯಕರ್ತೆಯರಿಗೆ
ಮಧ್ಯಾಹ್ನದ ಬಿಸಿಯೂಟ ಪ್ರೌಢ ಶಿಕ್ಷಣಕೆ
ಒತ್ತು ಕೊಟ್ಟು ಹಿರಿಯರ ಆರೋಗ್ಯ ರಕ್ಷಣೆಗೆ
ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗದವರಿಗೆ
ತೆರಿಗೆಗೆ ಆದಾಯ ಮಿತಿ ಏರಿಕೆಯ ಜೊತೆಗೆ
ತೆರಿಗೆ ದರಗಳ ಮಿತಿ ಮಾಡಿರುವರು ಹೆಚ್ಚಿಗೆ
ಈ ಜಾಣ ಕ್ರಮದಿಂದ ಸೆಳೆದರವರನು ತೆಕ್ಕೆಗೆ
ವಿತ್ತ ಸಚಿವರ ದಿಟ್ಟ ನಿರ್ಧಾರಗಳ ದಿಸೆಯಿಂದ
ಹೂಡಿಕೆದಾರರಿಗೆ ಉತ್ತೇಜನ ನೀಡಳಿದೆಯ?
ಸಾಮರ್ಥ್ಯ, ಸಂಪತ್ತು ಸಂಗ್ರಹ, ಬಳಕೆ ಹೆಚ್ಚುವುದೆ?
ಸರ್ವತೋಮುಖ ಆರ್ಥಿಕ ಅಭಿವೃದ್ದಿಯು ಸಾಧ್ಯವೆ?
ಈ ಪ್ರಶ್ನೆಗಳಿಗೆ ಉತ್ತರ ವರ್ಷಗಳ ನಂತರ
ಕಾದು ನೋಡುವ ಕುತೂಹಲವಿರಲಿ ನಿಮ್ಮಹತ್ತಿರ
ಸ್ಪಷ್ಟ ಮಧ್ಯಂತರ ಚುನಾವಣೆಗಿದು ತಂತ್ರ
ಮತ್ತೆ ಕೇಂದ್ರ ಸರ್ಕಾರಕೆ ಬರುವುದು ಅತಂತ್ರ
ಒತ್ತಡದಿಂದ ಹೊರಬರುವ ಕಂದ
ಒತ್ತಡ ಜೊತೆಗೆ ಇರುವುದೇನಂದ
ಒತ್ತಡ ಬಯಸದೆ ಬೇಡುವುದರಿಂದ
ಒತ್ತಡದೊಂದಿಗೆ ಬದುಕೇನು ಚಂದ
ಒತ್ತಡ, ಒತ್ತಡ ಎತ್ತಣದೊತ್ತಡ
ಅರಿಯುವ ಆಸೆಯೇ ಒತ್ತಡವು
ಹೆಜ್ಜೆ, ಹೆಜ್ಜೆಗೂ ಗುದ್ದಾಡುವನಿವ
ಗುಡ್ಡದ ಮೇಲತ್ತಿಸಿ ಒದೆಯುವನು
ನಮಗೆ ಮಾನಸಿಕ ಒತ್ತಡ, ದೈಹಿಕ ಒತ್ತಡ
ವಿದ್ಯಾಭ್ಯಾಸದ ಜೊತೆ ಉದ್ಯೋಗದೊತ್ತಡ
ಮದುವೆಯ ನಂತರ ಸಂಸಾರದ ಒತ್ತಡ
ಅನಾರೋಗ್ಯದೊಡನೆ ಮುದಿತನದೊತ್ತಡ
ಆಡಲು, ತಿನ್ನಲು, ಮಲಗಲು ಬಿಡದೆ
ಕಲಿಯಲು, ಕಲಿಸಲು ಕಷ್ಟದ ನೆಪದಿ
ಕೂಡುವ, ಕಳೆಯುವ ಲೆಕ್ಕಕೆ ಅವಸರ
ಮುಕ್ತಿ ದೊರೆಯುವುದೆಂದೋ ದಿನಕರ
ಇರದವರಿಗುಂಟು, ಇರುವವರಿಗೆ ನಂಟು,
ಇದ್ದೂ ಇರದಂತವರಿಗ ಕಟ್ಟಿದ ಕಗ್ಗಂಟು
ಸರಸಕು, ವಿರಸಕು ತೋರದೇ ಕನಿಕರ
ಯಾರು ಏನಂದರೂ ಇದಕಿಲ್ಲವೋ ಬೇಸರ
ಇಲ್ಲಿರುವವರಿಗೂ, ಅಲ್ಲಿರುವವರಿಗೂ,
ಚಿಕ್ಕ ಚಿಣ್ಣರಿಗು, ದೊಡ್ಡ ಜಾಣರಿಗು,
ಯುವಕ, ಯುವತಿಯರ ಬೆನ್ನತ್ತಿ
ಮುದುಕರನೂ ಮುತ್ತಿದ ಅವಾಂತರ
ಇರುವ ತೀವ್ರತೆಯಲ್ಲಿರುವುದು ಅಂತರ
ಈ ಸೂಕ್ಷ್ಮವೇ ನಮಗಿರುವ ಏಕೈಕ ವರ
ಎಡ ಬಿಡದೇ ಕಾಡುವನಿವ ಭಯಂಕರ
ಈ ಪೀಡೆಗೆ ತಿಳಿಯೋ ಬೇಗನೆ ಉತ್ತರ
ಆ ಚುಕ್ಕಿಗೂ, ಈ ಚುಕ್ಕಿಗೂ
ನಡುವೆ ಏನೀ ಅಂತರ ...
ದೈತ್ಯನಾಗಿ ಬೆಳೆವ ಕಾತುರ
ಕವಲೊಡೆದು ನಿಂತಿಹ ಕಂದರ
ಬಾಳ ಬಿಗುವಿನ ಬಿಂಕದಿಂದ
ಜನನವಿದಕೆ ಅನಿವಾರ್ಯವು
ಕಳಂಕವನ್ನೇ ಕಳಶವಾಗಿಸಿ
ಕಾಣಸಿಗದಿಹ ಚಾತುರ್ಯವೋ
ತಿಳಿಯದಾಗಿದೆ ಈ ಅಗೋಚರ
ನಿಲ್ಲದೇಕಿದೂ ನಿರಂತರ
ತೂಗು ದೀಪವೊ, ದಾರಿ ದೀಪವೊ
ನೆತ್ತಿ ಮೇಲಿನ ತೂಗು ಕತ್ತಿಯೊ
ನವ ದಿಗಂತಕೆ ನಾಂದಿ ಹಾಡುತ
ಇರುವ ಇರದುದನೆಲ್ಲ ಕೆದಕುತ
ಉರಿವಬೆಂಕಿಗೆ ತೈಲವೆರೆಯುತಾ
ನಗುವೆ ಏಕೇ ನೀನು ಸತತ
ಚುಕ್ಕಿ, ಚುಕ್ಕಿಗೂ ಖಚಿತವಂತರ
ಚೆಲುವಿನ ಚಿತ್ತಾರ ಪರಿಸರ
ನೆಟ್ಟ ನೋಟಕೆ ತರವೆ ಬೇಸರ
ನಿಜವನರಿಯೋ ದಿನವು ಸುಂದರ
ಭಾವಗಳು ಹಸಿಯಾಗಿ
ನವಿರಾದ ಚಿಗುರಾಗಿ
ಎಳೆತಾದ ಕಾಯಾಗಿ
ಒಗರಿರುವ ರುಚಿಯಾಗಿ
ಮಸುಕು ಮಸುಕಾಗಿ
ಕರಗದೆ ಬಹುವಾಗಿ
ಬಯಸದೆ ತೀವ್ರವಾಗಿ
ಹಾಗೆ ನಿರಾಳವಾಗಿ
ಭಾವನೆಗೆ ಬಣ್ಣಗಳ
ಸೆಳೆವ ಮಾತುಗಳ
ಹತ್ತು ಸನ್ನಿವೇಶಗಳ
ಹೊತ್ತು ಅಂತರಾಳ
ಆಳವಾದ ಅಧ್ಯಯನ
ವಿಭಿನ್ನ ದೃಷ್ಟಿಕೋನ
ಅನುಭವದ ಹಿನ್ನಲೆ
ಅಗಾಧ ಅರಿವಿನಲಿ
ನಿಯಂತ್ರಿತ ಚಾಲನೆ
ಕ್ರಿಯಾಶೀಲ ಚಿಂತನೆ
ಪ್ರಜ್ಞಾವಂತಿಕೆಯ ಕೆನೆ
ಅಭಿವ್ಯಕ್ತಿಯೆ ಸಾಧನೆ
ಹಲವಾರು ಆಯಾಮ
ಎಲ್ಲದರ ಸಮಾಗಮ
ಕಾಯುವ ಸಂಯಮ
ಪ್ರಬುದ್ಧ ಕೃತಿಗೆ ಜನ್ಮ
ಫಡಫಡಿಸಿ ರೆಕ್ಕೆಯ ಬಡಿಯುತಿಹ ಹಕ್ಕಿ
ಮೊನಚಾದ ಕೊಕ್ಕಿನಿಂದಿಟ್ಟು ಚುಕ್ಕಿ
ತವಕ ತಲ್ಲಣಗಳ ನಡುವೆ ನೆಟ್ಟಿರುವೆ
ನಿನ್ನ ವಾರೆನೋಟವನು ಯಾವಕಡೆಗೆ?
ಆಳದಾ ಬೇರುಗಳ ತಳಪಾಯದಲಿ
ಮೆಲ್ಲನೇ ಅಲ್ಲಿ ಮೇಲೆದ್ದ ಮರವನು
ನೆಲೆಯಾಗಿಸಿ, ಎಲ್ಲಿಂದಲೋ ಆಯ್ದು
ಪರಿಕರಗಳನೊಟ್ಟುಗೂಡಿಸಿ ಗೂಡಾಗಿಸಿದೆ.
ಜೊತೆಗಾರನನು ರಮಿಸಿ ಸರಸ ವಿರಸ
ವೇದನೆಗಳನನುಭವಿಸಿ, ಸಂತಾನ ಬೆಳೆಸಿ
ಮತ್ತದೇ ಗಾಳಿಯಲಿ ತೂರಾಡುತಾ ಹಾರಿ
ಬಾಳ ಚಕ್ರದಲಿ ತಿರುಗುತ್ತಾ, ತಡಕುತ್ತಿವೆ.
ಹುಡುಕುತಾ ಎಲ್ಲ ತಳಮಳಗಳ ಜೊತೆ
ಮನದಾಳದಲಿ ಮಿಡಿಯುತಾ ಮೀಟುತಾ
ತವಕದಲಿ ಯಾರನೋ ನೆನೆಯುತಿರುವೆ
ನೋವ ಮೀಟಿದವನ ಮರೆಯಲೆತ್ನಿಸುವೆ.
ಈ ಬದುಕಿನ ಪಯಣದಲ್ಲಿಟ್ಟು ಚುಕ್ಕಿ
ತಿರುಗಿ ನೋಡುವ ಬಯಕೆಯಲಿ ಬಿಕ್ಕಿ
ಮತ್ತೆ ಬಾರದೆಡೆಗೆ ಹಾರಿಹೋಗಿದೆ ಹಕ್ಕಿ.
ಬೇಸಿಗೆ ರಜೆಗೆ ನಾವು ಬೇಟೆಗೆ ತೆರಳಿ
ಹೊತ್ತ ಬುತ್ತಿಯ ಮಧ್ಯಾಹ್ನಕೆ ಮುಗಿಸಿ
ದಿನದಲಿ ಅದೃಷ್ಟ ಪರೀಕ್ಷೆಯ ಮಾಡಿ
ದಣಿದ ನಂತರವೇ ಮನೆಕಡೆಗೆ ಮರಳಿ
ವರ್ಷ ಪೂರ ನಾವು ಕೂಡಿಟ್ಟ ಕಾಸನು
ಜಾತ್ರೆಯ ದಿನದಿ ಕಿಸೆಯಲಿ ಸೇರಿಸಿ
ಗೆಳೆಯರೊಡನೆ ಸಂಭ್ರಮದಿ ಹೊರಡಿ
ನಮ್ಮ ಸಂತಸಕೆ ಇಲ್ಲ ಯಾರ ಅಡ್ಡಿ
ಕಾಸಿನ ಆಟವಾ ಜಾತ್ರೆಯಲಿ ಆಡುತಾ
ಮಂಡಕ್ಕಿ, ಬೋಂಡ ಗಬ ಗಬ ಮುಕ್ಕುತಾ
ಸಂಜೆಗೆ ಕುಣಿತ, ನಾಟಕವಾ ನೋಡುತಾ
ಗೆಳೆಯರ ಜೊತೆ ಗಮ್ಮತ್ತಿನ ಮಾತಾಡುತಾ
ಗಿಡದಲಿ ಮಾಗಿದ ಸೀತಾಫಲದ ರುಚಿ
ಬೇಯಿಸಿದ ಅವರೆ, ಅಲಸಂದಿಯ ಮೆಲ್ಲುತಾ
ಸುಟ್ಟ ಕಡ್ಲೆ ಕಾಯಿಯ ಜೋರು ತಿನ್ನುತಾ
ಎಳೆ ಮುಸುಕಿನ ಜೋಳವಾ ಕಚ್ಚುತಾ
ನೀರೂರಿಸುವ ತಿನಿಸುಗಳು ಅಪಾರ
ಹಸೀ ಮಾವಿನ ಕಾಯಿಗೆ ಉಪ್ಪು ಖಾರ
ಕೆರೇಲಿ ಹಿಡಿದ ಮೀನಿನಮಸಾಲೆ ಸಾರ
ನಾಟೀ ಕೋಳಿಯ ರುಚಿ ಕಂಡವ ಶೂರ
ಅಡಿಗೆಗೆ ಕಟ್ಟಿಗೆ ಕಡಿದು ತರುವೆವು
ಸಗಣಿ ಹಾಯ್ದು ತಿಪ್ಪೆಗೆ ಸುರಿವೆವು
ದನ ಕರುಗಳಿಗೆ ಮೇವು ಕೊಡುವೆವು
ಗದ್ದೆಗೆ ಸೊಪ್ಪು ಕತ್ತರಿಸಿ ತುಳಿವೆವು
ಹುಣ್ಣಿಮೆ ದಿನ ಸಂಜೆ ಗುಡಿಯಂಗಳದಲಿ
ಸಾರಿಸಿ ರಂಗೋಲಿಯಿಂದ ಸಿಂಗರಿಸಿ
ಹುಡುಗಿಯರು ತಟ್ಟಿದ ರಾಗಿಯರೊಟ್ಟಿಗೆ
ಹುಡುಗರು ಧಾಳಿಯನಿಡುವರು ಒಟ್ಟಿಗೆ
ಶ್ರಾವಣ ಮಾಸದಿ ಹುಡುಗರಿಗೆ ಹುರುಪು
ಮೂರು ನಾಮವ ಎಳೆದು ಎಲ್ಲರ ಹಣೆಗೆ
ಆರತಿ ಕಂಬವನಿಡಿದು ಗೆಳೆಯರ ಜೊತೆಗೆ
ತಾಳವನೊಡೆದು, ಡೋಲಕ್ಕನು ಬಡಿದು
ಸುತ್ತಲಿರುವ ಎಲ್ಲಾ ಊರುಗಳನು ಸುತ್ತಿ
ರಾಗಗಳರಿಯದ ಭಜನೆಯಾ ಕಿರುಚುತ
ಎಲ್ಲರೂ ಕೊಟ್ಟ ರಾಗಿಹಿಟ್ಟು, ಅಷ್ಟೂ ಅಕ್ಕಿ
ಶೆಟ್ಟರ ಅಂಗಡಿಗೆ ಭಾರೀ ತುಟ್ಟಿಗೆ ಮಾರಿ
ಬಂದ ಹಣದಿ ಟೆಂಟಲಿ ಸಿನಿಮಾ ನೋಡಿ
ಉಳಿದ ಕಾಸನು ಮದ್ಯಂತರಕೆ ಮುಗಿಸಿ
ಮುಗಿದ ನಂತರ ಶುರು ಹರಟೆ, ಗಲಾಟೆ
ಮರಳಿ ಬರುವೆವು ಮನೆಕಡೆಗೆ ಓಡೋಡಿ
ಎಲ್ಲೆ ಮೀರಿದರೆ ನಲ್ಲೆ ಮುಖಭಾವ ಭಯವ
ತಿರುಗಿ ನೋಡಳವಳ ಕಳವಳದ ಕಲರವ
ಹೊಂದಿಕೆಯ ಸೂತ್ರದಿಂದ ಸೆಳೆವ ತರವ
ಮೌನದಲಿ ತೋರಿಸುವವಳಿವಳು ಜಗವ
ಉಭಯ ಕುಶಲೋಪರಿಗಳಲಿ ದೂಡಿ ದಿನವ
ಬರುವ ದಿನಗಳನು ಹಸನಾಗಿಸುವ ಛಲವ
ಅವಳೊಡೆಯ ನಾನೆಂಬ ಐಶ್ವರ್ಯವನುಂಡು
ಈಕೆ ನಾನರಿಯದಾ ವಿಶ್ವವೆಂಬಚ್ಚರಿಯ ಕಂಡು
ಎಲ್ಲಿ ಅಡಗಿಸಿಹಳೋ ಇವಳು ಈ ಪರಿಯ ಜ್ಞಾನ
ಎಲ್ಲಿ ಕಲಿತಲೋ ಇವಳು ಈ ನಿಗೂಢ ವಿಜ್ಞಾನ
ನಲಿದಾಡುವವಳಿವಳು ನಿಲ್ಲದಲೇ ಅರಗಳಿಗೆ
ಮಮತೆಯಾ ಮೃಷ್ಟಾನ್ನವುಣಿಸಿ ಮನೆಮಂದಿಗೆ
ಸಂಜೆಗೆ ತವಕದಲಿ ಕಾಯುವಳು ನನ್ನೊಡತಿ
ಕಂಡ ಕ್ಷಣಕೆ ನಗೆಯ ಸ್ವಾಗತವೇ ನನಗಾರತಿ
ಮುನಿದಾಗ ಮೆಲು ದನಿಯಲೇ ಮಂಗಳಾರತಿ
ಮಣಿದರೆ ಆಗ ಶೃಂಗಾರ ರತಿಯೇ ನನ್ನ ಗರತಿ
ಹೊಸತಾಗಿ ಮೂಡಿದಾ ಅಭಿಮಾನ
ನಾನಾದಾಗ ನನ್ನವಳ ಯಜಮಾನ
ಕಾಡುವ ಕೊರತೆ ಕ್ಷಣಕೆ ಪಲಾಯನ
ಎಲ್ಲ ಪಡೆದೆನೆಂಬ ನನ್ನ ಬಿಗುಮಾನ
ಮೊದ ಮೊದಲು ಎಂಥಾ ಮೋಜು
ನನ್ನಾಕೆಗೆ ನನ್ನೊಲವಿನ ಸರಬರಾಜು
ದಿನ ದಿನವು ನಾನಾಡಿದೇ ಜೂಜು
ಆಗ ನನಗಿಲ್ಲ ಯಾರದೂ ಮುಲಾಜು
ಮುಂದುವರೆದ ದೂರ ತೀರ ಯಾನ
ಉಲ್ಲಾಸ, ಉತ್ಸಾಹಗಳಿಡುವ ಚುಂಬನ
ಹಿಡಿತಕೆ ಸಿಲುಕದೆ ಓಡುವ ಈ ಮನ
ಮೈಮರೆತು ನಾನಾದಾಗ ಮತಿಹೀನ
ಚಂದವೋ ಕುತೂಹಲ ಕರಗುವ ಮುನ್ನ
ಮುದ್ದು ಮಗುವಿಗೆ ತಾಯಾಗುವ ಮುನ್ನ
ಸಮಯ, ಪ್ರೀತಿ ಇಬ್ಭಾಗವಾಗುವ ಮುನ್ನ
ಸಿಡುಕಿನ ಜಗ ಪರಿಚಯವಾಗುವ ಮುನ್ನ
ಹಗುರವಾದ ಮನ ಭಾರವಾದಾಗ
ಅವಿತರಿಪ ಆದ್ಯತೆಗಳು ಅಗಾಧವಾಗ
ಪಡುವ ಯತ್ನಗಳೆಲ್ಲ ಕೈಕೊಡುವಾಗ
ಇರುವ ಸಂಯಮ ಬತ್ತಿ ಬರಿದಾದಾಗ
ಮೋಜಿನ ದಿನಗಳ ನೆನಪು ಉಳಿದಿರಲು
ಅದು ಭಾರವಾಗಿ ಪರಿವರ್ತನೆಗೊಂಡಿರಲು
ಬಾಳಿನ ಬಂಡಿ ಎಳೆದೆಳೆದು ಸುಸ್ತಾಗಿರಲು
ನೂರೆಂಟು ಯೋಚನೆ ಬಿಡವು ಹಗಲಿರುಳು
ನನ್ನಸಖಿ ಇದನರಿತು ಸಹಕರಿಸಲು
ನೋವು ನಲಿವುಗಳಲ್ಲಿ ನನ್ನ ಜೊತೆಗಿರಲು
ಬಂದ ಕಷ್ಟವನು ಲೆಕ್ಕಿಸದೆ ಬಡಿದಾಡುವೆ
ಕಂಡ ಜಯಕೆ ಖುಷಿಯಾಗಿ ಕುಣಿದಾಡುವೆ
ಜವಾಬ್ದಾರಿಗಳೇ ನನಗೆ ದಾರಿ ದೀಪವಾದಾಗ
ದಣಿದ ಮನಕೆ ಮುದ್ದು ಮಗುವೇ ಮದ್ದು ಆಗ
ನನ್ನಾಕೆಯಕ್ಕರೆಯ ರುಚಿ ನಾ ಸವಿಯುವಾಗ
ಕಂಡುಕೊಂಡೆ ನಾ ಜೀವನದಾ ಗುಟ್ಟಾಗ
ದೂರದ ಬೆಟ್ಟ ಕಂಡರೂ ನುಣ್ಣಗೆ
ಹತ್ತಿರ ಹೋದರೆ ಏರುವುದೆತ್ತರಕೆ
ಆದರೂ ಬೇಡವೋ ಹಿಂಜರಿಕೆ
ದಿಟ ಒಪ್ಪಿರಲೆಮಗೆ ಭಯವೇಕೆ
ಇರಲಿ ಕಾದ ಕಲ್ಲು, ಚುಚ್ಚುವ ಮುಳ್ಳು
ಬರಲಿ ನೂರು ವಿಷದ ಜಂತುಗಳು
ಜಿಗಿಯಲಿ ಮೇಲೆ ಕ್ರೂರ ಮೃಗಗಳು
ಜೊತೆಗೆ ಕಾದಾಡುವ ರಣ ಹದ್ದುಗಳು
ಗಾಢ ಆತ್ಮಸ್ಥೈರ್ಯ ನಮ್ಮಲಿರಲು
ಖಂಡಿತ ಸಿಗುವುದು ಅಲ್ಲಲ್ಲಿ ನೆರಳು
ಹಸಿವ ನೀಗಲು ಕಾಯಿ ಬೇರುಗಳು
ಬತ್ತಿದ ಬಾಯಿಗೆ ಸಾಕಷ್ಟು ನೀರು
ಪಳಗಿಸು ನೀ ಚಂಚಲ ಮನವನು
ಕಂಡುಕೊಂಡು ನಿರ್ದಿಷ್ಟ ಗುರಿಯನು
ಜೊತೆಗೆ ಸ್ಪಷ್ಟ ಹಾದಿಯ ಅರಿವಿರಲು
ಬೇರೇನು ಬೇಕು ಮುನ್ನಡೆಯಲು
ಬಂದಾಗ ಶೂನ್ಯ, ಹೊರಟಾಗ ಶೂನ್ಯ
ಅನುಭವದ ಸ್ನೇಹದಿ ಬಲ ಬರುವುದು
ಕೇವಲ ಪಯಣ ನಮಗುಳಿದಿರುವುದು
ಈ ಸತ್ಯವ ಅರಿತರೆ ಬೇಸರವಿರದು
ಕಲಿತ ಜ್ಞಾನದಿ ನೀ ಬೆಳಗು ಜಗವನು
ಗಳಿಸಿದ ಧನದಿಂದ ಜನರಿಗೆ ನೆರವನು
ಹಸಿದು ಬಂದವರಿಗೆ ತುತ್ತು ಅನ್ನವನು
ನಮ್ಮ ಆತ್ಮಸಂತುಷ್ಟಿಗೆ ಬೇರೆ ಬೇಕೇನು
ಏನೀ ಬೇಸರ, ನಿನಗೆ ಏಕೀ ಕಾತುರ
ಯಾವ ಅವಸರಕೆ ನಿನ್ನ ಈ ತರವು
ಒಣಗಿ ಬೆಂಡಾಗಿ, ಕಾಲ ಚೆಂಡಾಗಿ
ತೂರಿ, ಹಾರಿ, ತೇಲಿ, ನೀ ಮುಳುಗಿ
ನೂರೈವತ್ತು ನೀ ಕಂಡಿರುವ ಕುತ್ತು
ಸಾವಿರದ ಐವತ್ತು ಉಳಿದ ಆಪತ್ತು
ಇರುವ, ಇರದವುಗಳಲಿ ಜಾರಿಬಿದ್ದು
ಎಂದು ಬರುವೆಯೋ ನೀ ಮೇಲೆದ್ದು
ಒಳ ಹೊರಗೆ ನಿಲ್ಲದಿಹ ಹೋರಾಟ
ಹೆಜ್ಜೆ ಹೆಜ್ಜೆಗೂ ದಣಿದು ಪರದಾಟ
ಎಟುಕದ ಕಲ್ಪನೆಗಳ ಹುಡುಕಾಟ
ಬೇಡದ ಬೇಡಿಕೆಯು ಕೊಡುವ ಕಾಟ
ಯಾವ ಭ್ರಾಂತಿಗೆ ನೀ ಬೆರಗಾದೆ
ಯಾರ ಮಂತ್ರಕೆ ನೀ ಮರುಳಾದೆ
ಯಾವ ಶಕ್ತಿಗೆ ನಿನ್ನ ನೀ ಮರೆತೆ
ಯಾವುದಯ್ಯಾ ನಿನಗಿರುವ ಕೊರತೆ
ಎಲ್ಲಿ ಹುಡುಕುವೆ ಸಿಗದ ಸಂತಸವ
ನಿನ್ನೊಳಗೆ ಅವನಡಗಿ ಕುಳಿತಿರುವ
ಕಳೆದುಕೊಂಡ ನಿನ್ನೆ, ಸಿಗದ ನಾಳೆ
ಇರುವ ಈ ದಿನವೇ ನಮಗೆ ನಿಜವು
ಮುಚ್ಚಿ-ಮುಚ್ಚಿ ಮರುಳಾಗ ಬೇಡ
ಬಿಚ್ಚಿ-ಬಿಚ್ಚಿ ನೀ ಹಗುರಾಗ ಬೇಡ
ಬಿಚ್ಚಿ-ಮುಚ್ಚಿ ಮಧ್ಯಕೆ ಸೂಕ್ಷ್ಮ ಗೆರೆ
ಎಳೆಯುವವರಿರಲು ನಮಗಾಸರೆ
ಕುತೂಹಲ ಕೆರಳಿಸಲು ನಿರಂತರ
ಆಸಕ್ತಿ ಮೂಡುವುದು ಸಹಜವದರ
ಹಿಡಿದಿಟ್ಟು ಮನವ ನೋಯಿಸುವರ
ಕಟ್ಟೆ ಹೊಡೆಯಲು ನಷ್ಟ ಅಪಾರ
ಇರಲು ನೂರು ಕಣ್ಣುಗಳ ಕಟ್ಟೆಚ್ಚರ
ಜೊತೆಗೆ ತಂತ್ರ ಮಂತ್ರಗಳ ಆಗರ
ಹಲವಾರು ಯೋಜನೆಗಳ ಸಾಗರ
ಗುರಿ ತಪ್ಪಿ ಕೊಡಬಹುದು ನಿರುತ್ತರ
ಕನಿಕರವಿರದ ಕಾಣದಿಹ ಕೇಡುಗರು
ಕೊಳೆತಿರುವ ಮನೋವಿಕಾರದವರು
ಅವರ ಮನದ ಮನೆಯೊಳಗಿರುವರು
ಎಲ್ಲ ನಿರೀಕ್ಷೆಗಳ ಹುಸಿಯಾಗಿಸುವರು
ಒಳ ಹೊರ ಜಗದರಿವು ಅತ್ಯವಸರ
ನೈಜ ಕನ್ನಡಿಯ ಹಿಡಿದು ನೀ ಆಪ್ತರ
ಬೆಸೆದ ಸ್ನೇಹ ಮನ-ಮನೆಯು ಸುಂದರ
ಮೀರಿ ಘಟಿಸುವುದಕೆ ಅವನೇ ಉತ್ತರ
ಅಂತರ್ಜಾಲ ಶಿವಾ ಇದು ಮಾಯಾಜಾಲ
ಮಾಹಿತಿ ತಂತ್ರಜ್ಞಾನ ನಮಗೆ ತಂದ ಬಲ
ಬೇಕು ಬೇಡದ ವಿಷಯಗಳಿಗಿಟ್ಟು ಬಾಲ
ಎಲ್ಲೆಡೆಯು ಕುಣಿಯುತಿದೆ ಚಾಂಗು ಭಲ
ಒಮ್ಮೆ ಇಟ್ಟರೆ ಲಗ್ಗೆ, ಮತ್ತೆ ಬರುವರು ಜಗ್ಗಿ
ತಲೆಗೆ ಹುಳ ಹೊಕ್ಕಂತೆ ಕಾಡುವುದು ನಮಗೆ
ಯಾವುದೇ ಮಾಹಿತಿ ಎಲ್ಲಿಯೇ ಅಡಗಿರಲಿ
ಶ್ವಾನ ಗ್ರಹಣದ ಶಕ್ತಿಗೆ ಬರಲು ಉರುಳುರುಳಿ
ಸರ್ವಾನ್ತರ್ಯಾಮಿ ಶಿವ ಮುಖದ ಕಣ್ಣವನು
ಸಕಲ ಕುಲ, ನೆಲ, ಜಲದ ರುಚಿಯುಂಡವನು
ಕಾಲಗರ್ಭದಲಿ ಆಗಾಗ ಮಿಂದು ಬರುವನು
ನಿನ್ನೆ, ಇಂದು, ನಾಳೆ ನಾಳೆಗಳ ಲೆಕ್ಕಿಸನು
ಮನಸಿನಾ ವೇಗಕೆ ಧೂತ ಇವನೇನು
ಕ್ಷಣದಲಿ ಕಣ್ಮುಂದೆ ಪ್ರತ್ಯಕ್ಷವಾಗುವನು
ದೇಶ ವಿದೇಶಗಳನು ತೂರಿ ಬರುವವನು
ಬೇಕಾದ ವಿಷಯಗಳ ಆಯ್ದು ಬಡಿಸುವನು
ನಮ್ಮ ಸಂದೇಶಗಳ ಬಹುಬೇಗ ತರುವನು
ಇರುವ ಸಂದೇಹಗಳಿಗೆ ಉತ್ತರಿಸುವವನು
ಇಡೀ ವಿಶ್ವವನು ಒಂದುಗೂಡಿಸುವವನು
ಅಲ್ಲಲ್ಲಿ ಚದುರಿರುವ ಹಕ್ಕಿಗಳಿಗೆಲ್ಲ ಸಂತನು
ಮಾನವನಾಗುವವ ದೇವ ದಾನವನು
ದೇವ ಒಲಿತನು ದಾನವ ವಿನಾಶವನು
ನಮಗಿಟ್ಟು ಇದ ಬಳಸುವ ಆಯ್ಕೆಯನು
ಬಯಸದೇ ಯಾರಿಗೂ ಕಿಂಚಿತ್ತು ಕೇಡನು
ಬಲ್ಲವರೇ ನನ್ನ ಕರೆ ಒಸಿ ಕೇಳಿರೋ
ಭಾವಗಳ ಗಾಳಿಪಟವಾಗಿ ಹಾರಿ ಬಿಡಿರೋ
ಅಕ್ಕ ಪಕ್ಕದವರನ್ನೆಲ್ಲಾ ಇಲ್ಲಿ ಕರೆತನ್ನಿರೋ
ರುಚಿಕೊಟ್ಟು ಹುಳಬಿಟ್ಟು ಕುಣಿದಾಡಿರೋ
ಬಚ್ಚಿಡುವೆ ಭಾವಗಳನೇಕೆ ನೀ ಗೆಳತಿ
ಇರುವ ಒಲವನೀ ಪುಟ್ಟ ಹೃದಯದಲಿ
ಹುಚ್ಚು ಸಾಹಸ ತರವಲ್ಲ ನೆನಪಿರಲಿ
ಗೆಲುವು ನಿನದಾಗಲು ಸಾಧ್ಯವಿಲ್ಲ?
ಮೋಡ ಕವಿದ ಮಾತ್ರಕೆ ಭಯವೇ ಆಗಸಕೆ
ಸುರಿವ ಮಳೆಗಾಗಿ ನಾ ಮಾಡುವೆನು ಹರಕೆ
ಕವಿದ ಕಗ್ಗತ್ತಲಲಿ ಹೊಳೆವ ತಾರೆಯ ಹಾಗೆ
ಹುಣ್ಣಿಮೆಯ ಚಂದಿರ ನಾನಾಗುವಾ ಬಯಕೆ
ಮತ್ತದೇ ಆಟಕೇ ಬಿಂಕ ಬಿಡದೇ ಬೆಡಗಿ
ಕಂಡಿರುವೆ ನಿನ್ನೊಳಗೆ ಒಲವಿರುವ ಬಗೆ
ಮಂಕಾಗಿ ನೀ ಕುಂತು ಚಿಂತಿಸುವೆ ಏಕೆ
ನೆನಪಿನಾ ನದಿ ಹರಿಯುವಾ ವೇಗಕೆ ಸಿಲುಕಿ
ಮಳೆ, ಗಾಳಿ, ಚಲಿ, ಬಿಸಿಲಿಗೆದರುವನೇ ರವಿ
ದಿನವು ಮೂಡಣದಿ ಉದಯಿಸುವವನಿವ ಕವಿ
ಮುಳುಗಿ ತೇಲುವ ಆಟ ಹೊಸತಲ್ಲ ಅವನಿಗೆ
ಸರಸವಾಡುವ ದಿನವು ಭೂರಮೆಯ ಜೊತೆಗೆ
ವ್ಯರ್ಥ ಮಾಡದೆ ಕಾಲ ಒಳ ಮುಖವ ತೋರೆ
ಆಗೆನ್ನ ಪ್ರಾಣಸಖಿ ನೀನಾಗುವೇ ನಿತ್ಯಸುಖಿ
ಇಬ್ಬರೂ ಜೊತೆಗೂಡಿ ಒಲವಿನಾ ರಥವೇರಿ
ಇರುವ ಮೂರು ದಿನವೂ ನಗುವಿನಾ ರಸವೀರಿ
ಏಕಾಂತದಲೀ ಕಾಂತನ ನೆನಪು ಬಾರದೇ ನಲ್ಲೆ
ನೀರೂರಿಸುವಾ ನಿನ್ನ ಕೆಂದುಟಿಯು ರಸಬಾಳೆ
ನಾಳೆ ನಾಳೆಯೆನುತ ಭಯ ತರವೇ ಭಾಮಿನಿ
ಕಳೆದ ಮಧುರ ಕ್ಷಣ ಮತ್ತೆ ನೆನಪಾಗಿ ಮೋಹಿನಿ
ದಾರಿ ದೂರಾಗಿ, ಒಂದು ಎರಡಾಗಿ ಮತ್ತದೇ
ಗೊಂದಲದಲಿ ಎನ್ನೆಸೆಯ ಬೇಡವೇ ನವಿಲೇ
ಬಾಳು ಬೃಂದಾವನವು, ಮನ ಹೊಳೆವ ಹೂವು
ಬರಡಾಗದಿರಲಿ ಬದುಕು, ಬಾಡದಿರಲೀ ಮನವು
ಯೋಗಿ, ಕಿಂದರ ಜೋಗಿ, ನಿನ್ನೊಲವಿಗೆ ನಾ ಮಾಗಿ
ನಿನ್ನ ಎದೆಯಾಳದಲಿ ತೇಲಿ ಮುಳುಗುವಾ ಮೀನಾಗಿ
ಕಲ್ಪವೃಕ್ಷವು ನಾನಾಗಿ ನಿನ್ನ ಬಯಕೆಗಳ ಬತ್ತಿಸುವೆ
ಕವಿದ ಕತ್ತಲನ್ನೋಡಿಸುವ ಬೆಳಕಾಗಿ ನಾ ಬರುವೆ
ಜಾರದಿರು ಮನದನ್ನೆ ಮಾಡುತಾ ನೀ ಕಣ್ಸನ್ನೆ
ಕೈಯನಿಡಿಯಲು ಬಂದಾಗ ನಿನ್ನೆ ಹೇಳಿದ ನೆವವನ್ನೇ
ಸುಭದ್ರ ಕೋಟೆಯಲಿ ಬಂಧಿತನಲ್ಲ
ನನ್ನೊಂದಿಗೆ ಬೇರೊಬ್ಬರಾರಿಲ್ಲ
ಒಬ್ಬನಾದರೂ ಏಕತಾನತೆ ಕಾಡಿಲ್ಲ
ನೋವುಂಡ ನೆನಪು ನನಗಿಲ್ಲ
ಯಾವ ಕೊರತೆಯು ಕಾಣಲಿಲ್ಲ
ಪರರ ಚಿಂತೆಯ ಸುಳಿವಿಲ್ಲ
ನೂರೆಂಟು ಯೋಚನೆ ಕೊರೆದಿಲ್ಲ
ನೆಂಟರು ನನ್ನ ಬಳಿಗೆ ಬರಲಿಲ್ಲ
ಜೊತೆಗೆ ಸ್ನೇಹಿತರ ದಂಡಿರಲಿಲ್ಲ
ರಾಗ ದ್ವೇಷಗಳ ಪರಿಚಯವಿಲ್ಲ
ದೂರದ ಪಯಣ ಬೇಕಿರಲಿಲ್ಲ
ಋತುಮಾನಗಳ ರುಚಿಯುಂಡಿಲ್ಲ
ದುಷ್ಟಶಕ್ತಿಗಳ ಭಯವಿರಲಿಲ್ಲ
ಆಸೆಗಳ ಅಲೆಗಳು ತಟ್ಟಲಿಲ್ಲ
ಬಿರುಗಾಳಿಯ ವೇಗಕೆ ಎದರಿಲ್ಲ
ಹಗಲು ಇರುಳಿನ ಜಗವಲ್ಲ
ಮೆತ್ತನೆಯ ಬೆಚ್ಚಗಿನ ಹೊದಿಕೆಯಲಿ
ಸುಖದ ಸುಪ್ಪತ್ತಿಗೆಯಲಿ ಮಿಂದವನ
ನನ್ನೊಂದಿಗೆ ನಾ ನಕ್ಕು ನಲಿಯುತಿರಲು
ಕಾಲಮಿತಿಗೆ ಸೋತು ಹೊರಬರಲು
ಸಕಲವ ಕಾಣುವ ತವಕದಲಿ
ಕುತೂಹಲವೊಡೆದು ಕಣ್ಣುಬಿಡಲು
ಇಲ್ಲವುಗಳೆಲ್ಲ ಒಮ್ಮೆಗೆ ಧಾಳಿಯಿಡಲು
ಅನಿವಾರ್ಯತೆಯನರಿತು ಶರಣಾಗುವೆ
ಎಲ್ಲಿಂದಲೋ ಬಂದವನು
ಏಕೆಂದು ನಾ ಅರಿಯೆನು
ಎಲ್ಲಿಗೆ ಹೊರಟಿರುವೆನು
ಎಲ್ಲಿರುವೆನೆಂದು ತಿಳಿಯೆನು
ಯಾರ ಕರುಳ ಕುಡಿಯೆಂದು
ಬಲ್ಲವನು ನಾನು, ಈ ಆಯ್ಕೆ
ನನ್ನದು, ಅವರದ್ದು ಅಗಿರಲ್ಲಿಲ್ಲ
ಆಕಸ್ಮಿಕವೋ, ದೈವದತ್ತವೋ
ಪ್ರೀತಿ, ವಾತ್ಸಲ್ಯಕ್ಕೆ ಸೋತು
ಅವರ ನಾನು ಒಪ್ಪಲಿಲ್ಲ
ಇವರ ಕುಡಿ ನಾನೆಂದು
ಹೆಮ್ಮೆ ಪಟ್ಟದ್ದು ಸುಳ್ಳಲ್ಲ
ಅಗಾಧ ಪ್ರೀತಿಗೆ ಧನ್ಯತೆ
ನಿಸ್ವಾರ್ಥ ಸೇವೆಗೆ ಅರ್ಹತೆ
ಸ್ವಾಭಾವಿಕ ಬೆಳೆದ ಪೂಜ್ಯತೆ
ಅವರಿಗೆ ಯಾವ ಅನಿವಾರ್ಯತೆ
ದಿನ ನಿತ್ಯ ನನ್ನದೇ ಚಿಂತೆ
ಬೇಕು ಬೇಡಗಳನ್ನೊತ್ತು ಜಗಳ
ಆಸೆಗಳೀಡೇರಿಸುವ ಚಪಲ
ಏನು ಅವರಿಗಿರುವ ಕೊರತೆ
ಎಲ್ಲ ನೋವುಗಳ ನುಂಗುವರು
ಇವರು ಯಾವ ತ್ಯಾಗಕ್ಕೂ ಸಿದ್ದರು
ನಿರೀಕ್ಷೆಗೆ ಸ್ಪಂದಿಸಿದರೆ ಆನಂದಿಸುವರು
ಹುಸಿಯಾದರೆ ಒಳಗೊಳಗೆ ಕುಗ್ಗುವರು
ಭರವಸೆಗಳನ್ನೇಕೆ ಬಿತ್ತಿಹರು
ಚದುರಂಗದಾಟದಲಿ ಬಳಸುತಿಹರೆ
ಚಕ್ರವ್ಯೂಹದಲಿ ಸಿಲುಕಿಸಿರುವರೆ
ಅಸಹಾಯಕತೆಯಿಂದೇಗೆ ಹೊರಬರಲಿ
ಆಶಯಗಳ ತಳಪಾಯ ನಾನಾಗಲೇ
ನನ್ನ ಆಶಯಗಳ ಬಗ್ಗೆ ತಿಳಿಹೇಳಲೇ
ಕನಸುಗಳ ನನಸಾಗಿಸಲೆತ್ನಿಸಲೇ
ನನ್ನ ಕನಸುಗಳನ್ನೊಮ್ಮೆ ಪರಿಚಯಿಸಲೇ
ಇರುವಿಗೆ ಭರವಸೆ ನಾ ನೀಡಲೆ
ಇರುಳಲ್ಲಿ ನೆರಳಿಗೆ ಹುಡುಕಾಡಲೆ
ಬಾಡಿದ ಹೂಗಳಿಗೆ ಬೆಳಕಾಗಲೆ
ಮಾಗಿದ ಹಣ್ಣುಗಳಿಗೆ ಬದುಕಾಗಲೆ
ಇತ್ತ ಬಿಡಲಾರೆ ಮುಂದೆ ಹೋಗಲಾರೆ
ಜೊತೆ ಜೊತೆಗೆ ಸಾಗಿ ಸಾಧಿಸಲಾರೆ
ಧನ್ಯತೆಗೆ ತಲೆಬಾಗಿ ನಿಟ್ಟುಸಿರಿಡಲೆ
ಕ್ಷಣದಲಿ ಮರೆತು ಎದ್ದು ಹೊರಟುಬಿಡಲೆ
ಸರಿದೂಗಿಸುವ ಸಾಧ್ಯತೆಯಿರದಾಗ
ಮರೆಯಲೆತ್ನಿಸಿ ಮರೆಯಲಾದಾಗ
ಹತ್ತಿರವಿದ್ದರೂ ದೂರವಾದಾಗ
ನನ್ನ ನಾ ದ್ವೇಷಿಸಲು ಶುರು ಆಗ
ಪರಿಸ್ಥಿತಿಯನರಿತು ಮಾಡಿರುವೆ ನಿರ್ಧಾರ
ಜನ್ಮವಿತ್ತವರು ನನ್ನದೆಲ್ಲದಕೂ ಮಾಲೀಕರು
ಕೊನೆವರೆಗೂ ನಾ ಇರುವೆ ಇವರ ಹತ್ತಿರ
ಕಂಡುಕೊಳ್ಳುವೆ ಇಲ್ಲೇ ಕಳೆದುಕೊಂಡಿರುವುದರ
ಭಾರತ ಅಮೇರಿಕ ಅಣು ಒಪ್ಪಂದ
ಇದುವೇ ಒನ್ ಟು ತ್ರೀ ಅಗ್ರಿಮೆಂಟ್
ಸರ್ಕಾರ ಕೊಟ್ಟರೆ ಗ್ರೀನ್ ಸಿಗ್ನಲ್
ಒಪ್ಪಂದವಾಗುವುದು ಕಾನೂನು ಬದ್ಧ
ಅಣುಸ್ಥಾವರ ಸ್ಥಾಪನೆ ಅಲ್ಲಲ್ಲಿ ಹರಡಿ
ಅಮೇರಿಕ ಅಣುತೈಲ ನಮ್ಮಲ್ಲಿ ಬರಲು
ಅಣುಶಕ್ತಿ ಉತ್ಪಾದನೆ ನಮಗಲ್ಲಿ ಇರಲು
ನಾಗರಿಕ ಬಳಕೆಗಾಗಿ ಮಾಡಿ ತಯಾರಿ
ಕೇವಲ ಶೇಕಡಾವಾರು ಆರರಷ್ಟು
ದೇಶದ ಶಕ್ತಿ ಬೇಡಿಕೆ ಪೂರೈಸುವ
ಈ ಸಲುವಾಗಿ ಲೆಪ್ಟ್ ರೈಟ್ ಕಾದಾಟ
ರಾಯಭಾರಿಗಳ, ಮಂತ್ರಿಗಳ ಪರದಾಟ
ಬುದ್ದಿಜೀವಿಗಳ ಸಲಹೆ ಬೇಕಾಗಿಲ್ಲ
ಮಾದ್ಯಮಗಳ ತರಾಟೆ ಪರವಾಗಿಲ್ಲ
ಪ್ರತಿಪಕ್ಷಗಳ ಕಿರುಚಾಟಕ್ಕೆ ತಲೆಬಾಗಲ್ಲ
ಯಾರ ಮಾತಿಗೂ ನಾನು ಜಗ್ಗುವವನಲ್ಲ
ಮಾನ್ಯ ಪ್ರಧಾನ ಮಂತ್ರಿಗಳ ಧೃಢ ನಿರ್ಧಾರ
ಇದು ಸಮಸ್ಯೆಗೆ ಏಕೈಕ ಪರಿಹಾರ ಅಂತಾರ
ದೇಶದ ಪ್ರಗತಿಗೆ ಮೂಲ ಅಂತ ತಿಳಿದಾರ
ಅಮೇರಿಕಾ ದೇಶದ ರಾಯಭಾರಿ ಹಂಗಾಡ್ತಾರ
ದೇಶದ ಭದ್ರತೆಗೆ ಅಣು ಪರೀಕ್ಷೆ ಮಾಡಿದರ
ಖಾಯಂಹಾಗಿ ತೈಲ ಪೂರೈಕೆಗೆ ತಡೆ ಅಂತಾರ
ಭದ್ರತೆ ಮುಖ್ಯವೋ, ಅಣುಶಕ್ತಿ ಮುಖ್ಯವೋ
ಈ ಪ್ರಶ್ನೆಗೆ ಕೊಡಬೇಕು ಅವರೇ ಉತ್ತರ
ಅತಿ ಹೆಚ್ಚು ದ್ವೇಷಿಸುವ ದೇಶ ಅಮೇರಿಕಾ
ಇದಕೆ ನೆಂಟರು ಎಜೆಂಟರು ನಾವಾಗಬೇಕಾ
ಇದು ಮಾಡುವ ಚೇಸ್ಟೆಗಳಿಗೆ ತಲೆತೂಗಬೇಕಾ
ಇತರ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಬೇಕಾ
ಇವರೊಡನೆ ಅಣುಬಾಂಬ್ ಬಹಳ ಸುರಕ್ಷಿತ
ಅನ್ಯ ದೇಶಗಳೊಂದಿದರೆ ಬಾರೀ ದುರಂತ
ಎಲ್ಲಾ ರಾಷ್ಟ್ರಗಳು ಇದನು ಒಪ್ಪ ಬೇಕಂತಾ
ಆಗಲೇ ಪ್ರಪಂಚದಲಿ ಶಾಂತಿ, ನೆಮ್ಮದಿ ಅಂತಾ
ಹಿರೊಶಿಮಾ, ನಾಗಾಸಾಕಿ,ಕ್ಯೂಬಾ ಭೂತ ಯಾರಂತ
ಭೂಪಾಲದಲಿ ಅನಿಲ ಸೋರಿಕೆಗೆ ಕಾರಣ ಬೇಕಂತ
ಇರಾಕ್, ಪ್ಯಾಲೆಸ್ತೀನ್, ಆಫ್ಘಾನಿಸ್ಥಾನ್ ಯುದ್ದ ಯಾಕಂತ
ಇವರ ಗಿಳಿಪಾಠ ಕೇಳಿದರೆ ನಮ್ಮ ಕಿವಿ ತೂತ
ಭಯೋತ್ಪಾದನೆಯ ಸೃಷ್ಟಿ ಇವರದಲ್ಲವೇ
ಪಾಕೀಸ್ತಾನಕ್ಕೆ ದೊಡ್ಡಣ್ಣ ಇವನಲ್ಲವೇ
ಮದ್ದು ಗುಂಡುಗಳ ಒಡೆಯ ಇದಲ್ಲವೇ
ಅಮೇರಿಕಾ ನಂಬಲು ನಮಗೆ ಸಾಧ್ಯವೇ
ಜಾಗತೀಕರಣ, ಉದಾರೀಕರಣ,
ಖಾಸಗೀಕರಣ, ಸರಳೀಕರಣ,
ಗ್ರಾಹಕೀಕರಣ, ನಗರೀಕರಣ
ಭೂತಗಳ ಸೃಷ್ಟಿಗೆ ಇವ ಕಾರಣ
ಭಯೋತ್ಪಾದನೆಯು ಕೊಡುವ ನೋವಿಗಿಂತ
ಈ ಭೂತಗಳ ಸೃಷ್ಟಿಸುವ ಕಾಯಿಲೆಗಳು ಅಪಾರ
ನಗರದಲಿ ಪರಿಣಾಮ ಅಗಾಧವಾಗಿದೆ ಇದರ
ಸಿಗದಾಗಿದೆ ಯಾರಿಗೂ ಇದಕೆ ಪರಿಹಾರ
ಪ್ರಸಕ್ತ ವಿದ್ಯಮಾನಗಳೇ ಇದರ ಪ್ರತಿರೂಪ
ನಗರವಾಸಿಗರ ಮನಸ್ಥಿತಿಯೇ ಇದಕೆ ಪ್ರತಿಬಿಂಬ
ಹುಚ್ಚು ಸ್ಪರ್ಧೆಯಲಿ ಕೊಚ್ಚಿ ಹೋಗುವ ರೀತಿ
ಬೇಕಿತ್ತೇ ವಿದ್ಯಾವಂತರಿಗೆ ಇಂಥಾ ಪಜೀತಿ
ಬೇಕೇ ನಮಗೆ ಒಂದೇ ಭಾಷೆ, ಒಂದೇ ಸಂಸ್ಕೃತಿ,
ಒಂದೇ ಮನೋರಂಜನೆ, ಒಂದೇ ಆಹಾರ ಪದ್ದತಿ,
ಒಂದೇ ಜೀವನ ವಿಧಾನ, ಒಂದೇ ತಂತ್ರಜ್ಞಾನ
ನಮ್ಮ ಭಾಷೆ, ಸಂಸ್ಕೃತಿ, ವೈವಿಧ್ಯತೆ ಮರೆತು
ಪ್ರಗತಿಯ ಜೊತೆಗೆ ನೆಮ್ಮದಿಯು ಬೇಕು
ಹಣಗಳಿಕೆಯೊಂದಿಗೆ ಆರೋಗ್ಯವಿರಬೇಕು
ವಸ್ತು ವ್ಯಾಮೋಹ ತೊರೆದು ಜನ ಪ್ರೀತಿ ಬೇಕು
ಎಲ್ಲ ಸರಿದೂಗಿಸುವ ಜಾಣರು ನಾವಾಗಬೇಕು
ಸಮಾಜದ ಎಲ್ಲಾ ಸ್ಥರಗಳ ನಾವು ತಲುಪಬೇಕು
ಪ್ರಗತಿಯ ಪ್ರತಿಫಲವ ಎಲ್ಲರೂ ಸವಿಯಬೇಕು
ಸಮ ಸಮಾಜ ನಿರ್ಮಾಣ ಮಂತ್ರ ಜಪಿಸಬೇಕು
ಸರ್ವರೂ ಸಂತಸದ ಬದುಕು ಕಾಣಬೇಕು
ಅ ಆ ಇ ಈ ಉ ಊ ಮೆಲುಕು
ಒಂದು ಎರಡು ಮೂರು ನಾಕು
ಕ ಕಾ ಕಿ ಕೀ ಕು ಕೂ ಕುಲುಕು
ಎರಡೊಂದ್ಲ ಎರಡು ಮಗ್ಗಿ ಸಾಕು
ಬೆಳಗಿನಿಂದ ಸಂಜೆವರೆಗೆ ಇದೇ ಪಾಠ
ಪಕ್ಕಾ ತರಲೆ! ಇದು ನಾನು ಪಡೆದ ಪಟ್ಟ
ಕೈ ತಿರುಗಿಸುವರು, ಕಿವಿಯ ಕೆಂಪಾಗಿಸುವರು
ಕೋಲನಿಡಿದು ಜೋರು ಹೊಡೆವ ಮಾಸ್ಟರು
ಗಂಟೆ ಹೊಡೆವ ಆ ಒಂದು ಕ್ಷಣಕೆ ಕಾದು
ಓ... ಅಂಥ ಕೋಣೆಯ ಹೊರಗೆ ಜಿಗಿದು
ಆಗದವನ ಅಂಗಿ ಹರಿದು ಜಗಳ ತೆಗೆದು
ನೆಗೆದು ಕುಣಿದು ಅಬ್ಬಾ! ಸಾಕಷ್ಟು ದಣಿದು
ಮತ್ತೆ ಸಂಜೆವರೆಗೆ ಮನೆಯ ಕಡೆಗೆ
ಅಮ್ಮ ಕೊಡುವ ತಿಂಡಿಗಿಟ್ಟು ಲಗ್ಗೆ
ಚಡ್ಡಿ ಸ್ನೇಹಿತರ ಜೊತೆ ಕತ್ತಲವರೆಗೆ
ಅಜ್ಜಿ ಹೇಳುವ ಕತೆ ನಿದ್ದೆ ಬರುವವರೆಗೆ
ಇದೇ ಪ್ರತಿ ದಿನದ ದಿನಚರಿ
ನಾನು ಕಳೆದುಕೊಂಡ ಅಚ್ಚರಿ!
ಕಾಡುವವು ಬಿಡದೆ ಪ್ರತಿಸಾರಿ
ನೆನಪಾಗಿ ನಗುವೆ ಹಲವು ಬಾರಿ
ಸಾಹಿತ್ಯದ ಸಾಗರಕೆ ನಾನು
ಪ್ರಯತ್ನವೆಂಬ ಗಾಳವೆಸೆದು
ಆಸಕ್ತಿಗೆ ಎರೆಹುಳದ ಹೆಸರು
ಕೊಕ್ಕಿಗೆ ಸಿಕ್ಸಿ ಬೀಸಲೊಮ್ಮೆ
ಅಲೆಗಳ ಪರದೆ ನುಸುಳಿ ಸೀಳಿ
ಒಳ ಹೊಕ್ಕ ಗಾಳ ದಿಗ್ಭ್ರಮೆಗೆ
ತೆರೆಯಿತದಕೆ ಹೊಸ ದಿಗಂತ
ತರ ತರದ ವರ್ಗ ಗರ್ಭದಲಿ
ಆಶ್ಚರ್ಯ ಚಕಿತ ಚಕೋರರಿಲ್ಲಿ
ಕಚಗುಳಿಯನಿಡುವ ತವಕದಲಿ
ಗುರುತು ಸಿಗದ ಬನಗಲೆಷ್ಟು
ಬಗೆ ಬಗೆಯ ಬಣ್ಣಗಳ ಹೊತ್ತು
ಮುಗಿಯದ ಅಧ್ಯಾಯಗಳನು
ಪುಟ ತಿರುಗಿಸುವ ಕುತೂಹಲದಿ
ಮೊದಲಿನಿಂದ ಕೊನೆಯ ಪುಟಕೆ
ನಿಗೂಢನಿರತ ಕಂದರ ನಿರಂತರ
ಅನಂತಾನಂತವಿದರ ವಿಸ್ತಾರ
ಎಂಥ ರುಚಿಯೋ ಇದರ ಸಾರ
ಆಳ ಹಗಲ ಕಾಣೆ ನೀ ತಲಾ ತಳ
ಹೊಕ್ಕಿ ಬರುವೆ ನನಗಾಗ ನಿರಾಳ
ದೇವೇ ಗೌಡರ ಷಡ್ಯಂತ್ರ
ಒಳ ಮೀಸಲಾತಿಯ ಮಂತ್ರ
ಇತರ ಹಿಂದುಳಿದ ಜಾತಿಗಳ
ಹೊಡೆಯುವ ಏಕೈಕ ಕುತಂತ್ರ
ಪರಿಶಿಷ್ಟ ಜಾತಿಗಳನು ಹಾಗು
ಪರಿಶಿಷ್ಟ ಪಂಗಡದವರನು
ಅಲ್ಪ ಸಂಖ್ಯಾತರೆಲ್ಲರನ್ನೂ
ಅಲ್ಲೇ ಕಟ್ಟಿ ಹಾಕುವ ತಂತ್ರ
ಅಹಿಂದ ಚಳುವಳಿಗೆ ಏಕೆ ಮಂಕು
ಸಿದ್ದರಾಮಯ್ಯರಿಗೆ ಒಂದೇ ಒಂದು ಕಿಕ್ಕು
ತರಾತುರಿಯಲ್ಲೇ ಮಾಡಿ ಮುಗಿಸಿ ನಕ್ಕು
ಕುಂತ ಏಕೆಂದು ತಿಳಿಯಿತೆ ಲಾಜಿಕ್ಕು
ಅಲ್ಪ ಸಂಖ್ಯಾತರು, ಹಿಂದುಳಿದವರು
ದಲಿತರು ಇವರೆಲ್ಲಾ ಒಂದುಗೂಡಿದರೆ
ಎಲ್ಲರಿಗೆ ಇದರ ಬಲ ಪ್ರದರ್ಶಿಸಿದರೆ
ಬಹು ಸಂಖ್ಯಾತರಿವರೆಂದು ಗೊತ್ತಾದರೆ
ಇವರು ಬೀದಿ ಬೀದಿಗಳಲ್ಲಿ ಸಂಘಟಿಸಿದರೆ
ಬರುವ ಚುನಾವಣೆಯಲಿ ಕಣಕ್ಕಿಳಿದರೆ
ಮುಂದೆ ರಾಜ್ಯವನಾಳುವ ದೊರೆಗಳಾದರೆ
ಆಗ ಆಗುವುದಿಲ್ಲವೇ ಗೌಡರಿಗೆ ಶಾಕು
ಇವರ ಒಳಮೀಸಲಾತಿಯ ತಂತ್ರ
ಎಲ್ಲರಿಗೂ ಆಗುತ್ತೆ ಬಹಳ ಖತ್ರಾ
ಒಂದೇ ಒಂದು ಹೊಡೆತಕ್ಕೆ ಸಿಕ್ಕಿ
ಅಬ್ಬಾ! ಎಷ್ಟೊಂದು ಉರುಳಿದವು ಹಕ್ಕಿ
ಬಹು ಪರಾಕ್ ಬಹು ಪರಾಕ್ ಗೌಡಣ್ಣಾ
ಇಲ್ಲಿಗಂಟಾ ಚಳ್ಳೆ ಹಣ್ಣು ತಿನ್ನಿಸಿದ್ದು ಸಾಕಣ್ಣಾ
ಇಲ್ಲಿ ಪ್ರತಿ ಪ್ರಜೆಗೂ ಆತ್ಮ ಗೌರವ ಬೇಕಣ್ಣಾ
ಈಗಲಾದರೂ ಈ ಸತ್ಯ ಖಂಡಿತಾ ತಿಳಿಯಣ್ಣಾ
ಹಲವು ದಶಕಗಳಿಂದ ನಿಮ್ಮದೇ ದರಬಾರು
ಮುಂದೆಯೂ ನೀವೇನಾ ನಮ್ಮ ಸರದಾರರು
ದನಿಯೆತ್ತಿದರೆ ಸಾಕು ಎಸೆವರು ಬಿಸಕತ್ತು
ಇಲ್ಲವೇ ಅಹಿಂದ ನಿನಗೆ ತಡೆವ ತಾಕತ್ತು
ಅತ್ತಿತ್ತ ನೋಡಾ ನಮಗೆ ಬಿಸಕತ್ತು ಬೇಡಾ
ಮಾಯಾವತಿಯ ಮಾಯೆ ಯಾರಿಗೆ ಬೇಡಾ
ಮಾಡಿ ಸಂಘಟನೆಯ ಕೇರಿ ಕೇರಿಗಳಲ್ಲಿ
ಹಾಡಿ ಒಕ್ಕೊರಳಲ್ಲಿ ಅಹಿಂದ ಒಗ್ಗೂಡಿ
ಒಗ್ಗಟ್ಟಿನ ಮಂತ್ರದಿ ಬಿಕ್ಕಟ್ಟಿನಲಿ ಕುಣಿವೆ
ಕುತಂತ್ರಗಳಿಗೆ ನೀ ಏಕೆ ತಲೆಬಾಗುವೆ
ಹೆಮ್ಮೆಯಲಿ ತಲೆಯೆತ್ತಿ ಸರೀಕರಲಿ ನೀನು
ಸಮ ಸಮಾಜ ನಿರ್ಮಾಣಕೆ ಇಟ್ಟು ಹೆಜ್ಜೆಯನು
ಯು ಪಿ ಬಿಹಾರಿ ಬಗಾವ್
ಮರಾಠಿ ಮಾನೂಸ್ ಜಗಾವ್
ಅಪ್ಲಿ ಮಹಾರಾಷ್ಟ್ರ ಬಚಾವ್
ಇದು ರಾಜ್ ಠಾಕ್ರೆ ಬುಲಾವ್
ಬಚ್ಚನ್ ಕೋ ಯು ಪಿ ಕಾ ರಸ್ತಾ ದಿಕಾವ್
ಚ್ಚಟ್ ಪೂಜಾ ತುರಂತ್ ರುಕುವಾವ್
ಅಪ್ಲಿ ಮರಾಠಾ ಜರೂರ್ ಬಚಾವ್
ಇದೂ ರಾಜ್ ಠಾಕ್ರೆ ಬುಲಾವ್
ದೃಶ್ಯ ಮಾದ್ಯಮದಲ್ಲಿ ದಿನ ಪೂರ್ತಿ
ಪತ್ರಿಕೋದ್ಯಮದಲ್ಲಿ ಪುಟ ಪೂರ್ತಿ
ರಾಜಕಾರಣಕ್ಕೆ ಇದೇ ಹೈಲೈಟ್
ಬುದ್ಧಿಜೀವಿಗಳು ಇದರಲ್ಲೇ ಟೈಟ್
ರಾಜ್ ಠಾಕ್ರೆ ಹೊಡೆದ ಸಿಕ್ಸರ್
ಒಂದೇ ದಿನದಲಿ ಆದ ಪಾಪ್ಯುಲರ್
ಇರುವ ವ್ಯವಸ್ಥೆಗೆ ಕೊಟ್ಟು ಕೊಕ್
ಮಾಡಿದ ನೋಡಿ ಎಂಥಾ ಜೋಕ್
ಅವಸರದಿ ಮಾಡಿದ ಅಡಿಗೆಯನು
ಉದ್ವೇಗದಿ ಬಡಿಸಿದರು ಜನತೆಗೆ
ಅಲ್ಪನ ವುರುಳಿಲ್ಲದ ಹೇಳಿಕೆಗಳನು
ತಿರುಳಿಲ್ಲದೆ ಕೊಡುವ ಆತುರ ನಿಮಗೆ
ವೇಗಕ್ಕೆ ಕೊಟ್ಟು ಎಲ್ಲಾ ಪ್ರಾಮುಖ್ಯತೆ
ಜ್ಞಾನಕ್ಕೆ ಯಾಕಿಲ್ಲ ಸಾಕಷ್ಟು ಆದ್ಯತೆ
ಕಡಿವಾಣವಿಲ್ಲದ ಕುದುರೆಯ ಓಟಕ್ಕೆ
ಬಳಸಿಕೊಂಡಾರು ಅವರವರ ಆಟಕ್ಕೆ
ನಾಳೆ ಇವನಾಗುವ ಮಾದರಿ ನಾಯಕ
ಪುಂಡ ಪೋಕರಿಗೆಲ್ಲ ಇವನೇ ಪೋಷಕ
ಹೆಮ್ಮರವಾಗಿ ಬೆಳೆದಾನು ತೊಟ್ಟು ಕನ್ನಡಕ
ಓಡಿಸುವ ದೇಶದೆಲ್ಲೆಡೆ ಇವನದೇ ಜಟಕಾ
ವಿಷಯದಾಳಕೆ ಒಮ್ಮೆ ದಿಟ್ಟಿಸಿ ನೋಡಾ
ಜಾರದಿರು ಕಾತುರದಿ ಸಂಯಮದ ಜಾಡ
ದೂರ ದೃಷ್ಟಿಯ ಕೊರತೆ ಇದಕೆ ಕಾರಣ
ಕಗ್ಗತ್ತಲಲಿ ಹಣತೆಯ ಬೆಳಗು ನೀ ಜಾಣ
ಭಾರತಾಂಬೆಯ ಮುಖಕೆ ಮಸಿಯಿಡಲು
ಹೊಂಚುತಿಹರು ಎಲ್ಲೆಡೆ ಇರಲಿ ಕಟ್ಟೆಚ್ಚರ
ಸೂಕ್ಷ್ಮ- ಅತೀ-ಸೂಕ್ಷ್ಮಗಳ ಅರಿತು ನೀನು
ಮುಗ್ದ ಜನತೆಗೆ ನೀ ಸರಿದಾರಿ ತೋರಾ
ಮನುಜನಿಗೆ ಮೊದಲ ಶತ್ರು
ಅವನ ಬುದ್ದಿಶಕ್ತಿ ಅಲ್ಲವೇನು
ಒಮ್ಮೆ ಪುಟವ ಹಿಂದಿರುಗಿಸಿ
ಕಾಣೋ ಸ್ಪಷ್ಟ ಚಿತ್ರವನು
ಸಿಕ್ಕ ಎಲೆಗಳನು ಸುತ್ತಿಕೋ
ನಿದ್ದೆ ಬಂದಕಡೆ ಮಲಗಿಕೋ
ಹಸಿವಿಗಿರಲು ಗೆಡ್ಡೆ ಗೆಣಸು
ಯಾರಲಿಲ್ಲ ಇರಿಸು ಮುರಿಸು
ಊಹಿಸಿಕೋ ಕ್ಷಣಕೆ ನೀನು
ಜೀವರಾಶಿಗಳಲಿ ಒಬ್ಬನು
ಸ್ಪರ್ಧಾಯುಗಕೆ ಸೋಡಾಚೀಟಿ
ಸೀಟಿ ಹೊಡೆಯೋ ಪೋರನು
ಯಾವ ನೆಲೆ ಯಾವ ಸೆಲೆ
ಯಾರ ಹಂಗು ಯಾರು ದಿಕ್ಕು
ಏಕೆ ಬೇಕು ಅಂಕು ಡೊಂಕು
ಆಸೆಗಳ ಆಚೆಗೆ ಎಂಥ ಕಿಕ್ಕು
ಯಾವ ಧರ್ಮ ಯಾರ ಕರ್ಮ
ಜಾತಿ ಮತಗಳೆಲ್ಲ ಭಸ್ಮ
ನಮಗೆ ಏಕೆ ಸಿರಿ ಬೇಕೆ ಗುರಿ
ಸೋಲು ಗೆಲುವುಗಳ ಪರಾರಿ
ವೇದ ಉಪನಿಶತ್ತುಗಳಿಲ್ಲ
ವಿಜ್ಞಾನ ತಂತ್ರಜ್ಞಾನಗಳಿಲ್ಲ
ಸಾಹಿತ್ಯ ಸರಂಜಾಮುಗಳಿಲ್ಲ
ಆಹಾ!! ಭುವಿಯೇ ನಾಕವು
ಸೂರ್ಯ ಕಿರಣ ಸ್ಪರ್ಶಕೆ
ಕಣ್ತೆರೆದವೆಲ್ಲ ಮೆಲ್ಲಮೆಲ್ಲಗೆ
ರೆಕ್ಕೆ ಪುಕ್ಕಗಳೆಲ್ಲ ಕೆದರಿ
ಗೂಡು ಬಿಡುವ ತಯಾರಿ
ನಿಶಬ್ದ ಗಾಢ ನಿದ್ರೆಯಿಂದ
ಶಪಿಸಿ ಶಪಿಸಿ ಬೇಸರದಿ
ಮತ್ತೆ ಹಸಿವ ನೆನಪಿಗೆ
ಮತ್ತೆ ಅವಸರ ಕಾಡಿಗೆ
ಚಿತ್ರಕಲೆ, ವಿಚಿತ್ರ ಬಲೆ
ಈ ನಿತ್ಯ ಕದನ ನಿಗೂಢ
ಕಾಣದಿಲ್ಲಿ ಶತ್ರು ಸೈನ್ಯ
ಸುಳಿವಿಲ್ಲದ ಸುಳಿಗೆ ಸಿಲುಕಿ
ಅಸ್ಪಷ್ಟದ ಅಬ್ಬರಕ್ಕೆ ತತ್ತರಿಸಿ
ಕುರುಡು ಹುಡುಕಾಟ ತ್ಯಜಿಸಿ
ಅರಿತೆ ಇದುವೆ ನರಕ, ನಾಕ
ಪಡೆದ ಶೂನ್ಯ ಪರಮ ಸುಖ
ಪಶ್ಶಿಮ ಬಂಗಾಳದಲಿ ಕೋಳಿ ಜ್ವರ
ಲಕ್ಷಾಂತರ ಕೋಳಿಗಳ ಜೀವ ಹರಹರ
ಇನ್ನು ಮೊಟ್ಟೆಗಳ ಉಳಿಸುವರೆ ಶಂಕರ
ಹರಹರ, ಶಂಕರ, ಇದು ಕೋಳಿ ಜ್ವರ
ಕೋಳಿ ಫಾರಂ ಮಾಲೀಕರ ನಷ್ಟ ಅಪಾರ
ಕೇಳುವರಾರು ಕೆಲಸಮಾಡುವ ಕೂಲಿ ಕಾರ್ಮಿಕರ
ಕೋಳಿ ತಿನ್ನುವ ಮಂದಿ ಮಂಕಾಗಿ ಕುಂತಾರ
ಶಟಲ್ ಅಡುವವರಿಗೆ ಶಟಲ್ ಕಾಕ್ ಗಳ ಬರ
ಇದರಲ್ಲೇನು ವಿಶೇಷ ಅಂತ ನೀವಂತೀರಾ
ಹರಹರ, ಶಂಕರ, ಇದು ಕೋಳಿ ಜ್ವರ
ತಿನ್ನುವವರಿಗೆ ಜ್ವರ, ಕೂಲಿ ಕಾರ್ಮಿಕರಿಗೆ ಜ್ವರ
ಮಾಲೀಕರಿಗೆ ಜ್ವರ, ಶಟಲ್ ಆಡುವವರಿಗೆ ಜ್ವರ
ಆಡಳಿತಕ್ಕೆ ಜ್ವರ, ರಾಜ್ಯ ಸರ್ಕಾರಕ್ಕೆ ಜ್ವರ
ಹೊರ ರಾಜ್ಯಗಳಿಗೆ ಬಂದೀತೆಂಬ ಭಯದಿ ಜ್ವರ
ಕೇಂದ್ರ ಸರ್ಕಾರಕ್ಕೆ ಬಹಳ ಬೇಸರ, ದೂರದ
ಅಮೇರಿಕಾ ದೇಶದ ಸಹಾಯಾಸ್ತಕ್ಕೆ ನಕಾರ
ಕೋಳಿ ಜ್ವರಕ್ಕೆ ಈ ಪರಿ ಹಾಹಾಕಾರ
ನಾಳೆ ಹೀಗೆ ಬಂದರೆ ನರರ ಜ್ವರ
ಮಾಡಲೂ ಬಹುದು ಎಲ್ಲರ ಸಂಹಾರ
ಮಾಡುವುದಾದರೂ ಏನು ಸರಕಾರ
ಅಸಹಾಯಕತೆಯಲಿ ಮನೆಯವರು
ಮೂಕ ಪ್ರೇಕ್ಷಕರಾಗಿ ನಮ್ಮ ಆಪ್ತರು
ಇರದಿರಬಹುದು ಕಣ್ಣೀರು ಒರೆಸುವವರು
ಎಂದಿಗೂ ಬಾರದಿರಲಿ ನರರ ಜ್ವರ ನರಹರ
ಪರಿಸರದ ವಿನಾಶ ಮನುಕುಲದ ಸಶೇಷ
ಸಾತ್ವಿಕ ಜೀವನದಿ ಎಲ್ಲರಿಗೂ ಸಂತೋಷ
ಮುಂದೆ ಸಾಗದಿರು ಮತ್ತೆ ಬಾರದೆಡೆಗೆ
ಮರಳಿ ಬಾ ಶಂಕರ ಮತ್ತೆ ಪ್ರಕೃತಿಯಡೆಗೆ
ಸುಪ್ತ ಜನನ ಸುಪ್ತ ಮರಣ
ಸುಪ್ತ ಮನವು ಸುಪ್ತ ಜಗವು
ನಿಗೂಢ ಕಾಣೋ ನಿನ್ನ ಪಯಣ
ವಿಸ್ಮಯವು ಕಣೋ ನಿನ್ನ ಹರಣ
ಕೂಡಿ ಕಳೆವ ಲೆಕ್ಕವಿಟ್ಟು
ಭಾಗಾಕಾರದ ಒಳಗುಟ್ಟು
ಗುಣಾಕಾರದ ಬಯಕೆ ಹೊತ್ತು
ಇವರ ಜೊತೆಗೆ ದಿಕ್ಕುಗೆಟ್ಟು
ಕೇರಿಗೊಂದು ಗುಡಿಯ ಕಟ್ಟಿ
ಹೆಸರಿಗೊಂದು ಶಿಲೆಯ ಸೃಷ್ಟಿ
ದೇವರೆಂದು ಭಯವನಿರಿಸಿ
ಮುಗ್ದ ಜನರ ಬೆವರ ಹರಿಸಿ
ಮನಕೆ ನೂರು ಆಸೆಯನಿಟ್ಟು
ದಿನವು ಹಲವು ವೇಷ ತೊಟ್ಟು
ಡೊಳ್ಳು ಕುಣಿತ ಹೇಳಿಕೊಟ್ಟು
ದಣಿದ ದೇಹಕಿಲ್ಲ ಮೂರುತುತ್ತು
ಸೋಲು ಗೆಲುವಿನುಳವ ಬಿಟ್ಟು
ಅಸಮಾಧಾನ ಬೆಳೆಯ ಬಿತ್ತು
ಅಂಧಕಾರ ಹೊಳೆಯ ಹರಿಸಿ
ಜಾತಿ ಮತದ ಮಂತ್ರ ಜಪಿಸಿ
ಸುಪ್ತ ಜನನ ಸುಪ್ತ ಮರಣ
ಸುಪ್ತ ಮನವು ಸುಪ್ತ ಜಗವು
ನಿಗೂಢ ಕಾಣೋ ನಿನ್ನ ಪಯಣ
ವಿಸ್ಮಯವು ಕಣೋ ನಿನ್ನ ಹರಣ
ಭಾರತಾಂಬೆ ಯಾವ ವೇಷ
ಕಷ್ಟಸಾದ್ಯ ನಿನ್ನ ಆವೇಶ
ಭರಿಸಲಾರೆವು ನಿನ್ನ ರೋಷ
ಕರುಣೆ ಇರಲಿ ನಿನ್ನ ದೇಶ
ಯಂತ್ರ, ತಂತ್ರ, ಮಂತ್ರ ಮಾಟ
ಮುಗಿದ ಮುಕ್ತ ಮನದ ಆಟ
ಹಣದ ಹೊಳೆಯ ಅಟ್ಟಹಾಸ
ಮರೀಚಿಕೆಯೋ ಮಂದಹಾಸ
ಮುರಿದ ಬಂಧ ಮೂಕ ವನವು
ಧಗ ಧಗನೆ ಉರಿವ ಜಗವು
ಹರಿವ ಮನವ ಬಿಗಿದು ಕಟ್ಟು
ದಣಿದ ದೇಹ ಸಡಿಲ ಬಿಟ್ಟು
ಮಣಿದು ನಿನಗೆ ಕೈಯ ಮುಗಿದು
ಇರುವ ಮೂರು ದಿನವು ಕುಣಿದು
ಪ್ರಕೃತಿವಿತ್ತ ವರವ ನಾವೆಲ್ಲ ಸವಿದು
ವರ್ಗ, ವರ್ಣ ಭೇದಗಳೆಲ್ಲ ಮುರಿದು
ಆಸೆಗಳಿದ್ದರೆ ಸಾಕೆ
ಆಸೆಗೆ ಬತ್ತಿಯನಿಟ್ಟು
ಬತ್ತಿಗೆ ತೈಲವ ಬಿಟ್ಟು
ಹಣತೆ ಉರಿಸೋಕೆ
ಹಣತೆ ಉರಿದರೆ ಸಾಕೆ
ಹಣತೆಗೆ ಕತ್ತಲು ಬೇಕು
ಕತ್ತಲು ಕರಗುವವರೆಗೆ
ಬೆಳಗಿಗೆ ಕಾದಿರಬೇಕು
ಬೆಳಗಿಗೆ ಕಾದರೆ ಸಾಕೆ
ಕಾಯಲು ಸಂಯಮ ಬೇಕು
ಸಂಯಮಕ್ಕೆ ಸ್ಥಿರ ಚಿತ್ತವಿರಬೇಕು
ಸ್ಥಿರ ಚಿತ್ತಕೆ ಅನುಭವ ಬೇಕು
ಅನುಭವವಿದ್ದರೆ ಸಾಕೆ
ಅನುಭವಕ್ಕೆ ಅಭಿವ್ಯಕ್ತಿ ಬೇಕು
ಅಭಿವ್ಯಕ್ತಿಗೆ ಅರಿವು ಇರಬೇಕು
ಅರಿವಿಗೆ ಹಸಿವಿರಬೇಕು
ಅರಿವಿಗೆ ಹಸಿವಿದ್ದರೆ ಸಾಕೆ
ಹಸಿವಿಗೆ ಹೂರಣ ಬೇಕು
ಹೂರಣ ಸಿಗುವಂತಿರಬೇಕು
ಸಿಕ್ಕರೂ ಬಡಿಸುವವರಿರಬೇಕು
ಬಡಿಸುವವರಿದ್ದರೆ ಸಾಕೆ
ಬಡಿಸಲು ಮನಸಿರಬೇಕು
ಮನಸಿಗೆ ಮಮತೆಯು ಬೇಕು
ಮಮತೆಯು ಮಾಗಿರಬೇಕು
ಮಮತೆ ಮಾಗಿದ್ದರೆ ಸಾಕೆ
ಮಾತೆಯ ಮುಖವಿರಬೇಕು
ಮುಖದಲಿ ನಗುವಿರಬೇಕು
ನಗುವಿಗೆ ಒಲವಿರಬೇಕು
ಒಲವು ಇದ್ದರೆ ಸಾಕೆ
ಒಲವಿಗೆ ಕೂಸಿರಬೇಕು
ಕೂಸು ಕಾಡುತಿರಬೇಕು
ಕಾಡಲು ಆಸೆಗಳಿರಬೇಕು
ನಾ ಕಂಡ ಕನಸುಗಳು
ನನ್ನ ಅಂತರಂಗದಲಿ
ಬಿಗಿಯಾಗಿ ಹಿಡಿದಿಟ್ಟ
ಅಭಿವ್ಯಕ್ತ ರಹಿತ ಭಾವಗಳು
ಗುರುತಿಸಲಾಗದೆ ಮುಚ್ಚಿ
ಮರೆಯಾದ ಹೆಜ್ಜೆಗಳು
ಹಾಡಲಾಗದ ರಾಗಗಳು
ನಾ ಕಂಡ ಕನಸುಗಳು
ನೆನಪಿಗೆ ಬಾರದೆ
ಹಾರುವ ಕವಿತೆಗಳು
ಬದಲಾಗುವ ಬಣ್ಣಗಳು
ನಾ ಕಂಡ ಕನಸುಗಳು
ನನ್ನ ಕಲ್ಪನೆಗೆ ಕಣ್ಣು
ಹೊಡೆಯುವ ಚಿಟ್ಟೆಗಳು
ನೆರಳಿರದ ಮರಗಳು
ನಾ ಕಂಡ ಕನಸುಗಳು
ಯಾವ ದೇವರ ಪೂಜೆಗೆ
ಯಾವ ಚೆಲುವೆಯ ಮುಡಿಗೆ
ಕಾತುರದಿ ಕಾದಿರುವ ಪುಷ್ಪಗಳು
ನಾ ಕಂಡ ಕನಸುಗಳು
ತೋರಿಸೋ ಕರುನಾಡ ಹೆಮ್ಮೆಯಲಿ ಧೀರ
ಕೇಳಿಸೋ ಕನ್ನಡದ ಗೀತೆಗಳ ಕುವರ
ಕರ್ಣಾಟಕದ ಕಂಪು ಎಲ್ಲರೂ ಸವಿಯಲಿ
ಹರಡಲಿ ನಾಡಿನ ಇತಿಹಾಸ ವಿಶ್ವದಲಿ
ಕರೆಯೋಣ ಬಾರಾ ದೇಶ ವಿದೇಶಿಗರ
ಬರಮಾಡು ಅತಿಥಿಗಳ ಸ್ವಾಗತವ ಕೋರಿ
ಸತ್ಕರಿಸಿ ಕನ್ನಡದ ವಿಶಿಷ್ಟ ತಿನಿಸುಗಳ
ಪರಿಚಯಿಸು ನಾಡಿನ ವಿಶೇಷ ತಾಣಗಳ
ನರಸಿಂಹ ಜರ್ನ, ಗುರುಧ್ವಾರ, ಬಸವಕಲ್ಯಾಣ
ಕಲಬುರ್ಗಿಯ ದರ್ಗಾ, ಅಪ್ಪನವರ ಹಿತ ನುಡಿ
ರಾಯಚೂರಿನ ರಾಯರು, ಹಟ್ಟಿ, ತುಂಗಭದ್ರೆ
ವಿಜಾಪುರದ ಗೋಲಗುಂಬಜ, ವನ ದ್ರಾಕ್ಷಿ
ಬಾದಾಮಿ, ಐಹೊಳೆ , ಪಟ್ಟದ ಕಲ್ಲು ನೋಡಾ
ಕೂಡಲ ಸಂಗಮ ಇರಲು ಬಾಗಲಕೋಟೆಯಲಿ
ಧಾರವಾಡದ ಪೇಡ, ದಾವಣಗೆರೆಯ ಮಂಡಕ್ಕಿ
ಬೆಳಗಾವಿಯ ಕುಂದ, ಗೋಕಾಕ ಕರದಂಟು ಸವಿದು
ಹೊಸಪೇಟೆಯ ಹಂಪಿ, ಚಿತ್ರ ದುರ್ಗದ ಕೋಟೆ
ಕವಿಶೈಲ, ಆಗುಂಬೆ, ಜೋಗ ಶಿವಮೊಗ್ಗದಲಿ
ಉಡುಪಿಯ ಶ್ರೀಕೃಷ್ಣ, ಧರ್ಮಸ್ಥಳದ ಮಂಜುನಾಥ
ಕೊಲ್ಲೂರು ಮೂಕಾಂಬಿಕೆ, ಶೃಂಗೇರಿ ಶಾರದೆಯನು
ಕುಕ್ಕೆ ಸುಭ್ರಮಣ್ಯ, ಕೊಡಗಿನ ಕಾವೇರಿಯನು,
ಬೇಲೂರು, ಹಳೇಬೀಡು, ಶ್ರೀ ಗೊಮ್ಮಟೇಶನು,
ಶ್ರೀ ಸೋಮನಾಥೇಶ್ವರ, ಶ್ರೀ ಚೆಲುವ ನಾರಾಯಣ
ಶ್ರೀ ರಂಗನಾಥರು, ತಾಯಿ ಶ್ರೀ ಚಾಮುಂಡೇಶ್ವರಿಯಾ
ಮರವಂತೆ ಕಡಲ ತೀರ, ಮೈಸೂರಿನ ಅರಮನೆ
ನಂದಿ ಬೆಟ್ಟದ ತಂಪು, ಕೈವಾರ ನಾರೇಯಣನ ಸನ್ನಿಧಿ
ಮಹಾ ನಗರಿ ಬೆಂಗಳೂರಿನಲ್ಲಿರುವ ವೈವಿಧ್ಯತೆಗಳನು
ಮತ್ತಷ್ಟು , ಮಗದಷ್ಟು ಇಹವಿಲ್ಲಿ ನೋಡು ಬಾರಾ
ತೋರಿಸೋ ಕರುನಾಡ ಹೆಮ್ಮೆಯಲಿ ಧೀರ
ಕೇಳಿಸೋ ಕನ್ನಡದ ಗೀತೆಗಳ ಕುವರ
ಕರ್ಣಾಟಕದ ಕಂಪು ಎಲ್ಲರೂ ಸವಿಯಲಿ
ಹರಡಲಿ ನಾಡಿನ ಇತಿಹಾಸ ವಿಶ್ವದಲಿ
ಕರೆಯೋಣ ಬಾರಾ ದೇಶ ವಿದೇಶಿಗರ
ಬರಮಾಡು ಅತಿಥಿಗಳ ಸ್ವಾಗತವ ಕೋರಿ
ಸತ್ಕರಿಸಿ ಕನ್ನಡದ ವಿಶಿಷ್ಟ ತಿನಿಸುಗಳ
ಪರಿಚಯಿಸು ನಾಡಿನ ವಿಶೇಷ ತಾಣಗಳ
ವೇಗದಿಂದ ಸಾಗುತ್ತಿರುವವರು
ಯಾರ ಒಳಿತನು ಬಯಸದವರು
ರಭಸಕ್ಕೆ ನೀ ಸಿಲುಕಿ ನಲುಗದಿರು
ಕುರಿಮಂದೆ ಹಿಂದೆ ನೀ ಹೋಗದಿರು
ಇವರ ಹೊರನೋಟ ಬಲು ಆಕರ್ಷಕ
ಸಿಹಿ ನುಡಿಯ ಸುರಿಮಳೆ ಬರಿ ನಾಟಕ
ಸುಳಿಯದಿರು ಇವರ ಬಳಿ ಇರಲಿ ಎಚ್ಚರ
ಕೊಳೆತ ಮನಸಿನವರು ಹೋಗು ನೀ ದೂರ
ವಸ್ತುಗಳ ವ್ಯಾಮೋಹದಲಿ ಮುಳುಗಿರುವರು
ಈ ಸ್ಪರ್ಧೆಯ ವೇಗಕ್ಕೆ ಕೊಚ್ಚಿಹೋಗುವರು
ಕುರುಡು ಕಾಂಚಾಣದ ದಾಸರಾಗಿಹರು
ನೋಡು ಗ್ರಾಹಕೀಕರಣದ ಭೂತ ಹಿಡಿದವರು
ಮನುಜನ್ಮ ಅತ್ಯಮೂಲ್ಯ ತಿಳಿದಿರಲಿ ಗೆಳೆಯ
ಮರುಜನ್ಮ ಇಹುದೆಂದು ಯಾರು ಬಲ್ಲವರು
ವ್ಯರ್ಥ ಮಾಡದೆ ನಿನಗೆ ಸಿಕ್ಕ ಅವಕಾಶವನು
ಸಂತಸದಿ ದಿನ ದಿನವು ನಡೆಸು ಪಯಣವನು
*****
ಯಾರು ತಂದು ನೆಟ್ಟವರು
ಯಾವ ಪ್ರತಿಫಲ ಬಯಸಿ
ಎಲ್ಲಿ ಮರೆಯಾಗಿ ಹೋದರು
ಸಸಿ ಗಿಡವಾಗಿ, ಗಿಡ ಮರವಾಗಿ,
ಹೆಮ್ಮರವಾಗಿ ಇಂದು ನೆರಳು ನೀಡುತ್ತಿವೆ
ತಂಪನ್ನು ಚೆಲ್ಲಿ ಆಗಸವನ್ನು ಚುಂಭಿಸುವ ತವಕ
ಯಾರ ಕಲ್ಪನೆಯ ವಿನ್ಯಾಸಕ್ಕೆ
ಬಾಹು ಬಳಸಿ ಬೆಳೆಸಿ ನಿಂತಿವೆ
ಹಸಿರ ಸೀರೆಯ ನೆರಿಗೆ ಭೂರಮೆಗೆ
ತಾವಾಗಿ ನಾಚಿ ಕಿರು ನಗೆ ಬೀಸುತ್ತಿವೆ
ಬಗೆ ಬಗೆಯ ತರುಗಳ ಹರಳುಗಳಂತೆ
ಸರವಾಗಿ ಪೋಣಿಸಿ ಶಿಖರಗಳನ್ನು
ಸಿಂಗರಿಸಿ ಯಾವ ಮರದಡಿ ಅಡಗಿಹರು
ವನ್ಯ ಜೀವ ರಾಶಿಗಳಿಗೆ ನೆಲೆ
ಫಲ ಪುಷ್ಪ ಸಿರಿಗಂಧ ಸವಿ
ಮೋಡ ಸೆರೆಹಿಡಿದು ಮಳೆ
ಮಾಯಾವಿ ನದಿಗಳ ಜನನ
