ಹರಿಯುತಿದೆ ಬಿಸಿರಕ್ತ
ಅಳುವ ಕಂದನಕೆಳಗೆ ನುಸುಳಿ
ಅಂಗೈಯಲ್ಲಾ ಕೆಂಪು ಕೆಂಪು
ಕಂದನ ಕಣ್ಣಲ್ಲಿ ಆತಂಕ
ಅಮ್ಮ, ಅಪ್ಪನ ಸಾಂತ್ವನದ ಸಿಹಿಮಾತು ಮಾಯ,
ಎಂದಿನಂತೆ ಅತ್ತು ಕರೆದರು ಸಿಗದೇ ಉತ್ತರ,
ಇಂದೇಕೋ ಒಂದು ನಡೆಯುತ್ತಿಲ್ಲ
ಅಂದುಕೊಂಡಂತೆ, ಎಲ್ಲ ಯತ್ನವೂ ವ್ಯರ್ಥ
ನೀರಿನಲ್ಲಿ ನಲಿದಾಡುವ ಕಾತುರ
ಇಂದು ಕಂದನ ಸೆಳೆಯುವಲ್ಲಿ ಸೋತಿದೆ
ಭಯ ಮಿಶ್ರಿತ ದ್ವಂದ್ವ, ಮುಗ್ಧ ಮುಖಭಾವ
ಎಲ್ಲವೂ ಸ್ತಬ್ಧ, ತೊಟ್ಟಿಕ್ಕುವ ರಕ್ತ ನಾದ
ಮಗು ಒಂದೇ ಸಮ ಜೋರು ಅಳು
ಆದರೂ ಅಮ್ಮನಿಗೇಕೋ ಗಾಢನಿದ್ರೆ
ಅಪ್ಪನ ನೋಟ ಅದರತ್ತಲೇ ನೆಟ್ಟಿ,
ಅಪರಿಚಿತರಂತೆ ಭಾಸವಾಗುತ್ತಿದೆ
ಕೆಂಪು ಕಪ್ಪಾಗುವಂತೆಲ್ಲಾ,
ಮಗುವಿನ ಆಕ್ರಂದನ ಕ್ರಮೇಣ ಕ್ಷೀಣಿಸಿ,
ಧಣಿದ ದೇಹ ನಿದ್ರೆಗೆ ಜಾರುತಿದೆ
ಮಂಪರುಗಣ್ಣಲ್ಲಿ ನಿರೀಕ್ಷೆ ಇನ್ನೂ ಜೀವಂತ
ಕೇಳಬೇಕೆಂದಿರುವೆ, ಮತ್ತೆ
ಹೇಳಬೇಕೆಂದಿರುವೆ ಸ್ವಲ್ಪ ವಿವರ
ಅಂತಃರಾಳದೊಳಗಿಳಿದು
ನೋಡಬೇಕಾಗಿಲ್ಲ ಒಳಶಹರ.
ಕಳೆದ ಸಾರಿಯ ಭೇಟಿ
ಆಕಸ್ಮಿಕವಾದರೂ ಅಚ್ಚರಿ,
ಆಗ ಮೌನದ್ದೇ ಮಾತು,
ನೋಟ ಮರುಭೇಟಿಯ ಆಹ್ವಾನ.
ಇತಿಹಾಸದ ಪುಟಗಳ ಹೊತ್ತು
ಬರುವುದಿಲ್ಲ ಈ ಸಾರಿ,
ಹಾಗೇ ತಿಳಿಯುವ ಹಂಬಲವೂ
ಉಳಿದಿಲ್ಲ ನೆಪಕೆ.
ಏರುಪೇರುಗಳಿಂದ ನಿಜವಾದ ಅರಿವು,
ಅದೇ ಬದುಕಿಗೆ ಹಿಡಿದ ಕನ್ನಡಿ
ಇಂದು, ನಾಳೆಗಳ ಪಯಣದಲಿ
ಬೆಳಕಾಗಿ ಉರಿಯುವ ದೀವಟಿಗೆ.
ಒಂದಾಗೋಣ ಇಂದು, ನಾಳೆಗೆ
ಉರಿಯೋಣ ಮೋಂಬತ್ತಿಯ ಹಾಗೆ
ಜೊತೆ, ಜೊತೆಗೆ ಬೆಳಕಾಗಿ, ಬೆಳಕಿನೆಡೆಗೆ
ಕತ್ತೆಲೆಯ ಜಗದಲ್ಲಿ ಕವಿಯ ಹಾಡಿನ ಹಾಗೆ.
ಜ್ಞಾನದ ವಿಸ್ತಾರ ತಿಳಿದವರಾರಿಹರು
ಬ್ರಹ್ಮಾಂಡದೊಳಹೊರಗ ಬಲ್ಲವರಾರಿಹರು
ವಿಜ್ಞಾನದಿ ಉತ್ತರವ ಹುಡುಕುವ ಯತ್ನಕೆ
ಮೌನ ಬೆಂಬಲ ಕೊಡುವ ಚಂದಿರ
ಬುದ್ಧಿವಂತಿಕೆಗೆ ಧರ್ಮದ ಮೊಗವಿರೆ
ಮಂಗನಿಗೆ ಮಾಣಿಕ್ಯವಾಗದು ಹೊರೆ
ಹಿಡಿತವಿರುವ ಜ್ಞಾನ ಮನುಕುಲಕೆ
ವರದಾನ ಕಾಣೋ ಚಂದಿರ
ಅಂತರಂಗ ಬಹಿರಂಗದೊಳ ಹೊಕ್ಕು
ನಿತ್ಯ ಚಿತ್ರಗಳ ಸರಿದೂಗುವ ಶ್ರಮಕೆ
ತೆರೆ ತೆರೆಯಾಗಿ ಪದರುಗಳ ಕಳಚಲು
ಸತ್ಯ ಕಾಣುವುದಾಗ ಚಂದಿರ
ಅವಸರದ ನಡೆಯಿಂದ
ಕವಲೊಡೆದ ಗುರಿಯಿಂದ
ಬಾಡಿರುವ ಮೊಗದಲ್ಲಿ
ನಗುವಿರುವುದೇ ಚಂದಿರ
ಕನಸು ಕಲ್ಪನೆಗೆ ಹಿಡಿದ ಕನ್ನಡಿ
ಕ್ರಿಯಾಶೀಲತೆಗೆ ಕಲ್ಪನೆ ಮುನ್ನುಡಿ
ಕನಸು ನನಸಿಗೆ ಕ್ರಿಯೆಯ ಕೈಪಿಡಿ
ನುಡಿದಂತೆ ನಡೆಯುತಿರುವ ಚಂದಿರ
ಸಮಯಕೆ ಇಲ್ಲ ಯಾವ ರಿಯಾಯಿತಿ
ಸರಿ ತಪ್ಪುಗಳೆಲ್ಲ ನಮ್ಮದೇ ಕಿತಾಪತಿ
ಸದ್ಭಳಕೆಯೊಂದಿಗೆ ಹಿಡಿತ ಸಾಧಿಸು
ಜೊತೆಗೆ ಬರುವನೋ ಚಂದಿರ
ದಾನವರ ಸಂತತಿ ಸಾಗರದ ಹಿತಿಮಿತಿ
ಸಕಲ ಜೀವಕಣ ಕಾಣೆಯಾಗುವ ಸ್ಥಿತಿ
ಮೊರೆಯಿಡುವೆ ದೇವ ಮೌನಮುರಿಯೋ
ಕಾಣದಾದಾನು ಒಮ್ಮೆಗೇ ಚಂದಿರ
ಬಿಳಿಯ ಹಾಳೆಯಲ್ಲಿ ಬೆಳೆದು ನಿಂತ ಭಾವಗಳೆ
ಖಾಲಿ ಎದೆಯ ಗೂಡಲ್ಲಿ ಬೆಚ್ಚಗಿರುವ ನೀವುಗಳೆ
ಬಿರುಗಾಳಿಯ ನೆವವೊಡ್ಡಿ ತೇಲಿ ಹೋಗದಿರಿ ಮತ್ತೆ
ಕದವ ಜಡಿದಾನು ಹೇಳದೇ ಚಂದಿರ
ಸರ್ವ ರೋಗ ನಿವಾರಣ
ಸರಳ ಜೀವನ ಯಾನ
ಸತತ ಕಾಯಕ ಕರ್ಮಕೆ
ಮರಳಿ ಬಾರೋ ಚಂದಿರ
ಮುಗಿಲು, ನೆಲವನರಿವ ಛಲ
ಕ್ಷಣ ಕ್ಷಣವು ಕೆರಳಿ ಕುತೂಹಲ
ದಿಟ್ಟ ಹೆಜ್ಜೆ, ನೆಟ್ಟ ನೇರನೋಟಕೆ
ಸನಿಹ ಬರುವ ನಗುತ ಚಂದಿರ
- 1 -
ವಸಂತದಲ್ಲಿ ಚಿಗುರಿದ
ಮರಗಳ ತೋರಿಸಿ,
ಇದೂ ಸಹ ನನ್ನ ಸಾಧನೆಯೆ
ಅಂತಂದನೊಬ್ಬ ಹಿರಿಯ ನಾಯಕ
- 2 -
ವ್ಯಭಿಚಾರಿಯೊಬ್ಬಳನ್ನು
ಬಲವಂತವಾಗಿ ಕೂಡಿದ ನಂತರ,
ಇದು ನಿನ್ನ ಅದೃಷ್ಟವೆಂದ,
ಆ ಧೀಮಂತ ನಾಯಕ
- 3 -
ಅಸಹಾಯಕ ಹೆಣ್ಣೊಬ್ಬಳು
ವೇಶ್ಯಾವೃತ್ತಿಯಲ್ಲಿ ತೊಡಗಿದಾಗ,
ಅವಳಿಗೆ ಅಂಜಿಕೆ, ಕೀಳರಿಮೆ ಕಾಡದೆ,
ಸಮಾಜದಲ್ಲಿ ಸಮಾನತೆ ದೊರಕುವಂತಾದಾಗಲೇ
ಅವಳಿಗೆ ನಿಜವಾದ ಸ್ವಾತಂತ್ರ್ಯ
- 4 -
ಗುಲ್ಮೊಹರ್ ಮರಗಳು,
ಹೂಗಳಿಂದ ಮೈ ತುಂಬಿಕೊಂಡಾಗ,
ಆ ಸುಂದರ ಚಿತ್ತಾರವ ಸವಿಯುತ್ತಾ,
ತಂದೆ ಮಕ್ಕಳಿಗೆ ಅದನ್ನು ಬಣ್ಣಿಸುವುದೇ
ನಿಜವಾದ ಶಿಕ್ಷಣ
ಹಾಡು: ಸಾಲು
ಯಾರದೋ ಕನಸಿನೊಳಗಿನ
ಪುಟ್ಟ ಪಾತ್ರ, ನನ್ನ ಕನಸು
ಯಾರದೋ ನಿರ್ದೇಶನದ ಕಲ್ಪನೆಗೆ
ನಾನಾಗುವೆ ನಿತ್ಯ ಉಸಿರು.
ಯಾವುದೋ ಬೃಂದಾವನ, ಯಾರದೋ ನಂದನವನ
ಕನಸಿನೊಳಗೊಂದು ಕನಸು
ಆ ಕನಸೇ ನನ್ನ ಕಲ್ಪನೆಯ ಕೂಸು,
ಅದೇ ನನಗೆ ನಾನು ಹಿಡಿದ ಕನ್ನಡಿ.
ಸುಳಿದಾಡುವ ಸುಂದರಿಯೆಡೆಗೆ
ಸಾವಿರಾರು ಕಣ್ಣು, ಆ ಹಂಬಲದ ತೇರು
ಎಳೆಯಲು ತುಂಟರ ಕಾತುರ,
ಕಲಹ, ಕೊಲೆ, ವಿಷಾದ.
ವಿಭಿನ್ನ ಕಲ್ಪನೆ, ವಿಶಿಷ್ಟ ಕನಸೆಂಬ ಭಂಡತನ
ನಡೆ, ನುಡಿ, ಹಾದಿ ಎಲ್ಲವೂ ಹಾಗೆ
ಅನುಕರಣೆ ಅಸ್ಧಿತ್ವದ ವಿನಾಶಕ್ಕೆ ಹೊಣೆ
ಇಲ್ಲ ಎಲ್ಲೂ ಸ್ಪಷ್ಟ ಮಾನದಂಡ.
ಪ್ರತಿಫಲ ಬೇಡದ ಪರಿಶ್ರಮ ,
ನಿರೀಕ್ಷೆಯಿರದ ಮನಃಸ್ಥಿತಿಯತ್ತ
ನಿರಾಸೆ ಸುಳಿವುದೆ ಹತ್ತಿರ
ಮತ್ತೆ ಬರುವನು ಚಂದಿರ
ನಿಲುವು, ಒಲವು ಇರಲು ಚೆಲುವು
ಸ್ವಾಭಿಮಾನವೆ ಆತ್ಮ ಬಲವು
ದಿಟ್ಟ ನಡೆಗೆ ಬಿಟ್ಟು ಹೋದವರ
ತಂಟೆಯೇಕೆ ಚಂದಿರ
ನೀಲಿ ಬಾನಲಿ ನಗುವ ಚಂದಿರ
ಹೊಳೆವ ತಾರೆಗಳೊಡನೆ ಸುಂದರ
ಇವನಿರದ ಇರುಳು ಬಹಳ ಬೇಸರ
ಚತುರನಲ್ಲವೆ ಇವನು ಚಂದಿರ
ಭೂತಕಾಲದ ಭೂತ ಹಿಡಿದು
ಭವಿಷ್ಯತ್ತಿನ ಭಯಕೆ ಸಿಡಿದು
ವರ್ತಮಾನದ ವಿದ್ಯಮಾನ
ಮರೆತೆಯಲ್ಲೋ ಚಂದಿರ
ಒತ್ತಡಗಳಿಗೆ ತತ್ತರಿಸುತ
ವಿಚಿತ್ರ ವ್ಯಾಧಿಗೆ ತುತ್ತಾಗುತ
ಸುತ್ತ ಮುತ್ತ ಮಾಡಿ ಕಲುಷಿತ
ಬೆಪ್ಪನಾದೆಯೊ ಚಂದಿರ
ನೂರು ಹುಳಗಳು ಒಳಗೆ ತೂರಿ
ಭೂತ ಹಿಡಿದವನಂತೆ ಹಾರಿ
ಬುದ್ಧಿಭ್ರಮಣೆಗೆ ಮತಿಯು ಜಾರಿ
ಭೂತಗನ್ನಡಿ ಬೇಕೆ ಚಂದಿರ
ಎಲ್ಲ ತೊರೆದವನು ಎಲ್ಲರೊಳು ಉತ್ತಮನು
ಇತಿಮಿತಿಗಳ ಸುತ್ತಿಕೊಂಡವನು ಮಧ್ಯಮನು
ಪ್ರಯತ್ನಿಸದೆ ಪಠಿಸುವವನು ಅಧಮನು
ಎಲ್ಲರೊಳಗಿರುವವನು ಚಂದಿರ
ಧರ್ಮದೆಸರಲ್ಲಿ ವಿಷಬೀಜ ಬಿತ್ತಿ
ಬೆಳೆದ ಅಫೀಮಿಂದ ಮತ್ತೇರಿಸಿ
ಮನುಕುಲದ ಮತಿಗೆಡಿಸಿದ ಮತಿಹೀನ
ಮನುಜರ ಕಣ್ಣ ತೆರೆಸೋ ಚಂದಿರ
ಬಣ್ಣ ಬಣ್ಣದ ಮಾತುಗಳಾಡುತ
ಚಂಗ ಚಂಗನೆ ಜಿಗಿಯುವನೀತ
ಮರುಳು ಮಾಡಿ ಮಂದಿಯ ಸತತ
ಉದರನಿಮಿತ್ತ ಎಂದ ಚಂದಿರ
ಕತ್ತಲ ಕಳೆಯುತ ಬೆಳಕು ಕಾಣುವ
ಕಲಿತು ಕಲಿಸುವ ಕಾಯಕ ಕರ್ಮವ
ನಿತ್ಯ ನಿರ್ಮಲ ಮನಕೆ ಸ್ವರ್ಗದ
ಮಾರ್ಗ ತೋರುವ ಚಂದಿರ
