ಮತ್ತೆ ಮತ್ತೆ ಕಾಡುವ ಬಾಪೂ, ಥೆರೆಸ್ಸಾ...

on Nov 17, 2009

ನಿಮ್ಮ ಸರಳತೆ, ನಿಸ್ವಾರ್ಥ ಸೇವೆ, ತತ್ವ, ಸಿದ್ಧಾಂತ
ಮತ್ತು ಆದರ್ಶಗಳ ಕಿಂಚಿತ್ ಪರಿಚಯವೂ ಸಹ
ನಮಗೆ ಇರಬಾರದಿತ್ತು.

ಇದರೊಂದಿಗೆ,
ಇತಿಹಾಸವೇ ಇಲ್ಲದ ನೆಲೆಯಲ್ಲಿ
ನಾವು ಹುಟ್ಟಬೇಕಾಗಿತ್ತು.

ಏಕೆಂದರೆ,
ಆಗ ಮಾತ್ರ ನಮಗೆ ನಿಸ್ಸಂಕೋಚವಾಗಿ
ಪ್ರಸಕ್ತ ಕಾಲಮಾನದಲ್ಲಿ ಘಟಿಸುವುದೆಲ್ಲವನ್ನೂ
ಸಹಜ, ಸ್ವಾಭಾವಿಕವೆನ್ನುವಂತೆ
ಸ್ವೀಕರಿಸಬಹುದಿತ್ತು.

ಬಾಪೂ, ಥೆರೆಸ್ಸಾ
ದಯಮಾಡಿ ಕೇಳಿಸಿಕೊಳ್ಳಿ
ನೀವಿಬ್ಬರೂ ಬಹಳ ತಪ್ಪುಮಾಡಿದ್ದೀರಿ,
ಈ ನೆಲದಲ್ಲಿ ಹುಟ್ಟಿ, ಅಗಾಧ ಅಸಾಧ್ಯತೆಗಳನ್ನು ಸಾಧ್ಯವಾಗಿಸಿ
ನೆಮ್ಮದಿಯಾಗಿ ಹೊರಟೇ ಬಿಟ್ಟಿದ್ದೀರಿ,
ಈಗ ನಮ್ಮನ್ನು ನಿರಂತರವಾಗಿ ಎಡಬಿಡದೆ ಕಾಡುತ್ತಾ...

ಈಗ,
ಜನಸಾಮಾನ್ಯರನ್ನಾಳುವ
ಅರಸರಿಗೊಂದು ಕಳಕಳಿಯ ಮನವಿ!
ಒಂದೊ, ನೀವು ಇವರ ನೆನಪು ಮತ್ತು ಸಮಗ್ರ ಇತಿಹಾಸವನ್ನು
ಲವಲೇಶವೂ ಇರದಂತೆ ಕೂಡಲೇ ನಾಶಮಾಡಿ.

ಇಲ್ಲಾ,
ಅಸಹಾಯಕರ ಇರುವನ್ನು ಇನ್ನಿಲ್ಲದಂತೆ
ದಯವಿಟ್ಟು ಒಮ್ಮೆಗೇ ಕೊಚ್ಚಿಹಾಕಿ...

ಬಿಂಬ : 41 - 45

on Nov 1, 2009

ಬಿಂಬ - 41
ಕಾವ್ಯವನ್ನರಿಯುವ ಸಂಯಮ ಸಿದ್ಧಿಸಿಕೊಂಡರೆ,
ಬದುಕು ಸವಿಯುವ ಸಾಮರ್ಥ್ಯ ಸಾಧಿಸಿದಂತೆ.

ಬಿಂಬ – 42
ತೀವ್ರ ನಿರಾಸೆಗಳಿಂದ ಪಾರಾಗಬೇಕಾದರೆ,
ಮೊದಲು ನಿರೀಕ್ಷೆಗಳನ್ನು ನಿಯಂತ್ರಿಸಬೇಕು.

ಬಿಂಬ - 43
ನಾವೇ ಹೆಣೆದ ಜೇಡರ ಬಲೆಯಲ್ಲಿ ಸೆರೆಯಾಗಿ
ಹೊರಬರಲಾಗದೆ ಒದ್ದಾಡುವುದು ವಿಪರ್ಯಾಸ.

ಬಿಂಬ – 44
ಜಗತ್ತಿನ ಅತಿ ಶ್ರೇಷ್ಠ ಶ್ರೀಮಂತ,
ನಿತ್ಯ ಸಾಹಿತ್ಯ ಸವಿಯುವ ಸಂತ.

ಬಿಂಬ – 45
ಯಶಸ್ಸನ್ನು ಸವಿಯುವ ಹುಮ್ಮಸ್ಸಿನಂತೆ,
ಸೋಲು ಸ್ವೀಕರಿಸುವ ಸಾಮರ್ಥ್ಯ ಅಗತ್ಯ.

ಹನಿಗಳು - 7

on Oct 28, 2009


-1-
ಮುಂಗಾರಿನ
ನಡೆ ಏಕೋ
ಮುಖ್ಯಮಂತ್ರಿಗಳ
ನುಡಿಯಂತೆ
ತೋರುತ್ತಿದೆ
ಅಲ್ಲವೆ?

-2-
ರೈತರ
ಉಚಿತ ವಿದ್ಯುತ್
ಕಡಿತ
ಇಂಧನ ಸಚಿವರ
ಶಾಕ್ ಟ್ರೀಟ್ಮೆಂಟ್
ಖಚಿತ

-3-
ಆರೋಗ್ಯ ಸಚಿವರಿಗೆ
ಸತತ ಅನಾರೋಗ್ಯ
ಪ್ರಚಾರ ಕಾರ್ಯಕ್ಕೆ
ಮಾತ್ರ ತಪ್ಪದವರ
ಆಗಮನದ ಭಾಗ್ಯ

-4-
ಸಚಿವೆಯ ಮನೆಯಲ್ಲಿ
ಕುಡಿತ, ಕುಣಿತ,
ಪಟಾಕಿ ಸಿಡಿತ
ಆಡಳಿತ ಪಕ್ಷದಲ್ಲಿ
ತೀವ್ರ ಭಿನ್ನಮತ

-5-
ಗೃಹಲಕ್ಷ್ಮಿ,
ಭಾಗ್ಯಲಕ್ಷ್ಮಿ,
ಆರೋಗ್ಯಲಕ್ಷ್ಮಿ
ಸದ್ಯ
ಸಂತಾನಲಕ್ಷ್ಮಿ
ವರ ನೀಡಲಿಲ್ಲ
ಮಾನ್ಯ
ಮುಖ್ಯ ಮಂತ್ರಿಗಳು

-6-
ಮಠಮಾನ್ಯರಿಗೆ
ಯಥೇಚ್ಛ
ಅನುದಾನ
ನೆರೆಪೀಡಿತರಿಗೆ
ಕೇವಲ
ಸಾಂತ್ವನ

-7-
ಚುನಾವಣಾ ಸಮರ
ಜಾತಿ, ಮತದ ಲೆಕ್ಕಾಚಾರ
ಹಣದ ಅಹಃಕಾರ
ಮದ, ಮತ್ಸರ,
ಮದ್ಯಸಾರದ
ವಿಕೃತ ಸಾಗರ

-8-
ಗೃಹ ಸಚಿವರಿಗೆ
ಭಾರೀ ಗಂಢಾಂತರ
ಆದರೂ ಅಂತಾರೆ
ಮಧ್ಯೆ ನಿಮ್ಮದೇನ್ರಿ
ಅವಾಂತರ

-9-
ಬಂತು ಬಂತು
ಕರೆಂಟು ಬಂತು
ಕೇವಲ
ಇಂಧನ ಸಚಿವರ
ಕನಸಲ್ಲಿ...

-10-
ರಾಜ್ಯದ ಬೊಕ್ಕಸ
ಖಾಲಿ ಖಾಲಿ
ದಿವಾಳಿ...
ಸಚಿವ ಸಂಪುಟಕ್ಕೆ
ಜಾಲಿ ಜಾಲಿ
ದೀಪಾವಳಿ.