ಈ ಕದನ ಇತ್ತೀಚಿನದಲ್ಲ ಶೂರ
ತಿಳುವಳಿಕೆ ಮೂಡಿದಾಗಿಂದ ಶುರು
ತೀವ್ರ ಸೆಣಸಾಟದಲೇ ನಿರತ ಸತತ
ಅಂತ್ಯವಾಗುವ ಸೂಚನೆ ಸದ್ಯ ದೂರ
ಸಣ್ಣ ಮೊಳಕೆಯಾಗಿ ಟಿಸಿಲೊಡೆದ
ಆಸೆಗಳಿಂದು ಹೆಮ್ಮರವಾಗಿ
ಗಟ್ಟಿಯಾಗಿ ತಳವೂರಿದೆ, ಇಲ್ಲಿ
ಚಿಗುರಿ, ಉದುರುವ ಎಲೆಗಳ ಲೆಕ್ಕವಿಲ್ಲ
ಮಹತ್ವಾಕಾಂಕ್ಷೆಗಳ ಮೀರಿಸುವ ತವಕ
ವಾಸ್ತವಗಳರಿಯದ ಮೂರ್ಖ
ಹುಸಿ ನಿರೀಕ್ಷೆಗಳ ವಸಂತದಿಂದ
ಬೆತ್ತಲಾಗುವ ಭಯ ನಿರಂತರ
ಅಗೋ ಆ ಗಿರಿ ಶಿಖರ
ದಿಟ್ಟ ನೋಟದಿ ನಿತ್ಯ ಅಣಕಿಸುತ್ತಿದೆ
ಕಿಚ್ಚು, ಕಾಡ್ಗಿಚ್ಚಿನಂತೆ ಒಡಲತ್ತಿ
ಉರಿಯುತ್ತಿದೆ ಸುತ್ತಿ ಸುತ್ತಿ
ನಂಬಿಕೆ ಉಳಿಸಲಿಲ್ಲ ನೀರು, ನೆರಳು
ಮೋಡಗಳಿಗೂ ಬೇಕು ಕೃತಕ ಗರ್ಭ
ನೀಲಾಂಬರದಲಿ ನೀರವ ಮೌನ
ಧರೆಯತ್ತಲೇ ಅಲ್ಲವೇ ಅದರ ಪಯಣ
ಹಲವು ಚಿಂತೆಗಳೆನ್ನ ಮನವನು
ಕಾಲುಚೆಂಡಾಗಿಸಿ ಸೆಣಸುತಿಹವು,
ಬಿಡದೆ ಕ್ಷಣವು ಮೈದಾನದೆಲ್ಲೆಡೆ
ತೀವ್ರಗತಿಯಲಿ ಸಿಡಿಯುತ
ಮನದ ಅಳಲು ಸುಪ್ತ ಕಡಲು
ಉರಿವ ಜ್ವಾಲೆಯೊಳಗೆ ಒಡಲು
ಉಕ್ಕಿ ಬರುತಿರೆ ಆವಿಯಾಗಿ
ಮೋಡವಾಗಲು ಮುಕ್ತಿಯೇ
ಸಿಡಿಲು, ಮಿಂಚಿನ ಆಟ ನೋಡಲು
ಕಿಕ್ಕಿರಿದ ಜನರು ಸಾವಿರಾರು
ಅಬ್ಬರದ ಕೇಕೆ ಮೊಳಗಿದೆ ಅಲ್ಲಿ
ಆಡಂಬರ, ಅಂಧಕಾರ ಮೆರೆದು
ಭೂತಕಾಲದ ಭೂತಹಿಡಿದಿದೆ
ಸಿಗದ ಉಜ್ವಲ ಭವಿಷ್ಯತ್ ಕಾಲ
ತೊಳಗಿ ಒಮ್ಮೆಗೆ ವರ್ತಮಾನದಿಂದ
ತಿಳಿಯಾಗಲಿ ಮನವು ಈ ದಿನ
ಹೊತ್ತ ಹೊರೆಯಿದು ಕಾಲದಿಂದ
ಕಲೆಯಾಕುವ ಉತ್ಕಟ ತವಕದಿ
ಬೇಡವೆಂದರು ಬಿಡದು ಜಡಜಗ
ಭಾರವಾಗಿ ಕುಸಿವ ಭಯವೀಗ
ಸೋತು, ಸೊರಗಿ ಬಾಡಿದ ಮನಸು
ಸತತ ಕಹಿಯನು ಸಹಿಸಲಾಗದೆ
ಕರುಣೆ ತೋರೊ ಕೊನೆಯ ಕ್ಷಣದಲಿ
ಕಳೆದು ಹೋಗುವ ಮುನ್ನವೇ
ಸೂಕ್ಷ್ಮಸಂವೇದನೆಗಳ ತಳಪಾಯದಿಂದ
ಸ್ಪಂದನಗಳ ಗ್ರಹಿಸುವ ಸಾಮರ್ಥ್ಯದಿಂದ
ಬಿಂಬಗಳ ಕೆಡಹುವ ಉಪಾಯದಿಂದ
ರಸಾನುಭವ ಪಡೆಯೊ ನೀ ಚಂದಿರ
ಹೋಲಿಕೆಯೆಂಬ ದೊಡ್ಡ ರೋಗ
ತೀವ್ರವಾಗಿ ನಮಗೆ ಕಾಡುವಾಗ
ಮನ - ಮನೆಯಲಿ ನಿತ್ಯ ಸಮರ-
ದಿಂದ ವಿರಾಮವೆಂದೊ ಚಂದಿರ
ವಿದ್ಯಮಾನಗಳ ಎಲ್ಲೆ ಮೀರಿ
ಕವಲುದಾರಿಗಳ ಎಲ್ಲ ತೂರಿ
ಈ ಹುಚ್ಚು ಕುದುರೆ ಸವಾರಿಯ
ನೀ ತೊರೆದು ಬಾರೊ ಚಂದಿರ
ಸರಳತೆಯ ಹೆಸರಲ್ಲಿ ಸಂಕೀರ್ಣದತ್ತ
ಸ್ಪರ್ಧೆಯ ಹೆಸರಲ್ಲಿ ಸಮಾಧಿಯತ್ತ
ಸಮೃದ್ಧತೆಯೆಂದು ದುರ್ಬಲರ ತುಳಿಯುತ್ತ
ಇದು ಜನಸೇವೆಯೆನ್ನುವನಿವ ಚಂದಿರ
ಭಾಷೆಯ ಹೆಸರಿಗೆ ಬೇಕೆ ಬೀದಿ ರಂಪಾಟ
ಒಳಗೊಳಗೆ ನಡೆಯುತಿದೆ ಹಗ್ಗ-ಜಗ್ಗಾಟ
ಮುಗ್ಧರ ಮನಕೆಡಿಸಿ, ಮನೆಕಟ್ಟುವವರ
ಒಳಬಣ್ಣ ತೋರಿಸೊ ಚಂದಿರ
ಸೃಜನಶೀಲತೆಗೆ ಸಾಕ್ಷಿ ಸೃಷ್ಟಿಕರ್ತ
ಕ್ರೀಯಾಶೀಲತೆಗೆ ಇವನೆ ಆಪ್ತಮಿತ್ರ
ಪ್ರಕೃತಿಯೆಡೆಗೆ ಪಯಣ ಬೆಳೆಸುವ ಚಿತ್ತ
ಆತ್ಮ ಬೆಳಗುವುದಂದು ಚಂದಿರ
ಅಸಮಾನತೆಯೆ ತೀವ್ರ ಆತಂಕವಾದಿ
ಅಸಮಧಾನವೆ ಉರಿಯುವ ಉಗ್ರವಾದಿ
ಅತಿಯಾಸೆಯನ್ನೊಮ್ಮೆ ಅಂತ್ಯವಾಗಿಸಿ
ಕಣ್ಣು ತೆರೆಸೊ ನಮಗೆ ಚಂದಿರ
ವಸ್ತು ವ್ಯಾಮೋಹವಿದು ಯಾರದೊ ವ್ಯೂಹ
ಭಾವ ಬಂಧಗಳ ತೊರೆದ ಚಕ್ರವ್ಯೂಹ
ಯಾರ ಮೋಡಿಗೆ ನೀ ಮರುಳಾದೆ ಮುಗುದೆ
ಮುಕ್ತಿದೊರೆವುದೆಂದೊ ನಿನಗೆ ಚಂದಿರ
ಭಾವ ಜಗತ್ತಿನ ಪಯಣದ ಮಿಡಿತ
ಅರಿವಿನ ಪಾತಳಿಗಳಿಗೇರುವ ತುಡಿತ
ಸಂಯಮದ ನಡೆಯಿಂದ ಜಾಗೃತಿಯ
ಮೂಡಿಸುವ ಚತುರನಿವನೇ ಚಂದಿರ
ಅವತರಿಪ ಆಧ್ಯತೆಗಳ ಸ್ವೀಕರಿಸುತಾ,
ಸಮಸ್ಯೆಗಳ ಸಮರ್ಥವಾಗಿ ನಿರ್ವಹಿಸುತಾ
ಸಾಧಸಿದ ಅನನ್ಯ ಅನುಭವದ ಜೊತೆಗೆ
ಮನುಜತ್ವ ಮರೆಯದಿರೊ ಚಂದಿರ
ಹಣದ ಮೇಲೆ ಹೊಳೆವ ಕಣ್ಣು
ಹೆಣದ ಮೇಲೆ ಧೂಳು ಮಣ್ಣು
ಗಂಧ, ನೀರು, ಹೂವು, ಹಣ್ಣು
ಗೌಣ ಗುಣವೊ ಚಂದಿರ
ಋತುಚಕ್ರ ತಿರುಗಿ ತರುವ
ನವ ನವೀನ ಪ್ರತಿ ದಿನವ
ಕಪ್ಪು ಬಿಳುಪು ನೆನಪು ಉಳಿಸಿ
ಮರೆಯಾಗುವ ಚಂದಿರ
ಕನ್ನಡಿಯೆದುರು ನೋಡಬೇಕು
ಜ್ಞಾನವಿದ್ದಕಡೆ ಹೋಗಬೇಕು
ನಿಜವ ನುಡಿವವರ ಬೆನ್ನುತಟ್ಟಿ
ನೀನಾಗು ಮನುಜ ಚಂದಿರ
ಎಳೆಬಿಸಿಲಿಗೆ ಮೈ ತೆರೆದಿಟ್ಟು
ತಂಗಾಳಿಗೆ ರೋಮಾಂಚನ
ತೆಳುವಾದ ಮನದ ನೋವು
ತೂಗಾಡುವ ಹೂವು ಚಂದಿರ
ಆದಿ ಶೂನ್ಯ, ಅಂತ್ಯ ಶೂನ್ಯ
ಶೂನ್ಯ ಜಗದ ಪಯಣವು
ಪಡೆದುದೆಲ್ಲ ಪಡೆದುದಲ್ಲ
ಶೂನ್ಯ ನಿಜವು ಚಂದಿರ
ಇತಿ ಮಿತಿಗಳ ಅರಿವಿರದೆ
ಆಳ, ಅಗಲ ತಿಳಿಯದೆ
ಬಲ್ಲೆನೆಂದು ನಟಿಸುವವಗೆ
ಭಯವು ಒಳಗೆ ಚಂದಿರ
ಹಾಲೊಳಗೆ ಬೆಣ್ಣೆ, ಕಾಯೊಳಗೆ ಎಣ್ಣೆ
ಅಡಗಿರುವುದು ನಿಜವು ತಾನೆ
ಹುಡುಕಿ ಪಡೆಯೊ ಉತ್ತರ
ದುಗುಡ ತೊರೆದು ಚಂದಿರ
ಹೊರಗೆ ಬೆಳಕು, ಒಳಗೆ ಕೊಳಕು
ಕಪ್ಪು ಬಿಳುಪು ಪ್ರತಿ ದಿನದ ಬದುಕು
ಕಪ್ಪ ಕೊಟ್ಟು ಬೆಪ್ಪನಾಗಿ,
ತುಪ್ಪ ಬೇಡುತಿರುವೆ ಚಂದಿರ
ಉದ್ದೇಶರಹಿತ ಸ್ನೇಹ ವಿರಳ
ಕಾಲಹರಣಕಿಂದು ಕಾಲವಿಲ್ಲ
ತಿರುಗಿನೋಡದೆ ಓಡುತಿಹರು
ಒಮ್ಮೆ ಕೂಗಿ ತಡೆಯೊ ಚಂದಿರ
ಗಮನಕೊಡದೆ ಕಳೆದ ಬಾಲ್ಯ
ಯಶಸ್ಸಿಗಾಗಿ ಮರೆತು ಮೌಲ್ಯ
ತೂಗು ತಕ್ಕಡಿಯಲ್ಲಿ ತತ್ತರಿಸಿ
ಬಿದ್ದು, ಉಸಿರು ಬಿಟ್ಟ ಚಂದಿರ
ಮತ್ತೆ ಅಸಹಾಯಕನ ಮಾಡದಿರು ತಂದೆ
ಕೈ ಕಾಲು ಕಟ್ಟಿ, ಕಣ್ಣು ತೆರೆಸಿ
ಬಲಹೀನನಾಗಿ ಬದುಕ ಬಿಡದಿರು
ಸ್ವಾಭಿಮಾನದ ಪ್ರಶ್ನೆ, ಕರುಣೆಯಿರಲಿ
ತಂದೆ, ತಾಯಿಯ ಬಿಡದೆ, ಅಳುವ ಕಂದನ ಕೊಂದು
ಅಕ್ಕ, ತಂಗಿಯ ಜೊತೆಗೆ ಅಣ್ಣ, ತಮ್ಮನ ಇರಿದು
ಒಲವಿನ ಮಡದಿಯನು ಕಣ್ಮುಂದೆ ಹರಿದು
ಗುಂಡಿಕ್ಕಿ ಗರ್ಜಿಸಿ, ತೊಡೆತಟ್ಟಿ ಕುಣಿಯುತಿಹರು
ಇಂಗಿ ಹೋಯಿತು ಶೌರ್ಯ, ಕುಸಿದು ಬಿದ್ದಿದೆ ಸ್ಧೈರ್ಯ
ಅಡಗಿಕೊಳ್ಳಲು ಸಹ ಕೊಡದೆ ಅವಕಾಶ
ಇಲಿಯೊಂದು ತನ್ನ ಸ್ವೇಚ್ಛತೆ ತೋರಿ ಅಣಕಿಸುತ್ತಿದೆ ಇಲ್ಲಿ
ನರಕ ಸದೃಶ ಬಾಳಿದು ಸತತ ಸುಡುವ ಬೆಂಕಿ
ಬದುಕಿಸಿ ಸಾಯಿಸುವ ಸೂತ್ರ ಪ್ರಯೋಗ
ಕೆರಳಿಸಿ, ಕೆಣಕುತಲೆ ಮೆರೆಯುತಿರೆ ಎದುರೇ
ಬರಡು ಭೂಮಿಯಿದು ಬಿಡು ಹಸಿರಿನ ಕನಸು
ಕರೆದುಕೋ ಈಗಲೇ ವ್ಯರ್ಥ ಈ ಉಸಿರು
ನಗ್ನ ದರ್ಶನವಿದು ಪರದೆ ಕಳಚಿದ ಮೇಲೆ
ಮತ್ತೆ ಪರೀಕ್ಷೆಗೆ ಇರುವುದೇ ಸಾಮರ್ಥ್ಯ
ಅಸಹಾಯಕತೆ ಎನ್ನ ಕಾಡುತಿದೆ ಕ್ಷಣಕ್ಷಣವು
ಸಹನೆ, ಸಂಯಮ ಬತ್ತಿಹೋಗಿದೆ ಎಂದೋ
ದಿಟ್ಟ ಉತ್ತರ ಕೊಡಲು ಹಾತೊರೆಯುತಿದೆ ಆತ್ಮ
ಅಲ್ಲಿ ಹೋಗುವ ಮುನ್ನ, ಕಸವ ಗುಡಿಸುವ ಕರ್ಮ
ಮತ್ತೆ ಬಾರದಿರಲಿ ಎಂದಿಗೂ, ಯಾರಿಗೂ
ಸ್ವಾಭಿಮಾನದ ಪ್ರಶ್ನೆ, ಕರುಣೆಯಿರಲಿ
ಹಾರಿಹೋಯಿತು ಜೀವ ಗೆಳೆಯ
ನೂರು ಕನಸನು ಕೊಚ್ಚಿಕಡಿದು
ನಿಲ್ಲದಾಯಿತೊ ರಕ್ತದೋಕುಳಿ
ಕುಣಿಯುತಿದೆಯೊ ಕಲ್ಲುಹೃದಯ
ತೊಟ್ಟತೊಡುಗೆ ಹರಿದುಹೋಗಿದೆ
ಮುಖವಾಡ ನೋಡು ಜಾರಿಬಿದ್ದಿದೆ
ಇರುವ ಪರದೆಗಳೆಲ್ಲ ಕಳಚಲು
ನಗ್ನ ದರ್ಶನ ಪಡೆದು ಪಾವನ
ಅದೇ ರಾಗ, ಅದೇ ವೇಗ,
ಅದೇ ಯಾಂತ್ರಿಕ ಸ್ಪಂದನೆ
ಹೃದಯಹೀನ ಈ ರಾಜಕಾರಣ
ಮುಕ್ತಿ ಕೊಡುವೆಯಾ ಆಪ್ತನೆ
ಸನ್ನಿವೇಶಕೆ ತಕ್ಕ ವೇಶ
ಮುಖದಲಿರಲು ಕೃತಕ ಆವೇಶ
ಇದು ಯಾವ ಸ್ತರದ ಆತ್ಮವಂಚನೆ
ಇಲ್ಲವಾಯಿತೇ ವಿವೇಚನೆ
ಲಾಭ ಪಡೆವ ಏಕೈಕ ತವಕ
ನಡೆ ನುಡಿಗಳದಕೆ ಪೂರಕ
ಉರಿವ ಬೆಂಕಿಗೆ ತೈಲವೆರೆದು
ಗಹಗಹಿಸಿ ನಗುತಿಹ ಕೀಚಕ
ಇದು ಯಾವ ಪರಿಯ ನಾಟಕ
ಘೋರ ಹೃದಯವಿದ್ರಾವಕ
ಪ್ರತಿಭೆಯ ಪ್ರದರ್ಶನ ತಾರಕ
ಧನ್ಯನಾದೆನೊ ನಾಯಕ
ಒಂದು, ಎರಡು, ಮೂರು ದಿನ
ಸಾಕು ಮರೆಯುವೆ ಮರುದಿನ
ಅಡಗಿ ಕುಳಿತಿಹ ಇಲಿಗಳೆಲ್ಲ
ಹೊರಗೆ ಬರಲದೆ ಶುಭದಿನ
ಮುಗ್ಧ ಜನರ ಮರಣಹೋಮ
ಸಾವು ಬದುಕು ಜನರ ಕರ್ಮ
ನಿತ್ಯ ನರಕ, ನಿತ್ಯ ಚರಕ
ನಿತ್ಯ ಹಸಿವಿಗೆ ಬೇಕು ಕಾಯಕ
ಮುಗ್ಧತೆಯು ಮೊಗ್ಗಲ್ಲಿ ಮೈದುಂಬಿ,
ಅರಳಿದ ಸೌಂದರ್ಯಕೆ ಸಾರ್ಥಕ
ಕಾಯಾಗಿನ ಪ್ರೀತಿ ಹಣ್ಣಿಲ್ಲಿ ಮುಕ್ತಿ
ಇದೇ ಸಹಜ ನೀತಿ ಚಂದಿರ
ಪ್ರೀತಿಗಿರಲು ಹಲವು ಬಣ್ಣ
ಎಲ್ಲ ಅಡಗಿ ಶ್ವೇತವರ್ಣ
ಒಲವೇ ಕಡಲು ಜಗದ ನೆರಳು
ಜಡವ ತೊರೆಯೊ ಚಂದಿರ
ಹಣವಿದ್ದ ಕಡೆ ವಿಷ ಸರ್ಪದೆಡೆ
ಹಾಲುಂಡು ವಿಷಕಾರುವ ಆಪ್ತಪಡೆ
ಹಣದ ಗೊಬ್ಬರ ಹರಡು ಎಲ್ಲೆಡೆ
ಚಂದ ಫಸಲು ಪಡೆವೆ ಚಂದಿರ
ಮೌಲ್ಯಗಳಲಿ ನಂಬಿಕೆಯನಿರಿಸು
ಅಚಲ ಮನದ ಸ್ನೇಹಗಳಿಸು
ಕಠಿಣ ಕಲಹಗಳ ನಿದ್ದೆಗೆಡಿಸು
ಹತ್ತಿರವಾಗು ಎತ್ತರಕೆ ಚಂದಿರ
ಜ್ಞಾನದಸಿವನು ಇಂಗಿಸುವ ಕರ್ಮ
ಹರಡಿ ಹಸಿವನೆಚ್ಚಿಸುವ ಮರ್ಮ
ಮನುಜಗೆ ಮನುಷತ್ವ ಏಕೈಕ ಧರ್ಮ
ಆನಂದ ಜಗವಂದು ಚಂದಿರ
ಜ್ಞಾನ, ಹಣ ಗೊಬ್ಬರದಂತೆ ಹರಡಿ
ಬರಡು ನೆಲಕೆ ಉಸಿರು ನೀಡಿ
ಹಸಿರು ತುಂಬಿ ಹಸಿವ ನೀಗಿ
ಮುಕ್ತಿ ಪಡೆಯೊ ಚಂದಿರ
ಜಾತಿ, ಮತ ಮತಿಯ ಕೆಡಿಸದಿರಲಿ
ದೀನ, ದುರ್ಬಲರ ಸಹಿಸಿ ಸಲಹುತ
ಅವರಂತರಂಗದ ದೇವರ ಕಾಣುತಲಿ
ದಿಟ ಮನುಜನಾಗು ಚಂದಿರ
ಕೋಪವೆಂಬ ಶಾಪದಿಂದ
ಮುಕ್ತನಾಗು ಗೆಳೆಯನೆ
ಸಹನೆಯೆಂಬ ಸ್ನೇಹದಿಂದ
ಜಗವ ಬೆಳಗು ಚಂದಿರ
ತನು, ಮನವ ಪಳಗಿಸಿದಾಗ
ಬಾಳು ನಂದನವನವು
ಜಾರಿ ಹೋಗದ ಮನವು
ಸವಿಜೇನಿನಾಂಗ ಚಂದಿರ
ಇರುವವರೆಡೆಗೆ ಇರುವೆಗಳ ಸಾಲು
ಇರದವರೆಡೆಗೆ ಬರುವೆನೀಗ ತಾಳು
ನಿದರ್ಶನವಿದೇ ನಿಜವನರಿಯಲು
ಮುಖವಾಡ ತೆರೆಸಿದವನೇ ಚಂದಿರ
