Dec 14, 2009

ಹಿತವರು...

ನನ್ನ ನೆರಳಿಗೆ ಮುಪ್ಪಿಲ್ಲ,
ನೆನಪುಗಳಂತೆ
ಇವರು ನನ್ನ ಎಂದೂ ತೊರೆಯಲೊಲ್ಲದ,
ತಕರಾರಿಲ್ಲದ ಜೊತೆಗಾರರು.
ಇವರೊಂದಿಗೆ ನಿತ್ಯ ಬಂದು ಹೋಗುವ
ಆತ್ಮೀಯ ಅತಿಥಿ
ಕನಸು.
ಹಗಲಿಗೆ ನೆರಳು, ನೆನಪು
ಇರುಳಿಗೊಂದು ಕನಸು.
ಇವರೆ,
ನನ್ನೊಂದಿಗೆ ಹುಟ್ಟಿಸಾಯುವ
ಅಸಹಾಯಕರೊ, ಅದೃಷ್ಟವಂತರೊ
ಇಲ್ಲಾ ಯಾವದೋ ಅನಿವಾರ್ಯತೆಯ ಸೃಷ್ಟಿ
ಅವರಂತೆ ನಾನು...

Dec 11, 2009

ಬಿಂಬ : 46 – 50

ಬಿಂಬ – 46
ಕಲ್ಲು ಬೀಸಿದ್ದು ಕಾಯಿಗೆ
ಬಿದ್ದದ್ದು ಹಣ್ಣು
ನಂತರ ಪಾಪ ಪಶ್ಚಾತ್ತಾಪ...

ಬಿಂಬ – 47
ಎಲ್ಲರನ್ನೂ ನಿರಂತರ
ಕಾಡುವುದು ಯಾವುದಾದರೂ
ಒಂದು ಹಸಿವು...

ಬಿಂಬ – 48
ನಲ್ಲೆ
ಚಳಿಗಾಲದಲ್ಲಿ
ಎಲ್ಲದಕ್ಕೂ ಮಿಗಿಲು
ನಿನ್ನ ಆಲಿಂಗನ

ಬಿಂಬ – 49
ಒಮ್ಮೆಗೆ,
ಸ್ವರ್ಗವನ್ನೂ ಸಹ ಮರೆಯಬಹುದು,
ಕಾವ್ಯ, ಮದ್ಯ, ಇಲ್ಲಾ ಮಹಿಳೆ
ಸದಾ ಇವರ ನಶೆಯಲ್ಲಿರುವವರು.
ಮತ್ತೆ ಇವರನ್ನು ಕಂಡಾಗ
ಬಹಳ ಸಭ್ಯರೂ ಕೂಡ ತೀವ್ರ ಅಸೂಯೆಯಿಂದ,
ತಮ್ಮ ಅಸಹಾಯಕತೆಗೆ ಮರುಗುತ್ತಾರೆ.

ಬಿಂಬ – 50
ಕ್ಷಮಿಸಿ...
ಕಾಫಿ, ಸಿಗರೇಟ್, ಗರ್ಭನಿರೋಧಕಗಳು
ಮತ್ತೆ ಎಲ್ಲಕ್ಕಿಂತಲೂ ಮುಖ್ಯವಾಗಿ ಮದ್ಯಸಾರ!
ಪ್ರತಿ ಚಳಿಗಾಲದಲ್ಲಿ ತಮ್ಮ ನಿರಂಕುಶ ಅಧಿಕಾರ ಚಲಾಯಿಸುತ್ತವೆ.

Nov 24, 2009

ಮತ್ತೆ ಬರುವನು ಚಂದಿರ - 39

ವಿಲಕ್ಷಣ ಬಂಧಗಳ ಧಾವಂತ
ಹಂತಹಂತವಾಗಿ ಹತನಾಗುತ
ಮೂಡಣ ಪಡುವಣಗಳ ವಸಂತ
ಜೊತೆಗೆ ಬರುವುದೆ ಚಂದಿರ

ಸತತ ಕಾಡುವ ಪ್ರೇಮಭಂಗ
ಕಿತ್ತು ತಿನ್ನುವ ಸ್ವಾರ್ಥರಸಂಗ
ಅನುದಿನವು ಅದೇ ರಣರಂಗ
ನಿಟ್ಟುಸಿರಿಡುವಾಸೆ ಚಂದಿರ

ನಿತ್ಯ ಜೂಜಿನ ಸೆಳೆತದಿಂದ
ಸಂಜೆ ಮದ್ಯದ ಸ್ನೇಹಬಂಧ
ಸತತ ಸೋಲಿನ ಚಡಿಯೇಟು
ಚಿತ್ತ ಚಿಗುರುವುದೆ ಚಂದಿರ

ಸೂಕ್ಷ್ಮ ಸಂವೇದಿಗಳ ಗ್ರಹಿಸದೆ
ಆತ್ಮರತಿಯನು ಅನುಭವಿಸದೆ
ವಿವೇಚನೆಗೆ ಅವಕಾಶ ನೀಡದೆ
ನೋಡು ಬೆಪ್ಪನಾಗಿಹೆ ಚಂದಿರ

ಸಂಕಟ, ಅಪಮಾನಗಳ ಸಾಲು
ನಿರಾಶೆ, ಹತಾಶೆಯ ವಿಷವರ್ತುಲ
ಕದಡಿದ ಚಿತ್ತ ಹಾರಿದೆ ಎತ್ತೆತ್ತಲೊ
ಹುಡುಕಿ ಕೊಡುವೆಯಾ ಚಂದಿರ

ಬದುಕಿನ ಸರಳ ವಿವರಗಳೆಲ್ಲ
ಮರೆಯಾದವೊ ಬಿರುಗಾಳಿಗೆ
ಪಾನಮತ್ತನ ಚಿತ್ತ ಚದುರಿದೆ
ಇನ್ನು ಸಹಿಸಿಲಾಗದೆ ಚಂದಿರ

ಹೆಣ್ಣು, ಹೊನ್ನು, ಮಣ್ಣುಗಳ
ನಿರಂತರ ಸೆಳೆತಕೆ ಸಿಲುಕಿ
ಮತಿಹೀನನಾದವನಿಗೆ ಮುಕ್ತಿ
ಸಿಗದೆ ತತ್ತರಿಸುವ ಚಂದಿರ

ಖಿನ್ನತೆಯಿಂದ ಪಾರಾಗಲು
ಮದ್ಯಸಾರವೆ ನಿತ್ಯ ನೈವೇದ್ಯ
ಬೆನ್ನಟ್ಟಿ ಬರುವ ಭೂತಗಳಿಂದ
ಪಾರಾಗ ಬಲ್ಲನೆ ಚಂದಿರ

ವಿಪರೀತ ನಿರೀಕ್ಷೆಯ ಪ್ರತಿಫಲ
ತಾರಾಫಲದ ದಿಗ್ದರ್ಶನದ ಬಲ
ಸಾಕ್ಷಿಪ್ರಜ್ಞೆ ತೊರೆದ ಅಂತರಾತ್ಮ
ಸ್ವಯಂಕೃತ ಅಪರಾಧ ಚಂದಿರ

ಜೀವನಪ್ರೀತಿಯನ್ನು ತೊರೆದು
ಮಾನವಪ್ರೀತಿಯನ್ನು ಮರೆತು
ತೆರೆದಿಡುವ ತುಡಿತಕೆ ಹಿಂಜರಿದು
ಪಲಾಯನ ಮಾಡಿದೆ ಚಂದಿರ

Nov 17, 2009

ಮತ್ತೆ ಮತ್ತೆ ಕಾಡುವ ಬಾಪೂ, ಥೆರೆಸಾ...

ನಿಮ್ಮ ಸರಳತೆ, ನಿಸ್ವಾರ್ಥ ಸೇವೆ, ಆ ಮುಕ್ತ ಪ್ರೀತಿ, ತತ್ವ-ಸಿದ್ಧಾಂತ
ಮತ್ತು ಆದರ್ಶಗಳ ಕಿಂಚಿತ್ ಪರಿಚಯವೂ ಸಹ
ನಮಗೆ ನಿಜವಾಗಲೂ ಇರಬಾರದಿತ್ತು.

ಇದರೊಂದಿಗೆ ಖಂಡಿತವಾಗಿ,
ಇತಿಹಾಸವೇ ಇಲ್ಲದ ನೆಲೆಯಲ್ಲಿ ಮಾತ್ರ
ನಾವು ಹುಟ್ಟಬೇಕಾಗಿತ್ತು, ಹಾ...ಇತಿಹಾಸವಿಲ್ಲದ ನೆಲದಲ್ಲಿ...


ಏಕೆಂದರೆ,
ಆಗ ಮಾತ್ರ...ನಿಜವಾಗಲೂ ಆಗ ಮಾತ್ರ
ನಮಗೆ ನಿಸ್ಸಂಕೋಚವಾಗಿ ಅನುಭವಿಸಲು,
ಎಳ್ಳಷ್ಟೂ ಸಂದೇಹವಿಲ್ಲದೆ ಒಪ್ಪಿಕೊಳ್ಳಲು ಸಾಧ್ಯವಿತ್ತು
ಈ ಪ್ರಸಕ್ತ ಕಾಲಮಾನದಲ್ಲಿ ಘಟಿಸುವ ಎಲ್ಲ ದುಷ್ಕೃತ್ಯಗಳನ್ನೂ
ಸಹಜವೇ ಎಂಬಂತೆ, ತೀರಾ ಸ್ವಾಭಾವಿಕವೆನ್ನುವಂತೆ
ಯಾವ ಅಡಚನೆಯೂ ಇಲ್ಲದೆ, ನಿಬಂಧನೆಗಳೂ ಇಲ್ಲದೆ ಸ್ವೀಕರಿಸಬಹುದಿತ್ತು.

ನಮಸ್ತೆ,
ಬಾಪೂ, ಥೆರೆಸಾ!
ಖಂಡಿತ ನಾನು ಬಲ್ಲೆ
ನಿಮಗಿನ್ನೂ ಕೇಳಿಸಿಕೊಳ್ಳುವ ಸಂಯಮವಿದೆಯೆಂದು?
ಆದ್ದರಿಂದಲೇ ನಾನು ಸಾಧ್ಯವಾದಷ್ಟು ಗಟ್ಟಿಯಾಗಿಯೇ ಹೇಳಬಯಸುವೆ
ನೀವಿಬ್ಬರೂ ಅತೀ ದೊಡ್ಡ ತಪ್ಪುಮಾಡಿದ್ದೀರಿ,
ದುರದೃಷ್ಟವಶಾತ್ ನೀವು ಇದೇ ಈ ನೆಲದಲ್ಲೇ ಹುಟ್ಟಿ,
ಅಗಾಧವಾದ ಅಸಾಧ್ಯತೆಗಳೆಲ್ಲವನ್ನೂ ಸರಳವೆನ್ನುವಷ್ಟು ಸಲೀಸಾಗಿ ಸಾಧಿಸಿ, ಸಾಧ್ಯವಾಗಿಸಿ
ಹಾಗೇ ನೆಮ್ಮದಿಯಾಗಿ ಯಾರೂ ಅರಿಯದ ಯಾವುದೋ ಶ್ರೇಷ್ಠ ಗೂಡಿಗೆ ಹಾರಿ ಬಿಟ್ಟಿದ್ದೀರಿ,
ಹೀಗೆ ನಮ್ಮನ್ನು ನಿರಂತರವಾಗಿ ಎಂದೂ ಕಂಡರಿಯದಂತೆ ಎಡಬಿಡದೆ ಕಾಡುತ್ತಾ ಅಜರಾಮರರಾಗಿ...

ಈಗ,
ಕೇಳಿಸಿಕೊಳ್ಳಿ...ನೀವು ಕೇಳಿಸಿಕೊಳ್ಳಲೇ ಬೇಕು
ಜನಸಾಮಾನ್ಯರನ್ನಾಳುವ ಆಪ್ತ ಅರಸರೇ
ಸಾಮಾನ್ಯರಿಗೆ...ಶ್ರೀಸಾಮಾನ್ಯರಿಗೆ...ಗತಿಯಿಲ್ಲದವರಿಗೆಲ್ಲಾ
ಜನನಾಯಕರೆಂದೆನಿಸಿಕೊಂಡಿರುವ ಅಗ್ರಗಣ್ಯರೇ
ನಿಮ್ಮಿಂದ ಕೂಡಲೇ ಒಂದು ಮುಖ್ಯ, ಬಹಳ ಮುಖ್ಯ ಕಾರ್ಯ ಆಗಬೇಕಾಗಿದೆ
ಇದರಲ್ಲಿ ಖಂಡಿತ ಆಯ್ಕೆಯ ಅವಕಾಶವೂ ಸಹ ನಿಮಗಿರುತ್ತದೆ...ಅದೇನೆಂದರೆ
ಒಂದೋ, ನೀವು ಬಾಪೂ, ಥೆರೆಸಾ ಇವರಿಬ್ಬರ ನೆನಪಿಲ್ಲದಂತೆ, ಜೊತೆಗೆ ಸಮಗ್ರ ಇತಿಹಾಸದ
ಲವಲೇಶವೂ ಉಳಿಸದಂತೆ ಕೂಡಲೇ ದ್ವಂಸಮಾಡಿ.

ಇಲ್ಲಾ,
ಆ ದೇವರ ಕೃಪೆಯಿಂದ ದಯಮಾಡಿ
ಈ ಅಸಹಾಯಕರೆಲ್ಲರ ಜೊತೆಗೆ ಅಮಾಯಕರನ್ನೂ ಸೇರಿಸಿ,
ಇವರೆಲ್ಲರ ಇರುವನ್ನು ಇನ್ನಿಲ್ಲದಂತೆ ನಾಶಮಾಡಿ,
ಮತ್ತೆಂದೂ ಹುಟ್ಟಿಬರಲು ಸಾಧ್ಯವೇ ಇಲ್ಲದಂತೆ
ಒಮ್ಮೆಗೇ ಕೊಚ್ಚಿಹಾಕಿ...

Nov 1, 2009

ಬಿಂಬ : 41 - 45

ಬಿಂಬ - 41
ಕಾವ್ಯವನ್ನರಿಯುವ ಸಂಯಮ ಸಿದ್ಧಿಸಿಕೊಂಡರೆ,
ಬದುಕು ಸವಿಯುವ ಸಾಮರ್ಥ್ಯ ಸಾಧಿಸಿದಂತೆ.

ಬಿಂಬ – 42
ತೀವ್ರ ನಿರಾಸೆಗಳಿಂದ ಪಾರಾಗಬೇಕಾದರೆ,
ಮೊದಲು ನಿರೀಕ್ಷೆಗಳನ್ನು ನಿಯಂತ್ರಿಸಬೇಕು.

ಬಿಂಬ - 43
ನಾವೇ ಹೆಣೆದ ಜೇಡರ ಬಲೆಯಲ್ಲಿ ಸೆರೆಯಾಗಿ
ಹೊರಬರಲಾಗದೆ ಒದ್ದಾಡುವುದು ವಿಪರ್ಯಾಸ.

ಬಿಂಬ – 44
ಜಗತ್ತಿನ ಅತಿ ಶ್ರೇಷ್ಠ ಶ್ರೀಮಂತ,
ನಿತ್ಯ ಸಾಹಿತ್ಯ ಸವಿಯುವ ಸಂತ.

ಬಿಂಬ – 45
ಯಶಸ್ಸನ್ನು ಸವಿಯುವ ಹುಮ್ಮಸ್ಸಿನಂತೆ,
ಸೋಲು ಸ್ವೀಕರಿಸುವ ಸಾಮರ್ಥ್ಯ ಅಗತ್ಯ.

Oct 28, 2009

ಹನಿಗಳು - 7


-1-
ಮುಂಗಾರಿನ
ನಡೆ ಏಕೋ
ಮುಖ್ಯಮಂತ್ರಿಗಳ
ನುಡಿಯಂತೆ
ತೋರುತ್ತಿದೆ
ಅಲ್ಲವೆ?

-2-
ರೈತರ
ಉಚಿತ ವಿದ್ಯುತ್
ಕಡಿತ
ಇಂಧನ ಸಚಿವರ
ಶಾಕ್ ಟ್ರೀಟ್ಮೆಂಟ್
ಖಚಿತ

-3-
ಆರೋಗ್ಯ ಸಚಿವರಿಗೆ
ಸತತ ಅನಾರೋಗ್ಯ
ಪ್ರಚಾರ ಕಾರ್ಯಕ್ಕೆ
ಮಾತ್ರ ತಪ್ಪದವರ
ಆಗಮನದ ಭಾಗ್ಯ

-4-
ಸಚಿವೆಯ ಮನೆಯಲ್ಲಿ
ಕುಡಿತ, ಕುಣಿತ,
ಪಟಾಕಿ ಸಿಡಿತ
ಆಡಳಿತ ಪಕ್ಷದಲ್ಲಿ
ತೀವ್ರ ಭಿನ್ನಮತ

-5-
ಗೃಹಲಕ್ಷ್ಮಿ,
ಭಾಗ್ಯಲಕ್ಷ್ಮಿ,
ಆರೋಗ್ಯಲಕ್ಷ್ಮಿ
ಸದ್ಯ
ಸಂತಾನಲಕ್ಷ್ಮಿ
ವರ ನೀಡಲಿಲ್ಲ
ಮಾನ್ಯ
ಮುಖ್ಯ ಮಂತ್ರಿಗಳು

-6-
ಮಠಮಾನ್ಯರಿಗೆ
ಯಥೇಚ್ಛ
ಅನುದಾನ
ನೆರೆಪೀಡಿತರಿಗೆ
ಕೇವಲ
ಸಾಂತ್ವನ

-7-
ಚುನಾವಣಾ ಸಮರ
ಜಾತಿ, ಮತದ ಲೆಕ್ಕಾಚಾರ
ಹಣದ ಅಹಃಕಾರ
ಮದ, ಮತ್ಸರ,
ಮದ್ಯಸಾರದ
ವಿಕೃತ ಸಾಗರ

-8-
ಗೃಹ ಸಚಿವರಿಗೆ
ಭಾರೀ ಗಂಢಾಂತರ
ಆದರೂ ಅಂತಾರೆ
ಮಧ್ಯೆ ನಿಮ್ಮದೇನ್ರಿ
ಅವಾಂತರ

-9-
ಬಂತು ಬಂತು
ಕರೆಂಟು ಬಂತು
ಕೇವಲ
ಇಂಧನ ಸಚಿವರ
ಕನಸಲ್ಲಿ...

-10-
ರಾಜ್ಯದ ಬೊಕ್ಕಸ
ಖಾಲಿ ಖಾಲಿ
ದಿವಾಳಿ...
ಸಚಿವ ಸಂಪುಟಕ್ಕೆ
ಜಾಲಿ ಜಾಲಿ
ದೀಪಾವಳಿ.

Oct 25, 2009

ಮತ್ತೆ ಬರುವನು ಚಂದಿರ - 38


ಕೀರ್ತಿ, ಪ್ರತಿಷ್ಠೆಗಳ ಹಂಬಲಕೆ
ವಾದಿ-ಸಂವಾದಿಯ ಸಂಹಾರ
ಅಡ್ಡದಾರಿಗೆ ಅನುಮೋದಿಸುತ
ಅಡ್ಡಗತ್ತರಿಗೆ ಸಿಕ್ಕಿದ ಚಂದಿರ

ಸರಳ ಜೀವನದೃಷ್ಟಿಯ ಮರೆತು
ಸ್ವಾರ್ಥ ಆದ್ಯತೆಗಳ ಸೆರೆಯಿಂದ
ಸನಾತನ ಮೌಲ್ಯಗಳ ಪಸರಿಸುತ
ಪ್ರತಿಭೆಯ ಮೆರೆಯುವ ಚಂದಿರ

ನಡಾವಳಿಗಳ ಪರಿಶೀಲನೆ
ನಂಬುಗೆಗಳ ಪರಾಮಾರ್ಶೆ
ವಿದ್ಯಮಾನಗಳ ಅರಿವಿಂದ
ದೀವಟಿಗೆಯಾಗೊ ಚಂದಿರ

ಪಾಶ್ಚಾತ್ಯ ರಾಷ್ಟ್ರಗಳ ವಿಕೃತಿಗಳು
ಜಾಗತೀಕರಣದ ಹಪಹಪಿಕೆಗಳು
ಮೂಲಭೂತವಾದಿಗಳ ಹುನ್ನಾರ
ಹೆಡೆ ಬಿಚ್ಚಿರಲು ಎಚ್ಚರ ಚಂದಿರ

ಅಂತರಂಗದ ಅಳಲುಗಳ
ಚಿಂತನ ಮಂಥನಗಳಿಂದ
ಆತ್ಮಾನುಸಂಧಾನ ಹರಸುತ
ಆತ್ಮೋದ್ಧಾರವಾಗಲಿ ಚಂದಿರ

ವೇದ, ಉಪನಿಷತ್ತುಗಳಾಗಲಿ,
ಇಲ್ಲಾ ಬ್ರಹ್ಮಸೂತ್ರಗಳಾಗಲಿ
ಧಾರ್ಮಿಕ ಶಾಸ್ತ್ರಗಳಿದ್ದರೂ ಸರಿ
ದಾರ್ಶನಿಕನಾಗಿರೊ ಚಂದಿರ

ಬಡವರ ಬಾಳಿಗೆ ಕೊಳ್ಳಿಯನಿಟ್ಟು
ತೋರಿಕೆಯ ಆಚರಣೆಗಳು ಬೇಕೆ
ಆಡಂಬರದ ಪ್ರದರ್ಶನಗಳೆಂಬ
ವಿಕೃತಪೀಡೆ ತೊಲಗಿಸೊ ಚಂದಿರ

ಸಮಕಾಲೀನ ಪ್ರಜ್ಞೆಯೊಂದಿಗೆ
ಇತಿಹಾಸಗಳ ತಿರುವುಗಳಿಂದ
ತಾತ್ಕಾಲಿಕ ತಂತ್ರಗಳ ತೊರೆದು
ಪರಿಸರಪ್ರೇಮಿಯಾಗು ಚಂದಿರ

ಶತಮಾನಗಳ ನಿರ್ಲಕ್ಷದಿಂದಲೆ
ವಿಕೋಪಗಳು ತಾಂಡವವಾಡಿವೆ
ವಿಷಮಸ್ಥತಿಗೆ ತತ್ತರಿಸುವೆ ಬಹಳ
ತುರ್ತುಸುಧಾರಣೆ ಬೇಕು ಚಂದಿರ

ಅಧಿಕಾರದಾಸೆಗೆ ಮರುಳಾಗಿ
ಸಂಪತ್ತಿನ ಸಂಗ್ರಹ ಅನವರತ
ದ್ವೇಷ, ಸೇಡುಗಳು ಹಪಹಪಿಕೆ
ಇವ ದುಷ್ಟನಾಗಿಹನೊ ಚಂದಿರ

Oct 21, 2009

ಹನಿಗಳು - 6


-1-
ಗೆಳತಿ,
ಬಂದೇ ಬರುವೆ
ಎಂದು ಭರವಸೆ ನೀಡಿ.
ಹೀಗೆ ಭಾವಿ ಪತಿಯೊಂದಿಗೆ
ಬರುವುದು ನ್ಯಾಯವೆ?

-2-
ನನ್ನ
ಬಂಗಾರಿ
ಮುಂಗಾರಿನಂಥಾಗಲು
ಕಾರಣವೇನು
ಗುರುವೆ?

-3-
ಗೆಳತಿ
ಅಚ್ಚ ಕನ್ನಡದಾಕಿ
ಫೋರಮ್ ಮಾಲಿಗೆ
ಕಾಲಿಟ್ಟೊಡನೆ ಇವಳಿಗೇಕೊ
ಇಂಗ್ಲೀಷ್ ಶೋಕಿ?

-4-
ಗೆಳತಿ,
ನೀನೇ ನನ್ನ ಸರ್ವಸ್ವ
ಎಂದದ್ದು ನನಗೊ,
ಇಲ್ಲ ನನ್ನ ಸರ್ವಸ್ವಕ್ಕೊ...

-5-
ನಿನ್ನ
ಮಾದಕ ಕಣ್ಣು
ವರ್ಣಿಸಳಸದಳ
ಕ್ಷಮಿಸು ಪರಿಮಳ

-6-
ಮೊದಲ ವಾರ
ಹೊಮ್ಮಿಸುವೆ
ಸುಗಂಧ ಪರಿಮಳ!
ಕೊನೆಯ ವಾರ
ನಿಲ್ಲುವುದೇ ಇಲ್ಲ
ನಿನ್ನ ಜಗಳ

-7-
ನಲ್ಲೆ
ಈಗ ಸಲ್ಲದು
ಬಿಂಕ, ಬಿಗುಮಾನ
ಮತ್ತೆ ಬೇಡಿದರೂ ಸಿಗದು
ಈ ಸುಂದರ ಹವಾಮಾನ

-8-
ಚೆಲುವೆ,
ದೂರದ ಬೆಟ್ಟ ನುಣ್ಣಗೆ
ಎಂದು ಖಚಿತವಾಗಿದ್ದು
ನೀನು ಹತ್ತಿರ ಬಂದಾಗಲೆ...

-9-
ನಲ್ಲ,
ನೀನಿಲ್ಲದೆ
ನಾನಿರಲಾರೆ
ಎಂದು ಹೇಳಿದ್ದು
ಛೆ...ಸಿನಿಮಾ ಹೆಸರೆ?

-10-
ವಸಂತದಲ್ಲಿ
ಕಂಗೊಳಿಸುವ
ಹಸಿರು.
ನಿನ್ನ ಬೆಚ್ಚಗಿನ
ಉಸಿರು...

Oct 18, 2009

ಮನುಜರಾಗ ಬನ್ನಿರಿ

ಕುಲವ ಕಳಚಿ, ಮತವ ಮರೆತು,
ಮಾನವತ್ವ ಮೆರೆಯಿರಿ, ಮನುಜರಾಗ ಬನ್ನಿರಿ.
ನುಡಿಯೆ ತಾಯಿ, ನೆಲೆಯೆ ತಂದೆ,
ಜಗವೆ ನಮ್ಮದೆನ್ನಿರಿ, ಮನುಜರಾಗ ಬನ್ನಿರಿ

ಹಸಿರು ವನ, ಹರಿವ ನದಿ,
ಹಾರೊ ಹಕ್ಕಿ, ನಲಿವ ನವಿಲ ಜೊತೆಗೆ
ಗೆಳೆಯರಾಗಿ ಬನ್ನಿರಿ, ಮನುಜರಾಗ ಬನ್ನಿರಿ.

ಕಾಮ, ಕ್ರೋಧ, ಲೋಭ, ಮೋಹ
ರಾಗ, ದ್ವೇಷ, ಮದ, ಮತ್ಸರದ
ಎಲ್ಲೆಮೀರಿ ಬನ್ನಿರಿ, ಮನುಜರಾಗ ಬನ್ನಿರಿ.

ಕುಲವ ಕಳಚಿ, ಮತವ ಮರೆತು,
ಮಾನವತ್ವ ಮೆರೆಯಿರಿ, ಮನುಜರಾಗ ಬನ್ನಿರಿ.
ನುಡಿಯೆ ತಾಯಿ, ನೆಲೆಯೆ ತಂದೆ
ಜಗವೆ ನಮ್ಮದೆನ್ನಿರಿ, ಮನುಜರಾಗ ಬನ್ನಿರಿ

ಹಿಂಸೆ ನರಕ, ಅಹಿಂಸೆ ಸ್ವರ್ಗ,
ಒಲವೆ ಬದುಕು, ಅರಿವು ಬೆಳಕು
ಶಾಂತಿಧೂತರಾಗಿರಿ, ಮನುಜರಾಗ ಬನ್ನಿರಿ.

ಮೃಗ-ಖಗಗಳ, ಪಶು-ಪಕ್ಷಿಯ,
ಜಲಚರ, ಸಕಲ ಜೀವರಾಶಿಯ ಜೊತೆ
ಒಂದಾಗಿ ಬನ್ನಿರಿ, ಮನುಜರಾಗ ಬನ್ನಿರಿ.

ಕುಲವ ಕಳಚಿ, ಮತವ ಮರೆತು,
ಮಾನವತ್ವ ಮೆರೆಯಿರಿ, ಮನುಜರಾಗ ಬನ್ನಿರಿ.
ನುಡಿಯೆ ತಾಯಿ, ನೆಲೆಯೆ ತಂದೆ
ಜಗವೆ ನಮ್ಮದೆನ್ನಿರಿ, ಮನುಜರಾಗ ಬನ್ನಿರಿ

Oct 14, 2009

ಮತ್ತೆ ಬರುವನು ಚಂದಿರ – 37


ಅನಗತ್ಯ ಹೋಲಿಕೆಯಿಂದ
ಮಿತಿಮೀರಿದ ದುರಾಸೆಗಳು
ಅಸಮಧಾನ, ಅತಂತ್ರತೆ
ದುರಂತ ಬದುಕು ಚಂದಿರ

ರಾಜಕಾರಣದ ನೀಚ ನಡೆ
ಔದ್ಯಮೀಕರದ ದುಷ್ಟಮುಖ
ಭ್ರಷ್ಟಾಚಾರದ ರುದ್ರನರ್ತನ
ಸೊರಗಿದ ಸಮಾನ್ಯ ಚಂದಿರ

ಪವಾಡ ಪುರಾಣಗಳ ವಿವರ
ವಿಶಿಷ್ಟ ಹರಹಿನ ತಿರುವುಗಳ
ತರ್ಕಹೀನ ನಡೆ ನುಡಿಗಳ
ಕತ್ತಳೆಡೆಗೆ ಪಯಣ ಚಂದಿರ

ಸಮಸ್ಯೆಗಳ ಸುಳಿಯೊಳಗೆ
ತತ್ತರಿಸುತ ನರಳುತಿರುವ
ಸಾಧ್ಯತೆಗಳ ಅರಿವಿರದೆ
ಸಾಯುತಿರುವನು ಚಂದಿರ

ಹಗಲುವೇಶ ಹೇರಿಕೊಂಡು
ಹಲವು ಬಣ್ಣ ಲೇಪಿಸುತ್ತಲೇ
ಹಳ್ಳಕ್ಕೆ ತಳ್ಳಿ ಕಾಲ್ಕೀಳುವ
ಪಟಿಂಗನಿವನೊ ಚಂದಿರ

ಆಗಿರುವುದರ ನೆನಪುಗಳಿಲ್ಲ
ಆಗುತ್ತಿರುವುದೂ ಅರಿವಿಲ್ಲ
ಆಗಲಿರುವುದರ ಸುಳಿವಿಲ್ಲ
ಅಗಲುವನೀಗೇ ಚಂದಿರ

ಪ್ರಚಲಿತವಿರುವ ಪರಿಸರ
ವಿಕೋಪವಾದರು ವಿಮುಕ
ತೀರ್ಥಯಾತ್ರೆಗೆ ತಿರುಳಿಲ್ಲ
ತಿಳಿಸಿಕೊಡುವೆಯ ಚಂದಿರ

ಗ್ರಹಿಸುವ ಇಚ್ಛಾಸಕ್ತಿ ತ್ಯಜಿಸುತ
ನಿರೂಪಣೆಯ ಧಾಟಿ ದೂರುತ
ವಿಷಯಾಂತರಕೆ ಮಣೆ ಹಾಕುತ
ವಿಕೋಪಕ್ಕೆ ತುತ್ತಾದ ಚಂದಿರ

ನೀರಸ ಪಯಣಕೆ ಪಡಪಡಿಸಿ
ಪರಿಶ್ರಮದಿಂದಲೆ ಪಲಾಯನ
ಸಂಯಮ ತೊರೆದ ಪರದೇಸಿ
ವಿಲ ವಿಲ ಒದ್ದಾಡುವ ಚಂದಿರ

ಮಿತಿಮೀರಿದ ನಿರೀಕ್ಷೆಗಳಿಂದ
ಸತ್ಯ ಶೋಧನೆಗೆ ಶ್ರಮಪಡದೆ
ನಿರಾಸೆಗಳಿಂದ ವಿಚಲಿತನಾಗಿ
ನಿಶಾಚರನಾದನೊ ಚಂದಿರ

Oct 13, 2009

ಕವಿ ಮಹಾಶಯ


ನಿಜವಾಗಲೂ ಇವ ಅರೆಹುಚ್ಚನಿದ್ದಂತೆ,
ಏನೋ ಹೇಳಲು ಹೋಗಿ, ಏನೋ ಹೇಳುತ್ತಾ,
ಮತ್ತೇನೋ ಸೂಚಿಸುತ್ತಿರುತ್ತಾನೆ...
ಕೆಲವೂಮ್ಮೆ ಅಧಿಕಪ್ರಸಂಗಿಯಾಗುತ್ತಾನೆ.
ಕಿರುಚುತ್ತಾನೆ, ನಗುತ್ತಾನೆ, ಬೈಯುತ್ತಾನೆ,
ಮತ್ತೆ ಒಮ್ಮೆಗೇ ಮೌನವ್ರತ ಆಚರಿಸುತ್ತಾನೆ.
ಏಕಾಂಗಿಯಾಗಿರಲು ಬಯಸುತ್ತಾನೆ,
ಸೂರ್ಯ,ಚಂದ್ರ, ಋತುಗಳಂತೆ ಬದಲಾಗುತ್ತಿರುತ್ತಾನೆ.
ಖಂಡಿತ ಇವನು ಸಾಮಾನ್ಯನಲ್ಲ!
ತನ್ನತ್ತ ಮಕ್ಕಳಂತೆ ಗಮನ ಸೆಳೆಯಲು
ಪಡಪಡಿಸುತ್ತಿರುತ್ತಾನೆ.
ಮತ್ತೆ ಯಾವಾಗಲೂ ನಶೆಯಲ್ಲಿರುತ್ತಾನೆ,
ಕಾವ್ಯದ ನಶೆ, ಮದಿರೆಯ ನಶೆ,
ಮಹಿಳೆ, ಇಲ್ಲಾ ಪ್ರಕೃತಿಯ ನಶೆಯಲ್ಲಿ ಹೀಗೇ...
ಪ್ರೀತಿಯಲ್ಲಿ ಸೋತ ಪ್ರಿಯಕರನಾಗಿದ್ದರೆ
ಅಲ್ಲಿಗೆ ಮುಗಿದಂತೆ ಕತೆ.
ನೆಡೆ-ನುಡಿ, ಯೋಚಾನಾ ಕ್ರಮ
ಎಲ್ಲವೂ ತೀರಾ ಭಿನ್ನ-ವಿಭಿನ್ನ.
ಬಿಡಿ ಎಲ್ಲರಂತಿರಲು ಇವನಿಗೆ ಕಷ್ಟಸಾಧ್ಯ!
ಓ ದೇವರೆ!
ಎಲ್ಲದಕ್ಕೂ ಮೂಗು ತೂರಿಸುತ್ತಾನೆ,
ಆದರೂ, ಇವ ಸೂಕ್ಷಾತಿಸೂಕ್ಷ್ಮ ಪ್ರಾಣಿ.
ಕೆಲವೂಮ್ಮೆ ಯಾವುದಕ್ಕೂ ತಲೆಕೆಡಿಸಿಕೊಳ್ಳದಂತೆ
ಸುಮ್ಮನೆ ಗುಮ್ಮನಂತೆ ಇದ್ದುಬಿಡುತ್ತಾನೆ.
ಪ್ರಖರ ಪಂಡಿತನಂತೆ ಯಾವ ವಿಷಯವಾದರೂ ಸರಿಯೆ
ಭೂಮಿಯ ಮೇಲೆ, ಆಗಸದ ಕೆಳಗೆ, ತಿಳಿಯದ ಭ್ರಹ್ಮಾಂಡವಾದರೂ ಸರಿ
ಏನು ಬೇಕಾದರು ಬರೆಯಬಲ್ಲ ಭೂಪ!
ನೆನಪಿರಲಿ, ಇವ ಪುಂಡ, ಪುಢಾರಿಯೂ ಆಗಬಲ್ಲ ಚಾಣಾಕ್ಷ.
ಇವನು ವಿಪರೀತ ದ್ವೇಷಿಸುವವರೆಂದರೆ,
ಜಡ ಆಡಳಿತ ವರ್ಗದವರು, ಭ್ರಷ್ಟಾಚಾರಿಗಳು, ಅವಕಾಶವಾದಿಗಳು,
ಆಗರ್ಭ ಶ್ರೀಮಂತರು ಮತ್ತು ನೀಚ ರಾಜಕಾರಣಿಗಳು!
ಹಾಗೇ ಬಡತನವೆಂದರೆ ಇವನಿಗೆ ತುಂಬಾ ಆಪ್ಯಾಯಮಾನ
ಅಸಹಾಯಕರನ್ನು ಕಂಡರೆ ಎಲ್ಲಿಲ್ಲದ ಒಲವು.
ಇನ್ನು ಇವನನ್ನು ಸುಧಾರಿಸುವುದಂತೂ ಹಗಲುಗನಸು;
ಈ ಕ್ರಿಮಿಯನ್ನು ವರ್ಣಿಸಳಸದಳ!
ದಪ್ಪ ಅಕ್ಷರಗಳಲ್ಲಿ ಬರೆದಿಡಿ...
ಹೀಗಿರುವುದೆಂದರೆ,
ಇವನಿಗೆ ನಿಸ್ಸಂಶಯವಾಗಿ ತುಂಬಾ...ತುಂಬಾ ಇಷ್ಟ!

Oct 12, 2009

ಮತ್ತೆ ಬರುವನು ಚಂದಿರ - 36


ದಿವ್ಯಮಿಲನಕೆ ಸಕಲ ಸಿದ್ಧತೆಯಿಂದ
ಕಾತುರದಿ ಕಾಯುತ್ತಿರುವಾಗ
ತಡವಾಗುತ್ತೆಂದು ಪೋನಾಯಿಸಿ
ರಸಭಂಗ ಮಾಡಿದ ಚಂದಿರ

ತಡವಾದರೂ ಸರಿಯೆ
ಬಿಡದೆ ಕಾಡುವ ಮಡದಿಗೆ
ತಲೆನೋವಿನ ನೆಪವೂಡ್ಡಿ
ಪ್ರಸಿದ್ಧ ನಟನಾದ ಚಂದಿರ

ಸವಿಸವಿ ಮಾತಿಂದ
ಸೆಳೆಯಲೆತ್ನಿಸಿದಾಗ
ಮನೆ ಸ್ವಚ್ಛವಾಗಿಲ್ಲವೆಂದು
ಅಬ್ಬರಿಸುವನಲ್ಲಾ ಚಂದಿರ

ಸಂತೃಪ್ತಿಯ ಬಯಸುತ್ತ
ಇಷ್ಟದ ಅಡುಗೆ ಬಡಿಸಿದರೆ
ಆನಂದದಿಂದ ಆಸ್ವಾಧಿಸಿ
ಮಗುವಂತೆ ಮಲಗಿದ ಚಂದಿರ

ಸುಂದರವಾಗಿ ಅಲಂಕಾರಗೊಂಡು
ಆಕರ್ಷಿಸಲೆತ್ನಿಸಿದರೆ ಅಪಶಕುನವೆಂದು
ನಯವಾಗಿ ಜರಿದು ಜಾರಿಕೊಂಡ
ಚತುರ ಚೆಲುವಾಂಗ ಚಂದಿರ

ಇಳಿಸಂಜೆ ತಂಗಾಳಿಯಲ್ಲಿ
ಹಾಯಾಗಿ ಸುತ್ತೋಣವೆಂದರೆ
ಏಕೊ ಸುಸ್ತಾಗುತ್ತಿದೆ ಎಂದು
ಸುಮ್ಮನಾದನಲ್ಲಾ ಚಂದಿರ

ಬರುವ ಶನಿವಾರ ಸಿನಿಮಾ
ನೋಡಿ ಬರೋಣ ಎಂದರೆ
ಸಿಡಿಮಿಡಿಗೊಂಡು ಸಿಟ್ಟಾಗಿ
ಚೀರಿಕೊಂಡನೇಕೆ ಚಂದಿರ

ಭಾನುವಾರವಾದರೂ ವಿಶ್ರಾಂತಿ
ಪಡೆಯಿರೆಂದು ವಿನಂತಿಸಿಕೊಂಡರೆ
ಗೆಳೆಯರಿಗೆ ಕರೆಮಾಡಿ ಕೂಡಲೆ
ಕಾಲ್ತೆಗೆಯುತ್ತಾನಲ್ಲಾ ಚಂದಿರ

ನಕಾರಾತ್ಮಕ ಪ್ರತಿಕ್ರಿಯಿಂದ
ಬೇಸತ್ತು ತವರುಮನೆಗೋದರೆ
ತಬ್ಬಲಿಯಂತೆ ಗೋಗರೆದು
ಕೂಡಲೆ ಬರಹೇಳಿದ ಚಂದಿರ

ಕ್ಷಣದಲೆ ಅಪ್ಪಿಕೊಂಡು ಆತುರುದಿ
ಮಿಲನಕೆ ಹಾತೊರೆದು ನಿಂತಾಗ
ತಿಂಗಳಾಯಿತೆಂದರೆ ತಬ್ಬಿಬ್ಬಾಗಿ
ತಣ್ಣಗಾದ ಬಡಪಾಯಿ ಚಂದಿರ

Oct 9, 2009

ಸಾಲು - 8

- 1 -
ತೆರಿಗೆ ಕಟ್ಟಿ, ಓಟೂ ಒತ್ತಿ
ಸುತ್ತಿ ಸುತ್ತಿ ಸಲಾಂ ಹೊಡೆದೂ
ಲಂಚ ಕೊಡೊ ಗುಗ್ಗೂಸ್ ಎಂದು ಗುದ್ದಿಸಿಕೊಂಡ್ರೂ...
ತೆಪ್ಪಗಿರೊ ಅಸಹಾಯಕ ಪ್ರಜೆಗಳ ದುಸ್ಥಿತಿ,
ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಮಾನ!

- 2 -
ಜನಸೇವೆಯ ಹೆಸರಲ್ಲಿ
ನಲವತ್ತೆಂಟು ಕೋಟಿ ರೂಗಳ
ಸುಂದರ ವಜ್ರದ ಸುವರ್ಣ ಕಿರೀಟ
ದೂರದ ತಿರುಪತಿ ತಿಮ್ಮಪ್ಪನಿಗೆ!
ಊರಲ್ಲೇ ಭೀಕರ ನೆರೆಯಿಂದ ತತ್ತರಿಸಿ,
ಕೂಳಿಗೂ, ಸೂರಿಗೂ ಪರದಾಡುವ ಜನರ
ಧಾರುಣ ಪರಿಸ್ಥಿತಿಯಲ್ಲೂ ಮನಕರಗದ
ಅಮಾನವೀಯ ಗಣ್ಯ ನಾಯಕರ ನಡೆ
ಬಹಳ ಅಸಹನೀಯವಾದುದು.

- 3 -
ಪ್ರಜಾಸೇವೆ ಪರಮಾತ್ಮನ ಸೇವೆಯೆಂದು
ಪಢಪಢಿಸಿ ತೊದಲುತ್ತಾ...ಬೊಗಳುತ್ತಾ...
ಅಸಹಾಯಕ ಪ್ರಜೆಗಳ ಪೀಡಿಸಿ, ಹಿಂಸಿಸಿ
ಪ್ರಭುಗಳಾಗುವ ವಿಕೃತ ಸಾಧನೆಯಿಂದ...
ಸಂತೃಪ್ತಿ ಸಿದ್ಧಿಸಿಕೊಳ್ಳಲು ಸಾಧ್ಯವೆ?

- 4 -
ಜಾತಿ, ಮತ, ನಾಡು, ನುಡಿ, ದೇಶ
ಇವೆಲ್ಲವನ್ನೂ ಮೀರಿದ ಪಯಣ...
ಪ್ರಕೃತಿಯೊಂದಿಗೆ ಸಕಲ ಜೀವರಾಶಿಗಳ ಸಂರಕ್ಷಣೆ,
ಸಂಕಷ್ಟದಲ್ಲಿ ಸಿಲುಕಿದ ಸಹಪಯಣಿಗರಿಗೆ
ಸೂಕ್ತ ಸ್ಪಂದನೆ, ಸಾಧ್ಯವಾದ ನೆರವಿಂದ
ಮಾನವತ್ವ ಮೆರೆಯುವುದೆ ಮಾನವನ
ಧ್ಯೇಯೋದ್ಧೇಶ, ಸಾಧನೆ, ಸಾರ್ಥಕ.

Oct 8, 2009

ಕರುಣೆಯಿರಲಿ


ಕೊಚ್ಚಿಹೋಗಿದ್ದು;
ಬರಿ ಮನೆಗಳಲ್ಲಾ, ಮನದ ಆಸೆಗಳು
ಹೂತುಹೋಗಿದ್ದು;
ಬರಿ ದವಸಧಾನ್ಯಗಳಲ್ಲ, ಪುಟಿದ ಕನಸುಗಳು
ಕರಗಿಹೋಗಿದ್ದು;
ಬರಿ ಉಪ್ಪುಸಕ್ಕರೆಯಲ್ಲ, ಸವಿ ನೆನಪುಗಳು
ಸಿಡಿದುಬಿದ್ದಿದ್ದು;
ಬರಿ ಮನೆಯ ಮಾಳಿಗೆಯಲ್ಲ, ನಂಬಿಕೆಗಳು
ಉರುಳಿಬಿದ್ದಿದ್ದು;
ಬರಿ ನಾಲ್ಕುಗೋಡೆಗಳಲ್ಲ, ದಶಕಗಳ ನೆರಳು
ಉಕ್ಕಿಹರಿದದ್ದು;
ಬರಿ ಕಣ್ಣೀರಲ್ಲ, ನಗುವುಂಡ ನೆನ್ನೆಗಳು
ಚದುರಿಬಿದ್ದಿದ್ದು;
ಬರಿ ಪಾತ್ರೆಗಳಲ್ಲ, ಸಂತಸದ ನಾಳೆಗಳು
ಅಳಿಸಿಹೋಗಿದ್ದು;
ಬರಿ ರಂಗೋಲೆಗಳಲ್ಲ, ರಂಗಿನ ಹಬ್ಬಗಳು
ತೋಯ್ದುಹೋಗಿದ್ದು;
ಬರಿ ತೊಟ್ಟವಸ್ತ್ರಗಳಲ್ಲ, ಎಲ್ಲ ಶುಭಕಾರ್ಯಗಳು
ಮಾಯವಾಗಿದ್ದು;
ಬರಿ ಅಂಕಿಅಂಶಗಳಲ್ಲ, ಬದುಕಿನ ಭದ್ರತೆಗಳು

Sep 25, 2009

ಮತ್ತೆ ಬರುವನು ಚಂದಿರ - 35


ದೂರ ದೂರ ದೂರ ತೀರ
ಹೊತ್ತು ಹೊತ್ತು ತಂದ ಭಾರ
ತತ್ತರಿಸಿದೆ ತನು ತಡವರಸಿ
ತುಸುವಿರಾಮ ನೀಡು ಚಂದಿರ

ತಿರುವುಗಳಿಗೆ ತಿರುಳು ಮರುಳು
ಏರಿಳಿತಕೆ ಎದೆಯುಸಿರು ಕಟ್ಟಿದೆ
ಕಾರ್ಮೋಡದ ಕಗ್ಗತ್ತಲಲ್ಲಿ ತಡಕಿ
ಕಾಡ್ಗಿಚ್ಚಿಗೆ ಸಿಕ್ಕಿಕೊಂಡೆ ಚಂದಿರ

ಎಳೆಬಿಸಿಲಿಗೆ ಮೈಯೊಡ್ಡಿದಾಗ
ಇಬ್ಬನಿಯಲಿ ಸುಳಿದಾಡುವಾಗ
ಎಳೆಗಳಲ್ಲಿ ಹೊಳೆವ ಮುತ್ತುಗಳ
ಕಾಣೊ ಅದೃಷ್ಟ ನೀಡು ಚಂದಿರ

ಸುರಿವ ಮಳೆಯ ರಾಗದಲ್ಲಿ
ತೊಟ್ಟಿಕ್ಕುವ ಹನಿಗಳಿಂಚರ
ಮಾಳಿಗೆ ಮೃದಂಗವಾದನಕೆ
ತೇಲಿತೆನ್ನ ಮನವು ಚಂದಿರ

ಹಸಿರನೊತ್ತ ಮರದ ತುದಿಗೆ
ಹಳದಿ ಚಿಟ್ಟೆಯಿಡಲು ಚುಂಬನ
ನಾಚಿ ನಡೆದಳೇಕೊ ಯುವತಿ
ಇನಿಯನ ನೆನಪಾಗಿ ಚಂದಿರ

ರಂಗೋಲೆಯಿಡುವ ಚಿಟ್ಟೆಗೆಳು
ಯೌವನದಿ ಮೈ ಮರೆತಂತಿವೆ
ದುಂಬಿ ಕುಣಿದು ಬರಲು ಅತ್ತ
ತಳಮಳಗೊಂಡವೇಕೊ ಚಂದಿರ

ಹಕ್ಕಿಯೊಂದು ಆಗಿನಿಂದ
ವಿಷಾದಗೀತೆ ಹಾಡುತಿರಲು
ಸಂಗೀತಗಾರನಿಗೇಕೊ ಚಿಂತೆ
ಅದ್ಯಾವ ರಾಗವೆಂದು ಚಂದಿರ

ಹಬ್ಬರದ ಹಬ್ಬಗಳೆಲ್ಲವೂ
ಹಣದುಬ್ಬರಕೆ ತತ್ತರಿಸಿವೆ
ಸರಳ ಪಥದ ಮಂತ್ರವನ್ನು
ಬಿಡದೆ ಜಪಿಸುತಿವೆ ಚಂದಿರ

ದಿನದ ಮೂರು ಹೊತ್ತಿನಲ್ಲೂ
ಧಾರಾವಹಿಗಳ ಗುಂಗಿನಲ್ಲಿ
ಗಂಗೆ ಗಂಡ ತೊರೆದನವಳ
ಕುರುಡಿಯನರಸಿ ಚಂದಿರ

ಪ್ರತಿಭಾನ್ವೇಷಣೆಯೆಂಬ ಹೆಸರಿನಲ್ಲಿ
ಒತ್ತಡದ ಅಬ್ಬರಕೆ ಮಣಿದ ಮುಗ್ಧರು
ಕಮರಿಹೋದವು ಎಳೆ ಹೂಗಳಲ್ಲೆ
ತುಸು ಬೆಳಕು ತೋರೊ ಚಂದಿರ

Sep 24, 2009

ಮತ್ತೆ ಬರುವನು ಚಂದಿರ - 34


ನಿರ್ಣಯಗಳೆಲ್ಲವೂ ವೈಜ್ಞಾನಿಕ
ದೃಷ್ಟಿಯಿಂದ ನಿರ್ಧರಿಸಿದಾಗ
ಕೃತಕ ಜಗದ ನಿರ್ಮಾಣವಷ್ಟೆ
ಸಾಧಿಸುವುದಲ್ಲವೆ ಚಂದಿರ

ಅಗಾಧತೆಯ ಅನುಭಾವದಿಂದ
ಅನನ್ಯ ಅನುಭೂತಿ ಸಿದ್ಧಿಸುತ್ತದೆ
ಸೃಷ್ಟಿಸಿದ ಅಮೂರ್ತ ಸಂಕೋಲೆ
ಕಡಿದು ಹೊರನುಗ್ಗಿಲು ಚಂದಿರ

ಇಡೀ ಜಗತ್ತೇ ನಮ್ಮದಾಗುವ
ಸಾಧ್ಯತೆಗಳು ಅಗಾಧವಾಗಿರೆ
ಪುಟ್ಟ ಮನೆಗೇಕೆ ಸೆರೆಯಾಗಲು
ಹಾತೊರೆಯುವೆ ಚಂದಿರ

ಬದುಕೊಂದು ನಿರಂತರ ಜೂಜಾಟ
ಎಲ್ಲರೂ ಆಡಲೇಬೇಕಾದ ಸನ್ನಿವೇಶ
ಆಯ್ಕೆಗಳಿಲ್ಲದ ಅನಿವಾರ್ಯ ಪರಿಸ್ಧಿತಿ
ಆತ್ಮಸ್ಥೈರ್ಯದಿಂದ ಮುನ್ನಡೆ ಚಂದಿರ

ಸದಾ ಅಮಲಿನಲ್ಲಿರು ಆಪ್ತನೆ
ಕಾವ್ಯ, ಸಂಗೀತ ಇಲ್ಲಾ ಸಖಿ
ಯಾವುದರ ಸಂಗವಾದರು ಸರಿ
ಪಾನಮತ್ತನಾದರೂ ಸರಿ ಚಂದಿರ

ಜ್ಞಾನವಂತ ತನ್ನ ಪರಿಜ್ಞಾನವನ್ನು
ಶ್ರೀಸಾಮಾನ್ಯರಿಗೆ ತಲುಪಿಸದೆ
ಸ್ವಾರ್ಥಸಾಧನೆಗೆ ಬಳಸಿಕೊಂಡರೆ
ಆತ ಮೂರ್ಖನಿಗೆ ಭಿನ್ನವೆ ಚಂದಿರ

ಬುದ್ಧಿವಂತಿಕೆ, ಬಲವಾದ ಭಾಷೆ
ಬಳಸುತ್ತಾ ತಮ್ಮ ಶ್ರೇಷ್ಠತೆಯ
ಮೆರೆಯುವವ ಕ್ರಮೇಣ ಜನರಿಂದ
ದೂರಾಗಿ ಏಕಾಂಗಿ ನರಳುವ ಚಂದಿರ

ಸ್ವಧರ್ಮವನ್ನು ನಿಂಧಿಸುತ್ತಾ
ಕೇವಲ ಅನ್ಯಧರ್ಮದೊಲಿತನ್ನು
ಹೊಗಳುವ ಚನ್ನಿಗ ಮನುಕುಲದ
ಹಿತಚಿಂತಕನೆ ಹೇಳೊ ಚಂದಿರ

ಅನ್ಯಧರ್ಮಗಳ ಸತತ ನಿಂಧಿಸುತ್ತ
ಸ್ವಧರ್ಮ ಲೋಪದೋಷಗಳೆಡೆಗೆ
ನಿರ್ಲಿಪ್ತ ನೋಟದಿ ಹುಸಿನಗೆ ಬೀರುವವ
ಮನುಕಲ ವಿರೋಧಿಯಲ್ಲವೆ ಚಂದಿರ

ಯಾವದೇ ನಿಬಂಧನೆ, ನಿರ್ಬಂಧಗಳು
ಇಲ್ಲದೆಯೆ ಎಲ್ಲರನ್ನೂ ಒಪ್ಪಿಕೊಳ್ಳುವುದು
ನಿಜವಾದ ಮುಕ್ತ, ಆಪ್ತ, ಅನನ್ಯ ಪ್ರೀತಿ
ಮಾನವತ್ವದ ಜಗಜ್ಯೋತಿಯಲ್ಲವೆ ಚಂದಿರ

Sep 21, 2009

ಒಂದೆರಡು ಮಾತು

ನಾ ನಡೆದ ಹಾದಿಯಲಿ
ತಿರುವುಗಳು, ಏರಿಳಿತಗಳು
ಬೆಟ್ಟಗುಡ್ಡಗಳು, ದಟ್ಟಕಾಡುಗಳು,

ಪಚ್ಚೆಪೈರುಗಳು, ನದಿತೀರಗಳು
ಬಯಲುಸೀಮೆ, ಬಾಯ್ಬಿಟ್ಟ ನೆಲ
ಕಲ್ಲು-ಮುಳ್ಳುಗಳೂ ಸಹ
ಚುಚ್ಚಿದ್ದು, ಸವರಿದ್ದು, ತಾಗಿದ್ದು, ಎಡವಿ ಮುಗ್ಗರಿಸಿದ್ದು
ಎಷ್ಟೋ ಲೆಕ್ಕವಿಲ್ಲದಷ್ಟು...

ಹಾದೀಲಿ ಎದುರುಗೊಂಡವರು
ಹುಸಿನಗೆ ಬೀರಿ ಪಕ್ಕ ಸರಿದವರು
ಎತ್ತರದಿಂದ ಕೂಗಿ ಆಬ್ಬರಿಸಿದವರು
ಆಳದಲೆಲ್ಲೋ ಕೈ ಹಿಡಿದೆಬ್ಬಿಸಿ
ಸಾಂತ್ವನ ನುಡಿದವರು
ಜೊತೆಜೊತೆಗೆ ಹೆಜ್ಜೆಯಿಟ್ಟವರು
ಹಾದಿ ಕ್ರಮಿಸಿದ ಹಾಗೆ
ಜೊತೆಗಾರರಾದವರು...

ಹಾದಿಯ ಎರಡೂಬದಿ
ಬಣ್ಣ ಬಣ್ಣಗಳ ಕಡೆಗೆಣಿಸಿ
ಪಯಣದಲಿ ಸಂಯಮದಿ
ಅಡ್ಡದಾರಿಯ ದಿಕ್ಕರಿಸಿ ಮುನ್ನಡೆದು
ಸಾಧಿಸಿದ್ದೇನೊ ನಾನರಿಯೆ
ಆದರೂ, ಸಂತೃಪ್ತಿ
ಸಿದ್ಧಿಸಿದ್ದಂತೂ ಸರ್ವಸತ್ಯ

ಎಲ್ಲವೂ ನೆನಪಿಲ್ಲ ಕ್ಷಮಿಸಿ
ವಯಸ್ಸಾಯಿತೆಂದು ನೆಪವಲ್ಲ
ಕೆಲವು ಮರೆಯ ಬೇಕೆಂದಿರುವೆ
ಆದರೂ ಸೋತಿರುವೆ
ಮತ್ತೆ ಕೆಲವನ್ನು ಮರೆಯಲೇಕೊ
ನನಗೆ ಖಂಡಿತ ಇಷ್ಟವಿಲ್ಲ
ಉಳಿದೆರಡು ದಿನಗಳಿಗೆ ಜೊತೆಯಾಗಿ
ಆ ಸವಿ ನೆನಪುಗಳಾದರೂ
ಬೇಕಲ್ಲ...

Sep 15, 2009

ಹಾಯ್ಕು - 7

ಗೆರೆಗಳು –
ಕಟ್ಟಬಹುದು, ಇಲ್ಲಾ ಕಡಿಯಲೂಬಹುದು
ತಮ್ಮ ಭವಿಷ್ಯವನ್ನು...

ಹಾಯ್ಕು - 6

ನೋವು, ನಲಿವುಗಳೊಂದಿದ
ರಾಗಗಳು –
ಆಲಿಸಿದವರು ಅತಿವಿರಳ...

Sep 14, 2009

ಹಾಯ್ಕು - 5

ಬೆಲೆಯುಬ್ಬರ –
ಅಬ್ಬರದ ಹೇಳಿಕೆಗಳು ಉರಿಯುತ್ತಿವೆ
ಕಾಡ್ಗಿಚ್ಚಿನಂತೆ...

ಹಾಯ್ಕು - 4

ವಸಂತ –
ಹೊಂಬಿಸಿಲಿಂದ ಸೂರ್ಯ ಕರಗಿಸುತ್ತಾನೆ
ಎಲ್ಲರ ನೋವನ್ನು...

Sep 13, 2009

ಹಾಯ್ಕು - 3

ಹಾವು,
ಚುರುಕಾಗಿದೆ ತನ್ನ ಪೊರೆ ಕಳಚಿ.
ಮುಖವಾಡ ಹೊತ್ತವರು ಕಂಡು ಬೆಚ್ಚಿಬಿದ್ದರು...

ಹಾಯ್ಕು - 2

ಮಾಗಿಯಲ್ಲಿ,
ಬೆತ್ತಲಾದ ಮರಗಳು ಸಂಕೋಚ ತೊರೆದು,
ಸಂತಾಪ ಸೂಚಿಸುತ್ತಿವೆ...

Sep 11, 2009

ಹಾಯ್ಕು - 1

ಸುದೀರ್ಘ ಮಾಗಿ –
ಮರಗಳು ಎಲೆಗಳನ್ನು ಕಳಚುತ್ತಿವೆ
ಶುಭಯಾತ್ರೆ ಕೋರುತ್ತಾ...

Sep 10, 2009

ಕಾಡು...


ಕಾಡು...
ಅದರೂ ಇಲ್ಲಿ,
ಕಂಗೊಳಿಸುವ ಹಸಿರಿಲ್ಲ,
ವಗರಾದ ಚಿಗುರಿಲ್ಲ
ಮಾದಕ ಹೂವುಗಳಿಲ್ಲ,
ರುಚಿಯಾದ ಹಣ್ಣಿಲ್ಲ

ಕಾಡು...
ಆದರೂ ಇಲ್ಲಿ
ನಿರ್ಮಲ ನೀರಿಲ್ಲ,
ತಂಪಾದ ನೆರಳಿಲ್ಲ
ತಂಗಾಳಿ ಬೀಸುವುದಿಲ್ಲ
ಜಲಧಾರೆಗಳ ಸದ್ದಿಲ್ಲ

ಕಾಡು...
ಆದರೂ ಇಲ್ಲಿ
ಹಕ್ಕಿಗಳಿಂಚರವಿಲ್ಲ
ವನ್ಯಮೃಗಗಳು ಕಾಣುವುದಿಲ್ಲ
ಹುಳ-ಹುಪ್ಪಟೆಗಳು ಹಾಡುವುದಿಲ್ಲ
ರಂಗಿನ ಚಿಟ್ಟೆಗಳ ಸಡಗರವಿಲ್ಲ

ಕಾಡು...
ಆದರೂ ಇಲ್ಲಿ
ಮುಂಜಾವಿನ ಮಂಜಿಲ್ಲ
ಮುಸ್ಸಂಜೆ ಬೆಳಕಿನ ಸವಿಯಿಲ್ಲ
ಮೋಡಗಳ ಮೆರವಣಿಗೆಯಿಲ್ಲ
ಮಳೆಯ ಸುಳಿವಿಲ್ಲ

ಕಾಡು...
ಆದರೂ ಇಲ್ಲಿ
ಬೆಟ್ಟಗುಡ್ಡಗಳಿಲ್ಲ
ಆಳದ ಕಣಿವೆಗಳಿಲ್ಲ
ಹೆಮ್ಮರಗಳ ಗುರುತಿಲ್ಲ
ನಲಿದಾಡುವ ನವಿಲುಗಳಿಲ್ಲ



Sep 9, 2009

ಮತ್ತೆ ಬರುವನು ಚಂದಿರ - 33


ಆಸೆ, ಆಶಯಗಳಿಗೆ ಪೂರಕವಾಗಿ
ಅರ್ಹತೆ, ಸಾಮರ್ಥ್ಯ, ಸಂಯಮಗಳ
ಸಿದ್ಧಿಸಿಕೊಂಡರೆ ಅನನ್ಯ ಅವಕಾಶಗಳು
ತಡವಾದರೂ ತಾಗುವವು ಚಂದಿರ

ವೃತ್ತಿಯೊಳಗೆ ಮೇಲು-ಕೀಳೆಂದು
ಭಾವಿಸುತ್ತಾ, ಬಿಂಬಿಸಿಕೊಳ್ಳುವವ
ವಿಕೃತ ಮನಸಿನ ಮತಿಹೀನನಷ್ಟೆ
ಜಗದ ಮಾನದಂಡವಲ್ಲ ಚಂದಿರ

ಮಹತ್ತರ ಮಹತ್ವಾಕಾಂಕ್ಷೆಯಿಂದ
ಪೂರಕ ಪರಿಶ್ರಮದೊಂದಿಗೆ ಕಾರ್ಯ
ಪ್ರವೃತ್ತರಾದಾಗ ಸಾಧಿಸುವ ಸಾಧ್ಯತೆಗೆ
ಹತ್ತಿರವಾಗುವುದು ನಿಶ್ಚಿತ ಚಂದಿರ

ನಂಬಿಕೆಯೆಂಬುದು ಅಸಹಾಯಕರಿಗೆ
ಅಂಧಃಕಾರದಲ್ಲಿರುವಾಗ ಸಂತೈಸುವ,
ಹಣತೆ ಹಿಡಿದು ಹಾದಿ ತೋರುವ
ಏಕೈಕ ಆಪ್ತ ಗೆಳೆಯನಲ್ಲವೆ ಚಂದಿರ

ದೇಶ ಕಾಲದ ಸಿಡಿಲು ಮಿಂಚಿಗೆ
ಪರಿಶುದ್ಧ ಪ್ರಾಮಾಣಿಕತೆ ಬಳಲಿ
ಮೂರ್ಖತನದ ಪರಮಾವಧಿಗೇರಿ
ಅಬ್ಬರದಿಂದ ನರ್ತಿಸುತ್ತಿದೆ ಚಂದಿರ

ಅಮೂರ್ತ ನರಕದ, ಮೂರ್ತ ಪ್ರತಿರೂಪಗಳ
ಕಡೆಗೆಣಿಸಿ ಕೇಡಿನ ಕಾರ್ಯದಲ್ಲಿ ಮೈಮರೆತು
ಮಗ್ನರಾದ ಸನ್ನಿವೇಶದಲ್ಲಿ ಪ್ರಕೃತಿಯ ವಿಕೋಪ
ರುದ್ರತಾಂಡವವಾಡುವುದು ಖಚಿತ ಚಂದಿರ

ಸುಭದ್ರ, ಸುಖಕರ ಮತ್ತು ಸಂತಸದ
ಭವಿಷ್ಯಕ್ಕಾಗಿ ಸುಂದರ ವರ್ತಮಾನ
ವ್ಯರ್ಥಮಾಡುವುದು ಶುದ್ಥ ಮೂರ್ಖತನ
ಎಂದು ಕಿವಿಮಾತು ಹೇಳೊ ಚಂದಿರ

ಹಣವೆಂಬುದು ಎಲ್ಲರಿಗೂ ಅತ್ಯಗತ್ಯ
ಆದರೆ, ಅದೆಷ್ಟು ಎಂಬುದಾಗಿ ಸ್ಪಷ್ಟ
ತಿಳುವಳಿಕೆಯಿಂದ ಬದ್ಧನಾಗಿರದಿದ್ದರೆ
ಬದುಕು ಜಾರುವುದು ನಿಶ್ಚಿತ ಚಂದಿರ

ತಂತ್ರಜ್ಞಾನದ ಅಗತ್ಯತೆ ನಿಯಮಿತ,
ಯಾವುದು, ಏಕೆ, ಹೇಗೆ, ಯಾವಾಗ
ಎಂಬುದರ ಸ್ಪಷ್ಟ ಅರಿವು ಇರದಿದ್ದರೆ
ಮನುಕುಲಕ್ಕೆ ಕೇಡು ಖಚಿತ ಚಂದಿರ

ಅಸಹಾಯಕರಿಗೆ, ಅಸಮರ್ಥರಿಗೆ
ನೆರವಾಗುವ ಸಾಮರ್ಥ್ಯವಿದ್ದರೂ
ಸ್ವಾರ್ಥ ಸಾಧನೆಗೆ ಮಾಡದಿರವುದು
ವಿಕೃತ ನಡವಳಿಕೆ ಅಲ್ಲವೆ ಚಂದಿರ

Sep 8, 2009

ಮತ್ತೆ ಬರುವನು ಚಂದಿರ - 32


ಸಾಧನೆಯ ತುದಿಗೇರುವುದು
ಕೆಲವು ಕ್ಷೇತ್ರಗಳಿಗೇ ಸೀಮಿತ
ಸರ್ವತೋಮುಖ ಸಾಧನೆಯು
ವ್ಯಕ್ತಗಳಿಗೆ ಸಾಧ್ಯವೆ ಚಂದಿರ

ಕೋಪವೆಂಬ ಧೂರ್ತನನ್ನು
ಹಿಡಿತದಲ್ಲಿಡು ಗೆಳೆಯನೆ
ಸಡಿಲಿಸಿದರೆ ಸಿಡಿಯುವನು
ಸಹಿಸಲಾರನು ಚಂದಿರ

ಪ್ರಾಮಾಣಿಕತೆಯ ಪಠಿಸುವ
ಪಡಪಡಿಸುತ ಮುಕ್ಕುತಿರುವ
ಬಡವ ಬಲ್ಲಿದರನೂ ಬಿಡದವ
ಬಲಿಯಾದನೊಮ್ಮೆಗೆ ಚಂದಿರ

ನ್ಯೂನತೆಗಳು ಮನುಜಗೆ
ಸಹಜವಾಗಿ ಸಿದ್ಧಿಸಿದ್ದರೂ
ನಿಯಂತ್ರಿಸುವ ಸಾಮರ್ಥ್ಯ
ಸಹ ನಮಗೇ ಬಿಟ್ಟ ಚಂದಿರ

ನಾವು ಮಾನವೀಯತೆಯೊಂದಿಗೆ
ಅತಿ ಸಾಮಾನ್ಯನಾಗಿ ಬದುಕುವುದು
ಸಹ ನಮ್ಮ ಅತಿ ಮಹತ್ತರ ಸಾಧನೆ
ಇದಕೆ ಮಾದರಿಯಾಗಿರುವ ಚಂದಿರ

ಬದುಕಿಗೆ ಅತಿಮುಖ್ಯವಾಗಿರುವುದು
ಎಲ್ಲರಿಗೂ ಅತ್ಯಗತ್ಯವಾಗಿರುವುದು
ನಿಷ್ಪಕ್ಷಪಾತವಾಗಿ, ಸಮಾನವಾಗಿ
ಎಲ್ಲರಿಗೂ ಲಭ್ಯವಿದೆಯಲ್ಲವೆ ಚಂದಿರ

ಬದುಕಿನ ಸೋಲು ಗೆಲುವಿಗೆ
ಸಿದ್ಧಮಾದರಿಗಳು, ಅರ್ಥಗಳಿಲ್ಲ
ಅದು ಅವರವರ ಸಾಮರ್ಥ್ಯಕ್ಕೆ
ಪರಿಕಲ್ಪನೆಗೆ ಸೀಮಿತ ಚಂದಿರ

ಪರಿಶುದ್ಧ ಪ್ರೀತಿಯೆಂಬುದು
ಒಂದು ಸುಂದರ ಪರಿಕಲ್ಪನೆ
ಸಾಧಿಸಿದಷ್ಟೂ ಸಿದ್ಧಿಸುವುದಿಲ್ಲ
ಸಿದ್ಧಿಸುವುದು ಪರಿಶುದ್ಧವೆ ಚಂದಿರ

ಶ್ರೇಷ್ಟತೆ ಎಂಬುದರ ಬೆನ್ನತ್ತಿದರೂ
ಎಂದಿಗೂ ತಲುಪಲಾಗದೆ ಸೋತು
ಖಿನ್ನತೆಯಿಂದ ಕೊರಗದಿರು ಗೆಳೆಯ
ಹತ್ತಿರವಿದ್ದೂ ಎತ್ತರದವನು ಚಂದಿರ

ಪರಿಶುದ್ಧತೆಯೆಂಬುದು
ಪರಿಶೋಧಿಸಲಾಗದೆ
ಪರಿಜ್ಞಾನಕೆ ನಿಲುಕದೆ
ಪರಧಿ ದಾಟಿದ ಚಂದಿರ

Aug 27, 2009

ದುಷ್ಟ ವ್ಯಾಘ್ರ ಕಾಯುತ್ತಲೇ ಇದೆ

ನಿನ್ನೊಂದಿಗೆ ಎಲ್ಲ ಜಾಗಗಳೂ ಸುತ್ತುವೆ,
ಸುಂದರ ಕಾಣಿಕೆಗಳ ನೀಡುವೆ,
ಸುಮಧುರ ಹಾಡುಗಳಾಡುವೆ ನಲ್ಲೆ,
ಮನಮಿಡಿಯುವ ಕವನ ಪಠಿಸುವೆ,
ನೀನೆ ನನ್ನ ಕನಸಿನ ಕನಸು,
ತಾರೆಗಳ ಧ್ರುವತಾರೆ,
ಸರ್ವಸ್ವದ ಆಭರಣ,
ಋತುಗಳ ವಸಂತ,
ಮರುಭೂಮಿಯ ಮಳೆ,
ಬರಗಾಲದ ಹಸಿರು,
ರಾತ್ರಿಗಳ ರಾಣಿ,
ಪದ್ಯದ ರಾಗ,
ನೀನೆ ನನ್ನ ಜಗ,
ನೀನೆ ನನ್ನ ದೈವ,
ನೀನೆ ನನ್ನ ಜೀವ,
ನೀನೆ ನನ್ನ ಒಲವು,
ನಿಜವಾಗಲೂ ನಿನ್ನ ವರ್ಣಿಸಲಸದಳ...
ನಿನಿಗೆ ಸ್ವರ್ಗವ ನೀಡಲು ಹಾತೊರೆಯುವೆ
ನಿನ್ನ ಕೂಡಲೆ ಕಾಣಲು ಬಯಸುವೆ
ಇದೆಲ್ಲಾ ನಿನಗಾಗಿ ಮಾಡುವೆನಾದರೂ...
ಗೆಳತಿ
ಮೊದಲಿನಿಂದಲೂ ನನ್ನೊಳಗೆ
ಹಸಿದ ದುಷ್ಟ ವ್ಯಾಘ್ರವೊಂದು
ಕಾಯುತ್ತಲೇ ಇದೆ....

Aug 21, 2009

ಹಾಡು ಅದೇ

ಹಾಡು ಅದೇ ಮತ್ತೆ ಮತ್ತೆ
ಹೊಮ್ಮುತಿದೆ ಸುತ್ತಿಸುತ್ತಿ
ಎಲ್ಲಿ ಅಡಗಿ ಕೂಡಲಿ
ಯಾವ ಕಡೆಗೆ ಓಡಲಿ

ಬತ್ತಿಹೋದ ಬಾವಿಯಲ್ಲಿ
ಹಸಿರು ಬಳ್ಳಿ ಹರಡಿದೆ
ಯಾವುದೊ ಜೀವಜಂತುವಲ್ಲಿ
ಹೊಂಚು ಹಾಕಿ ಕೂತಿದೆ

ಒಣಗಿ ನಿಂತ ಮರದ ಮೇಲೆ
ಯಾವದೊ ಸಸಿ ಚಿಗುರಿದೆ
ಸರ್ಪವೊಂದು ಅಂದಿನಿಂದ
ಯಾರಿಗಾಗೊ ಕಾದಿದೆ

ಬರಗಾಲದಿ ಮರಳುಗಾಡು
ಬೆಂಕಿಯುಗುಳಿ ನರ್ತಿಸಲು
ಯಾವುದೊ ಜೀವವಲ್ಲಿ
ವಿಷಾದ ರಾಗ ನುಡಿಸುತಿದೆ

ಹಾಡು ಅದೇ ಮತ್ತೆ ಮತ್ತೆ
ಹೊಮ್ಮುತಿದೆ ಸುತ್ತಿಸುತ್ತಿ
ಎಲ್ಲಿ ಅಡಗಿ ಕೂಡಲಿ
ಯಾವ ಕಡೆಗೆ ಓಡಲಿ

Aug 20, 2009

ಮತ್ತೆ ಬರುವನು ಚಂದಿರ - 31


ಹಾಡು ಹಕ್ಕಿಯೆ ಹಾರುತ
ಹಾದಿ ಸನಿಹಕೆ ಜಾರಿದೆ
ನಲಿವ ನವಿಲಿನ ಮಾಯೆ
ನಯನಮನೋಹರ ಚಂದಿರ
***
ನವ ದಿಗಂತದ ಆಗಮನಕೆ
ರವಿಯು ಆರತಿ ಬೆಳಗುವ
ಮಸ್ಸಂಚೆ ಪರದೆ ಸರಿಯಲು
ನಗುನಗುತ ಬರುವ ಚಂದಿರ
***
ಚೆಲುವ ಚತುರ ಚಕೋರನು
ಚದುರಂಗದಾಟವನಾಡುವ
ಯಾವ ಮಾಯಾ ಮೋಡಿಗೆ
ತಲೆತೂಗುತಿರುವ ಚಂದಿರ
***
ಮೋಡ ಕವಿಯುವ ಮಾತ್ರಕೆ
ಮಂದಹಾಸವು ಮಸುಕಾವುದೆ
ಶೃಂಗಾರ ಲಹರಿಯ ಹರಿಸುತ
ಪ್ರೇಮಿಗಳ ಹರಸುವ ಚಂದಿರ
***
ಬಾನಿನಂಚಿನ ಬೆಳ್ಳಿ ಬೆಳಗು
ಯಾವ ರಾಗದ ಆರೋಹಣ
ಇದ್ಯಾವ ತಾಳದ ದಿಂದಿಂನ
ತಾರೆಗಳ ರಿಂಗಣ ಚಂದಿರ
***
ಯಾವ ಚುಕ್ಕಿಯ ಸೆಳೆತಕೆ
ಹಾರುವ ಹಕ್ಕಿ ಮಿಡಿದಿದೆ
ಗಮ್ಯವ ಸೇರೊ ತುಡಿತಕೆ
ಸಕಲ ತೊರೆದಿದೆ ಚಂದಿರ
***
ಸಹಜ ರೀತಿಯ ಸೌಂದರ್ಯ
ಸವಿಯುವ ಕ್ರಮ ಸ್ವಾಭಾವಿಕ
ಅಸಹಜ ರೀತಿಯ ಆಸ್ವಾಧ
ಅಪರಾಧ ಅಲ್ಲವೆ ಚಂದಿರ?
***
ಮಾನ್ಯ ಶಿಷ್ಟ ಸಜ್ಜನರು
ಮದ್ಯಪಾನ ಬಲಹೀನತೆ
ಎಂದು ಬಿಂಬಿಸುವ ಪರಿ
ಸಭ್ಯತೆಯೆ ಹೇಳು ಚಂದಿರ?
***
ಪ್ರಾಮಾಣಿಕವಾಗಿ ಬಯಸುವ
ನಿಸ್ವಾರ್ಥದಿಂದ ಅಪ್ಪಿಕೊಳ್ಳುವ
ನಿತ್ಯ ಮುತ್ತಿಟ್ಟು ಮತ್ತೇರಿಸುವ
ಸಾಧನ ಮದ್ಯ ಅಲ್ಲವೆ ಚಂದಿರ?
***
ಪ್ರಾಮಾಣಿಕತೆ, ಸತ್ಯ, ನಿಷ್ಠೆಗಳು,
ನಂಬಿಕೆ, ನೈತಿಕತೆ, ಮೌಲ್ಯಗಳು
ಕೇಳಲು ಮತ್ತು ಹೇಳಲು ಬಹಳ
ಸೊಗಸಾಗಿದೆಯಲ್ಲವೆ ಚಂದಿರ?

Aug 12, 2009

ರಣ ಹದ್ದುಗಳು

ಹೊಂಚುತ್ತಿವೆ ರಣ ಹದ್ದುಗಳು
ಉರಿಬಿಸಿಲು ಒಡಲ ಸುಡುತಿರೆ
ದಿಗ್ಗನೆ ಉಮ್ಮಳಿಸಿದೆ ಬೆಂಕಿ ಮುಗಿಲುದ್ದ
ಬಿರುಕಿಟ್ಟ ಧರೆಗೆ ಸಾಂತ್ವನದ ಹಗಲುಗನಸು

ಹೆಣಗಳ ಹಿಂಡು ಹಿಂಡು
ಹಸಿದ ಹದ್ದುಗಳ ಆಕ್ರಂದನ
ಸ್ಮಶಾನ ಮೌನದ ಶೋಕಗೀತೆಗೆ
ನಗ್ನ ನೀಲಾಕಾಶದ ನೀರವಮೌನ ಸಾಥ್

ಹಸಿವು, ಬಡತನ, ಅಸಾಹಯಕತೆ
ಜಗದ ಉದ್ದಗಲಕೂ ಅವರದೇ ಸಂತೆ
ಜಗದೋದ್ಧಾರಕೊನೊಬ್ಬ ಅಬ್ಬರಿಸುತಿರುವ
ಸಾವರಸಿ, ತಡವರಿಸಿದ ಮೂಕವೀಕ್ಷಕರ ಅಳಲು

ನೀಲಿ ನಕಾಶೆ ಎಂದೋ ರೆಡಿ
ಕಾಲ್ತುಲಿತಕೆ ಸಾವಿರಾರು ಜನರ ಆಹುತಿ
ಬೆಪ್ಪನಿಗೆ ಇದ್ಯಾವುದೂ ತೋಚದ ಅಗೋಚರ
ಜಗದೊಡೆಯನ ಆಥಿತ್ಯಕೆ ಸಕಲವು ಸಮರ್ಪಣೆ

ಸೂಕ್ಷ್ಮಾತಿಸೂಕ್ಷ್ಮಗಳ ತಿರುಳಿದು
ಬಟಾಬಯಲಾಗುವುದು ಭಂಡತನ
ಬೇಟೆಯಾಡುವರೊ ಅನಾಯಾಸವಾಗಿ
ಮರುಳ, ತಿಳಿಗೇಡಿ ಎಚ್ಚೆತ್ತು ಜೀವವುಳಿಸಿಕೊ

Aug 7, 2009

ಮತ್ತೆ ಬರುವನು ಚಂದಿರ - 30

ಅಸ್ಪಷ್ಟ ಹಾದಿಯ ಹಕ್ಕಿಗೆ
ಹಲವಾರು ಹಂಬಲದ ತೇರು
ಕಲಹ, ಕದನ, ಕೋಲಾಹಲ
ಉನ್ಮತ್ತ ಚಿತ್ತ ಚಂದಿರ

ವೇಗ, ಉದ್ವೇಗದ ಸವಾರಿ
ಹಗಲು ವೇಶದ ಅನಾಮಧೇಯ
ಹರಹರ ಅರ್ಧನಾರೀಶ್ವರಿನಿಗೆ
ಸಂಯಮ ಪರಾರಿ ಚಂದಿರ

ಮಾತಿಗಿಲ್ಲ ಪುರಸೊತ್ತು
ಮತಿಗೆ ಎಲ್ಲಿಲ್ಲದ ಕಸರತ್ತು
ನುಸುಳುವ ಸ್ಮಶಾನ ಮೌನ
ಉರಿವ ಅಂತಃರಾತ್ಮ ಚಂದಿರ

ಏನೇನೋ ಲೆಕ್ಕಾಚಾರ
ಇಲ್ಲಿ ಎಲ್ಲವೂ ಅಗೋಚರ
ಪಿಸುಮಾತು, ಗುಸುಗುಸು
ಸಂಚಿಗೆ ಮದ್ಯಸಾರ ಚಂದಿರ

ಬಡಪಾಯಿ ಶಂಭುವಿಗೇಕೋ
ರಿಂಗಣಿಸುವ ತವಕ ತಲ್ಲಣ
ಅತಂತ್ರತೆ, ಅಸಹಾಯಕತೆ
ನಿತ್ಯನೂತನ ಸಿದ್ಧಿ ಚಂದಿರ

ಮನೆಯ ಹಿತ್ತಲಲ್ಲಿ ಗುಲಾಬಿ ಮೊಗ್ಗು
ಆ ಬದಿ ಮನೆಯೊಡತಿಗೆ ಏಕೋ
ಎಲ್ಲಿಲ್ಲದ ಉರುಪು, ಉಮ್ಮಸ್ಸು
ಯಾವ ವಿಸ್ಮಯಕೋ ಚಂದಿರ

ಪಂಚರಂಗಿ ಪರಮಾತ್ಮ ಮನೆಯೊಡೆಯ
ಸದಾ ಅಲೆಯುವ ಪರದೇಸಿ ಪುಣ್ಯಾತ್ಮ
ಹಸಿದಾಗ ಅಪ್ಪಣೆಯ ಬೇಡುವುದೆ ಧರ್ಮ
ಕಾದ ಕಾವಲಿಗೆ ತೀವ್ರ ಕಳವಳ ಚಂದಿರ

ಆ ಮರದಲ್ಲಿ ಮಿಡಿಗಾಯಿ
ಇಲ್ಲಿ ಸಂಯಮವು ಬತ್ತಿರಲು
ರುಚಿ ನೋಡುವ ಅತಿಯಾಸೆಗೆ
ಆಗ ನೋಟ ಮಂಪರು ಚಂದಿರ

ತರ್ಕಕ್ಕೆ ನಿಲುಕದ ಆ ಪುಳಕ
ಅದೇ ಸಂಗ್ರಾಮ, ಸಂಭ್ರಮ
ಮಂದಹಾಸದಿ ಮತ್ತೆ ಮರಳಿ
ವಾಸ್ತವಕ್ಕೆ ಪ್ರವೇಶ ಚಂದಿರ

ಮರದಿಂದ ಜಾರಿದ ಮಂಜು
ಹೃದಯಕ್ಕೆ ರೋಮಾಂಚನ
ಬೇಸರ ತುಂಬಿದ ದಿನದಿಂದ
ಕ್ಷಣದಲಿ ಮುಕ್ತಿ ಚಂದಿರ

ಒಂದೇ ಕಾಲು

ಒಂದು ವೇಳೆ ನಮಗೇನಾದರೂ...
ಒಂದೇ ಒಂದು ಕಾಲು
ಇದ್ದಿದ್ದರೆ:

ನಾವೇಗೆ –
ನಿಲ್ಲುವುದು
ನಡೆಯುವುದು
ಓಡುವುದು
ಮತ್ತೆ ಕೂರುವುದು

ಕೇಳಿ!
ಮತ್ತೆ ಹೇಗೆ –
ಮರ ಹತ್ತುವುದು
ಬೆಟ್ಟದ ತುದಿ ಮುಟ್ಟುವುದು
ನದಿಗಳ ದಾಟುವುದು
ಕಣಿವೆಗೆ ಜಾರುವುದು

ನಾವೇಗೆ –
ಈಜುವುದು
ಜಾಗಿಂಗ್
ಸೈಕ್ಲಿಂಗ್
ಸ್ಕೇಟಿಂಗ್ ಮಾಡೋದು

ಮರೆತು ಬಿಡಿ –
ಕುದುರೆ ಸವಾರಿ
ರಿವರ್ ರಾಫ್ಟಿಂಗ್
ಟ್ರೆಕ್ಕಿಂಗ್
ಮತ್ತೆ ಸ್ಕೀಯಿಂಗ್

ಅಯ್ಯೋ ದೇವರೆ!
ನಾವೇಗೆ –
ಕ್ರಿಕೆಟ್ ಆಡೋದು,
ಟೆನ್ನಿಸ್, ಷಟಲ್,
ಕಬಡ್ಡಿ, ಕೋ ಕೋ
ಪುಟ್ಬಾಲ್, ವಾಲಿಬಾಲ್
ಬೇಸ್ಬಾಲ್, ಬಾಸ್ಕೆಟ್ಬಾಲ್
ಇವೆಲ್ಲ ಹಾಳಾಗೋಗಲಿ...

ದುರಂತವೆಂದರೆ... ಹೇಗೆ –
ಮಕ್ಕಳೊಂದಿಗೆ ಆಡೋದು
ಗೆಳೆಯರೊಂದಿಗೆ ಕುಣಿಯೋದು
ಗೆಳತಿಯೊಂದಿಗೆ ಸುತ್ತೋದು
ಮತ್ತೆ ಅವಳನ್ನು ರಮಿಸೋದು...

ಈಗ,
ಇಂಥಹ ಸನ್ನಿವೇಶವನ್ನು ಬಗೆಹರಿಸುವ
ಬಗ್ಗೆ ಯೋಚಿಸೋಣ,
ನಾವು ಬಹುಶಃ ಇವುಗಳ ನೆರವು
ಪಡೆಯಬಹುದು –
ಊರುಗೋಲು
ಅಥವಾ ವಾಸ್ತವವನ್ನೊಪ್ಪಿ ಬದುಕೋದು ಕಲಿಯಲೂಬಹುದು
ಅಥವಾ ಕೃತಕ ಕಾಲನ್ನು ಜೋಡಿಸಬಹುದು
ರಬ್ಬರಿಂದ ತಯಾರಿಸಿರುವುದಾಗಲಿ,
ಉಕ್ಕಿಂದ, ಬೆಳ್ಳಿ ಅಥವಾ ಚಿನ್ನದ ಕಾಲು

ದಯವಿಟ್ಟು ನನ್ನ ಶಪಿಸದಿರಿ
ಸ್ವಲ್ಪ ಹುಚ್ಚುತನದ ಜೊತೆಗೆ
ಕಲ್ಪನೆಯೂ ಜಾಸ್ತಿಯಾಗೇ ಚಿಗುರಿತ್ತು
ಕಳೆದ ರಾತ್ರಿ ಹೀಗೇ.....

ಕೊನೆಯದಾಗಿ,
ದೆವರೇ ನಿನಗೆ ತಲೆಬಾಗುವೆ
ನಮಗೆರಡು ಕಾಲುಗಳ ನೀಡಿರುವೆ!

Aug 6, 2009

ಹಾಡು ಹಕ್ಕಿ

ಹಾಡು ಹಕ್ಕಿಯೆ ಹಾರುತ
ಹಾದಿಯ ಸನಿಹಕೆ ಜಾರದೆ
ನಲಿವ ನವಿಲಿನ ಮಾಯೆಗೆ
ನಯನ ಮನೋಹರವಾಗಿದೆ

ನವ ದಿಂಗತದ ಆಗಮನಕೆ
ರವಿಯು ಆರತಿ ಬೆಳಗುವ
ಮುಸ್ಸಂಜೆ ಪರದೆಯನೆಳೆದು
ಮುತ್ತಿನ ತೋರಣ ಕಟ್ಟುವ

ಚೆಲುವ, ಚತುರನು ಚಂದಿರ
ಚದುರಂಗದಾಟವನಾಡುವ
ಇವನ ಮಾಯಾ ಮೋಡಿಗೆ
ಮರುಳಾಗಿ ಮೈಮನ ಪುಳಕ

ಮೋಡ ಕವಿಯುವ ಮಾತ್ರಕೆ
ಮಂದಹಾಸವು ಮಸುಕಾಯಿತೆ
ಶೃಂಗಾರ ಲಹರಿಯು ಹರಿವ
ಕ್ಷಣದಲಿ ಮೂಕವಿಸ್ಮಿತರಲ್ಲವೆ

ಬಾನಿನಂಚಿನ ಬೆಳ್ಳಿ ಬೆಳಗು
ಯಾವ ರಾಗದ ಆರೋಹಣ
ಯಾವ ತಾಳದ ದಿಂ ದಿಂನ
ತಾರೆಗಳ ತೇರಿನ ರಿಂಗಣ

ಯಾವ ಚುಕ್ಕಿಯ ಸೆಳೆತಕೆ
ಹಾರುವ ಹಕ್ಕಿಯು ಮಿಡಿದಿದೆ
ಗಮ್ಯವ ಸೇರುವ ತುಡಿತಕೆ
ಸಕಲವ ತೊರೆದು ನಿಂತಿದೆ

Jul 30, 2009

ಬೆಂಕಿ ಮತ್ತು ಹಿಮ

ಕೆಲವರು ಹೇಳುತ್ತಾರೆ
ಜಗತ್ತು ಬೆಂಕಿಯಿಂದ ಭಸ್ಮವಾಗತ್ತದೆ ಎಂದು
ಮತ್ತೆ ಕೆಲವರು ಹೇಳುತ್ತಾರೆ ಹಿಮದಿಂದ ಎಂದು
ಮಹದಾಸೆಯಿಂದ ನಾನು ಮನಗಂಡಿರುವುದೇನೆಂದರೆ,
ನಾನು ಬೆಂಕಿಯ ಪರವಾಗಿರುವವರನ್ನು ಬೆಂಬಲಿಸುತ್ತೇನೆ.
ಆದರೆ, ಒಂದು ವೇಳೆ ಜಗತ್ತು ಎರಡು ಬಾರಿ ನಾಶಗೊಳ್ಳುವ ಸನ್ನಿವೇಶದಲ್ಲಿ,
ನನಗನ್ನಿಸುತ್ತದೆ, ನಾನು ಸಾಕಷ್ಟು ದ್ವೇಷವನ್ನೂ ಕಂಡಿದ್ದೇನೆ
ಸರ್ವನಾಶವಾಗಲು ಹಿಮವೂ ಸಹ ಒಂದು ಅದ್ಭುತವೇ ಸರಿ
ಮತ್ತೆ ಅಷ್ಟು ಸಾಕಾಗುತ್ತದೆ.

ಮೂಲ ಕವಿ : ರಾಬರ್ಟ್ ಫ್ರಾಸ್ಟ್
ಕನ್ನಡಕ್ಕೆ : ಚಂದಿನ

ಮಂಜಿನ ಮಳೆ

ಅರಳಿ ಮರದಿಂದ
ಕಾಗೆ ನನ್ನ ಮೇಲೆ ಒಮ್ಮೆಗೆ
ಮಂಜಿನ ಮಳೆ ಉದುರಿಸಿದ
ಪರಿಯಿಂದಾಗಿ

ಕೂಡಲೇ ಬದಲಾದ ಮನಃಸ್ಥಿತಿ,
ನನ್ನ ಹೃದಯಕ್ಕೆ ತುಸು ನೆಮ್ಮದಿ;
ಬೇಸರ ತುಂಬಿದ ದಿನದಿಂದ
ಸ್ವಲ್ಪ ಮಟ್ಟಿಗೆ ವಿಮುಕ್ತಿ

ಮೂಲ ಕವಿ : ರಾಬರ್ಟ್ ಫ್ರಾಸ್ಟ್
ಕನ್ನಡಕ್ಕೆ : ಚಂದಿನ

Jul 28, 2009

ಪ್ರತಿಬಿಂಬ

ಅಸ್ಪಷ್ಟ ಹಾದಿಯ ಹಕ್ಕಿಗೆ
ಹಲವಾರು ಹಂಬಲದ ತೇರು
ಕಲಹ, ಕದನ, ಕೋಲಾಹಲ
ಉನ್ಮತ್ತ ಚಿತ್ತಕ್ಕೆ ಪಿತ್ತ

ವೇಗ, ಉದ್ವೇಗದ ಸವಾರಿ
ಹಗಲುವೇಶದ ಅನಾಮಧೇಯ
ಹರಹರ ಅರ್ಧನಾರೀಶ್ವರನಿಗೆ
ಸಂಯಮ ಎಂದೋ ಪರಾರಿ

ಮಾತಿಗಿಲ್ಲ ಪುರಸೊತ್ತು
ಮತಿಗೆ ಎಲ್ಲಿಲ್ಲದ ಕಸರತ್ತು
ನುಸುಳುವ ಸ್ಮಶಾನ ಮೌನಕ್ಕೆ
ಧಾರಾವಾಹಿಯ ತಪ್ಪದ ಕಿರಿಕಿರಿ

ಏನೇನೋ ಲೆಕ್ಕಾಚಾರ
ಇಲ್ಲಿ ಎಲ್ಲವೂ ಅಗೋಚರ
ಪಿಸುಮಾತು, ಗುಸುಗುಸು
ಸಂಚಿಗೆ ಮದ್ಯಸಾರದ ನೈವೇದ್ಯ

ಬಡಪಾಯಿ ಶಂಭುವಿಗೇಕೋ
ರಿಂಗಣಿಸುವ ತವಕ, ತಲ್ಲಣ
ಅತಂತ್ರತೆ, ಅಸಹಾಯಕತೆ
ನಿತ್ಯನೂತನದ ಕಾರ್ಯಸಿದ್ಧಿ

Jul 23, 2009

ತುದಿಗಾಲ ತುಡಿತ

ಮನೆಯ ಹಿತ್ತಲಲ್ಲಿ ಗುಲಾಬಿ ಮೊಗ್ಗು
ಆ ಬದಿಯ ಮನೆಯೊಡತಿಗೆ ಏಕೋ
ಎಲ್ಲಿಲ್ಲದ ಉರುಪು, ಉಮ್ಮಸ್ಸು

ಪಂಚರಂಗಿ ಪರಮಾತ್ಮ ಆ ಮನೆಯೊಡೆಯ
ಅಲೆಯುವ ಪರದೇಸಿ ಪುಣ್ಯಾತ್ಮ
ಹಸಿದಾಗ ಅಪ್ಪಣೆಯ ಬೇಡುವುದೇ

ಮಿಡಿಗಾಯಿ ಮರದಲ್ಲಿ, ಸಂಯಮ ಬತ್ತಿರಲು
ರುಚಿ ನೋಡುವ ತವಕ ತುದಿಯಲ್ಲಿ ಕೊತ ಕೊತ
ಆಗ ನೋಟವೂ ಮಂಪರು, ಮಂಪರು

ತರ್ಕಕ್ಕೆ ನಿಲುಕದ ಅಂಗಾಂಗ ಪುಳಕ
ನಿಟ್ಟುಸಿರಿಡುವವರೆಗೂ ಅದೇ ಸಂಗ್ರಾಮ, ಸಂಭ್ರಮ
ಮಂದಹಾಸದಿ ಮತ್ತೆ ವಾಸ್ತವಕ್ಕೆ ಮರು ಪ್ರವೇಶ

Jul 16, 2009

ಮತ್ತೆ ಬರುವನು ಚಂದಿರ - 29

ಅತಂತ್ರ ಸ್ಥಿತಿಯ ಭೀಕರ ಚಿತ್ರ
ಕದಡಿ, ಕಾಡುವ ಭಾವಾತಿರೇಕ
ಮುಕ್ತಿ, ಮೋಕ್ಷಗಳ ಶೋಧನೆಗೆ
ಅಂತಿಮ ಎಲ್ಲಿ ಹೇಳೊ ಚಂದಿರ

ವಾಸ್ತವದ ವ್ಯವಹಾರಿಕ ನೆಲೆಯಲ್ಲಿ
ಮೌಲ್ಯಗಳ ಹುಡುಕುವ ನೆಪವೇಕೆ
ಪ್ರತಿಫಲದ ಆಪೇಕ್ಷೆಯಿಂದ ಬೆಸದ
ಸ್ನೇಹಕೆ, ಜರಿಯುವೆ ಏಕೆ ಚಂದಿರ

ಸೈದ್ಧಾಂತಿಕ, ತಾತ್ವಿಕ ನೆಲೆಗಟ್ಟು,
ಗತಕಾಲದ ವೈಭವಗಳ ಜೊತೆಗೆ
ವಾಸ್ತವಕ್ಕೆ ಹಿಡಿದಾಗ ನೈಜ ಕನ್ನಡಿ
ನಿರ್ಲಿಪ್ತ ನಗೆ ಬೀಸುವ ಚಂದಿರ

ಚಾರಿತ್ರಿಕ ಪಾತ್ರದ ಹಿನ್ನಲೆಯಲ್ಲಿ
ಸಮಕಾಲೀನ ಪ್ರತಿರೂಪಗಳನ್ನು
ಪ್ರತಿಮೆಗಳಾಗಿ ಬಳಸುವ ಪ್ರಕ್ರಿಯೆ
ಶ್ರೇಷ್ಟತೆಗೆ ಮಾದರಿಯೆ ಚಂದಿರ

ವಿಭಿನ್ನ ಮಗ್ಗುಲುಗಳಿಗೆ ತಿರುಗಿಸಿ
ಸೂಕ್ಷ ಪರಿಶೀಲನೆಗೆ ಅಳವಡಿಸಿ
ನಿರ್ಲಿಪ್ತ ಮನಸ್ಥಿತಿ ಹಿನ್ನಲೆಯಲ್ಲಿ
ಸತ್ಯಕ್ಕೆ ಹತ್ತರವಾಗುವೆ ಚಂದಿರ

ಬಿಡಿ ಬಿಡಿಯಾಗಿ ಕಡಿದ ನಂತರ
ವಿಚಿತ್ರವಾಗಿ ಜೋಡಿಸುವುದನ್ನೇ
ಕ್ರೀಯಾಶೀಲತೆಗೆ ಕನ್ನಡಿಯೆಂದು
ಸೃಜನಶೀಲ ತಾನೆನ್ನುವ ಚಂದಿರ

ಆಕರ್ಷಕವಾಗಿ, ಸಾರ್ಥಕವಾಗಿ
ಕಟ್ಟಿಕೊಡುವ ಕಠಿಣ ಪರಿಶ್ರಮಕ್ಕೆ,
ಸಂಯಮ, ಸಹನೆಯ ಪರೀಕ್ಷೆಗೆ
ಹಿಂಜರಿಯುವೆ ಏಕೆ ಚಂದಿರ

ಭಾವ ಲಯಗಳ ಮಿಡಿತದಿಂದ
ಭಾವ ಲಹರಿಯ ಹಿಡಿತದಿಂದ
ಚಲನಶೀಲತೆ ಮೊಟಕುಗೊಳ್ಳದೆ
ಸತತ ಚಲಿಸುತಿರು ಚಂದಿರ

ಬಾಳಿನ ಅನಿರೀಕ್ಷಿತ ತಿರುವುಗಳಿಗೆ
ಕುತೂಹಲ ಕೆರಳಿಸುವ ಸನ್ನಿವೇಶಕೆ,
ಮುಗ್ಥ ಅಚ್ಚರಿಗಳಿಗೆ ಬೆರಗಾಗುತ
ಜೀವ ಚೈತನ್ಯ ತುಂಬಿಸು ಚಂದಿರ

ತಂತ್ರ ಮಂತ್ರಕೆ ತಲೆದೂಗುತ್ತಾ
ಅಂಧ ಆಮಿಷಗಳಿಗೆ ಜಾರಿ ಬಿದ್ದು
ಧರ್ಮ ಸಂಕಟಕ್ಕೆ ಸಿಕ್ಕಿ ಕೊಂಡೆನು
ಪಾರುಮಾಡೊ ಗೆಳೆಯ ಚಂದಿರ

Jun 28, 2009

ಮತ್ತೆ ಬರುವನು ಚಂದಿರ - 28

ಒಂಟಿ ಬದುಕಿನ ನಿರಂತರ ಓಟ
ಸಂಜೆಗಣ್ಣಿನ ಅಸ್ಪಷ್ಟ ನೋಟಕೆ
ಸ್ಥಾಯೀಭಾವದ ಸ್ಥಿರ ಹಿನ್ನಲೆಗೆ
ಹಿಮ್ಮೇಳ ನುಡಿಸುವನೊ ಚಂದಿರ

ನಡೆದ ಹಾದಿಯ ಪರಮಾವಧಿ
ಪಾಪ, ಪುಣ್ಯದ ಪರಮಾರ್ಥಕ
ಸಂಸರ್ಗ, ಸಂಸಾರ, ಸಂಸೃತಿ
ಸಂಸ್ಕರಿಸುವವನೆ ಚಂದಿರ

ಸಹನೆಯಿಂದೋಡಿಸುತ್ತಾ ಬೇಸರ
ಕ್ಷಮೆಯಿಂದ ನಿಯಂತ್ರಿಸು ಕೋಪ
ಬಲಹೀನತೆ ಜಯಿಸು ಪ್ರೇಮದಿಂದ
ತಪ್ಪನ್ನು ನಗುವಿಂದ ಉತ್ತರಿಸೊ ಚಂದಿರ

ಮುತ್ತಿರುವ ಪರದೆಗಳನ್ನು ಕಿತ್ತೆಸೆದು
ಅಡಗಿದ್ದ ವಿಕೃತಿ ಅನಾವರಣಗೊಳಿಸಿ
ಮುಕ್ತಿಮಾರ್ಗದಲಿ ನಡೆಯಲಿಚ್ಛಿಸಿದರೆ
ಆರ್ದ ಸಂತೃಪ್ತಿ ಸಿದ್ಧಿಸುವುದು ಚಂದಿರ

ಅವತರಿಪ ವಿಶಿಷ್ಟ ತುಮುಳಗಳಿಗೆ
ಕದಡದಿರಲಿ ಸ್ಥಿರಚಿತ್ತ, ಸಂಯಮ
ಕಾಲಾತೀತದಲ್ಲಿ ಲೀನವಾಗುವುದು
ಮತ್ತೆ ಮರುಕಳಿಸದಂತೆ ಚಂದಿರ

ನೆನಪುಗಳ ಹೊಳೆಯಲ್ಲಿ ಮಿಂದು
ಆಶಯಗಳಿಗೆ ವಾಸ್ತವದ ನೋಟ
ಪರಿಚಯಿಸುವ ಸ್ಥೈರ್ಯವಿರದಿದ್ದರೆ
ಗಾಳಿಗೋಪುರ ಖಚಿತ ಚಂದಿರ

ಭೂತ, ವರ್ತಮಾನದ ಬಿಡಿಚಿತ್ರಗಳು
ಅಗಾಧವಾಗಿ ಕಲಕುತಿವೆ ಮನವನ್ನು
ಏಕಾಗ್ರತೆಯ ಸಾಧಿಸುವ ಹಾದಿಯಲಿ
ಮತ್ತೆ ಸೋತಿರುವೆನೊ ಚಂದಿರ

ಬದುಕು ಕಾಣಿಸಿದ ಚಿತ್ರಗಳೆಲ್ಲವು
ಸ್ಥಾನಪಲ್ಲಟಗೊಂಡಿವೆ ಬಲುಬೇಗ
ಅದರ ವೇಗ, ಅವೇಗದ ಬಿರುಸಿಗೆ
ಬಲಿಪಶುವಾಗಿರುವೆನೊ ಚಂದಿರ

ಪ್ರತಿರೂಪಗಳ ಗುರುತಿಸಲಾಗದೆ
ಪರಿಕಲ್ಪನೆಗಳಿಗೆ ರೆಕ್ಕೆಗಳನ್ನಿಡದೆ
ಕಾರ್ಯಪ್ರವೃತ್ತಿಗೆ ಸಜ್ಜುಗೊಳ್ಳದೆ
ನುಚ್ಚುನೂರಾಗಿರುವೆನೊ ಚಂದಿರ

ಚಿಂತನೆಗಳಿಗೆ ಚಾಲನೆ ನೀಡದೆ
ಮಂಥನಗಳಿಗೂ ಮನಗೊಡದೆ
ಅಂತರಾತ್ಮವನೆಂದೂ ಪ್ರಶ್ನಿಸದೆ
ಅಸ್ಪಷ್ಟಗಳಿಗೆ ಬಲಿಯಾದೆ ಚಂದಿರ

Jun 27, 2009

ಅಡಗಿದ್ದ ಶಿಷ್ಟ ಕರೆಗಳು

ಅಂತಃರಂಗದೊಳಗಿನ ಪುಟ್ಟ ದನಿ
ನನ್ನ ಕರೆದು ಹೇಳುತ್ತಿದೆ---
“ಸತ್ಯವೆಂಬ ಉಡುಗೊರೆ ಹಂಚು,
ಅದವರ ನೋವು ನಿವಾರಣೆಗೆ ನೆರವಾಗುತ್ತದೆ.” ಎಂದು.
ಅಂತಃಸತ್ವದಿಂದ ಚೈತನ್ಯ ಹೊಮ್ಮುತ್ತಿದೆ,
ಅದರ ದೃಢವಾದ ಪಿಸುಮಾತುಗಳಿಂದ.
ನನ್ನನ್ನು ಒತ್ತಾಯಿಸುತ್ತದೆ, ಒಳಗಿನ ಬೆಳಕನ್ನು ಹರಡಿ,
ಅಂಧಕಾರದಲ್ಲಿರುವವರ ಬದುಕನ್ನು ಬೆಳಗಲು.
ಆತ್ಮಸಾಕ್ಷಿ ಮೌನ ಮುರಿದು,
ನನ್ನಾತ್ಮವನ್ನು ಎಚ್ಚರಿಸುತ್ತದೆ, ಸುಖನಿದ್ರೆಯಿಂದ.
ದೊಂಬಿಡುತ್ತದೆ, ಪ್ರಶಾಂತ ಸಂತಸವನ್ನು ಪಸರಿಸಲು,
ಏಕೆಂದರೆ, ಉಳಿದವರನ್ನು ಅದು ತೊಂದರೆಗಳಿಂದ ಸಂರಕ್ಷಿಸುತ್ತದೆ.
ದಿವ್ಯ ನ್ಯಾಯಾಲಯದಲ್ಲಿ, ಅಂತರಾಳವೆಂಬ ನ್ಯಾಯಾಧೀಶರು
ಸೂಚಿಸುತ್ತಾರೆ, ನ್ಯಾಯವೆಂಬ ಸುವರ್ಣ ನಿಯಮವನ್ನು ಪಾಲಿಸಲು.
ಮೂಲ ನಂಬಿಕೆಗಳನ್ನು ಆಚರಿಸುತ್ತಾ ಸಮಾಜಕ್ಕೆ ಮಾದರಿಯಗಲು,
ಅದು ಅನ್ಯರ ಸಕಲ ಕಷ್ಟ ನಿವಾರಣೆಗೆ ಬಹಳ ಉಪಯೋಗವಾಗುತ್ತದೆ.
ಪ್ರಜ್ವಲ ಆಧ್ಯಾತ್ಮದ ಕರೆ
ಮತ್ತೆ ಚಿಗುರೊಡೆಯುತ್ತದೆ
ಈ ಸಲ ನನ್ನನ್ನು ವಿಶಾಲ ದೂರದೃಷ್ಟಿಯನ್ನು ಹಂಚಿಕೊಳ್ಳಲು ತಿಳಿಸುತ್ತದೆ,
ಎಲ್ಲರೂ ಸರ್ವ ಋತುಗಳಲ್ಲಿ, ಸನ್ಮಾರ್ಗದಲ್ಲಿ ನಡೆಯಲು ಸಹಾಯವಾಗಲೆಂದು.
ಅಂತಃರಂಗದ ಅರ್ಚಕ ಹೇಳುತ್ತಾನೆ,
ನೋವು ನಿವಾರಕ ಶಕ್ತಿಯನ್ನು ಅನುಗ್ರಹಿಸಲು,
ಮತ್ತೆ ಆಜ್ಞಾಪಿಸುತ್ತಾನೆ, ಅದರ ಸದುಪಯೋಗವನ್ನು ಎಲ್ಲೆಡೆ ಹರಡಲು,
ಎಲ್ಲರೂ ತಮ್ಮ ಸುಂಗಧ ಪರಿಮಳವನ್ನು ಮತ್ತೆ ಹಿಂಪಡೆಯಲು.
ನನ್ನ ಏಕಾಂತತೆಯ ಗೂಡಿಂದ,
ನನಗೆ ಜ್ಞಾನ ಸಿದ್ಧಿಸುತ್ತದೆ, ದಿವ್ಯಸ್ಪೂರ್ತಿಯ ದೇವಕನ್ಯೆಯರಿಂದ,
ನಂತರ ಅದು ಎಲ್ಲಡೆಗೆ ಹಬ್ಬುತ್ತದೆ,
ಯಾರೊಬ್ಬರನ್ನೂ ಬಿಡದ ಹಾಗೆ, ಅವರ ದುಃಖಗಳನ್ನು ಸರ್ವನಾಶಮಾಡಲು.
ಅಡಗಿದ್ದ ಶಿಷ್ಟ ಕರೆಗಳ ಈ ಜ್ಯೋತಿ
ಜೀವಂತವಾಗಿ ಹೀಗೇ ಬೆಳಗುತ್ತಿರಲು,
ನಾನು ಮುಂದುವರೆಸುತ್ತೇನೆ, ಶಿಷ್ಟ ಸಲಹೆಗಳ ಸ್ವೀಕರಿಸುವುದನ್ನು,
ನಾನು ಹೀಗೆ ಹಂಚಿಕೊಳ್ಳುವುದನ್ನೂ ಸಹ ಮುಂದುವರೆಸುತ್ತೇನೆ,
ಸರ್ವ ಶ್ರೇಷ್ಠ ಜಗತ್ ಸತ್ಯಗಳ ಹರಡುವುದನ್ನು.

ಮೂಲ ಕವಿಯತ್ರಿ : ಚಿತ್ರ .ಜಿ. ಲೇಲೆ
ಕನ್ನಡಕ್ಕೆ : ಚಂದಿನ

Jun 26, 2009

ಪ್ರಸಕ್ತ ಚಿತ್ರಣಕ್ಕೊಂದು ಕನ್ನಡಿ

ಎಷ್ಟೋ ಕೊರತೆಗಳಿರುವುದು ಕಂಡಿದ್ದೇನೆ
ಅವನ್ನು ಪಡೆಯಲಿಕ್ಕೆ, ದುಬಾರಿ ಬೆಲೆ.
ಜನಸಾಮಾನ್ಯರು ಅತ್ತಿತ್ತ ಪರದಾಡುತ್ತಾರೆ
ಊಟ, ನೀರು ಮತ್ತೆ ನೆಲೆಗಾಗಿ.

ಪ್ರಾಮಾಣಿಕರಿಗೆ ಉಸಿರುಗಟ್ಟುವ ಸನ್ನಿವೇಶ
ನರಿಗಳಂಥವರು ತಮ್ಮ ತಿಜೋರಿ ತುಂಬಿಸುತ್ತಾರೆ
ಸುಳ್ಳು ಪ್ರಮಾಣ ಪತ್ರ ನೀಡಿ ಪ್ರಭಾವಿಗಳಾಗುತ್ತಾರೆ
ಮಧ್ಯರಾತ್ರಿ ನಿದ್ದೆಗೆಟ್ಟು ಓದುವವರಿಗೆ ಕೇವಲ ವಯಸ್ಸಾಗುತ್ತದೆ.

ಕುತಂತ್ರಿಗಳು ಪರರ ಪರಿಶ್ರಮವನ್ನು ದೋಚುತ್ತಾರೆ
ಅಳಿದುಳಿದದ್ದು ಮಾತ್ರ ಪ್ರತಿಭಾನ್ವಿತರಿಗೆ ನೀಡುತ್ತಾರೆ
ಪರಿಣಾಮಕಾರಿ ಕೆಲಸಗಾರರನ್ನು ಹೊರಹಾಕುತ್ತಾರೆ
ಸೋಮಾರಿಗಳನ್ನು ಶ್ರೇಷ್ಟರೆಂದು ಬಿಂಬಿಸುತ್ತಾರೆ.

ಭ್ರಷ್ಟಾಚಾರ, ಕುತಂತ್ರಗಳಿಂದು ಸಹಜ ಸ್ವಾಭಾವಿಕವಾಗಿವೆ
ಅವರಿಗೆ ತಿರುಗಿ ಬಿದ್ದವರನ್ನು ನಿರ್ಣಾಮ ಮಾಡುತ್ತಾರೆ
ಉದ್ಯೊಗವಕಾಶಗಳು ತಮ್ಮ ಹೊಗಳು ಭಟ್ಟರಿಗೆ ಮೀಸಲು
ಸಾಮರ್ಥ್ಯ ಹೊಂದಿರುವವರನ್ನು ಕಡೆಗೆಣಿಸುತ್ತಾರೆ.

ಪ್ರಶಸ್ತಿಗಳೇನಿದ್ದರೂ ತಮ್ಮ ಅನುಯಾಹಿಗಳಿಗೆ ಮಾತ್ರ
ಉಳಿದವರಿಗೆ ಶಿಸ್ತುಕ್ರಮ ಕೂಡಲೇ ಜಾರಿಗೊಳಿಸುತ್ತಾರೆ
ಉಳ್ಳವರು ಮಾತ್ರ ಮತ್ತೂ ಶ್ರೀಮಂತರಾಗುತ್ತಾರೆ
ನಿಸ್ವಾರ್ಥ ಶ್ರಮಿಕರು ಮತ್ತೂ ಬಡವರಾಗುತ್ತಾರೆ.

ಹೆಗ್ಗಣಗಳಂಥಹ ಲಂಚಕೋರರಿಗೆ ಉತ್ತಮ ಅವಕಾಶ ಲಭ್ಯ
ಪ್ರಾಮಾಣಿಕರತ್ತ ಒಮ್ಮೆ ತಿರುಗಿ ನೋಡಲೂ ಸಹ ಹೇಸುತ್ತಾರೆ
ಬಡ್ತಿಯೆಂಬುದು ಕೆಲವರ ಪಿತ್ರಾರ್ಜಿತ ಆಸ್ತಿಯಂತೆ ಅನುಭವಿಸುತ್ತಾರೆ
ನೀತಿವಂತರಿಗೆ ಮಾತ್ರ ಹಿಂಬಡ್ತಿಯ ಕೊಡುಗೆ ನೀಡುತ್ತಾರೆ.

ಮೌಲ್ಯ, ನೈತಿಕತೆ ಎಂಬುದೆಂದೋ ಕಳೆದು ಹೋಗಿವೆ
ಅವನೀತಿವಂತರನ್ನೇ ಅತ್ಯುತ್ತಮರೆಂದು ಕೊಂಡಾಡುತ್ತಾರೆ
ಆದರೂ, ಅಲ್ಲಲ್ಲಿ ಸತ್ಯದ ಹಣತೆಗಳು ಇನ್ನೂ ಕಂಡುಬರುತ್ತವೆ
ಅವುಗಳನ್ನು ಉಳಿಸಿಕೊಳ್ಳದಿದ್ದರೆ, ಕೊಳೆಯುವುದಂತೂ ನಿಶ್ಚಿತ.

ಮೂಲ ಕವಿಯತ್ರಿ : ಚಿತ್ರ .ಜಿ. ಲೇಲೆ
ಕನ್ನಡಕ್ಕೆ : ಚಂದಿನ

Jun 22, 2009

ಮತ್ತೆ ಬರುವನು ಚಂದಿರ - 27

ಗೆಳೆಯರ ಜೊತೆ ದೊಡ್ಡಕೆರೆಯಲಿ ಮಿಂದು
ಕಾದ ಮರಳ ದಂಡೆಯಲಿ ಅಂಗಾತ ಮಲಗಿ
ಹೊಂಗೆ ಮರದಡಿಯಲಿ ಸುಖನಿದ್ರೆ ಮುಗಿಸಿ
ಹಸಿವಾದಾಗ ಮನೆಗೆ ಮರಳಿದ ಚಂದಿರ

ರಂಗಮಂಟಪದಲ್ಲಿ ಜೋರು ಪ್ರದರ್ಶನ
ಊರೈಕಳ ಜೊತೆಗೆ ನೋಡವ ಸಿರಿತನ
ಮಸಾಲೆ ಉರಿಗಾಳು ಪುರಿ ಮೆಲ್ಲುವುದು
ಸ್ವರ್ಗ ಸಿದ್ಧಿಸಿದ ಸಂತಸ ಚಂದಿರ

ಊರ ಗುಡ್ಡಗಳಲ್ಲಿ ಓತಿಕ್ಯಾತವನ್ನಟ್ಟಿ
ಮುಳ್ಳು ಕಲ್ಲುಗಳ ತುಳಿದು ಹಿಮ್ಮೆಟ್ಟಿ
ತರಚಿ-ಪರಚಿದರು ಕಲ್ಲು ಬೀಸಿದಾಗ
ಏನೋ ಸಾಧಿಸಿದ ತೃಪ್ತಿ ಚಂದಿರ

ಘಮ ಘಮ ಮಲ್ಲಿಗೆ ಮುಂಜಾನೆ ಎದ್ದು
ಅಕ್ಕನಿಗೆ ಕೊಟ್ಟಾಗ ಸಿಕ್ಕ ಆಪ್ತ ಮುತ್ತು
ಕದ್ದ ಮಾವಿನ ಕಾಯಿಗಚ್ಚಿ ಉಪ್ಪುಖಾರ
ಮಂಡಕ್ಕಿ ಮುಕ್ಕಿದ್ದೇನು ಮಜ ಚಂದಿರ

ಮಳೆಗಾಲ ಬಂದಾಗ ಹಸಿರಾದ ಒಡಲು
ಬಣ್ಣಬಣ್ಣದ ಚಿಗುರು ಬಗೆಬಗೆಯ ನವಿರು
ಸಿರಿಕಾಣೊ ಕೆರೆಯಲ್ಲಿ ಕಿರಣಗಳ ತೇರು
ಹಕ್ಕಿಗಳ ಕಲರವಕೆ ಮನಸೋತ ಚಂದಿರ

ನೇರಳೆಕಾಯಿಗಳು ಕಡುನೀಲಿಯಾದಂತೆ
ಇತ್ತಲ ಪೇರಳೆಕಾಯಿ ದುಂಡಗೆ ಮೈದುಂಬಿ
ದೂರದ ನೆಲ್ಲೀಕಾಯಿ ನಳನಳಿಸಿ ಕರೆಯಲು
ಹಲಸಿನ ಹಣ್ಣಿನ ಘಮ ಸೆಳೆದು ಚಂದಿರ

ಊರ ಜಾತ್ರೆಗೆ ಹೊರಡುವ ಉಮ್ಮಸ್ಸು
ಕೂಡಿಟ್ಟ ದುಡ್ಡೆಲ್ಲ ಕಿಸೆಗಿಳಿಸಿದ ಪೋರರು
ನಲಿದಾಡಿ ಬಯಲಲ್ಲಿ ರಿಂಗಣಿಸಿ ಕುಣಿದು
ರಂಗಿನ ತರುಣಿಯರ ತೇರು ಚಂದಿರ

ಪಂಚಭೂತಗಳಲ್ಲಿ ಲೀನವಾದ ನಂತರ
ಮರುಜನ್ಮದ ಪರಿಕಲ್ಪನೆ ಅತಿಮಾನಸ
ಪ್ರಕೃತಿಯಿಂದ, ಪ್ರಕೃತಿಯೆಡೆಗೆ ಪಯಣ
ಈ ನಿಗೂಢ ಪ್ರಕ್ರಯೆ ವಿಸ್ಮಯ ಚಂದಿರ

ರಣರಣ ಬಿಸಿಲಿಗೆ ಮೈ ಸುಡುತ್ತಿರಲು
ಕಣ್ಣುಗಳು ಕಡುಗೆಂಪಾಗಿ ಉರಿದುರಿದು
ಕಾಣದಾಗಿದೆ ಸುತ್ತಮುತ್ತ ಮರದ ನೆರಳು
ಆಯಾಸಕೆ ತಳಮಳಿಸಿದೆ ಜೀವ ಚಂದಿರ

ಮೌನದೊಂದಿಗೆ ಸಂಯೋಜಿತ ಸಂಗೀತ
ಲಹರಿಗಳು ಹೊರಡಿಸುವ ನಾದ ಅದ್ಭುತ
ಹಗುರಾದ ಮೈಮನಗಳಿಗೆ ಚೈತನ್ಯದಿಂದ
ಹಾರುವ ಹಕ್ಕಿಯ ಹಾಗೆ ಚಂದಿರ

Jun 20, 2009

ನಿನ್ನ ಆಯ್ಕೆಗಳು

ನಿನಗಿರುವುದು
ಕೇವಲ ಎರಡೇ ಎರಡು
ಆಯ್ಕೆಗಳು:
ಬೇರುಗಳು,
ಇಲ್ಲಾ ರೆಕ್ಕೆಗಳು
ಇವೆರಡರಲ್ಲಿ
ಯಾವುದಾದರೂ ಒಂದನ್ನು
ಆರಿಸಿಕೊ.

ನೀನೇನಾದರೂ
ಬೇರುಗಳುನ್ನು
ಆರಿಸಿಕೊಂಡರೆ---
ಕೂಡಲೇ ಖಚಿತ ಪಡಿಸಿಕೊ
ಅವುಗಳು
ಉದ್ದವಾಗಿ, ಆಳವಾಗಿ ಬೆಳೆದು,
ಗಟ್ಟಿಯಾದ ತಳಪಾಯದೊಂದಿಗೆ
ನೆಲೆಯೂರಿವೆ ಎಂದು.
ನಂತರ ನೀನು ಅತ್ಯಗತ್ಯವಾಗಿ
ಸುಂದರ ಎಲೆಗಳಿಂದ ಸಜ್ಜಾಗಿ,
ಪರಿಮಳ ಭರಿತ ಹೂವುಗಳೊಂದಿಗೆ,
ರಸ ಭರಿತ ಹಣ್ಣುಗಳನ್ನು
ನೀಡಿದಾಗಲೇ
ಜಗವು ನಿನ್ನಲ್ಲಿಗೆ ಬರಲು
ಹಾತೊರೆಯುತ್ತದೆ.

ಇಲ್ಲವಾದರೆ ನೀನು
ರೆಕ್ಕೆಗಳನ್ನು
ಆರಿಸಿಕೊ---
ಸ್ವಚ್ಛಂದವಾಗಿ
ಹಾರುತ್ತಾ...
ಜಗದ ಬೆನ್ನಟ್ಟಲು.

Jun 18, 2009

ಹನಿಗಳು – 5

- 1 -

ಹೆಂಡ
ಮತ್ತು ಹೆಂಡತಿ
ಇವರಿಬ್ಬರೂ
ಭಾರೀ ಪ್ರಚಂಡರು.
ಯಾವಾಗಲೂ ನನ್ನ
ವಾಲಿಬಾಲಿನಂತೆ
ಆಡಿಕೊಳ್ಳುತ್ತಾರೆ.

- 2 -

ನಾನು
ತಣ್ಣಗೆ, ತೆಪ್ಪಗೆ
ಇದ್ದಿಲಿನಂತೆ ತೂಕಡಿಸುವಾಗ.
ಸುಲಭವಾಗಿ ಕಿಚ್ಚಿನ ಕೆಂಡ ಹಚ್ಚಿದ
ಪ್ರಚಂಡರು
ಮಹಿಳೆ ಮತ್ತು ಮದ್ಯ.

- 3 -

ಗೆಳತಿ
ನೀನೀಗ
ಯಾರನ್ನಾದರೂ
ಪ್ರೀತಿಸು ಅಡ್ಡಿಯಿಲ್ಲ.
ಏಕೆಂದರೆ,
ನಾನಲ್ಲ ಈಗ
ನಿನ್ನ ನಲ್ಲ.

- 4 -

ನಾನೂ
ಸಹ ಸಭ್ಯ.
ಮದ್ಯ ಮತ್ತು ಮಹಿಳೆ
ಕಣ್ಣಿಗೆ ಬೀಳದಿರುವ
ಕ್ಷಣದವರೆಗೆ.

- 5 -

ಕೆಲವರು
ಶೇರುಪೇಟೆ,ಚರ
ಮತ್ತು ಸ್ಥಿರಾಸ್ತಿಗಳಲ್ಲಿ,
ಹಣ ತೊಡಗಿಸಿ
ಸಂತೃಪ್ತಿ
ಹೊಂದುತ್ತಾರೆ.
ನಾನೂ ಸಂತೃಪ್ತ
ಮದ್ಯಪಾನದಿಂದ.

- 6 -

ಬದುಕಲ್ಲಿ
ಏಳು-ಬೀಳು
ಸಹಜವೆಂದು
ಒಪ್ಪಿಕೊಳ್ಳುವೆ.
ಆದರೆ,
ನಾನು ಕುಡಿದು
ಎದ್ದು-ಬಿದ್ದರೆ
ದಡ್ಡಳಂತೇಕೆ
ಅಳುವೆ.

- 7 -

ಕುಡಿತದಿಂದ
ಸಿದ್ಧಿಸುವ ಸುಖ
ಕುಡಿಯದೇ ಬೊಗಳುವ
ದಡ್ಡ ಶಿಖಾಮಣಿಗಳಿಗೆ
ಹೇಗೆ ವರ್ಣಿಸಲಿ
ಪ್ರಭುವೆ.

- 8 -

ಎಷ್ಟೇ
ಕುಡಿದಿದ್ದರೂ
ಕರೆಕ್ಟಾಗಿ ಬಿಲ್ಲು ಕೊಟ್ಟು,
ತಡವಾಗಿಯಾದರೂ ನನ್ನ ಮನೆಗೇ
ತಲುಪುವ ಸಜ್ಜನಿಕೆಯನ್ನು
ಕೇವಲವಾಗಿ
ಕಾಣದಿರಿ
ಆಪ್ತರೆ.

- 9 -

ಕುಡಿತ ಬಹಳ
ಅನಾರೋಗ್ಯಕರ ,
ದುರಭ್ಯಾಸ ಎಂದು
ಪದೇ ಪದೇ ಒತ್ತಿ ಹೇಳುವ
ಶಿಷ್ಟರಿಗೊಂದು ಪುಟ್ಟ ಸಲಹೆ
ವ್ಯರ್ಥವಾಗುವ ಮುನ್ನ
ಒಮ್ಮೆಯಾದರೂ ಕುಡಿದು
ಬದುಕು ಪಾವನವಾಗಿಸಿ.

- 10 -

ದಾರಿ
ತಪ್ಪುವುದಕ್ಕೆ
ನೂರಾರು ಮಾರ್ಗ.
ಮದ್ಯಪಾನವನ್ನೇ
ಎತ್ತಿ ತೋರುವ
ಸಜ್ಜನರ ಹುನ್ನಾರಕ್ಕೆ
ನನ್ನ ತೀವ್ರ ವಿರೋಧ.

ಬಿಂಬ – 40

ಸುಂದರಿಯೊಬ್ಬಳ
ಸೌಂದರ್ಯ ಸವಿಯುವುದು
ಮಾನವ ಸಹಜವಾದರೂ,
ಅಸಹಜ ರೀತಿಯಲ್ಲಿ
ಆಸ್ವಾಧಿಸುವುದು
ಅಪರಾಧ
ಅಲ್ಲವೆ?

ಬಿಂಬ – 39

ನಾನು ಸಹಜವಾಗಿ
ಸಭ್ಯನಾಗಿರುವುದು
ನಿಮ್ಮ ಪ್ರಾಮಾಣಿಕ
ಹೆಬ್ಬಯಕೆ, ಒತ್ತಾಸೆ
ಎಂಬುದು ನಿಜವಾಗಿದ್ದಲ್ಲಿ
ದಯವಿಟ್ಟು ಕುಡಿತವನ್ನೊಂದು
ಬಲಹೀನತೆಯೆಂಬುದಾಗಿ
ಬಿಂಬಿಸುವುದು ನೀವು
ಕೂಡಲೇ ನಿಲ್ಲಿಸಿ.

ಬಿಂಬ – 38

ನನ್ನನ್ನು
ನಿರ್ಲಿಪ್ತವಾಗಿ,
ಪ್ರಾಮಾಣಿಕವಾಗಿ,
ನಿಸ್ವಾರ್ಥದಿಂದ, ತೀವ್ರವಾಗಿ
ಬಯಸುವ, ಪ್ರೀತಿಸುವ, ಅಪ್ಪಿಕೊಳ್ಳುವ,
ಮುತ್ತಿಟ್ಟು ಮತ್ತೇರಿಸುವ
ಏಕೈಕ ಆಪ್ತ ಸಾಧನ
ಮದ್ಯಪಾನ.

ಬಿಂಬ – 37

ನಮ್ಮ
ಸಮಾಜದಲ್ಲಿ
ಕೆಟ್ಟವರ ಪ್ರಮಾಣ
ಹೆಚ್ಚಾಗಿರುವುದರಿಂದಲೇ
ಸಜ್ಜನರಿಗೆ ಸೂಕ್ತ
ಪ್ರಾಶಸ್ತ್ಯ.

ಬಿಂಬ – 36

ನಮ್ಮ
ಸ್ವತಂತ್ರವನ್ನು
ಸರಿಯಾದ ರೀತಿಯಲ್ಲಿ
ನಿಭಾಯಿಸುವುದೂ
ಸಹ ಅತಿದೊಡ್ಡ
ಜವಾಬ್ದಾರಿ
ಅಲ್ಲವೆ?

ಬಿಂಬ – 35

ಸಹಿಸಿಕೊಳ್ಳುವ
ಸದ್ಗುಣ ಯಥೇಚ್ಛವಾಗಿ
ನಮ್ಮಲ್ಲಿ ಅಡಗಿರುವುದು.
ಕೇಡು, ಕಿರುಕುಳ,
ಮತ್ತು ಶೋಷಣೆ
ನಿರಂತರವಾಗಿ,
ಹಾಗು ನಿರ್ಭೀತಿಯಿಂದ
ಮುಂದುವರೆಯಲು
ಪರೋಕ್ಷ ಪ್ರೇರಣೆ ನೀಡಲು
ಸಹಕಾರಿಯಾಗಿದೆ
ಅಲ್ಲವೆ?

ಬಿಂಬ – 34

ಭ್ರಷ್ಟಾಚಾರ
ಸಹಿಸಿಕೊಳ್ಳುವ
ಸಹನೆ, ಸಂಯಮಗಳು
ನಮ್ಮಲ್ಲಿ ನೆಲೆಯೂರಿರುವುದರಿಂದ,
ನಾವೂ ಸಹ ಭ್ರಷ್ಟಚಾರದ
ಪರೋಕ್ಷ ಬೆಳವಣಿಗೆಗೆ
ಕಾರಣರಾಗಿದ್ದೇವೆ, ಹಾಗಾಗಿ
ಭ್ರಷ್ಟರಾಗಿದ್ದೇವೆ.

ಬಿಂಬ – 33

ಬಹುತೇಕ
ಎಲ್ಲರೂ
ಪ್ರಮಾಣಿಕರೇ
ಅಪ್ರಮಾಣಿಕರಾಗುವ
ಸೂಕ್ತ ಅವಕಾಶಗಳು
ಸಿಗುವವರೆಗೆ.

ಬಿಂಬ – 32

ಪ್ರಮಾಣಿಕತೆ,
ಸತ್ಯ, ನಿಷ್ಠೆ,
ನಂಬಿಕೆ
ನೈತಿಕತೆ
ಮೌಲ್ಯಗಳು
ಕೇಳುವುದಕ್ಕೆ
ಮತ್ತು ಹೇಳುವುದಕ್ಕೆ
ತುಂಬಾ ಸೊಗಸಾಗಿರುತ್ತವೆ.

ಬಿಂಬ – 31

ನಾನೂ ಸಹ ಬಹಳ
ಅದೃಷ್ಟವಂತನೆಂದು
ಭಾವಿಸುತ್ತೇನೆ.
ಆತ್ಮಸಾಕ್ಷಿಯನ್ನು
ಕೊಂದ ಮೇಲೂ
ಸಿಕ್ಕಿಹಾಕಿಕೊಳ್ಳದೆ
ನಿರಪರಾಧಿಯಾಗಿ,
ಸ್ವಚ್ಛಂದವಾಗಿ,
ಬದುಕುವ ಸಾಮರ್ಥ್ಯ
ಸಿದ್ಧಿಸಿಕೊಂಡಿದ್ದೇನೆ.

Jun 16, 2009

ಮತ್ತೆ ಬರುವನು ಚಂದಿರ - 26

ನೆಟ್ಟ ನೋಟದಿಂದ ಕಾಣುವ ಕಾತುರ
ಸಿದ್ಧಿಸಿದ ಚಿತ್ರ ದಿಟ್ಟಿಸುವ ಕುತೂಹಲ
ಗೆರೆಗಳಾಚೀಚೆಗೆ ಇಣುಕುವ ಹಂಬಲ
ತಳಮಳದ ಹುಚ್ಚು ಮನವೊ ಚಂದಿರ

ಚಿತ್ತ ಭಿತ್ತಿಯ ಭ್ರೋಣ ಟಿಸಿಲೊಡೆದು
ನವಿರಾಗಿ ಚಿಗಿರೊಡೆದು ತೂಗಾಡುತ
ಉಲ್ಲಾಸ, ಉತ್ಸಾಹ ಉಮ್ಮಳಿಸುವ
ಪ್ರಕ್ರಿಯೆ ನಿಗೂಢ ವಿಸ್ಮಯ ಚಂದಿರ

ತವಕ ತಲ್ಲಣಗಳ ನಿಯಂತ್ರಿವ ಜಾಣತನ
ಸ್ಥಿರ ಮನಸ್ಥಿತಿ, ನಿರ್ಲಿಪ್ತ ಭಾವಸ್ತರದಿಂದ
ನಿಲುವು, ನಿರ್ಧಾರ ಮಂಡಿಸುವ ಸ್ಥೈರ್ಯ
ಸಾಪೇಕ್ಷ ಸಾಧನೆ ಅಗತ್ಯವೊ ಚಂದಿರ

ಊರುಕೇರಿಗಳ ಅಲೆಯುತ್ತ ಮುತ್ತ
ಸಂದ ತುತ್ತನ್ನು ಸವಿಯುತ್ತ ಮುಕ್ತ
ಲೋಕದರ್ಶನದಿಂದ ವೈರಾಗ್ಯ ಚಿತ್ತ
ಇವ ಅತ್ಯೋತ್ತಮನಲ್ಲವೆ ಚಂದಿರ

ಬೆಟ್ಟ ಗುಡ್ಡಗಳತ್ತಿ ಕಡಿದ ಕಟ್ಟಿಗೆ ಸುತ್ತಿ
ಹೊತ್ತು ಮಾರಿದಾಗಲೆ ದಿನದ ತುತ್ತು
ದಶಕಗಳ ದಾಟಿದ ದಣಿದ ದಾರ್ಶನಿಕ
ಯೋಗ್ಯನಲ್ಲವೆ ನಮಗೆ ಚಂದಿರ

ಮುಗ್ಧತೆಯ ಮೆಟ್ಟಿಲನು ಸತತ ಹತ್ತುತ್ತಾ
ಬಣ್ಣ ಬಣ್ಣಗಳ ಕಡೆಗೆಣಿಸುತ ಕದಡದಂತೆ
ಸರಳತೆಯ ಸನ್ಮಾರ್ಗದಲಿ ಸ್ವರ್ಗ ಕಂಡು
ಐಕ್ಯನಾದವನು ಶರಣನಲ್ಲವೆ ಚಂದಿರ

ಬೆಳ್ಳಿ, ಬಂಗಾರ, ನಗನಾಣ್ಯ, ಮಣ್ಣ,
ಮುಷ್ಟಾನ್ನ, ಮಧುಪಾನ ಸಿರಿಹೊತ್ತು
ಹೂತು ಹೋದ ಕೊನೆಗೆ ಕಡುಬಿಕ್ಷುಕನ
ಹಾಗೆ, ಸಾಧಿಸಿದ್ದೇನೊ ಚಂದಿರ

ಅತ್ತಿತ್ತ ನೋಡದೆ, ಹಿಂತಿರುಗಿ ಕಾಣದೆ
ಮತಿಗೆಟ್ಟು ಮುನ್ನುಗ್ಗಿ ಆಪ್ತರ ತೊರೆದು
ಮುಗ್ಗರಿಸಿ ಬಿದ್ದಾಗ ಎಬ್ಬಿಸುವವರಿಲ್ಲದೆ
ತತ್ತರಿಸಿ ಹೋದನೊ ಇವ ಚಂದಿರ

ಝಣ ಝಣ ಕಾಂಚಾಣ ಮೋಹವಿರಲಿ
ವ್ಯಾಮೋಹವಿರದಂತೆ ಎಚ್ಚರಿಕೆಯಿಂದ
ಸೂಕ್ಷ್ಮಗೆರೆಯನ್ನು ಎಳೆದಾಗಲೇ ಗೆಳೆಯ
ಸಂತೃಪ್ತಿ ಪ್ರಾಪ್ತಿ ಖಚಿತ ಚಂದಿರ

ಸಿಡುಕಿನ ಸಿಂಗಾರಿ ಸಿರಿ ಅವಳ ಕಾಣೊ
ತಿರುಗುತಿದೆ ಬುಗುರಿ ಬಿಂಕ ತೊರೆದು
ನಾಜೂಕು ನಡೆ-ನುಡಿಯಿಂದ ಸೆಳೆದು
ಮುಗ್ಧ ನಗು ಚೆಲ್ಲಿ ಮನ-ಮನೆಗೆ ಚಂದಿರ

Jun 13, 2009

ನಾನು ಬೆಳೆದು ದೊಡ್ಡವನಾದಂತೆ

ಅದು ಬಹಳ ದಿನಗಳ ಹಿಂದೆ.
ನಾನೀಗ ಬಹುತೇಕ ನನ್ನ ಕನಸ್ಸನ್ನು ಮರೆತಿದ್ದೇನೆ.
ಆದರೆ ಅದು ಆ ಸಮಯದಲ್ಲಿತ್ತು,
ನನ್ನ ಮುಂದೆ,
ಪ್ರಕಾಶಮಾನ ಸೂರ್ಯನಂತೆ---
ನನ್ನ ಕನಸು.
ನಂತರ ಗೋಡೆ ಬೆಳೆಯತೊಡಗಿತು,
ಮಂದಗತಿಯಲ್ಲಿ,
ನಿಧಾನವಾಗಿ,
ನನ್ನ ಮತ್ತು ನನ್ನ ಕನಸಿನ ನಡುವೆ.
ಅದು ಎಲ್ಲಿಯವರೆಗೂ ಬೆಳೆಯಿತೆಂದರೆ ಆಕಾಶ ಮುಟ್ಟುವವರೆಗೆ---
ಗೋಡೆ.
ನೆರಳು.
ನಾನು ಕಪ್ಪು ಬಣ್ಣದವನು.
ಆ ನೆರಳಲ್ಲಿ ನಾನು ಮಲಗುತ್ತೇನೆ.
ನನ್ನ ಕನಸಿನ ಬೆಳಕೆಂದಿಗೂ ಸುಳಿಯಲಿಲ್ಲ
ನನ್ನ ಮುಂದೆ,
ನನ್ನ ಮೇಲೆ.
ಕೇವಲ ಬಲಿಷ್ಟ ಗೋಡೆ.
ಕೇವಲ ನೆರಳು.
ನನ್ನ ಕೈಗಳು!
ನನ್ನ ಕಗ್ಗತ್ತಲ ಕೈಗಳು!
ನನ್ನ ಕನಸನ್ನು ಹುಡುಕಿ!
ನನಗೆ ನೆರವಾಗಿ ಈ ಕತ್ತಲನ್ನು ನಿರ್ನಾಮಗೊಳಿಸಲು,
ಈ ರಾತ್ರಿಯನ್ನು ನುಚ್ಚುನೂರಾಗಿಸಲು,
ಈ ನೆರಳನ್ನು ಹರಿದು ಹಾಕಲು
ಸಾವಿರ ದೀಪಗಳ ಸೂರ್ಯನೊಳಗೆ
ಬಿರುಸಾಗಿ ಸುತ್ತುವ ಸೂರ್ಯನ ಸಾವಿರ ಕನಸುಗಳೊಳಗೆ!

ಮೂಲಕವಿ : ಲ್ಯಾಂಗ್ಸ್ಟನ್ ಹ್ಯೂಗ್ಸ್
ಕನ್ನಡಕ್ಕೆ : ಚಂದಿನ

ಮುಂದೂಡಿದ ಕನಸು

ಮೂಂದೂಡಲ್ಪಟ್ಟ ಕನಸಿಗೆ
ಏನಾಗಬಹುದು?
ಅದೇನಾದರೂ ಬತ್ತಿಬಿಡಬಹುದೆ,
ಒಣದ್ರಾಕ್ಷಿಯಂತೆ ಉರಿಬಿಸಿಲಿಗೆ?
ಅಥವಾ ಕೀವು ತುಂಬಿದ ಗಾಯದಂತೆ ನೋವುಕೊಟ್ಟು---
ಮತ್ತೆ ಓಡಿ ಹೋಗಬಹುದೆ?
ಕೊಳೆತ ಮಾಂಸದಂತೆ ದುರ್ವಾಸನೆ ಹೊಮ್ಮಿಸಬಹುದೆ?
ಅಥವಾ ಸಕ್ಕರೆಯಿಂದ ಹೊರ ಮೈ ಗಡುಸಾಗಿರಿವುದೆ --
ರಸಭರಿತ ಸಿಹಿಯಂತೆ?
ಅದು ಭಾರೀ ಲಗ್ಗೇಜೊತ್ತಂತೆ ಬಾಗಿ ಎಳೆದಾಡಲೂ ಬಹುದು.
ಅಥವಾ ಅದೇನಾದರೂ ಒಮ್ಮೆಗೇ ಸಿಡಿಯಬಹುದೆ?

ಮೂಲಕವಿ : ಲ್ಯಾಂಗ್ಸ್ಟನ್ ಹ್ಯೂಗ್ಸ್
ಕನ್ನಡಕ್ಕೆ : ಚಂದಿನ

ಕನಸುಗಳು

ಕನಸುಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಿ
ಏಕೆಂದರೆ, ಕನಸುಗಳೇನಾದರೂ ಸತ್ತರೆ
ಬದುಕು ರೆಕ್ಕೆ ಮುರಿದ ಹಕ್ಕಿಯಂತೆ
ಹಾರಲು ಸಾಧ್ಯವಿಲ್ಲ.
ಕನಸುಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಿ
ಏಕೆಂದರೆ, ಕನಸುಗಳು ಮಾಯವಾದಾಗ
ಬದುಕು ಬಂಜರು ಬಯಲಿನಂತಾಗುತ್ತದೆ
ಮಂಜಿನಿಂದ ಹಿಮಗಟ್ಟಿ.

ಮೂಲಕವಿ : ಲ್ಯಾಂಗ್ಸ್ಟನ್ ಹ್ಯೂಗ್ಸ್

ಕನ್ನಡಕ್ಕೆ : ಚಂದಿನ

ಪ್ರಜಾತಂತ್ರ

ಪ್ರಜಾತಂತ್ರ ಬರಲು ಸಾಧ್ಯವಿಲ್ಲ
ಈ ದಿನ, ಈ ವರ್ಷ
ಅಥವಾ ಎಂದೆಂದಿಗೂ
ಭಯ ಮತ್ತು ಯಾವುದೇ ರಾಜಿಯ ಮೂಲಕ.

ನನಗೆ ಅವರಂತೆ ಸಂಪೂರ್ಣ ಹಕ್ಕಿದೆ
ನಿಂತುಕೊಳ್ಳಲು
ನನ್ನ ಸ್ವಂತ ಕಾಲುಗಳ ಮೇಲೆ
ಮತ್ತೆ ನೆಲ ನನ್ನ ಸ್ವಂತದ್ದಾಗಿಸಿಕೊಳ್ಳಲು.

ನನಗೆ ಜನ ಹೀಗೆ ಹೇಳುವುದು ಕೇಳಿದಾಗ ಬೇಸರವಾಗುತ್ತದೆ,
ಅದರ ಪಾಡಿಗೆ ಆದಾಗ ಆಗಲಿ ಬಿಡಿ ಎಂದು.
ನಾಳೆ ಮತ್ತೊಂದು ದಿನ.
ನನಗೆ ಸ್ವಾತಂತ್ರ್ಯ ಬೇಡ, ನಾನು ಸತ್ತಾಗ.
ನಾಳೆಯ ಊಟದಿಂದ ಇಂದು ಬದುಕಲು ನನಗೆ ಆಗುವುದಿಲ್ಲ.

ಸ್ವಾತಂತ್ರ್ಯ
ದೃಢವಾದ ಬೀಜ
ಭಿತ್ತಿರುವುದು
ಪ್ರಬಲ ಅಗತ್ಯದಿಂದಾಗಿ.

ನಾನೂ ಇಲ್ಲಿ ಬದುಕುತ್ತಿದ್ದೇನೆ.
ನನಗೆ ಸ್ವಾತಂತ್ರ್ಯ ಬೇಕು
ನಿಮ್ಮ ಹಾಗೆ.

ಮೂಲಕವಿ : ಲ್ಯಾಂಗ್ಸ್ಟನ್ ಹ್ಯೂಗ್ಸ್
ಕನ್ನಡಕ್ಕೆ : ಚಂದಿನ

Jun 11, 2009

ಮತ್ತೆ ಬರುವನು ಚಂದಿರ - 25

ಜೀವಸೃಷ್ಟಿಯ ಸಾಧ್ಯತೆ ವಿಸ್ಮಯ
ಬದುಕೆಂಬುದೊಂದು ಅತ್ಯದ್ಭುತ
ಈ ಆವಿಸ್ಮರಣೀಯ ಉಡುಗೊರೆ
ಸವಿಯುವುದೇ ಅದೃಷ್ಟ ಚಂದಿರ

ಬಾಲ್ಯ, ತಾರುಣ್ಯ, ಯೌವನ,
ಪ್ರಬುದ್ಧತೆ,ಬದ್ಧತೆ, ಮುದಿತನ
ಎಲ್ಲ ಘಟ್ಟಗಳನ್ನು ಆಸ್ವಾಧಿಸಿ
ಮುಕ್ತಿ ಪಡೆಯೊ ನೀ ಚಂದಿರ

ಬಚ್ಚಿಟ್ಟುಕೊಳ್ಳಲು ಹಾತೊರೆಯುವೆ
ಕೆಟ್ಟು ಕುಲಗೆಟ್ಟಾಗ ಆತಂಕಪಡುವೆ
ಇಷ್ಟಾನಿಷ್ಟಗಳ ಮಧ್ಯೆ ಗೆರೆ ಎಳೆದು
ಸ್ಪಷ್ಟತೆ ನೆರಳಲ್ಲಿ ಅರಳೊ ಚಂದಿರ

ಜಗದಗಲ ನಿನ್ನ ಆಸೆಗಳ ಚದುರಿವೆ
ನಿತ್ಯ ನರಳುವೆ ನಿರೀಕ್ಷೆ ಉಸಿಯಾದರೆ
ಆಸೆ, ನಿರೀಕ್ಷೆಗಳ ಎಲ್ಲೆ ಮೀರಿದಾಗಲೆ
ನೀನು ಹೂವಂತೆ ಅರಳುವೆ ಚಂದಿರ

ಅನನ್ಯ ಜಗದಲ್ಲಿ ಎದೆಯುಬ್ಬಿ ಉಸಿರಾಡು
ಆಗಾಧ ಆಗಸದೆಡೆಗೆ ಹಣೆಯೊಡ್ಡಿ ಹಾಡು
ಆರ್ದ ಆತ್ಮರತಿ ಅನುಭವಿಸಿ ಕುಣಿದಾಡು
ಅಸೂಯೆ ಪಡುವಂತೆ ಚೋರ ಚಂದಿರ

ನಿಮಿಷಗಳ ಲೆಕ್ಕಿಸದೆ ದಶಕಗಳ ಕಳೆದೆ
ಕೂಡಿ, ಕಳೆವ ಲೆಕ್ಕದ ಆಟದಲಿ ಮುಳುಗಿ
ಅತ್ತಿತ್ತ ನೋಡುವ ಅವಕಾಶಗಳು ಕೈಜಾರಿ
ಆತ್ಮ ಹಾರಿ ಹೋಗುವ ಹಕ್ಕಿ ಚಂದಿರ

ಸುಡು ಸುಡು ಬಿಸಿಲಲ್ಲಿ ಬೆವರು ಬತ್ತಿದೆ
ಬಿರುಕು ಬಿಟ್ಟ ನೆಲ ಬೆಂಕಿ ಉಗುಳುತ್ತಿದೆ
ಹಸಿರಿಗೆ ಉಸಿರಿಲ್ಲ ನಿಷ್ಕರುಣ ಧಾರುಣ
ಅಂಧಕಾರ ಮೊಳಗಿರಲು ಇಲ್ಲಿ ಚಂದಿರ

ಬಾಲ್ಯ ಸ್ಮೃತಿಗಳ ಸವಿನೆನಪಿನಿಂದ
ಕಣ್ಣಾಲಿಗಳು ತಂಬಿ ಹರಿಯುತ್ತಿವೆ
ಕಳಚಿರುವ ಕೊಂಡಿಯನು ಕೂಡಿಸುವ
ಬಯಕೆ ತೀರಿಸುವೆಯಾ ನೀ ಚಂದಿರ

ಹುಳಿ, ಒಗರು, ಸಿಹಿ, ಖಾರ ಬಾಳು
ನಡೆ-ನುಡಿಗಳಿಂದ ಸಿದ್ಧಿಸಿದ ಜ್ಞಾನ
ನಿರ್ಧಾರ, ನಿಯಂತ್ರಣ ನೆಪಮಾತ್ರ
ಆತ್ಮತೃಪ್ತಿಗೆ ಸಾಕು ನಗುವ ಚಂದಿರ

ನೆನಪಿನ ದೋಣಿಯಲಿ ತೇಲುವ ಸುಖ
ವಾಸ್ತವಕ್ಕಿಲಿಯಲು ಹಿಂಜರಿಕೆ, ದುಃಖ
ಕನಸು ಕನ್ನಡಿಯಲ್ಲ ಕದಡುವುದು ಬೇಗ
ನೈಜತೆಗೆ ಜೊತೆಯಾಗೊ ಚಂದಿರ

Jun 10, 2009

ಹೌದು ಹೌದು

ದೇವರು ಪ್ರೀತಿಯನ್ನು ಸೃಷ್ಟಿಸಿದಾಗ, ಅವನು ಎಷ್ಟೋ ಜನಕ್ಕೆ ಉಪಯೋಗವಾಗಲಿಲ್ಲ
ದೇವರು ನಾಯಿಗಳನ್ನು ಸೃಷ್ಟಿಸಿದಾಗ, ಅವನು ನಾಯಿಗಳಿಗೆ ಸಹಾಯ ಮಾಡಲಿಲ್ಲ
ದೇವರು ಸಸಿಗಳನ್ನು ಸೃಷ್ಟಿಸಿದಾಗ, ಅದು ಪರವಾಗಿಲ್ಲ ಎನ್ನಬಹುದು
ದೇವರು ದ್ವೇಷ ಸೃಷ್ಟಿಸಿದಾಗ, ನಮ್ಮೆಲ್ಲರಲ್ಲೂ ಅದು ಸದ್ಬಳಕೆಯಾಯಿತು
ದೇವರು ನನ್ನ ಸೃಷ್ಟಿಸಿದಾಗ, ನನ್ನ ಸೃಷ್ಟಿಸಿದ
ದೇವರು ಕೋತಿ ಸೃಷ್ಟಿಸಿದಾಗ, ಅವನು ಮಲಗಿದ್ದ
ಅವನು ಜಿರಾಫೆ ಸೃಷ್ಟಿಸಿದಾಗ, ಕುಡಿದಿದ್ದ
ಅವನು ಮಾದಕ ವಸ್ತುಗಳನ್ನು ಸೃಷ್ಟಿಸಿದಾಗ ಅಮಲಿನಲ್ಲಿದ್ದ
ಮತ್ತವನು ಆತ್ಮಹತ್ಯೆ ಸೃಷ್ಟಿಸಿದಾಗ ಬಹಳ ಬೇಸರದಲ್ಲಿದ್ದ

ಅವನು ಹಾಸಿಗೆಯಲ್ಲಿ ಮಲಗಿ ನಿನ್ನ ಸೃಷ್ಟಿಸಿದಾಗ
ಅವನಿಗೆ ಗೊತ್ತಿತ್ತು ಅವನೇನು ಮಾಡುತ್ತಿದ್ದಾನೆಂದು
ಅವನು ಕುಡಿದು, ಗಾಢ ಅಮಲಿನಲ್ಲಿದ್ದ
ಮತ್ತೆ ಅವನು ಬೆಟ್ಟ, ಸಾಗರ, ಬೆಂಕಿ ಇವೆಲ್ಲವನ್ನು ಒಂದೇ ಸಮಯದಲ್ಲಿ ಸೃಷ್ಟಿಸಿದ

ಅವನು ಕೆಲವು ತಪ್ಪುಗಳನ್ನು ಮಾಡಿದ
ಆದರೆ ಹಾಸಿಗೆಯಲ್ಲಿ ಮಲಗಿ ನಿನ್ನ ಸೃಷ್ಟಿಸಿದಾಗ
ಅವನು ಮತ್ತೊಮ್ಮೆ ಬಂದು, ಅವನ ವಿಶಾಲ ವಿಶ್ವವನ್ನು ಹರಸಿದ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಹಗ್ಗ ಎಳೆಯಿರಿ, ಬೊಂಬೆ ಆಡುತ್ತದೆ

ಪ್ರತಿಯೊಬ್ಬನೂ ತಿಳಿದುಕೊಳ್ಳಬೇಕು
ಎಲ್ಲವೂ ಮಾಯವಾಗಬಹುದೆಂದೂ
ಅತೀ ಶೀಘ್ರದಲ್ಲೇ:
ಆ ಬೆಕ್ಕು, ಮಹಿಳೆ, ಉದ್ಯೋಗ
ಮುಂದಿನ ಟೈರು,
ಹಾಸಿಗೆ, ಗೋಡೆಗಳು, ಕೋಣೆ;
ಹೀಗೇ ನಮಗೆ ಅಗತ್ಯವಿರುವುದೆಲ್ಲವೂ
ಪ್ರೀತಿಯೂ ಸೇರಿ,
ಮರಳಿನ ತಳಪಾಯದಲ್ಲಿ ವಿಶ್ರಮಿಸಬಹುದು –
ಯಾವುದೇ ಕಾರಣಕ್ಕೆ,
ಎಷ್ಟೇ ಅಪ್ರಸ್ತುತವಾದರೂ ಸರಿ:
ಹಾಂಕಾಂಗ್ ನಲ್ಲಿ ಹುಡುಗನ ಸಾವು
ಅಥವಾ ಹಿಮಗಡ್ಡೆಗಳ ಬಿರಗಾಳಿ ಒಮಹಾದಲ್ಲಿ...
ನೀವೇನನ್ನೂ ಮಾಡದಿರುವುದಕ್ಕೆ ನೆಪವಾಗಬಹುದು.
ನಿಮ್ಮ ಚೈನಾವೇರ್ ಎಲ್ಲವೂ ಅಪ್ಪಳಿಸಬಹುದು
ಅಡಿಗೆ ಮನೆಯಲ್ಲಿ, ನಿಮ್ಮ ಕೆಲಸದವಳು ಬರುತ್ತಾಳೆ
ಮತ್ತೆ ನೀವಲ್ಲಿ ನಿಂತಿದ್ದೀರಿ, ಕುಡಿದು,
ಅದರ ಮಧ್ಯದಲ್ಲಿ, ಅವಳು ಕೇಳುತ್ತಾಳೆ:
ಅಯ್ಯೋ ದೇವರೆ, ನಿಮಗೇನಾಯಿತೆಂದು?
ನೀವು ಹೇಳುತ್ತೀರಿ: ನನಗೇನೂ ಗೊತ್ತಿಲ್ಲ,
ನನಗೇನೂ ಗೊತ್ತಿಲ್ಲ...

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಕಲೆ ತರಗತಿಯಲ್ಲಿ ಹಸುಗಳು

ಸುಂದರ ಹವಾಮಾನ
ಸುಂದರ ಮಹಿಳೆಯಂತೆ---
ಇದು ಯಾವಾಗಲೂ ಉದ್ಭವಿಸುವುದಿಲ್ಲ
ಇದು ಜಾಸ್ತಿ ಹೊತ್ತಿರುವುದೂ ಇಲ್ಲ
ಗಂಡಸರೆ
ಹೆಚ್ಚು ಸ್ಥಿರವಾಗಿರುತ್ತಾರೆ:
ಅವನು ಕೆಟ್ಟವನಾಗಿದ್ದರೆ
ಅವನು ಹಾಗೇ ಮುಂದುವರೆಯುವ
ಸಾಧ್ಯತೆ ಹೆಚ್ಚಾಗಿರುತ್ತದೆ,
ಅವನು ಒಳ್ಳೆಯವನಾಗಿದ್ದರೆ
ಹಾಗೇ ಮುಂದುವರೆಯಬಹುದು
ಅದರೆ, ಹೆಣ್ಣು
ಬದಲಾಗುತ್ತಿರುತ್ತಾಳೆ
ಮಕ್ಕಳಿಂದ,
ವಯಸ್ಸಿಂದ,
ಆಹಾರ ವಿಧಾನದಿಂದ,
ಮಾತುಗಳಿಂದ,
ಸಂಭೋಗದಿಂದ,
ಚಂದ್ರನಿದ್ದಾಗ,
ಅವನಿಲ್ಲದಿದ್ದಾಗ, ಅಥವಾ
ಸೂರ್ಯನಿರುವಾಗ,
ಅಥವಾ ಮಧುರ ಕ್ಷಣಗಳಲ್ಲಿ.
ಹೆಣ್ಣನ್ನು ಚೆನ್ನಾಗಿ ಪೋಷಿಸಬೇಕು
ಜೀವಂತವಾಗಿರಲು
ಪ್ರೀತಿಯಿಂದ.
ಎಲ್ಲಿ ಗಂಡಸು
ಬಲಶಾಲಿಯಾಗಬಹುದೊ
ಅವನನ್ನು
ದ್ವೇಷಿಸುವುದರದಿಂದ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಮಳೆಯಿರಲಿ, ಬಿಸಿಲಿರಲಿ

ದಢೂತಿ ಹಕ್ಕಿಗಳು ಪ್ರಾಣಿ ಸಂಗ್ರಹಾಲಯದಲ್ಲಿ
( ಆ ಮೂರೂ ಹಕ್ಕಿಗಳು )
ಕುಳಿತಿವೆ ಮೌನವಾಗಿ
ಅವುಗಳ ಪಂಜರದ ಮರದಲ್ಲಿ
ಕೆಳಗೆ
ನೆಲದ ಮೇಲೆ
ಕೊಳೆತ ಮಾಂಸದ ತುಂಡುಗಳು
ಹಕ್ಕಿಗಳು ಗಂಟಲವರೆಗೆ ಗಡತ್ತಾಗಿ ಮುಕ್ಕಿವೆ.
ನಮ್ಮ ತೆರಿಗೆಗಳು ಅವುಗಳನ್ನು ಚೆನ್ನಾಗಿ
ಪೋಷಿಸುತ್ತಿವೆ.

ನಾವು ಬಂದಾಗ ಮುಂದಿನ
ಪಂಜರದೆಡೆಗೆ
ಅದರೊಳಗೆ ಒಬ್ಬ ವ್ಯಕ್ತಿಯಿದ್ದ
ನೆಲದಲ್ಲಿ ಕುಳಿತುಕೊಂಡು
ತಿನ್ನುತ್ತಿದ್ದ
ಅವನು ಹಾಕಿದನ್ನೇ.
ನಾನು ಅವನನ್ನು ಗುರುತಿಸಿದೆ
ನಮ್ಮ ಪುರಾತನ ಪೋಸ್ಟ್ಮೆನ್ ಎಂದು.
ಅವನ ನೆಚ್ಚಿನ ಹಾರೈಕೆ
ಮೊದಲಿನಿಂದಲೂ:
“ನಿಮ್ಮ ದಿನ ಶುಭಕರವಾಗಿರಲಿ.”

ಆ ದಿನ ಹಾಗೇ ಇತ್ತು.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಬರವಣಿಗೆ

ಎಷ್ಟೋ ಸಲ ಇದೊಂದೇ
ಒಂದು
ನಿನ್ನ ಹಾಗು ಅಸಾಧ್ಯತೆಯ
ನಡುವೆ ಇರುವುದು.
ಯಾವ ಮದ್ಯ,
ಯಾವ ಮಹಿಳೆಯ ಪ್ರೀತಿ,,
ಯಾವ ಸಂಪತ್ತೂ,
ಇದಕ್ಕೆ ಸರಿಸಮವಲ್ಲ

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ತಪ್ಪೊಪ್ಪಿಗೆ

ಕಾಯುತ್ತಿದ್ದೇನೆ ಸಾವಿಗಾಗಿ
ಆ ಬೆಕ್ಕೆನಂತೆ
ಅದು ಜಿಗಿಯುತ್ತಲ್ಲಾ
ಹಾಸಿಗೆ ಮೇಲೆ

ನಾನು ಬಹಳ ದುಃಖತಪ್ತನಾಗಿದ್ದೇನೆ
ಹೆಂಡತಿಗಾಗಿ

ಅವಳಿದನ್ನು ನೋಡುತ್ತಾಳೆ
ಬಿಗಿಯಾದ
ಬಿಳಿ
ದೇಹ
ಒಮ್ಮೆ ಕದಲಿಸುತ್ತಾಳೆ, ನಂತರ
ಇನ್ನೊಂದು ಸಲ
ಕದಲಿಸಬಹುದು

“ಶೇಖರ್”

ಶೇಖರ್ ಉತ್ತರ
ನೀಡಲಿಲ್ಲ.

ನನ್ನ ಸಾವಿನಿಂದಾಗಿ
ಚಿಂತಿಸುತ್ತಿಲ್ಲ, ನನ್ನ ಹೆಂಡತಿಗಾಗಿ,
ತೊರೆದಿದ್ದಾಳಲ್ಲಾ
ಖಾಲಿಯಿದ್ದ
ಈ ಹೊರೆಯನ್ನು.

ಅವಳಿಗೆ ಗೊತ್ತಾಗಬೇಕೆಂದು
ಬಯಸುವೆ
ಎಲ್ಲಾ ರಾತ್ರಿಗಳಲ್ಲಿ
ಅವಳ ಪಕ್ಕದಲ್ಲೇ
ಮಲಗಿದ್ದರೂ

ಕ್ಷುಲ್ಲಕ
ವಾದ-ವಿವಾದಗಳೂ
ಸಹ ಅಮೋಘವಾದ
ಕ್ಷಣಗಳಾಗಿದ್ದವು

ಆ ಕಠಿಣವಾದ
ಮಾತುಗಳು
ನನಗ್ಯಾವಾಗಲೂ
ಹೇಳಲು
ಭಯವಾಗುತ್ತಿತ್ತಲ್ಲಾ
ಅವುಗಳನ್ನು ಈಗ
ನಿರಾಳವಾಗಿ ಹೇಳಬಹುದು:

ನಾ ನಿನ್ನ ಪ್ರೀತಿಸುವೆ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ನೀಲಿಹಕ್ಕಿ

ನನ್ನ ಹೃದಯದಲ್ಲೊಂದು ನೀಲಿಹಕ್ಕಿಯಿದೆ
ಅದು ಹೊರ ಬಂದು ಸ್ವಚ್ಛಂದ ಹಾರಲು ಬಯಸುತ್ತದೆ
ಆದರೆ ನಾನವನಿಗೆ ಬಹಳ ಕಷ್ಟ ಕೊಡುತ್ತೇನೆ
ಹೇಳುತ್ತನೆ, ನೀನಲ್ಲೇ ಬಿದ್ದಿರು, ನಾನೆಂದಿಗೂ
ನಿನ್ನನ್ನು ಬೇರೆ ಯಾರೂ ನೋಡಲು
ಬಿಡುವುದಿಲ್ಲ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಒಳ್ಳೆಯವರಾಗಿರಿ

ನಮಗ್ಯಾವಾಗಲೂ ಹೇಳುತ್ತಾರೆ
ಬೇರೊಬ್ಬರ ಅಭಿಪ್ರಾಯಗಳನ್ನು
ಅರ್ಥಮಾಡಿ ಕೊಳ್ಳಬೇಕೆಂದು
ಅದು ಎಷ್ಟೇ ಹಳೆಯದಾಗಿ,
ಅಪ್ರಸ್ತುತವಾಗಿ, ತಿಳಿಗೇಡಿತನದ್ದಾಗಿ,
ಅಥವಾ ತೀವ್ರ ವಿರೋಧಿಸುವಂಥದ್ದಾಗಿದ್ದರೂ
ಸರಿಯೆ .

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಕವನಗಳ ಹಾದಿಯಲ್ಲಿ

ಕವನಗಳು ಸಾವಿರಗಳ ಗಡಿ ದಾಟುತ್ತಿರುವಂತೆಯೇ
ನಿಮಗನ್ನಿಸುತ್ತದೆ, ನೀವು ಸೃಷ್ಟಿಸಿದ್ದು
ಅತ್ಯಲ್ಪ ಎಂದು.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

Jun 9, 2009

ಚಂದ್ರ, ತಾರೆಗಳು ಮತ್ತು ಜಗತ್ತು

ದೀರ್ಘವಾಗಿ ನಡೆಯುವುದು ರಾತ್ರಿವೇಳೆಯಲ್ಲಿ---
ಬಹಳ ಒಳ್ಳೆಯದು ಜೀವಕ್ಕೆ:
ಕಿಟಕಿಗಳ ಮೂಲಕ ಅಸ್ಪಷ್ಟವಾಗಿ ಕಾಣುವ
ಆಯಾಸಗೊಂಡ ಗೃಹಿಣಿಯರು
ಜಗಳ ನಿಲ್ಲಿಸುವ ಪ್ರಯತ್ನವನ್ನು
ತಮ್ಮತಮ್ಮ ಪಾನಮತ್ತ ಗಂಡಂದಿರೊಂದಿಗೆ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಎಲ್ಲರೊಂದಿಗೂ ಒಬ್ಬಂಟಿ

ಮಾಂಸಖಂಡಗಳು ಎಲುಬುಗಳನ್ನಾವರಿಸುತ್ತವೆ
ಮೆದುಲನ್ನು
ಅಲ್ಲಿಡುತ್ತಾರೆ ಮತ್ತೆ
ಕೆಲವೊಮ್ಮೆ ಆತ್ಮವನ್ನು,
ಹೆಂಗಸರು
ಗೋಡೆಗಳಿಗೆ ಗಾಜಿನ ಗ್ಲಾಸುಗಳನ್ನೊಡೆಯುತ್ತಾರೆ
ಮತ್ತೆ ಗಂಡಸರು ಕುಡಿಯುತ್ತಾರೆ
ಹೇರಳವಾಗಿ
ಯಾರೂ ಕಾಣುವುದಿಲ್ಲ
ಅವನನ್ನು
ಆದರೂ
ನೋಡಲು ಹಾತೊರೆಯುತ್ತಾರೆ
ಮೇಲೆ, ಆಚೆ, ಅತ್ತಿತ್ತ ಒದ್ದಾಡುತ್ತಾ
ಹಾಸಿಗೆಯಿಂದ.
ಮಾಂಸ ಸುತ್ತುವರೆದಿದೆ
ಎಲುಬುಗಳನ್ನು, ಮಾಂಸವು
ಮಾಂಸಕಿಂತಲೂ ಮಿಗಿಲಾದುದಕ್ಕಾಗಿ
ಹುಡುಕುತ್ತಿರುತ್ತದೆ.

ಅಲ್ಲಿ ಅವಕಾಶವಿಲ್ಲ
ಖಂಡಿತ:
ನಾವೆಲ್ಲರೂ ಸೆರೆಯಾಗಿದ್ದೇವೆ
ಒಂದೇ
ವಿಧಿಯಲ್ಲಿ.

ಯಾರೂ ಎಂದಿಗೂ ಕಾಣಲಾರರು
ಅವನನ್ನು.

ನಗರದ ವ್ಯಸನಗಳು ತುಂಬುತ್ತವೆ
ತ್ಯಾಜ್ಯ ಬಯಲುಗಳು ತುಂಬುತ್ತವೆ
ಹುಚ್ಚಾಸ್ಪತ್ರೆಗಳು ತುಂಬುತ್ತವೆ
ವೈದ್ಯಶಾಲೆಗಳು ತುಂಬುತ್ತವೆ
ಸ್ಮಶಾನಗಳು ತುಂಬುತ್ತವೆ

ಬೇರೆ ಯಾವುದೂ
ತುಂಬುವುದಿಲ್ಲ.

ಮೂಲಕವಿ : ಚಾರ್ಲ್ಸ್ ಬುಕೋವ್ಸ್ಕಿ
ಕನ್ನಡಕ್ಕೆ : ಚಂದಿನ

ಹನಿಗಳು – 4

- 1 -

ದಿನಪೂರ ನಾನಿನ್ನ
ಸರದಾರ,
ಮುಸ್ಸಂಜೆಗೆ ನಲ್ಲೆ
ನಾ ಮದ್ಯದ
ಜೊತೆಗಾರ.

- 2 -

ಕೂರು ಕೂರು ಎಂದು
ಮತ್ತೆ ಒತ್ತಾಯಿಸದಿರು ನೀರೆ
ಬಾರೊ, ಬಾರೊ ಎಂದು
ಕರೆಯುತ್ತಿರುವುದು
ಹತ್ತಿರದ ಬಾರೆ.

- 3 -

ವಯಸ್ಸು 30 ಆಗಲಿ,
60 ಆಗಲಿ ಗೆಳೆಯ,
90 ಹಾಕದಿದ್ದರೆ
ಖಂಡಿತ ಪ್ರಳಯ.

- 4 -

ಗಂಡು, ಹೆಣ್ಣು
ನಿಜವಾಗಿ ಸರಿ-ಸಮಾನ,
ಜೊತೆಯಾಗಿ ಮಾಡಿದಾಗ
ಮದ್ಯಪಾನ.

- 5 -

Drink and Driveಗೆ
ಐನೂರು ದಂಡ,
Auto Driverಗೆ
ತಲೆ ದಂಡ.


- 6 -

ಅವನಿಗೆ
ಮೂರೂ ಬಿಟ್ಟಿರಲು
ಸಾಧ್ಯವಾಗಿದ್ದು
ರಾಜಕಾರಣ,
ಮತ್ತೆ
ಮದ್ಯ ಕಾರಣ.

- 7 -

ಕೋಪ ಬಂದಿದ್ದಕ್ಕೆ
ಕುಡಿದಿದ್ದಲ್ಲ
ಸಾರ್.
ಕುಡಿಯಲು
ಕೋಪಗೊಂಡಂತೆ
ನಟಿಸಿದ್ದು.

- 8 -

ನೀನೇನೇ ಮಾಡು
ಸಹಿಸಿಕೊಳ್ಳುವೆ ಸುಮಿತ್ರ.
ಪ್ರತಿಸಂಜೆ ಕುಡಿಯಲು
ನೂರು ರುಪಾಯಿ
ಕೊಟ್ಟಾಗ ಮಾತ್ರ.

- 9 -

ಕುಡಿದಿರುವಾಗ
ಮಡದಿ, ಮಕ್ಕಳ
ಸೌಕ್ಯ.
ಇಲ್ಲದಿದ್ದಾಗ
ನಾನೂ ಒಬ್ಬ
ಅಯೋಗ್ಯ.

- 10 -

ಹಗಲಿಗೇ
ಸೀಮಿತ ನಮ್ಮ
ಸಮಾಗಮ.
ಇರುಳೇರಿದ ಕ್ಷಣ
ಮದ್ಯಕ್ಕಿಲ್ಲ
ವಿರಾಮ.

Jun 8, 2009

ಸಾಲು – 7

- 1 -
ಜೀವಸೃಷ್ಟಿಯು ಆರೋಗ್ಯಕರವಾಗಿ,
ನಿರಂತರವಾಗಿ ಮುನ್ನಡೆಯಲು ಸಾಧ್ಯವಾಗುವುದು,
ಋತುಮಾನಗಳು ಸಹಜವಾಗಿ, ಸ್ವಾಭಾವಿಕವಾಗಿ
ಸಂಭವಿಸುವಾಗ ಮಾತ್ರ.
ಎಂದು ಹೇಳುತ್ತಿದ್ದ ಅದ್ಯಾಪಕ
ದಿಢೀರನೆ ಭಾವುಕನಾಗಿ, ಮೌನವಾಗಿ ಕುಸಿದಿದ್ದೇಕೆಂದು
ಇದುವರೆಗೂ ತಿಳಿಯಲಿಲ್ಲ.


- 2 -
ಸರ್ವಸ್ವವೂ ನಿನ್ನದೇ ಎಂದು ಆರ್ದವಾಗಿ
ಪದೇ ಪದೇ ಹೇಳುತ್ತಿದ್ದ ಚಂಚಲ ಗೆಳತಿ
ಸರ್ವಸ್ವವನ್ನೂ ದೋಚಿ ಪರಾರಿಯಾದ
ನಂತರವೇ ಅದರ ನಿಗೂಢ ಹಿನ್ನಲೆಯ ಪರಿಚಯ
ನನಗೆ ನಿಧಾನವಾಗಿ ಅರ್ಥವಾಗಲಾರಂಬಿಸಿದ್ದು
ಇನ್ನೂ ಅಚ್ಚರಿಯಾಗೇನೂ ಉಳಿದಿಲ್ಲ.

- 3 -
ಪೆಕರು ಪೇದೆಯೊಬ್ಬ,
ಬಡಪಾಯಿ ತರಕಾರಿ ಗಾಡಿಯವನ ಬಳಿ
ಹತ್ತು ರುಪಾಯಿ ಲಂಚ, ಬಿಟ್ಟಿ ತರಕಾರಿಗಾಗಿ
ಜೋರುಮಾಡುತ್ತಾ, ಪೀಡಿಸುತ್ತಾ, ತಾಜಾ ಬಿಕ್ಷುಕನಂತೆ
ಗೋಗರೆಯುತ್ತಿದ್ದದ್ದು ಅವನ ಅನುಭವದ ಕೊರೆತೆಯಿಂದಲೊ,
ಇಲ್ಲಾ ಯಾರಾದರೂ ನೋಡುತ್ತಾರೆಂಬ ಭಯದಿಂದಲೊ?

ಹಾಗೇ,
ಇನ್ನೊಬ್ಬ ಪುಡಾರಿ ಪೇದೆ ಅದೃಷ್ಟ ಕೆಟ್ಟು
ಸಬಲ ಮಹಿಳೆಯ ಮಾಂಗಲ್ಯ ದೋಚಲೆತ್ನಿಸಿದಾಗ,
ಸಿಕ್ಕಿಹಾಕಿಕೊಂಡು, ಧರ್ಮದೇಟಿನ ಪ್ರಸಾದ ಸವಿದ ನಂತರ
ಅಸಹಾಯಕನಂತೆ ನಾನೊಬ್ಬ ಬಡಪೇದೆಯೆಂದು ಮೂದಲಿಸಿದ್ದು
ಅವನ ದಡ್ಡತನವೊ, ಇಲ್ಲಾ ಭಂಡತನವೊ?

- 4 –
ವಿನಾಃಕಾರಣ ಕೋಪಗೊಂಡು,
ಪದೇ ಪದೇ ಮಾತು ಬಿಡುವ ಗೆಳತಿಯೊಬ್ಬಳು
ಯಾವುದಕ್ಕೂ ಪ್ರತಿಕ್ರಿಯಿಸದೆ ನಿರ್ಭಾವುಕನಾಗಿದ್ದಾಗ,
ಒಮ್ಮೆಗೇ ಮೇಲೆರಗಿ ಎದೆಗೆ ಬಲವಾಗಿ ಮುಷ್ಟಿಯಿಂದಾ ಹೊಡೆದೊಡೆದು,
ಗಟ್ಟಿಯಾಗಿ ಅಪ್ಪಿಕೊಂಡು ಗಳಗಳ ಕಣ್ಣೀರಿಟ್ಟಾಗ,
ನನಗೀಗಾಗಲೇ ಮದುವೆಯಾಗಿದೆ ಎಂದು ಹೇಳಲು
ನನ್ನ ಮನಸೇಕೊ ತಡವರಿಸಿದ್ದು ಸುಳ್ಳಲ್ಲ.

ಬಿಂಬ – 30

ಎಲ್ಲಾ ನಿರ್ಣಯಗಳು
ಕೇವಲ ವೈಜ್ಞಾನಿಕ
ದೃಷ್ಟಿಯಿಂದ ನಿರ್ಧರಿಸಿದಾಗ
ಸಾಧಿಸುವುದೇನೆಂದರೆ
ಕ್ರಮೇಣವಾಗಿ
ಮೌಲ್ಯಗಳು ಕರಗಿ,
ಭಾವ, ಬಂಧಗಳು ಮುರಿದು,
ಕೃತಕ ಜಗತ್ತೊಂದು
ನಿರ್ಮಾಣವಾಗುವ
ಸಾಧ್ಯತೆ.

ಬಿಂಬ – 29

ಅಗಾಧತೆಯ
ಅನುಭಾವದಿಂದ
ಅನನ್ಯ ಅನುಭೂತಿ
ಸಿದ್ಧಿಸುತ್ತದೆ.
ಸೃಷ್ಟಿಸಿದ ಅಮೂರ್ತ
ಸಂಕೋಲೆಗಳ
ಕಡಿದು
ಹೊರನುಗ್ಗಿದಾಗ
ಮಾತ್ರ.

ಬಿಂಬ – 28

ಇಡೀ ಜಗತ್ತೇ
ನಮ್ಮದಾಗುವ
ಸಾಧ್ಯತೆಯಿದ್ದಾಗ
ಪುಟ್ಟ ಮನೆಯಲ್ಲಿ
ಸೆರೆಯಾಗಬೇಕೆಂದು
ಹಾತೊರೆಯುವುದು
ದೊಡ್ಡ ವಿಪರ್ಯಾಸ.

ಬಿಂಬ – 27

ಬದುಕೊಂದು
ನಿರಂತರ
ಜೂಜಾಟ
ಇಲ್ಲಿ ಎಲ್ಲರೂ
ಆಡಲೇ ಬೇಕಾದ
ಅನಿವಾರ್ಯ
ಪರಿಸ್ಥಿತಿ.

ಬಿಂಬ – 26

ಸದಾ ಅಮಲಿನಲ್ಲಿರು
ಕಾವ್ಯ, ಸಂಗೀತ
ಅಥವಾ ಸಕಿಯ
ಸಂಗದಲ್ಲಿ,
ಇದ್ಯಾವುದೂ
ಸಾಧ್ಯವಾಗದಿದ್ದರೆ
ಕನಿಷ್ಟ ಮದ್ಯಪಾನದ
ಸಹಾಯದಿಂದಾದರೂ ಸರಿ.

Jun 7, 2009

ಮತ್ತೆ ಬರುವನು ಚಂದಿರ - 24

ವಿನೀತನಾಗಿ ಬೇಡಿ ಪರಿತಪಿಸುವೆ
ಆರ್ದ್ರನಾಗಿ ನಿನ್ನ ಮುಡಿಗೇರುವೆ
ದಿಗ್ಬಂಧನ ತೊರೆದು ಬಳಿ ಬರುವೆ
ಸಾಕ್ಷಿಗಿರುವನು ನಗುವ ಚಂದಿರ

ಒಣ ಜ್ಞಾನದರ್ಪದ ಠೇಂಕಾರ
ಪಾಂಡಿತ್ಯ ಪ್ರದರ್ಶನ ಇಲ್ಲದೆ
ವಿನಯಶೀಲ ಮುಗ್ಧತೆಯೊಂದಿಗೆ
ಮಾದರಿಯಾಗಿರುವನು ಚಂದಿರ

ಮತ್ತೆ ಮತ್ತೆ ಮರು ಪ್ರವೇಶದಿಂದ
ಸಿಕ್ಕುವ ನೋಟ, ದಕ್ಕಿದ ಭಾವ
ವ್ಯಾಪಕ ಆಳ ಅಗಲದ ವಿಸ್ತಾರ
ಮಹತ್ವ ಮನಸಿಗೆ ಚಂದಿರ

ಪರಿಮಳಭರಿತ ಹೂವುಗಳು
ರಸಭರಿತವಾದ ಸಿಹಿ ಹಣ್ಣುಗಳು
ಮಾಗಿ ಉದುರುವವರೆಗೂ
ಯಾರೂ ಕಾಯವುದಿಲ್ಲ ಚಂದಿರ

ಉಪದೇಶಾತ್ಮಕತೆಯ ತೊರೆದು,
ಮಾಹಿತಿಗಳನ್ನು ಮೀರಿದ ಸತ್ವದಿ
ವಾದ ವಿವಾದ ದಾಟಿ ಸಂವಾದದ
ಕಡೆಗೆ ಚಲಿಸೊ ಚಂದಿರ

ಭಾವ, ವಿಚಾರಗಳ ವಿನ್ಯಾಸದಿಂದ
ಆಲಾಪಗಳ ಹೊಸ ತಿರುವುಗಳಿಂದ
ಒಳತೋಟಿಯೊಡನೆ ನಿತ್ಯ ಸರಸ
ಅದ್ಭುತ ಅನುಭವವೊ ಚಂದಿರ

ಮೀಟಿದಾಗ ವಿಪುಲವಾದ ಪ್ರವಾಹ
ವಿಭಿನ್ನ ಸ್ತರದೆತ್ತರದಿ ರಿಂಗಣಿಸುತ
ಹಾಲುಕ್ಕಿಸಿ, ನೊರೆಯೆಬ್ಬಿಸಿ ನಲಿವ
ವಿಶಿಷ್ಟ ಜಲಪಾತ ಜ್ಞಾನ ಚಂದಿರ

ಕೌಶಲ್ಯಗಳ ಸಾತತ್ಯದಿಂದ ಸತತ
ಜ್ಞಾನದಸಿವನ್ನು ಇಂಗಿಸುವ ಪ್ರಯತ್ನ
ಸಾಪೇಕ್ಷಣೀಯವಾದ ಪ್ರೇರಣೆಗೆ
ಆಶ್ರಯ ನೀಡುತಿರುವ ಚಂದಿರ

ಯಜಮಾನಿಕೆಯ ಗತ್ತು ಗತಕಾಲಕಿರಲಿ
ಬೀಸುತನದ ದರ್ಪ ಇತಿಹಾಸವಾಗಲಿ
ಶಿಸ್ತುಬದ್ಧ ಸರಳ ಬದುಕಿನ ಪರಂಪರೆ
ನಿನ್ನ ಇಂದಿನ ಉಸಿರಾಗಲಿ ಚಂದಿರ

Jun 6, 2009

ಬಿಂಬ – 25


ಜ್ಞಾನವಂತರು
ತಮ್ಮ ಅರಿವನ್ನೂ
ಸಾಮಾನ್ಯರಿಗೆ,
ಸಮುದಾಯಕ್ಕೆ
ತಲುಪಿಸದೇ
ಕೇವಲ
ಸ್ವಾರ್ಥ ಸಾಧನೆಗೆ
ಬಳಸಿಕೊಂಡರೆ
ಅವರು ಸಮಾಜದಲ್ಲಿ
ಶತಃಮೂರ್ಖರಿಗಿಂತ
ಭಿನ್ನರಾಗುವುದಿಲ್ಲ.

ಬಿಂಬ – 24


ಬುದ್ಧಿವಂತಿಕೆ,
ಬಲವಾದ ಭಾಷೆ
ಬಳಸುತ್ತಾ
ಶ್ರೇಷ್ಠತೆಯನ್ನು
ಮೆರೆಯುವವರು.
ಕ್ರಮೇಣ
ಸಮುದಾಯದಿಂದ
ಹೊರಗುಳಿದು
ಏಕಾಂಗಿಯಾಗಿ
ನರಳುತ್ತಾರೆ.

ಬಿಂಬ – 23


ಸ್ವಧರ್ಮವನ್ನು
ಬೀಸು ಹೇಳಿಕೆಗಳಿಂದ
ಸತತವಾಗಿ
ನಿಂಧಿಸುತ್ತಾ
ಅನ್ಯ ಧರ್ಮಗಳ
ಒಲಿತನ್ನು ಮಾತ್ರ
ಹೊಗಳುವವರೂ
ಸಹ ಮನುಕುಲಕ್ಕೆ
ಕಳಂಕವನ್ನುಂಟು
ಮಾಡುವವರೆ.

ಬಿಂಬ – 22


ಅನ್ಯ ಧರ್ಮಗಳ
ನಿಂದಿಸುತ್ತಲೇ
ಸ್ವಧರ್ಮದ
ಲೋಪದೋಷಗಳ
ನಿರ್ಲಿಪ್ತ ಮನಸ್ಥಿತಿಯಿಂದ
ಅವಲೋಕಿಸದೆ
ನಿರ್ಣಯಗಳ
ನೀಡುವವರು
ಮಾನವ ಧರ್ಮದ
ವಿರೋಧಿಗಳು.

ಬಿಂಬ – 21


ಯಾವುದೇ
ನಿಬಂಧನೆ,
ನಿರ್ಬಂಧಗಳು
ಇಲ್ಲದೆಯೆ
ವ್ಯಕ್ತಿಗಳನ್ನು
ಒಪ್ಪಿಕೊಳ್ಳುವುದೇ
ಮುಕ್ತ, ಆಪ್ತ
ಮತ್ತು ನಿಜವಾದ
ಪ್ರೀತಿ.

ಬಿಂಬ – 20


ಆಸೆಗಳಿಗೆ,
ಆಶಯಗಳಿಗೆ
ಪೂರಕವಾಗಿ
ಅರ್ಹತೆ,
ಸಾಮರ್ಥ್ಯ,
ಸಂಯಮ
ಸಿದ್ಧಿಸಿಕೊಂಡರೆ
ಅವಕಾಶಗಳ
ಕೊರತೆ
ತೀವ್ರವಾಗಿ
ಕಾಡುವುದಿಲ್ಲ.

ಬಿಂಬ – 19


ಯಾವುದೇ
ವೃತ್ತಿಯಲ್ಲಿ
ಮೇಲು-ಕೀಳೆಂದು
ಭಾವಿಸುವುದು
ಕೇವಲ ಕೀಳು
ಮನಃಸ್ಥಿತಿಯವರ
ಮತಿಹೀನ,
ವಿಕೃತ
ಗ್ರಹಿಕೆಯಷ್ಟೆ
ಹೊರತು,
ಮಾನದಂಡ
ಅಲ್ಲ.

ಬಿಂಬ – 18

ಮಹತ್ತರ
ಮಹತ್ವಾಕಾಂಕ್ಷೆ
ಪೂರಕ
ಪರಿಶ್ರಮದಿಂದ
ಕಾರ್ಯಪ್ರವೃತ್ತರಾಗಿ,
ಸಿದ್ಧಿಸದಿದ್ದರೂ
ಸಾಧನೆಯ
ಸನಿಹ ಸೇರುವ
ಅವಕಾಶ
ಖಂಡಿತ
ಸಾಧ್ಯ.

ಬಿಂಬ – 17

ನಂಬಿಕೆಯೆಂಬುದು
ಅಸಹಾಯಕರಿಗೆ
ಅಂಧಕಾರದಲ್ಲಿ
ಸಂತೈಸುತ್ತಾ
ಹಣತೆ ಹಿಡಿದು
ಹಾದಿ ತೋರುವ
ಆಪ್ತ ಗೆಳೆಯ.

Jun 4, 2009

ಹನಿಗಳು – 3

- 1 -
ಗುಡುಗು, ಮಿಂಚು,
ಸಿಡಿಲು,
ಗೆಳತಿ
ನಿನ್ನ ಮೊಬೈಲ್
ಬಿಲ್ಲು.

- 2 -
ಸೀರೆಯಲ್ಲಿ
ಸೆರೆಯಾದರೆ
ನೀ ಸಕ್ಕರೆ,
ಸೆರೆಯೇರಿಸಿ
ಬಳಿ ಬಂದರೆ
ನಿನ್ನ ತಕರಾರೆ?

- 3 -
ನೊರೆಯುಕ್ಕಿದ
ತಂಪು ಬಿಯರಿನಂತೆ
ಒಗರು,
ನೀನ್ನುಕ್ಕಿಸುವ ಬೆಚ್ಚಗಿನ
ಬೆವರು.

- 4 -
ಕಾದ ಕಾವಲಿ
ಮೇಲೆ ಬೆಣ್ಣೆಯಷ್ಟೇ
ವೇಗವಾಗಿ,
ನಿನ್ನಲ್ಲಿ ಕರಗಿ ಹೋಯಿತಲ್ಲೇ
ನನ್ನ ಯೌವನ.

- 5 -
ನಶೆ ಏರಿದ ನಂತರ
ನೀ ಕಾಣುವೆ ಸುಂದರ,
ಇಲ್ಲದಿದ್ದರೆ ನಮ್ಮ ನಡುವೆ
ಭಾರಿ ಕಂದರ.

- 6 -
ಕುಡಿಯುವುದು
ಬಿಡಲೇ ಬೇಕೆಂದು
ನೀನು ಹಂಬಲಿಸುವೆ,
ನಿನ್ನ ಬಿಡಲೇ ಬೇಕೆಂದು
ದಿನಾ ಕುಡಿಯುವೆ.

- 7 -
ಮೊದಲ ವಾರದಲ್ಲೇ
ಖಾಲಿ ನಿನ್ನ ಪ್ರೀತಿ,
ಕೊನೆಯ ವಾರದವರೆಗೂ
ನನಗೆ ಭಾರೀ ಭೀತಿ.

- 8 -
ಇಸ್ಪೀಟು ಆಡಿದರೆ
ಸರ್ವನಾಶವೆಂದೇಕೆ
ನೀ ಜರಿಯುವೆ.
ನಿನ್ನ ಮದುವೆಯಾದ
ಕೂಡಲೆ ನಾಶವಾದೆನೆಂದು
ನಾನರಿತಿರುವೆ.

- 9 -
ಮಿಸ್ಡ್ ಕಾಲ್ಸ್ ಕೊಡುವುದು
ನಿನ್ನ ಅಭ್ಯಾಸ,
ಪ್ರತಿ ಕರೆ ನೀಡದಿರುವುದು
ನನ್ನ ದುರಭ್ಯಾಸ.

- 10 -
ಕುಡಿದಾಗ ಮಾತ್ರ
ನವಾಬ,
ಇಲ್ಲವಾದರೆ ನಾನೂ
ಗರೀಬ.

ಬಿಂಬ – 16

“ಶುದ್ಧ ಪ್ರಾಮಾಣಿಕತೆ
ಶುದ್ಧ ಮೂರ್ಖತನ”
ತಪ್ಪಿದ್ದರೆ ಕ್ಷಮಿಸಿ.

ಬಿಂಬ – 15

ಅಮೂರ್ತ ನರಕದ
ಮೂರ್ತ ಪ್ರತಿರೂಪಗಳ
ಕಡೆಗೆಣಿಸುತ್ತಾ ಕೇಡಿನ
ಕಾರ್ಯದಲ್ಲಿ ಮಗ್ನರಾಗಿ
ಮೈಮರೆತ ಸಂದರ್ಭದಲ್ಲಿ
ಪ್ರಕೃತಿಯ ವಿಕೋಪವು
ರುದ್ರ ತಾಂಡವವಾಡತ್ತದೆ.

ಬಿಂಬ – 14

ಸುಭದ್ರ,
ಸುಖಕರ,
ಮತ್ತು ಸಂತಸದ
ಭವಿಷ್ಯಕ್ಕಾಗಿ
ಈ ಸುಂದರ
ವರ್ತಮಾನ
ವ್ಯರ್ಥ
ಮಾಡುವುದು
ಶುದ್ಧ
ಮೂರ್ಖತನ.

ಬಿಂಬ – 13

ಹಣವೆಂಬುದು
ಎಲ್ಲರಿಗೂ ಅತ್ಯಗತ್ಯ
ಆದರೆ, ಎಷ್ಟು ಎಂಬುದರ
ಸ್ಪಷ್ಟ ತಿಳುವಳಿಕೆಯೊಂದಿಗೆ,
ಅದಕ್ಕೆ ಬದ್ಧನಾಗಿರದಿದ್ದರೆ,
ಬದುಕು ಪಾದರಸದಂತೆ
ಜಾರಿ ಹೋಗುವುದು
ನಿಸ್ಸಂಶಯ.

ಬಿಂಬ – 12

ತಂತ್ರಜ್ಞಾನದ
ಅಗತ್ಯತೆ ಎಷ್ಟು,
ಹೇಗೆ, ಏಕೆ, ಮತ್ತು
ಯಾವುದು, ಯಾವಾಗ
ಎಂಬುದರ ಸ್ಪಷ್ಟ ಅರಿವು
ಮತ್ತೆ ನಿಲುವು ಇಲ್ಲದಿದ್ದರೆ
ಭರಿಸಲಾಗದ ನಷ್ಟ
ಮನುಕುಲಕ್ಕೆ
ಶತಃಸಿದ್ಧ.

ಬಿಂಬ – 11

ಅಸಹಾಯಕರಿಗೆ
ಮತ್ತು ಅಸಮರ್ಥರಿಗೆ
ಸಹಾಯ ಮಾಡುವ
ಸಾಮರ್ಥ್ಯವೊಂದಿದ್ದೂ,
ಇಚ್ಛಾಸಕ್ತಿಯ ಕೊರತೆಯಿಂದಾಗಿ,
ಅಥವಾ ಸ್ವಾರ್ಥದಿಂದಾಗಿ
ಸಾಧ್ಯವಾದಷ್ಟಾನ್ನಾದರೂ
ಮಾಡದಿರುವುದೊಂದು
ಅಕ್ಷಮ್ಯ ಅಪರಾಧ
ಮತ್ತು ವಿಕೃತಿ.

ಬಿಂಬ – 10

ಸಾಧನೆಯ
ಸಾಧ್ಯತೆ ಎಂಬುದು
ಯಾವುದೇ ವ್ಯಕ್ತಿಯ
ಸರ್ವತೋಮುಖವಲ್ಲ
ಕೇವಲ ಕೆಲವೊಂದು
ಕ್ಷೇತ್ರಗಳಿಗಷ್ಟೇ
ಸೀಮಿತ.

ಬಿಂಬ – 9

ಕೋಪವೆಂಬುದು
ಯಾರಿಗೂ ಬೇಡದ,
ಎಲ್ಲರೂ ದ್ವೇಷಿಸುವ,
ನಿಯಂತ್ರಿಸಲು ಬಯಸಿ
ಸಂಪೂರ್ಣವಾಗಿ
ಯಶಸ್ಸಾಗದಿರುವುದು.
ಮತ್ತೆ ನಿಂರತರವಾಗಿ
ನಮ್ಮನ್ನು ಬಾಧಿಸುವ
ಒಂದು ದೊಡ್ಡ
ಕಾಯಿಲೆ.

ಬಿಂಬ – 8

ಪ್ರಾಮಾಣಿಕತೆ
ಎಂಬುದು ಎಲ್ಲರೂ
ಎಲ್ಲ ಸನ್ನಿವೇಶದಲ್ಲೂ
ಶೇಕಡಾ ನೂರರಷ್ಟು
ಅನುಸರಿಸದೆ/ಲಾಗದೆ
ಎಲ್ಲರಲ್ಲೂ ಅಪೇಕ್ಷಿಸುವ
ಮತ್ತು ನಿರೀಕ್ಷಿಸುವ
ಸದ್ಗುಣ.

Jun 3, 2009

ಸಾಲು – 6

- 1 -
ಆ ರಸ್ತೆ ಬದಿಯಲ್ಲಿ,
ಹೋಡಾಡುತ್ತಿರುವ ಜನರ ಸಮಕ್ಷಮದಲ್ಲೇ,
ಎಂಬತ್ತರ ಹರಯದ ಮುದುಕಿಯೊಬ್ಬಳು
ದುಷ್ಟ ಮಂತ್ರಿಯ ಪೋಸ್ಟರಿಗೆ
ಕ್ಯಾಕರಿಸಿ ಉಗಿದು ಗೊಣಗುತ್ತಿರುವುದನ್ನು
ಪ್ರಾಜಾಪ್ರಭುತ್ವದ ಸಾಧನೆಯೆನ್ನುವಿರೊ,
ಅಥವಾ ಅದರ ಅಣಕವೊ?

- 2 -
ಮಡದಿಯನ್ನು ಗಾಢವಾಗಿ ಮೋಹಿಸುವ
ಉನ್ಮತ್ತತೆಯಲ್ಲಿ, ಹಠಾತ್ತನೆ ಅವಳ ಕಿವಿಗೆ
ಗೆಳತಿಯ ಹೆಸರನ್ನು ಪಿಸುಗೊಟ್ಟಿದ್ದು,
ಅಂಧ ಪ್ರೇಮದ ಪ್ರತೀಕವೊ,
ಇಲ್ಲಾ ಅವನ ಅಂಧಕಾರವೊ?

- 3 -
ಎಲ್ಲ ಪಕ್ಷದ ನಾಯಕರು ಹೇರಳವಾಗಿ
ಹಂಚಿದ ಹೆಂಡ, ಹಣ, ಬಳುವಳಿಗಳನ್ನು
ವಿನಮ್ರವಾಗಿ, ಖುಷಿಯಾಗಿ ಸ್ವೀಕರಿಸಿದ ಮತದಾರ,
ನಂತರ ಎಲ್ಲರನ್ನೂ, ಎಲ್ಲವನ್ನೂ ಧಿಕ್ಕರಿಸಿ,
ತನ್ನಿಚ್ಛೆಯಂತೆ ಮತ ಚಾಲಾಯಿಸಿದ್ದು
ಅವನ ಧೀಮಂತಿಕೆಯ ಪ್ರತೀಕ ಅಲ್ಲವೆ?

- 4 -
ಅಲ್ಲಿ, ಕಳ್ಳಬಟ್ಟಿ ಸೆರೆಯೇರಿಸಿದ ಕಡು ಬಡವ
ಹಾದಿಯಲ್ಲೆಲ್ಲಾ ಸ್ವಚ್ಛಂದ ಹಾಡಿ ಕುಣಿದು
ಪಡೆಯುವ ಪರಮ ಸುಖ.
ಇಲ್ಲಿ, ಉತ್ಕೃಷ್ಟ ವಿದೇಶೀ ಮದ್ಯ ಸೇವಿಸಿದ
ಶ್ರೀಮಂತ ಏರಿದ ಅಮಲನ್ನು
ನಿಯಂತ್ರಿಸಲು ಪರದಾಡುವ ಸನ್ನಿವೇಶ
ವಿಪರ್ಯಾಸ ಅಲ್ಲವೆ?

Jun 1, 2009

ಮತ್ತೆ ಬರುವನು ಚಂದಿರ - 23

ಸುಪ್ತ ಮನಸಿನ ಸಂವೇದನೆ
ಭಾವಸ್ತರಗಳ ಕದವ ತೆರೆದು
ವಾಸ್ತವಗಳಿಗೆ ಸ್ಪಂದಿಸಿದರೆ
ಮುದಗೊಳ್ಳುವನೊ ಚಂದಿರ

ಕಣ್ಣಾಮುಚ್ಚಾಲೆಯಾಟ ತರವಲ್ಲ
ಎದುರುಗೊಳ್ಳುವ ಸ್ಥೈರ್ಯವಿರಲಿ
ಸೋಗುಹಾಕುವ ಸರದಿ ಬೇಡ
ಸೋತು ಹೋಗುವೆ ಚಂದಿರ

ತಂತ್ರಗಾರಿಕೆ ಸತತ ಸರಿಯೆ
ಯಂತ್ರ, ಮಂತ್ರಗಳೆಲ್ಲ ವ್ಯರ್ಥ
ಸಹಜ ಒಲವೇ ಬದುಕಿನ ಅರ್ಥ
ಈ ನಿಜವನರಿಯೊ ಚಂದಿರ

ಮುಖವಾಡ ತೊರೆಯೊ ಸ್ನೇಹಿತ
ಕೃತಕ ಕುಣಿತದ ಅಮಲು ವಿಕೃತ
ಅಂತರಾಳದ ಸಲಹೆಗಳ ಪಾಲಿಸು
ಒಳ ಜಗವು ನಗುವುದು ಚಂದಿರ

ನೋವು, ನಷ್ಟ, ದುಮ್ಮಾನಗಳ ನಡುವೆ
ನಿಲ್ಲದೇ ಸಾಗಲಿ ಹೋರಾಟ ಎಂದಿಗೂ
ಹಿತ, ಮಿತವಾಗಿ ಸಿಗುವ ಹಿತಾನುಭಾವ
ಬದುಕಿಗೆ ತೃಪ್ತಿ ಪಡೆಯಲು ಚಂದಿರ

ಆರಿಹೋಗುತ್ತಿದೆ ಸಂಸಾರದ ಹಣತೆ
ಸೋರಿಹೋಗುತ್ತಿದೆ ನಶ್ವರ ಬದುಕು
ಹಲಸಿಹೋಗುತ್ತಿವೆ ಸಂಬಂಧ, ಸ್ನೇಹಗಳು
ಸಲಹೆ ನೀಡೊ ಚಂದಿರ

ಮೃತ್ಯುಪ್ರಜ್ಞೆಯ ನೀಡಿದ ಅರಿವು
ವ್ಯರ್ಥವಾದ ಬದುಕಿನ ಪಯಣ
ಅಂತ್ಯದಲ್ಲಿಯೂ ಈ ಪಾಪಪ್ರಜ್ಞೆ
ಕಾಡುತಿರುವುದೊ ಚಂದಿರ

ವಿಫಲ ಜೀವನದ ಚಿತ್ರಣಗಳೆ
ಸತತ ನುಸುಳಿ ಕೆದಕುತಿರಲು
ಆತ್ಮಸಾಕ್ಷಿ ಎಸೆದ ಪ್ರಶ್ನೆಗಳನ್ನು
ತಿರಸ್ಕರಿಸಿದ ಪ್ರತಿಫಲವಿದು ಚಂದಿರ

ಪ್ರಕೃತಿಯೊಡನೆ ತಾದ್ಯಾತ್ಮ ಭಾವ
ಆತ್ಮಜ್ಞಾನದ ಬಲವಿರಲು ಜೊತೆಗೆ
ಎಲ್ಲಾ ವಿಕೃತಿಗಳನ್ನು ಮೆಟ್ಟಿ ನಿಲ್ಲುವ
ಸಾಧ್ಯತೆ ಇದೆಯೊ ಚಂದಿರ

ಬಾಳಿನ ಅಸಾಂಗತ್ಯ, ಅಪೂರ್ಣತೆ,
ನಿರಂತರತೆಯೊಳಗಿನ ಸಾರ್ಥಕತೆ
ಹುಟ್ಟು, ಸಾವಿನ ಅಂತರದಲ್ಲಿ ಬದುಕು
ಅರ್ಥಪೂರ್ಣವಾಗಿರಲಿ ಚಂದಿರ

ಸಾಲು - 5

- 1 -
ಮದ, ಮತ್ಸರ, ಕಾಮ, ಕ್ರೋಧ,
ಲೋಭ, ವ್ಯಾಮೋಹ ಮತ್ತು ಛಲ
ಇವುಗಳನೆಲ್ಲಾ ತೊರೆಯಬೇಕು
ಎನ್ನುವುದು ಶಿಷ್ಟರ ಸಲಹೆ.
ಆದರೆ, ಇವೆಲ್ಲವನ್ನು ತೊರೆದ ಮೇಲೆ
ಮನುಷ್ಯನಾಗಿ ಉಳಿಯುವ
ಸ್ಪಷ್ಟ ಸಾಧ್ಯತೆ ಅಥವಾ ಅರ್ಹತೆ ಇದೆಯೆ?

- 2 -
ಮದುವೆಯಾದ ಮೇಲೆ ಬೇರೆಯವರನ್ನು
ಬಯಸಬಾರದೆನ್ನುವುದು ಸಾಪೇಕ್ಷವಾದರೂ.
ಇಲ್ಲವೆಂದು ಯಾರಾದರೂ ದಿಟ್ಟ ಉತ್ತರ ಕೊಟ್ಟರೆ
ಸೋಗುಹಾಕುತ್ತಿದ್ದಾರೆಂಬುದು ಶೇಕಡಾ ನೂರರಷ್ಟು
ನಿಸ್ಸಂಶಯ ಅಲ್ಲವೆ?

- 3 -
ಪರಿಮಳ ಭರಿತ ಗುಲಾಬಿಯೊಂದು
ಚಿರಯೌವನದಲ್ಲಿ ತೇಲಾಡುತ್ತಾ
ಸಂದಿಗ್ಧ ಸನ್ನಿವೇಶದಲ್ಲಿ ಸಿಲುಕಿದೆ.
ಮೊದಲು ಅವಳ ಮುಡಿಗೆ ಮುತ್ತಿಡಲೊ,
ಅಥವಾ ಅವನ ಹೃದಯವನ್ನಪ್ಪಿಕೊಳ್ಳಲೊ
ಎಂಬುದರ ತೀವ್ರ ಗೊಂದಲದಲ್ಲಿ.
ಇದು ಸಮಯಾಭಾವದ ಸೃಷ್ಟಿ ಇರಬಹುದೆ?

- 4 -
ತುಂಟ ಬೇಟೆಗಾರನ ಬಂದೂಕಿನ ಗುಂಡಿಗೆ
ಉರುಳಿ ಬಿದ್ದಿದೆ ಒಂದು ಸಾಧು ಜಿಂಕೆ
ಕಾನೂನಿನ ಕಣ್ಣಿಗೆ ಸಿಕ್ಕಿಬಿದ್ದ ನಂತರ
ಅವನು ಆತ್ಮಸಂರಕ್ಷಣೆಗೆ ಎಂದು ಬೊಬ್ಬೆಯಿಟ್ಟದ್ದು
ದೊಡ್ಡ ವಿಪರ್ಯಾಸ ಅಲ್ಲವೆ?

May 31, 2009

ನೀ ನನ್ನ ಮರೆತರೆ

ನಿನಗೆ ಗೊತ್ತಿರಲೆಂದು ಬಯಸುವೆ
ಈ ವಿಷಯ.

ನಿನಗೆ ಗೊತ್ತಿದೆ ಅದು ಹೇಗೆಂದು:
ನಾನೇನಾದರು ನೋಡಿದರೆ
ಪಾರದರ್ಶಕ ಗಾಜಿನಂತೆ ಹೊಳೆವ ಚಂದ್ರನನ್ನು, ನನ್ನ ಕಿಟಕಿಯ ಹತ್ತಿರವಿರುವ
ದೀರ್ಘ ಶಿಶಿರದ ಕೊನೆಗೆ ಕೆಂಪಾಗಿರುವ ರೆಂಬೆಯನ್ನು,
ನಾನೇನಾದರು ಮುಟ್ಟಿದರೆ
ಬೆಂಕಿಯ ಹತ್ತಿರ
ಗ್ರಹಿಸಲಾಗದ ಬೂದಿಯನ್ನು
ಅಥವಾ ಬಿರುಕು ಬಿಟ್ಟ ಹೆಮ್ಮರದ ಕಾಂಡವನ್ನು,
ಎಲ್ಲವೂ ನನ್ನನ್ನು ಕೊಂಡೊಯ್ಯುತ್ತವೆ ನಿನ್ನಲ್ಲಿಗೆ,
ಸುಗಂಧ ದ್ರವ್ಯಗಳು, ಬೆಳಕು, ಲೋಹಗಳು,
ಆ ಪುಟ್ಟ ನಾವೆಗಳು
ತೇಲಿ ಬರುತ್ತಿವೆ
ನಿನ್ನ ಸಣ್ಣ ದ್ವೀಪಗಳೆಡೆಗೆ, ಅಲ್ಲಿ ಬಂದು ನನಗಾಗಿ ಕಾಯುತ್ತಿರುತ್ತವೆ.

ಇರಲಿ, ಈಗ,
ನೀನೇನಾದರೂ ಸ್ವಲ್ಪ ಸ್ವಲ್ಪವೇ ನನ್ನ ಪ್ರೀತಿಸುವುದನ್ನು ನಿಲ್ಲಿಸಿದರೆ
ನಾನೂ ಸಹ ಸ್ವಲ್ಪ ಸ್ವಲ್ಪವೇ ನಿನ್ನ ಪ್ರೀತಿಸುವುದನ್ನು ನಿಲ್ಲಿಸುತ್ತೇನೆ.

ಒಮ್ಮೆಗೇ ನೀನೇನಾದರೂ
ನನ್ನ ಮರೆತು ಬಿಟ್ಟರೆ
ಮತ್ತೆ ನನಗಾಗಿ ಹುಡುಕಾಡುವ ಅಗತ್ಯವಿಲ್ಲ
ಏಕೆಂದರೆ ನಾನಾಗಲೇ ನಿನ್ನನ್ನು ಮರೆತು ಬಿಟ್ಟಿರುತ್ತೇನೆ.

ಇದು ಬಹಳ ಅತಿಯಾಯ್ತು ಹಾಗೇ ಹುಚ್ಚೆಂದು ನೀನು ಭಾವಿಸಿದರೆ,
ಗಾಳಿಯಲ್ಲಿ ತೂಗಾಡುತ್ತಿರುವ ಬ್ಯಾನರುಗಳು
ನನ್ನ ಬದುಕಿನ ಮುಖಾಂತರ ನುಸುಳಿ ಮುನ್ನುಗ್ಗುತ್ತಿವೆ,
ಮತ್ತೆ ನೀನೇ ನಿರ್ಧರಿಸು
ನನ್ನ ದಡಕ್ಕೆ ತಂದು ಬಿಡಲು
ಆ ಹೃದಯದಲ್ಲೇ ನಾನು ಬೇರು ಬಿಟ್ಟಿದ್ದೇನೆ,
ನೆನಪಿರಲಿ
ಅಂದು ಆ ದಿನದಂದು,
ಆ ಘಳಿಗೆಯಲ್ಲಿ,
ನನ್ನ ತೋಳುಗಳನ್ನೆತ್ತಿ
ಮತ್ತು ನನ್ನ ಬೇರುಗಳನ್ನು ಮುಕ್ತಗೊಳಿಸಿ
ಮತ್ತೊಂದು ಪ್ರದೇಶಕ್ಕಾಗಿ ಬೇಡಿಕೊಂಡಾಗ.

ಆದರೆ
ಒಂದು ವೇಳೆ ಪ್ರತೀ ದಿನವೂ,
ಪ್ರತೀ ಘಳಿಗೆಯೂ,
ನಿನಗನ್ನಸಿದರೆ ನೀನು ನನಗಾಗಿಯೇ ಹುಟ್ಟಿ ಬಂದಿರುವುದೆಂದು
ಯಥೇಶ್ಚವಾದ ಕೋಮಲ ಸೊಗಸಿನಿಂದ,
ಪ್ರತಿ ದಿನ ಹೂವೊಂದೇನಾದರೂ
ನಿನ್ನ ಕೆಂದುಟಿಯೆಡೆಗೆ ಏರಿ ಬಂದು ನನಗಾಗಿ ಕೇಳಿದರೆ,
ಹಾ.. ನನ್ನ ಪ್ರೀತಿಯೆ, ಹಾ... ನನ್ನ ಸರ್ವಸ್ವವೆ,
ನನ್ನಲ್ಲಿ ಮತ್ತೆ ಆ ಎಲ್ಲಾ ಕಿಚ್ಚು ಮರುಕಳಿಸುತ್ತದೆ,
ನನ್ನೊಳಗೆ ಯಾವುದೂ ನಾಶವಾಗಲಿಲ್ಲ ಅಥವಾ ಮರೆತು ಹೋಗಲಿಲ್ಲ,
ನನ್ನ ಪ್ರೀತಿಯು ನಿನ್ನ ಪ್ರೀತಿಯಿಂದಲೇ ಜೀವಂತವಾಗಿದೆ, ನನ್ನ ಜೀವವೇ, ನನ್ನ ಆತ್ಮವೇ,
ಮತ್ತೆ ನಿನ್ನ ಕೊನೆಯುಸಿರು ಇರುವವರೆಗೂ ಅದು ನಿನ್ನ ತೋಳುಗಳಲ್ಲಿಯೇ ನೆಲೆಸಿರುತ್ತದೆ,
ನನ್ನ ತೋಳುಗಳನ್ನು ಬಿಡದೆ.

ಮೂಲ ಕವಿ: ಪ್ಯಾಬ್ಲೊ ನೆರುದ
ಕನ್ನಡಕ್ಕೆ : ಚಂದಿನ

May 29, 2009

ಬಿಂಬ – 7

ನ್ಯೂನತೆಗಳು
ಮಾನವನಿಗೆ
ಸಹಜ
ಹಾಗು
ಸ್ವಾಭಾವಿಕ.
ಅವುಗಳ
ನಿಯಂತ್ರಣ
ಸಾಧ್ಯ,
ನಿಷೇಧ
ಅಸಾಧ್ಯ.

ಬಿಂಬ – 6

ಮಾನವ
ಮಾನವೀಯತೆಯ
ಜೊತೆಗೆ
ಸಾಮಾನ್ಯ
ಮಾನವನಾಗಿ
ಬದುಕುವುದೇ
ಅತಿದೊಡ್ಡ
ಸಾಧನೆ.

ಬಿಂಬ – 5

ಬದುಕಿಗೆ
ಅತಿಮುಖ್ಯ,
ಅತ್ಯಗತ್ಯ,
ಅನಿವಾರ್ಯ
ಎಂಬುದು
ಎಲ್ಲರಿಗೂ
ನಿಷ್ಪಕ್ಷಪಾತವಾಗಿ
ಲಭ್ಯ.

ಬಿಂಬ – 4

ಬದುಕಲ್ಲಿ
ಸೋಲು,
ಗೆಲುವಿಗೆ
ಖಚಿತ
ಅರ್ಥವಿಲ್ಲ
ಅದು
ಅವರವರ
ಊಹೆಗೆ,
ಹೋಲಿಕೆಗೆ,
ಸಾಮರ್ಥ್ಯಕ್ಕೆ
ಸೀಮಿತ.

ಬಿಂಬ – 3

ಪರಿಶುದ್ಧ
ಪ್ರೀತಿ
ಎಂಬುದು
ಕೇವಲ
ಒಂದು
ಸುಂದರ
ಪರಿಕಲ್ಪನೆ.

ಬಿಂಬ - 2

ಶ್ರೇಷ್ಠತೆ
ಎಂಬುದು
ಮಾನವ
ಎಂದಿಗೂ
ತಲುಪದ
ಅಂತಿಮ
ಘಟ್ಟ

May 28, 2009

ವಿಪರ್ಯಾಸ

ನೋಡಿ,
ಎಷ್ಟು ಸಹಜವಾಗಿ ಮುಸ್ಸಂಜೆಯ ನಂತರ
ಮುಂಜಾವು ಹಾಗೇ ಜಾರಿ ಹೋಗುತ್ತಿರುತ್ತದೆ.
ಆದರೆ,
ನಾನು ತುಂಬಾ ಇಷ್ಟ ಪಡುವುದು ಇನ್ನೂ ಸಿಗಲೇ ಇಲ್ಲ,
ಹಾಗೇ ಬಹಳ ದ್ವೇಷಿಸುವುದು ಇನ್ನೂ ತೊಲಗಲೂ ಇಲ್ಲ.

ನೊಣ

ದೇವರು ಅವನ ಬುದ್ಧಿವಂತಿಕೆಯಿಂದ
ನೊಣವನ್ನು ಸೃಷ್ಟಿಸಿದ
ತದನಂತರ,
ಏಕೆಂದು
ನಮಗೆ ಹೇಳುವುದ
ಮರೆತ

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

ಕೆಡುಕು ಮಾಡುವವರ ಸೂಕ್ಷ್ಮ ಅವಗಾಹನೆಗೆ

ಆತ್ಮಸಾಕ್ಷಿಯ ಪ್ರಖರ ಪ್ರಭಾವವೊಂದಿದವನು
ಅವೈಜ್ಞಾನಿಕತೆಯ ಬಗ್ಗೆ ಬಹುವಾಗಿ ಚಿಂತಿಸುತ್ತಾನೆ;
ಯಾವುದೇ ಮೌಲ್ಯಗಳ ಅಥವಾ ನೈತಿಕತೆಯ
ಪ್ರಭಾವದ ಲಾಭ ಪಡೆಯದಂಥವನ
ತುಂಟತನ ಮತ್ತು ಅವನ ವರಮಾನ
ಬಹುಬೇಗ ನಾಲ್ಕುಪಟ್ಟು ಬೆಳೆದಿರುತ್ತದೆ.

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

ಬಿಂಬ - 1

ಶುದ್ಧತೆ
ಎಂಬುದು
ಮಾನವ
ಶೋಧನೆ
ಮಾಡಲಾಗದ್ದು.

ದುಷ್ಟ ಪ್ರಪಂಚಕ್ಕೊಂದು ಪ್ರತಿಬಿಂಬ

ಪರಿಶುದ್ಧತೆ ಎಂಬುದು
ತಿಳುವಳಿಕೆಗೆ ನಿಲುಕದ್ದು.

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

ನನ್ನ ಕನಸು

ಇದು ನನ್ನ ಕನಸು,
ಇದು ನನ್ನ ಸ್ವಂತದ ಕನಸು,
ನಾನೇ ಅ ಕನಸು ಕಂಡದ್ದು.
ನಾ ಕನಸು ಕಂಡೆ, ನನ್ನ ಕಾಂತಿಯುಕ್ತ ಕೂದಲನ್ನು ಸೊಗಸಾಗಿ, ಸ್ವಚ್ಛವಾಗಿ ಬಾಚಿದ್ದೇನೆಂದು.
ನಂತರ, ಮತ್ತೊಂದು ಕನಸು ಕಂಡೆ ನನ್ನ ನಿಜವಾದ ಪ್ರೀತಿ
ನನ್ನ ಕೂದಲನ್ನು ಯದ್ವಾತದ್ವಾ ಕೆಡಿಸಿ, ಯರ್ರಾಬಿರ್ರಿ ಉದುರಿಸಿ ಬಿಟ್ಟಿದ್ದಾಳೆಂದು.

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

ಜನರ ಬಗ್ಗೆ ಮತ್ತಷ್ಟು

ಜನರು ಯಾವಾಗ ಪ್ರಶ್ನೆಗಳನ್ನು ಕೇಳುವುದಿಲ್ಲವೋ
ಆಗ ಅವರು ಸಲಹೆಗಳನ್ನು ನೀಡುತ್ತಿರುತ್ತಾರೆ
ಮತ್ತೆ ಇವೆರಡರಲ್ಲಿ ಯಾವುದನ್ನೂ ಮಾಡದಿದ್ದಾಗ
ಅವರು ನಿಮ್ಮ ಭುಜಗಳ ಮೇಲೆ ನೋಡುತ್ತಿರುತ್ತಾರೆ ಅಥವಾ ನಿಮ್ಮ ಹೆಬ್ಬೆರಳ ಮೇಲೆ ತುಳಿಯುತ್ತಿರುತ್ತಾರೆ
ಆಮೇಲೆ ನಿಮಗೆ ಕೋಪ ಬರಿಸಲು ಇದೆಲ್ಲ ಸಾಲದೆಂಬಂತೆ
ಅವರು ನಿಮ್ಮನ್ನು ಕೆಲಸಕ್ಕಿಟ್ಟುಕೊಳ್ಳುತ್ತಾರೆ.
ಯಾರಾದರೂ ಸುಮ್ಮನಿರುವಾಗ
ಎಲ್ಲರ ಕೆಂಗಣ್ಣಿಗೂ ಗುರಿಯಾಗಬೇಕಾಗುತ್ತದೆ.
ಇದು ತುಂಬಾ ಮುಜುಗರ ಉಂಟುಮಾಡುವಂತೆ ತೋರಬಹುದು
ಕೆಲಸ ಮಾಡುವವರಿಗೆ, ಕೆಲಸ ಮಾಡದವರನ್ನು ಕಂಡಾಗ,
ಅದಕ್ಕೆ, ಅವರು ಹೇಳುತ್ತಾರೆ ಕೆಲಸವೆಂಬುದು ಅದ್ಭುತ ಔಷದಿಯೆಂದು,
ಒಂದು ಕ್ಷಣ ಇವರನ್ನು ನೋಡಿ ಫೈರ್ಸ್ಟೋನ್, ಫೋರ್ಡ್, ಎಡಿಸನ್,
ಮತ್ತೆ ಅವರು ಉಪದೇಶ ನೀಡುತ್ತಲೇ ಇರುತ್ತಾರೆ ಉಸಿರು ನಿಲ್ಲುವವರೆಗೂ, ಅಥವಾ ಏನಾದರೂ
ನೀವೇನಾದರೂ ಅವರಿಗೆ ಬಗ್ಗದಿದ್ದರೆ, ನಿಮಗೆ ಹಸಿವಿನಿಂದ ಸಾಯಿಸುತ್ತಾರೆ, ಅಥವಾ ಇನ್ನೇನಾದರು.
ಇವೆಲ್ಲವೂ ಬಹಳ ಕೊಳಕು ಅಸಭ್ಯನಡತೆಯಲ್ಲಿ ಕೊನೆಯಾಗುತ್ತದೆ:
ಒಂದುವೇಳೆ ನೀವೇನಾದರೂ ಉದ್ಯೋಗ ಮಾಡಲೇ ಬಾರದೆಂದಿದ್ದರೆ,
ನೀವು ಸಾಕಷ್ಟು ಕೆಲಸ ಮಾಡಬೇಕಾಗುತ್ತದೆ, ಬೇಕಾದಷ್ಟು ಹಣ ಗಳಿಸಿ ಮತ್ತೆ ಎಂದೂ ಕೆಲಸ ಮಾಡದಿರಲು.

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

ಕೇಳಿಸಿಕೊ...

ತಲೆ ಬುರುಡೆಯಲ್ಲೇನೋ ಬಡಿಯುತ್ತಲೇ ಇದೆ
ಕೊನೆಯಿಲ್ಲದ ಮೌನ ಚೀತ್ಕಾರ
ಏನೋ ಗೋಡೆಯ ಮೇಲೆ ಹೊಡೆಯುತ್ತಾ,
ಮತ್ತೆ ಅಳುತ್ತಾ ಇದೆ, “ನನ್ನ ಹೊರಗೆ ಬಿಡಿ!” ಎಂದು

ಅದು ಏಕಾಂಗಿ ಸೆರೆಯಾಳು
ಜವಾಬನ್ನು ಎಂದೂ ಕೇಳಿಸಿಕೊಳ್ಳುವುದಿಲ್ಲ.
ಕಾಲಾತೀತದಲ್ಲಿ ಯಾವ ಜೊತೆಗಾರನೂ
ಆ ತೀವ್ರ ವೇದನೆಯನ್ನು ಕೇಳಿಸಿಕೊಳ್ಳಲಿಲ್ಲ.

ಆ ಉಗ್ರ ಹಿಂಸೆಯನ್ನು ಯಾವ ಹೃದಯವು ಹಂಚಿಕೊಳ್ಳಲಿಲ್ಲ
ಅವನ ಭಯಾನಕ ಕತ್ತಲಲ್ಲಿ, ಭೂತದಂತೆ ಪದೇ ಪದೇ ಕಾಣಿಸಿಕೊಳ್ಳುತ್ತದೆ.
ಯಾವುದೋ ಲೋಹದ ಸದ್ದಿನ ಮೂಲಕ ಬೆಳಕು ಹರಿಯುತ್ತದೆ
ಬೇರೆ ಯಾವ ಕಣ್ಣೂ ಗುರುತಿಸದಂತೆ.

ಮಾಂಸಖಂಡಗಳನ್ನು, ತೀವ್ರ ಬಯಕೆಯ ಮಾಂಸಖಂಡಗಳೊಡನೆ ಸೇರಿಸಿದಾಗ
ಮತ್ತು ಶಬ್ದಗಳೆಲ್ಲವೂ ಸರಾಗವಾಗಿ, ಬೆಚ್ಚಗೆ ಹಾಯಾಗಿ ಓಡುವಾಗ,
ನನಗನ್ನಿಸುತ್ತದೆ, ಅವನು ಆಗ ಒಬ್ಬಂಟಿ ಎಂದು
ತಲೆ ಬುರುಡೆಯಲ್ಲಿ ಸೆರೆಯಾದವನೆಂದು.

ಜಾಲರಿಯಲ್ಲಿ ಹಿಡಿಯಲಾದ ರಕ್ತನಾಳಗಳು
ಮೃದು ಹೊದಿಕೆಯ ಕಣಗಳಿಂದ ಕೂಡಿದ ಎಲುಬುಗಳು,
ಅವನು ಏಕಾಂಗಿಯಾಗುತ್ತಾನೆ, ಯಾವಾಗ
ಅವನು ಏಕಾಂಗಿಯಲ್ಲವೆಂದು ನಟಿಸುತ್ತಾನೋ ಆಗ.

ನಾವು ಅವರನ್ನು ಬಂಧಮುಕ್ತರನ್ನಾಗಿಸುತ್ತೇವೆ
ಆ ದುರಂತವನ್ನು ಸಂಯಮದಿಂದ ಸಹಿಸಿಕೊಳ್ಳಬಹುದು
ನೀನು ಮಾತ್ರ ನನ್ನ ತಲೆ ಬುರುಡೆಯನ್ನು ತೆರೆದಿಟ್ಟಾಗ,
ಅಥವಾ ನಾನು ನಿಧಾನವಾಗಿ ನಿನ್ನ ತಲೆ ಬುರುಡೆಗೆ ಪ್ರವೇಶಿಸುತ್ತೇನೆ.

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

May 27, 2009

ಆತ್ಮಾವಲೋಕನದ ಪ್ರತಿಬಿಂಬ

ನನ್ನ ಜೀವನದುದ್ದಕ್ಕೂ ಬೇಜವಾಬ್ದಾರಿಯಾಗಿ, ಜುಮ್ಮಂಥ ನಿಶ್ಚಿಂತೆಯಾಗಿ ಇರಬಹುದಿತ್ತು
ಬದುಕಿ ಉಳಿಯುದಕ್ಕಾಗಿಯೇ ಇವೆಲ್ಲವನ್ನೂ ಮಾಡಬೇಕಾದ ಅನಿವಾರ್ಯತೆ,
ನಿಜವಾಗಲೂ ಇದೊಂದು ಅನಗತ್ಯ ಕಿರುಕುಳ.

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

ನಾನಿಂದು ಪ್ರಾರ್ಥನಾ ಮಂದಿರಕ್ಕೆ ಹೋಗಲಿಲ್ಲ

ನಾನಿಂದು ಪ್ರಾರ್ಥನಾ ಮಂದಿರಕ್ಕೆ ಹೋಗಲಿಲ್ಲ,
ದೇವರು, ನನ್ನನ್ನು ಅರ್ಥಮಾಡಿಕೊಳ್ಳುತ್ತಾನೆಂದು ನಂಬಿದ್ದೇನೆ
ಕಡಲಕಿನಾರೆಯಲ್ಲಿ ನೀಲಿ ಹಾಗು ಬಿಳಿ ಬಣ್ಣದ ಅಲೆಗಳು ನೊರೆಯೆಬ್ಬಿಸಿ ಸುತ್ತುತ್ತಿವೆ,
ಮಕ್ಕಳು ಸುತ್ತಾಡುತ್ತಿದ್ದಾರೆ ಯಥೇಚ್ಛವಾದ ಮರಳ ದಂಡೆಗಳಲ್ಲಿ.
ಅವನಿಗೆ ಗೊತ್ತಿದೆ, ನಿಜವಾಗಲೂ ಅವನಿಗೆ ಗೊತ್ತಿದೆ
ನಾನಿಲ್ಲಿರುವುದು ಬಹಳ ಕಡಿಮೆ ಸಮಯಕ್ಕೆ ಮಾತ್ರ ಸೀಮಿತವೆಂದು,
ಬೇಸಿಗೆ ವಿರಾಮದ ವಿಶ್ರಾಂತಿಯೂ ಸಹ ಸ್ವಲ್ಪ ಸಮಯದಲ್ಲೇ ಹೇಗೆ ಮುಗಿದೇ ಹೋಯಿತಲ್ಲಾ,
ಅವನಿಗೆ ತಿಳಿದಿದೆ, ನಾನು ಎಲ್ಲವೂ ಹೇಳಿ, ಮುಗಿಸಿದ ನಂತರ
ನಮಗೆ ಜೊತೆಯಲ್ಲೇ ಇರಲು ಸಾಕಷ್ಟು ಸಮಯ ಸಿಗುವುದೆಂದು.

ಮೂಲ ಕವಿ : ಓಗ್ದೆನ್ ನಾಶ್
ಕನ್ನಡಕ್ಕೆ : ಚಂದಿನ

ಜ್ಞಾನ

ನನ್ನ ರೆಕ್ಕೆಗಳ ಮುರಿಯುವುದನ್ನು ನಿಲ್ಲಿಸಿದಾಗ
ದೋಷಪೂರಿತ ವಸ್ತುಗಳ ಎದುರಲ್ಲಿ,
ಹಾಗೇ ತಿಳಿದುಕೊಂಡೆ, ಒಪ್ಪಂದಗಳು ಕಾದಿರುವುದನ್ನು
ಯಾವಾಗಲೋ ತೆರೆದುಕೊಳ್ಳುವ ಪ್ರತಿ ಬಾಗಿಲ ಹಿಂದೆ,
ನಾನು ನೋಡಿದಾಗ ಬದುಕನ್ನು ಕಣ್ಣುಗಳಿಂದ,
ಪ್ರಶಾಂತವಾಗಿ ಬೆಳೆದು, ಬಹಳ ಬುದ್ಧಿವಂತಿಕೆಯೊಂದಿಗೆ,
ಬದುಕು ನನಗೆ ಸತ್ಯವನ್ನು ನೀಡಿರಬಹುದಾದರೂ,
ಅದು ಬದಲಾಗಿ ಪಡೆದುಕೊಂಡಿದೆ -- ನನ್ನ ಯೌವನವನ್ನು.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ಯುದ್ಧಕಾಲದಲ್ಲಿ ವಸಂತ

ಎಲ್ಲೋ, ಬಹಳ ದೂರದಲ್ಲಿ ವಸಂತಕಾಲ ಇರುವಂತೆ ಅನ್ನಿಸುತ್ತಿದೆ ನನಗೆ,
ಎಲೆಗಳ, ಮೊಗ್ಗುಗಳ ಸುವಾಸನೆ ಎಷ್ಟೋ ಕಳೆಗುಂದಿದೆ—
ಓಹ್, ವಂಸತದ ಹೃದಯ ತಾನೆ ಹೇಗೆ ಬರಲೊಪ್ಪೀತು
ವೇದನೆಯಿಂದ ನರಳುತ್ತಿರುವ ಪ್ರಪಂಚಕ್ಕೆ,
ತೀವ್ರ ವೇದನೆ?

ಸೂರ್ಯ ಉತ್ತರಕ್ಕೆ ಮುಖ ಮಾಡಿದಾಗ, ದಿನಗಳು ಸುದೀರ್ಘವಾಗುತ್ತವೆ,
ನಂತರ ಸಂಜೆಯ ತಾರೆ ಪ್ರಾಕಾಶಮಾನವಾಗಿ ಬೆಳೆಯುತ್ತದೆ—
ದಿನದ ಬೆಳಕಿಗೆ ಹಾಗೇ ಇರಲು ಹೇಗೆ ಸಾಧ್ಯ
ಗಂಡಸರು ಯುದ್ಧದಲ್ಲಿ ಹೊಡೆದಾಡಲೆಂದು
ಹಾಗೇ ಹೊಡೆದಾಡುತ್ತಿರಲು?

ಹುಲ್ಲು ನಡೆದಾಡುತ್ತಿದೆ ನೆಲದಲ್ಲಿ,
ಬೇಗನೆ ಬೆಳೆದು ಅಲೆಗಳನ್ನು ಹೊಮ್ಮಿಸುತ್ತದೆ—
ಅದಕ್ಕೆ ಹೃದಯ ಇದ್ದೀತೇ ತೂಗಾಡಲು
ಸಮಾಧಿಗಳ ಮೇಲೆ,
ಹೊಸ ಸಮಾಧಿಗಳು?

ಮರದ ರೆಂಬೆಗಳಡಿಯಲ್ಲಿ ಪ್ರೇಮಿಗಳು ನಡೆಯುತ್ತಿದ್ದರು
ಪಕ್ವವಾದ ಸೇಬು ಸಹಜವಾಗಿ ಉಸಿರಾಟ ನಿಲ್ಲಿಸುತ್ತವೆ—
ಆದರೆ, ಈಗ ಆ ಪ್ರೇಮಿಗಳ ಗತಿಯೇನು
ಸಾವಿನಿಂದಾಗಿ ಬೇರೆಯಾದವರು,
ಅಸಹಜ, ಅನ್ಯಾಯ ಸಾವಿನಿಂದ?

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ಯಥಾಸ್ಥಿತಿ

ಮೆಟ್ಟಿಲ ಮೇಲಿಂದ ಕೇಳಿಸಿದ್ದು ಅವನ ಹೆಜ್ಜೆಯ ಸದ್ದೇ?
ಬಾಗಿಲ ಬಡಿದ ಶಬ್ದ ಕೇಳಿಸಿತಲ್ಲಾ, ಅದು ಅವನು ಮಾಡಿದ್ದೇ?
ಈಗಾಗಲೇ ಬಹಳ ದಣಿದಿದ್ದೇನೆ, ಆ ಬಗ್ಗೆ ಯೋಚಿಸುವುದೂ ಕೂಡ ಬಹತೇಕ ನಿಲ್ಲಿಸಿದಂತೆ,
ಆದರೂ ಒಮ್ಮೊಮ್ಮೆ ನನಗನ್ನಿಸುತ್ತದೆ, ಅವನು ಮತ್ತೊಮ್ಮೆ ಬರಬಹುದೆಂದು.

ನನಗೆ ಕೇಳಿಸಿದ್ದು ಬೀಸುವ ಗಾಳಿಯ ಸದ್ದು, ಅದು ನನ್ನನ್ನು ಕಂಡು ಸದಾ ಅಣಕಿಸುತ್ತದೆ,
ಆ ಹಾಳಾದ ಗಾಳಿ ಅವನಿಗಿಂತಲೂ ಮಹಾಕ್ರೂರಿ;
ಬಾಗಿಲನ್ನು ಬಡಿದದ್ದೂ ಸಹ ಅದೇ ಗಾಳಿ,
ಆದರೆ ಅವನು ಮತ್ತೆಂದಿಗೂ ಬಾಗಿಲು ಬಡಿಯುವುದೂ ಇಲ್ಲ ಅಥವಾ ಒಳಗೆ ಬರುವುದೂ ಇಲ್ಲ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

May 26, 2009

ನೆಮ್ಮದಿ

ನೆಮ್ಮದಿ ನನ್ನೊಳಗೆ ಹರಿಯುತ್ತದೆ
ಕಡಲ ಬದಿಗಿರುವ ಕೊಳದೊಳಗೆ ದೊಡ್ಡ ಅಲೆಗಳು ನುಸುಳುವಂತೆ;
ಅವು ಎಂದೆಂದಿಗೂ ನನ್ನದಾಗಿರುತ್ತವೆ,
ಅದು ಮತ್ತೆ ಸಮುದ್ರಕ್ಕೆ ಮರಳುವಂತೆ ಅಲ್ಲ.

ನಾನೊಂದು ಕಡುನೀಲಿ ಕೊಳ
ಕಂಗೊಳಿಸುವ ನೀಲಾಕಾಶವನ್ನು ಸದಾ ಧ್ಯಾನಿಸುವುದು;
ನನ್ನ ನಂಬಿಕೆಗಳು ಸ್ವರ್ಗದಂತೆ ಬಲು ಎತ್ತರ,
ಅವೆಲ್ಲವೂ ನಿನ್ನೊಳಗೆ ಪರಿಪೂರ್ಣಗೊಂಡಿವೆ.

ನಾನೊಂದು ಚಿನ್ನದ ಕೊಳ
ಸೂರ್ಯ ಮುಳುಗುವಾಗ ಉರಿದು ಸಾಯುವಂತೆ—
ನೀನು ನನಗೆ ಅಗಾಧ ಆಗಸದಂತೆ,
ನಿನ್ನ ನಕ್ಷತ್ರಗಳನ್ನು ಸೆರೆ ಹಿಡಿಯಲು ಬಿಡು

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ಹುಡುಗಿಯ ಉಡುಗೊರೆ

ಹುಡುಗಿ, ಹುಡುಗಿ, ಮೊದಲಿಡಬೇಡ
ನಿನ್ನ ಹೃದಯದೆಡೆಗಿನ ಮಾತನ್ನು;
ಆ ಸಂದರ ಪದಗಳು ಹಾಗೇ ನಳನಳಿಸುತ್ತಿರಲಿ;
ಹೇಳಬೇಕಾಗಿರುವುದನ್ನು ಎಂದಿಗೂ ಮೆಲ್ಲಗೆ ಪಿಸುಗೊಡದೆ.
ಹಾಗೇ ಬಿಂಬಿಸಿಕೊ, ಒಂದು ಪದ, ಇಲ್ಲಾ ಒಂದು ನೋಟದಿಂದ,
ಮಿತಭಾಷಿಯಾಗಿ, ಆಳವಿಲ್ಲದ ಪುಟ್ಟ ಕೊಳದಂತೆ.
ಸಾಧ್ಯವಾದಷ್ಟು ತಂಪಾಗಿದ್ದು, ಬೇಗನೆ ಮಾಯವಾಗು
ಏಪ್ರಿಲ್ ತಿಂಗಳ ಮಂಜಿನ ಹನಿಯಂತೆ;
ಆದಷ್ಟು ಮೃದುವಾಗಿದ್ದು, ಉಲ್ಲಾಸದಿಂದಿರು
ಮೇ ತಿಂಗಳ ಚೆರ್ರಿ ಹೂವಿನಂತೆ.
ಹುಡುಗಿ, ಹುಡುಗಿ, ಮಾತನಾಡಲೇ ಬೇಡ
ನಿನ್ನ ಕೆನ್ನೆಗಳ ಸುಡುವ ಆ ಕಣ್ಣೀರಿನ ಬಗ್ಗೆ-
ಅವಳಿಗೆ ಖಂಡಿತ ಅವನನ್ನು ಜಯಿಸಲಾಗುವುದಿಲ್ಲ, ಯಾರ
ಮಾತಲ್ಲಿ ಕಳೆದುಕೊಳ್ಳುವ ಭಯ ಕಂಡುಬರುವುದೊ ಅವಳಿಗೆ.
ಸಾಧ್ಯವಾದಷ್ಟು ಎಚ್ಚರದಿಂದಿರು, ಮತ್ತೆ ದುಃಖದಿಂದಲ್ಲ,
ನಿನ್ನ ಪ್ರೀತಿಯ ಹುಡುಗ ಸಿಕ್ಕೇಸಿಕ್ಕುತ್ತಾನೆ.
ಗಂಭೀರವಾಗಿರಬೇಡ, ಅಥವಾ ಪ್ರಾಮಾಣಿಕವಾಗಿ,
ನಿನ್ನ ಬಯಕೆ ಖಚಿತವಾಗಿ ನೆರವೇರುತ್ತದೆ-
ಒಂದುವೇಳೆ ಅದು ನಿನ್ನನ್ನು ಸಂತಸವಾಗಿಟ್ಟರೆ, ಮಗಳೆ,
ನೀನೇ ಮೊಟ್ಟಮೊದಲಿಗಳೆಂಬ ಹೆಗ್ಗಳಿಕೆ ನಿನ್ನದಾಗುತ್ತದೆ.

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

ನಾಸ್ತಿಕತೆಯೊಳಗಿನ ದೋಷ

ಕುಡಿಯಿರಿ, ಕುಣಿಯಿರಿ, ನಕ್ಕು ನಲಿಯಿರಿ ಹಾಗೇ ವಿಶ್ರಮಿಸಿ,
ಪ್ರೀತಿಸಿ, ಮಧ್ಯರಾತ್ರಿ ಮೀರುವವರೆಗೂ ಸದ್ದುಮಾಡುತ್ತಾ,
ನಾಳೆ ನಾವು ಖಂಡಿತ ಸಾಯುತ್ತೇವೆ!
( ಆದರೆ, ಕರ್ಮ, ನಾವ್ಯಾರು ಹಾಗೆ ಮಾಡುವುದೇ ಇಲ್ಲ )

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

May 25, 2009

ಗಂಡಸರು

ಅವರ ಮುಂಜಾವಿನ ತಾರೆ ನೀನೆಂದು ಹೊಗಳುತ್ತಾರೆ
ಏಕೆಂದರೆ ನೀನಿದ್ದ ಹಾಗೆಯೇ ನೀನಿರುವೆ.
ಒಂದುವೇಳೆ ಅವರ ಭಾವನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರೆ,
ಅವರು ನಿನ್ನನ್ನು ವಿಭಿನ್ನವಾಗಿ ಬಂಬಿಸಲು ಯತ್ನಿಸುತ್ತಾರೆ;
ಸುರಕ್ಷಿತ ಹಾಗು ಸಂತೃಪ್ತಿಯಾಗಿ ನಿನ್ನನ್ನು ಆಸ್ವಾದಿಸಿದ ನಂತರ,
ನಿನ್ನನ್ನು ಸಂಪೂರ್ಣವಾಗಿ ಬದಲಾಯಿಸಲು ಹಂಬಲಿಸುತ್ತಾರೆ.
ನಿನ್ನ ಮನಸ್ಥಿತಿ, ನಡೆ-ನುಡಿಗಳನ್ನು ಶಪಿಸಿ, ಹಿಂಸಿಸುತ್ತಾರೆ;
ಬೇರೆಯೇ ವ್ಯಕ್ತಿಯನ್ನಾಗಿ ನಿನ್ನನ್ನು ಪರಿವರ್ತಿಸುತ್ತಾರೆ.
ನಿನಿಗಿಷ್ಟ ಬಂದಂತೆ ಮಾಡಲು ಅವಕಾಶ ನೀಡದೆ;
ಅವರ ಪ್ರಭಾವ ಬಳಸಿ ತಿಳಿ ಹೇಳುತ್ತಾರೆ.
ಮೊದಲು ಇಷ್ಟಪಟ್ಟು ಹೊಗಳಿದ ಎಲ್ಲವನ್ನೂ ನಕಾರಾತ್ಮಕವಾಗಿ ತಿರುಚುತ್ತಾರೆ
ನಿಶಕ್ತಳನ್ನಾಗಿಸಿ, ನನ್ನ ನರಳುವ ರೋಗಿಯನ್ನಾಗಿಸುತ್ತಾರೆ.

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

ಒಂದು ವರದಿ

ಈ ನಾಲ್ಕೂ ವಿಷಯಗಳನ್ನು ಅರಿಯುವಷ್ಟು, ನನ್ನ ಬುದ್ದಿ ಎಚ್ಚರವಹಿಸಬೇಕು:
ಸುಮ್ಮನಿರುವುದು, ದುಃಖ, ಸ್ನೇಹಿತ ಹಾಗು ಶತ್ರು.

ಈ ನಾಲ್ಕು ಅಂಶಗಳು ಇಲ್ಲವಾದಲ್ಲಿ ನಾನು ಚೆನ್ನಾಗಿರಬಹುದಿತ್ತು:
ಪ್ರೀತಿ, ಕುತೂಹಲ, ಮೊಡವೆ ಮತ್ತು ಸಂಶಯ.

ಈ ಮೂರು ಅಂಶಗಳನ್ನು ನಾನೆಂದಿಗೂ ಪಡೆಯಬಾರದು:
ಅಸೂಹೆ, ಸಂತೃಪ್ತಿ ಮತ್ತು ಸಾಕಾಗುವಷ್ಟು ವೈನ್.

ಈ ಮೂರು ಅಂಶಗಳು ಸಾಯುವವರೆಗೂ ನನ್ನೊಂದಿಗಿರಬೇಕು:
ನಗು, ನಂಬಿಕೆ ಮತ್ತು ಕಣ್ಣೊಳಗಿನ ಪೊರೆ

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

ಮಲಗುವ ಕೋಣೆಯ ಮಾಳಿಗೆ ಕೆತ್ತನೆಗಾಗಿ

ಪ್ರತಿ ಮುಸ್ಸಂಜೆಗೂ ಮತ್ತೊಂದು ದಿನದ ಅಂತ್ಯ;
ನಾನು ಎದ್ದೇಳಲೇ ಬೇಕು, ಜವಾಬ್ದಾರಿಗಳ ನಿಭಾಯಿಸಲು.
ಒಳ್ಳೆಯ ಉಡುಪು ಧರಿಸಿ, ಕುಡಿದು, ತಿನ್ನುವುದು ಮಾಡಿದರೂ,
ಬೆರಳು, ಕಾಲುಗಳನ್ನು ಕ್ರೀಯಾಶೀಲವಾಗಿಸಿ,
ಹೀಗೇ ಅಲ್ಲಿ-ಇಲ್ಲಿ, ಅಲ್ಪ- ಸ್ವಲ್ಪ ಕಲಿತು
ಅಳುವುದು, ನಗುವುದು ಹಾಗೇ ಬೆವರು ಸುರಿಸುವುದು, ಶಪಥ ಮಾಡುವುದು
ಹಾಡಗಳ ಕೇಳುವುದು, ಇಲ್ಲಾ ಒಳ್ಳೆಯ ನಾಟಕ ನೋಡುವುದು
ಸಾಧ್ಯವಾದರೆ ಹಾಳೆಯಲ್ಲಿ ಪದಗಳ ತುಂಬಿಸುವುದು
ಶತ್ರುಗಳನ್ನು ಶಪಿಸಿ, ಸ್ನೇಹಿತನ ಹೊಗಳುವುದಾದರೂ-
ಕೊನೆಯಲ್ಲಿ, ಹಾಸಿಗೆ ನನಗಾಗಿ ಕಾದಿರುತ್ತದೆ.

ಹೆಮ್ಮೆ ಹಾಗು ಸಾಮರ್ಥ್ಯದಿಂದ ಮುನ್ನಡೆದರೂ
ದೀರ್ಘ ವಿಶ್ರಾಂತಿಗಾಗಿ ಹಾಸಿಗೆಗೆ ಮರಳುತ್ತೇನೆ.
ಅತೀವ ಕುರುಡು ನೋವಿನಿಂದ ನಡೆಯುತ್ತೇನಾದರೂ,
ಹಾಸಿಗೆಗೆ ಮತ್ತೆ ಖಂಡಿತ ಬಂದೇ ಬರುತ್ತೇನೆ.
ಎಷ್ಟೇ ಸಂತೋಷವಾಗಿದ್ದರೂ, ಇಲ್ಲಾ ತಲೆ ತಗ್ಗಿಸುವಂತಾದರೂ,
ನನ್ನ ಎಲ್ಲಾ ದಿನಗಳೂ ಹಾಸಿಗೆಯತ್ತಲೇ ಸೆಳೆಯುತ್ತವೆ.
ಎದ್ದು ಹೊರಡುವುದು ಮಾಡುತ್ತಲೇ ಇದ್ದರೂ; ಮತ್ತೆ
ಎಂದಿನಂತೆ ಹಾಸಿಗೆಗೆ ವಾಪಸ್ಸಾಗಿರುತ್ತೇನೆ,
ಬೇಸಿಗೆ, ಚಳಿ, ಮಳೆ, ವಸಂತ, ವೈಶಾಕ ಎಲ್ಲ ಕಾಲದಲ್ಲೂ-
ಮತ್ತೆ ಏಕಾದರೂ ಎದ್ದೇಳುವೆ; ನಿಜವಾಗಲೂ ನಾನು ಶತದಡ್ಡಿ!

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

ಸುಡು ಬಿಸಿಲು

ಯೌವನದಲ್ಲಿ, ನಾನು ಹಾಗೇ ಇರುತ್ತಿದ್ದೆ
ಅವರನ್ನು ಖುಷಿ ಪಡಿಸಲು ಸರ್ವ ಪ್ರಯತ್ನಗಳನ್ನು ಮಾಡುತ್ತಾ,
ಹಾಗೇ ನಾನೂ ಬದಲಾಗುತ್ತಿದ್ದೆ, ಹೋಡಾಡುವ ಪ್ರತಿ ಯುವಕನ ಆಶಯಗಳಿಗೆ,
ನಿರೀಕ್ಷೆಗಳಿಗೆ ಮತ್ತು ಅವನ ವ್ಯಾಕ್ಯಾನಕ್ಕೆ ಹೊಂದಿಕೊಳ್ಳುವಂತೆ.

ಆದರೆ, ಈಗ ನನಗೆ ತಿಳಿದಿರುವಷ್ಟೇ ತಿಳಿದಿರುವುದು,
ನನಗೆ ಇಷ್ಟವಾಗಿದನ್ನೇ ನಾನು ಮಾಡುವುದು;
ಒಂದುವೇಳೆ ನಾನು ಹಾಗಿರುವುದು ನಿನಗೆ ಇಷ್ಟವಾಗದಿದ್ದಲ್ಲಿ,
ನೀನು ಮತ್ತು ನಿನ್ನ ಪ್ರೀತಿ ಹಾಳಾಗಿ ಹೋಗಲಿ!

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

ಸಂಭೋಗ ಸ್ಥಿತಿ-ಗತಿಯ ಅವಲೋಕನ

ಯಾವುದೇ ಸಮಯದಲ್ಲಿ ಹೆಂಗಸು ಒಬ್ಬರೊಂದಿಗೆ ಮಾತ್ರ ಸಂಬಂಧವಿಟ್ಟುಕೊಳ್ಳಲು ಬಹಯಸುತ್ತಾಳೆ;
ಗಂಡಸು ಸದಾ ಹೊಸತನ್ನು ಅನುಭವಿಸುವುದರಲ್ಲಿ ಅತೀವ ಸಂತಸಪಡುತ್ತಾನೆ.
ಪ್ರೀತಿಯೆಂಬುದು ಮಹಿಳೆಯ ಸೂರ್ಯ, ಚಂದ್ರಮರಂತೆ;
ಗಂಡಸಿಗೆ ಖುಷಿಯಾಗಿರಲು ಹಲವು ಪ್ರಕಾರಗಳಿವೆ.
ಮಹಿಳೆ ಬದುಕುತ್ತಾಳೆ, ಆದರೆ ಅವಳ ಭಂಗವಂತನಲ್ಲಿ;
ಹತ್ತರವರೆಗೆ ಎಣಿಸಿನೋಡಿ, ಅಷ್ಟರೊಳಗೇ ಗಂಡಸಿಗೆ ಬೋರೆನಿಸಿಬಿಟ್ಟಿರುತ್ತದೆ.
ಒಟ್ಟಾರೆ ಇದರ ಸಾರಾಂಶ ಮತ್ತು ಇದರ ಅಂತರಾಳದ ಸತ್ವ, ಸತ್ಯ ಇಷ್ಟೇ,
ಇದರಿಂದ ಇನ್ನೇನು ಮಹಾ ಅದ್ಭುತಗಳು ಉದ್ಭವಿಸಲು ಸಾಧ್ಯ?

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

May 23, 2009

ಬಡಾಯಿಕೊಚ್ಚುಕೊಳ್ಳುವವ

ದಿನಗಳು ಉರುಳುತ್ತಿರುತ್ತವೆ ಸುತ್ತಿಕೊಂಡು
ಅವುಗಳ ಹುಚ್ಚು ಕುಣಿತದೊಂದಿಗೆ;
ಮತ್ತೆ ನೀನು ಉಸಿರಾಡುತ್ತಲೇ ಇರಬೇಕು,
ಆದರೆ, ನಾನು ಸುರಕ್ಷಿತವಾಗಿರುತ್ತೇನೆ ನರಕದಲ್ಲಿ.

ಜನವರಿಯ ಹವಾಮಾನದಂತೆ,
ವರ್ಷಗಳು ಚುರುಕಾಗಿ ಕಚ್ಚುತ್ತವೆ,
ಮತ್ತೆ ನಿನ್ನ ಎಲುಬುಗಳನ್ನು ಒಟ್ಟಿಗೆ ಎಳೆಯುತ್ತವೆ,
ನಿರಂತರ ಒಟಗುಟ್ಟುವ ಹೃದಯ ಸುತ್ತಿಕೊಂಡು.

ನೀನು ಸೊಗಸಾಗಿರುವವುಗಳಿಂದ ರೂಪುಗೊಂಡಿರುವೆ
ಅವುಗಳು ಒಣಗಿ, ಮುದುಡಿ, ಬಿರುಕು ಬಿಡುತ್ತವೆ.
ಯಾವುದು ಕಂಡರೆ ನಿನಗೆ ತುಂಬಾ ಭಯವಾಗತ್ತದೆಯೋ,
ಅದೇ ನಿನಗೆ ಎಲ್ಲರ ಕಣ್ಣುಗಳಿಂದ ಕಾಣಿಸುತ್ತಿರುತ್ತದೆ.

ನಂತರ ನೀನು ತಪ್ಪು ಮಾಡುತ್ತಲೇ ಮುಂದುವರೆಯುವೆ
ತೀವ್ರ ದರ್ಪದ ಬಿರುಸು ನುಡಿಗಳ ಸಾಲು
ಕುಹಕ ನಗೆಯಿಂದ ನಿನ್ನ ಗಂಟಲು ಸೀಳುತ್ತದೆ
ಮತ್ತು ನಿನ್ನ ಕಣ್ಣುಗಳನ್ನು ಉಪ್ಪುನೀರಿಂದ ಸುಡುತ್ತದೆ.

ನೀನು ತೀರಾ ನಿಶಕ್ತನಾಗಿ, ಅಪ್ರಸ್ತುತನಾಗಿಬಿಡುವೆ
ಮಂದನೋಟದಿಂದ, ಎಲ್ಲವನ್ನೂ ಅಡಗಿಸಿಟ್ಟ ತಲೆಯೊಂದಿಗೆ,
ನಾನು ಮಾತ್ರ ಚಿರಯೌವನದೊಂದಿಗೆ, ಖುಷಿಯಾಗಿದ್ದೇನೆ
ಸತ್ತು ಗರ್ಜಿಸುತ್ತಿರುವವರ ಜೊತೆಯಲ್ಲಿ.

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

ಸೃಜನಶೀಲರ ಒಕ್ಕೂಟ

ಸಾಹಿತಿಗಳು, ನಟರು, ಕಲಾವಿದರು ಹಾಗು ಅಂಥಹವರು
ಇತ್ತ ಏನೂ ಗೊತ್ತಿಲ್ಲದವರೂ ಅಲ್ಲ, ಅತ್ತ ಪ್ರಖರ ಪಂಡಿತರೂ ಅಲ್ಲ.
ಶಿಲ್ಪಕಲೆಗಾರರು, ಹಾಡುಗಾರರು ಹಾಗು ಅಂಥಹ ವರ್ಗದವರು
ಅವರವರ ವೈಯುಕ್ತಿಕ ವಿಷಯಗಳನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹೇಳುತ್ತಾರೆ.
ನಾಟಕಕಾರರು, ಕವಿಗಳು ಹಾಗೇ ಅಂಥಹ ಕುದುರೆಗಳ ಕತ್ತುಗಳುಳ್ಳವರು
ಆರಂಭ ಎಲ್ಲಿಂದಾದರೂ ಮಾಡಲಿ, ಮುಗಿಸುವುದು ಮಾತ್ರ ಸಂಭೋಗದಲ್ಲಿ.
ಪತ್ರಕರ್ತರು, ವಿಮರ್ಶಕರು ಹಾಗೇ ಅವರ ಗುಂಪಿನವರು
ಹೇಳುವುದೇನೂ ಇರುವುದಿಲ್ಲ, ಮತ್ತೆ ಏನೂ ಇಲ್ಲವೆಂದು ಹೇಳುವುದೂ ಇಲ್ಲ
ನನ್ನ ಈ ಕ್ಲಿಷ್ಟ ಪರೀಕ್ಷೆಗಳನ್ನೂ ಮೀರಿದವರು ಏನಾದರೂ ಮಾಡಬಲ್ಲವರು
ದೇವರೇ, ಅಂಥಹ ವ್ಯಕ್ತಿಗಳಿಗೆ ಖಚಿತವಾಗಲೂ ಜೀವವಿಮೆ ಅತ್ಯಗತ್ಯ!

ಮೂಲ ಕವಿಯತ್ರಿ : ಡರೋತಿ ಪಾರ್ಕರ್
ಕನ್ನಡಕ್ಕೆ : ಚಂದಿನ

May 22, 2009

ನನಗಾಗಿ ಅಲ್ಲ

ಏಪ್ರಿಲ್ ರಾತ್ರಿಗಳು ನಿಶ್ಚಲ ಮತ್ತು ಸುಮಧುರ
ಎಲ್ಲಾ ಮರಗಳು ಹೂವುಗಳಿಂದ ಶೃಂಗಾರಗೊಂಡಿರುತ್ತವೆ
ನೆಮ್ಮದಿಯೆಂಬುದು ನಿಶಬ್ಧವಾಗಿ ಅವರ ಬಳಿಗೆ ನಡೆದು ಬರುತ್ತದೆ
ಆದರೆ ನನಗಾಗಿ ಅಲ್ಲ.

ನನ್ನ ನೆಮ್ಮದಿ ಅವಿತುಕೊಂಡಿದೆ ಅವನ ಹೃದಯದಲ್ಲಿ
ಅಲ್ಲಿಗೆ ಹೋಗಲು ನನಗೆ ಸಾಧ್ಯವಿಲ್ಲ,
ಈ ರಾತ್ರಿ ಎಲ್ಲರಿಗೂ ಪ್ರೀತಿ ಸಿಗುತ್ತದೆ
ಆದರೆ ನನಗಾಗಿ ಅಲ್ಲ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ಭಸ್ಮವಾದ ಪ್ರೀತಿ

ಸೊರಗಿದ ನನ್ನ ಪ್ರೀತಿಯನ್ನು ಬೂದಿಯಾಗಿಸುವೆ
ಆ ಮರದಡಿಯಲ್ಲಿ,
ಆಗಸವ ಚುಂಬಿಸಲು ಹಾತೊರೆಯುವ ದಟ್ಟ ಕಾಡಲ್ಲಿ
ಯಾರಿಗೂ ಕಾಣದಂತೆ.

ಅವನ ತಲೆಗೆ ಯಾವ ಹೂವುಗಳನ್ನೂ ಹಾಕುವುದಿಲ್ಲ,
ಪಾದದ ಬಳಿ ಕಲ್ಲನ್ನೂ ಸಹ ನೆಡುವುದಿಲ್ಲ,
ಅವು ತೀವ್ರವಾಗಿ ಪ್ರೀತಿಸಿದ ತುಟಿಗಳು
ಕಹಿಯಾದ ಸಿಹಿ.

ಅವನ ಸಮಾಧಿಯ ಹತ್ತಿರ ಇನ್ನೆಂದೂ ಸುಳಿಯುವುದಿಲ್ಲ,
ತೀಕ್ಷ್ಣವಾಗಿ ತಂಪಾಗಿರುವ ಮರಗಳಿರುವುದರಿಂದ.
ಸಾಧ್ಯವಾದಷ್ಟೂ ಸಂತಸ ಪಡೆಯಲೆತ್ನಿಸುವೆ
ನನ್ನ ಕೈಗಳು ಹಿಡಿಯುವಷ್ಟು.

ದಿನ ಪೂರ ಹೊರಗೇ ಕಳೆಯುತ್ತೇನೆ ಸೂರ್ಯನಿರುವಲ್ಲಿ,
ವಿಶಾಲವಾಗಿ ಬೀಸುತ್ತಿರುವ ಮುಕ್ತ ಗಾಳಿಯಲ್ಲಿ,
ಆದರೂ ಸಹ, ಪ್ರತೀರಾತ್ರಿ ಅಳುತ್ತಾ ಕಣ್ಣೀರಿಡುತ್ತೇನೆ
ಯಾರಿಗೂ ತಿಳಿಯದ ಸಮಯದಲ್ಲಿ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

May 21, 2009

ಪ್ರೀತಿಯ ನಂತರ

ಇನ್ನು ಅಲ್ಲಿ ಯಾವ ಮೋಡಿಯೂ ನಡೆಯುವುದಿಲ್ಲ
ಎಲ್ಲರಂತೆಯೇ ನಾವೂ ಸಹ ಭೇಟಿಯಾಗುತ್ತೇವೆ
ನೀನು ಯಾವ ವಿಸ್ಮಯವನ್ನೂ ನನ್ನಲ್ಲಿ ಸೃಷ್ಟಿಸಲು ಆಗುತ್ತಿಲ್ಲ,
ಹಾಗೇ ನಾನೂ ಸಹ ನಿನ್ನಲ್ಲಿ.

ನೀನು ಬೀಸುವ ಗಾಳಿಯಾಗಿದ್ದೆ ಮತ್ತೆ ನಾನು ಸಾಗರ---
ಅಲ್ಲಿ ಯಾವ ಅದ್ಭುತವೂ ಘಟಿಸುವುದಿಲ್ಲ
ನಾನು ಬೆಳೆದಿದ್ದೇನೆ ಲೆಕ್ಕವಿಲ್ಲದಷ್ಟು
ದಡದ ಪಕ್ಕದಲ್ಲಿರುವ ಹೊಂಡದಂತೆ.

ಆದರೆ, ಹೊಂಡವು ಭೋರ್ಗರೆವ ಅಲೆಗಳು ಅಪ್ಪಳಿಸುವುದರಿಂದ ಪಾರಾದರೂ
ಮತ್ತೆ ಅಲೆಗಳ ತೀವ್ರ ಏರಿಳಿತಗಳನ್ನು ಕ್ರಮೇಣ ಕ್ಷೀಣಿಸಿ ನಿಲ್ಲಿಸಿದರೂ
ಅದು ಸಾಗರಕ್ಕಿಂತಲೂ ಹೆಚ್ಚು ಕಹಿಯಾಗಿ ಬೆಳೆಯುತ್ತದೆ
ಎಲ್ಲಾ ಅದರ ನೆಮ್ಮದಿಗಾಗಿ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

“ನಿನಗೆ ಗೊತ್ತಾಗಲೇ ಇಲ್ಲವೇ?”

ನಿನಗೆ ಗೊತ್ತಾಗಲೇ ಇಲ್ಲವೇ, ತುಂಬಾ ಹಿಂದೆ, ನೀನೆಷ್ಟೊಂದು ನನ್ನ ಪ್ರೀತಿಸುತ್ತಿದ್ದೆ ಎಂದು---
ನಿನ್ನ ಪ್ರೀತಿ ಎಂದಿಗೂ ಕಡಿಮೆಯಾಗುವ, ಮತ್ತೆ ಕಳೆದು ಹೋಗುವ ಸಾಧ್ಯತೆ ಇಲ್ಲವೇ ಇಲ್ಲವೆಂದು?
ನೀನು ಆಗ ಯೌವನದಲ್ಲಿದ್ದೆ, ಹೆಮ್ಮೆಯಿಂದ ತಾಜಾ ಹೃದಯದೊಂದಿಗೆ,
ತಿಳಿದುಕೊಳ್ಳುವುದಕ್ಕೆ ನೀನು ಸಾಕಷ್ಟು ಚಿಕ್ಕವನಾಗಿದ್ದೆ.

ವಿಧಿ ಬಿರುಗಾಳಿಯಿದ್ದಂತೆ, ಅದರ ಮುಂದೆ ಕೆಂಪು ಎಲೆಗಳು ಹಾರುತ್ತವೆ
ತುಂಬಾ ಬಿರುಕುಂಟಾಗಿದೆ, ವರ್ಷದಲ್ಲಿ ಸಂಭವಿಸಿದ ತೀಕ್ಷ್ಣ ಕಲಹಗಳಿಂದ---
ಇತ್ತೀಚೆಗೆ ನಮ್ಮ ಭೇಟಿ ವಿರಳ, ಆದರೂ ನೀನು ಮಾತನಾಡುವುದು ಕೇಳಿಸಿಕೊಂಡಾಗ
ನಿನ್ನ ಗುಟ್ಟೇನೆಂದು ಗೊತ್ತಾಗುತ್ತದೆ, ನನ್ನ ಪ್ರಿಯನೆ, ನನ್ನ ಗೆಳೆಯನೆ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ನಿನ್ನ ನೆನಪಾದಾಗ

ನಿನ್ನ ಬಗ್ಗೆ ಯೋಚಿಸಿದೆ, ನೀನು ಹೇಗೆ ಈ ಸೌಂದರ್ಯವನ್ನು
ಇಷ್ಟಪಡಬಹುದೆಂಬ ಕುತೂಹಲದಿಂದ,
ಹಾಗೇ ಈ ಉದ್ದನೆಯ ಕಡಲತೀರದಲ್ಲಿ ಏಕಾಂಗಿ ನಡೆಯುತ್ತಾ
ನಾನು ಕೇಳಿಸಿಕೊಂಡೆ, ಅಲೆಗಳು ಲಯಬದ್ಧವಾಗಿ ಬಿರುಸಾಗಿ ಸೀಳುವ ಸದ್ದನ್ನು
ಒಮ್ಮೆ ನೀನು ನಾನು ಅವುಗಳ ಹಳೆಯರಾಗವನ್ನು ಕೇಳಿಸಿಕೊಂಡಂತೆ.

ನನ್ನ ಸುತ್ತಲೂ ಮಾರ್ದನಿಸುವ ಮರಳು ಗುಡ್ಡಗಳು, ಹಿಂದೆ ಎಲ್ಲೋ
ತಣ್ಣಗೆ ಹಾಯಾಗಿ ಬೆಳ್ಳಿಯಂತೆ ಮಿಂಚುತ್ತಿರುವ ಸಾಗರ---
ನಾವಿಬ್ಬರೂ ಸಾವಿನ ಮುಕಾಂತರ ಸಾಗುತ್ತೇವೆ, ಹಾಗೇ ವಯಸ್ಸು ಹೆಚ್ಚಾದಂತೆ
ಮತ್ತೆ ನೀನು ಆ ಶಬ್ಧವನ್ನು ನನ್ನೊಂದಿಗೆ ಕೇಳುವ ಮೊದಲೇ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ಏಕಾಂಗಿ

ಪ್ರೀತಿಯಿದ್ದರೂ ಸಹ, ನಾನು ಏಕಾಂಗಿ
ನಾನು ಎಲ್ಲವನ್ನೂ ಪಡೆದಿದ್ದರೂ, ನೀಡಿದ್ದರೂ ಸಹ
ನಿನ್ನ ನವಿರಾದ ಹಾರೈಕೆಯ ಜೊತೆಗಿದ್ದರೂ,
ಒಮ್ಮೊಮ್ಮೆ ಬದುಕುವ ಹಂಬಲ ನನಗಿಲ್ಲ.

ನಾನು ಒಬ್ಬಂಟಿ, ಅತಿ ಎತ್ತರದ ಶಿಖರದ ತುದಿಯಲ್ಲಿ
ನಿಂತಂತೆ ಅನ್ನಿಸುತ್ತದೆ, ದಣಿದು ಬತ್ತಿರುವ ಬರಡು ಜಗದಲ್ಲಿ,
ಕೇವಲ ಹಿಮವೊಂದೇ ನನ್ನ ಸುತ್ತುಲೂ ಮುತ್ತಿಕೊಂಡಂತೆ,
ನನ್ನ ಮೇಲೆ ಕೊನೆಯಿಲ್ಲದ ನೆಲೆಯೊಂದು ತೆರೆದಿಟ್ಟಂತೆ

ಮರೆಯಾದ ಭೂರಮೆ ಮತ್ತು ಅವಿತುಕೊಂಡ ಸ್ವರ್ಗ
ಕೇವಲ ನನ್ನಲ್ಲಿರುವ ಚೈತನ್ಯದ ಹೆಮ್ಮೆಯಿಂದಲೇ
ನನಗೆ ನೆಮ್ಮದಿಯಿಂದಿರಲು ಸಾಧ್ಯವಾಗಿದೆ
ಸತ್ತು, ಏಕಾಂಗಿಯಾಗಿರದೆ ಇರುವವರಿಂದ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

May 20, 2009

ಸುಂದರ ಕಲ್ಪನೆ

ಅವಳ ನುಡಿಗಳು ಪಾರದರ್ಶಕ ನೀರಿನಂತೆ
ಕಲ್ಲಿನ ಮೇಲೆ ಹನಿಹನಿಯಾಗಿ ತೊಟ್ಟಿಕ್ಕುತ್ತಿದೆ
ದೂರದ ದಟ್ಟಡವಿಯಲ್ಲಿ, ಆ ಸ್ತಬ್ಧ ದಿಗಂತದಲ್ಲಿ
ಮೌನವು ಏಕಾಂಗಿಯಾಗಿ ಆಟವಾಡುತ್ತದೆ.

ಅವಳ ಭಾವನೆಗಳು ತಾವರೆ ಹೂವಿನಂತೆ
ಪವಿತ್ರ ಸರೋವರದಲ್ಲಿ ಪೂರ್ಣವಾಗಿ ಅರಳಿದೆ
ಬದಿಯ ಮಂದಿರದ ಮಹಾದ್ವಾರದ ಅಡಿಯಲ್ಲಿ
ಮೌನವು ನೆಲೆಸಿ ಕನಸು ಕಾಣುತ್ತದೆ.

ಅವಳ ಮುತ್ತುಗಳು ನಗುವ ಗುಲಾಬಿಗಳಂತೆ
ಗಾಢ ಮುಸ್ಸಂಜೆಗೂ ಹೊಳಪು ತರುತ್ತವೆ
ಆ ಬೃಂದಾವನವು ಮುಚ್ಚುವ ಸಮಯಕ್ಕೆ
ಮೌನವು ಅಲ್ಲಿ ನಿದ್ದೆಗೆ ಜಾರುತ್ತದೆ.

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

May 19, 2009

ಕೂಗು

ಓಹ್, ಅಲ್ಲಿ ಎಷ್ಟೋ ಆಕರ್ಷಕ ಕಣ್ಣುಗಳಿವೆ, ಅವನಿಗೆ ಕಾಣಲು ಮತ್ತೆ ಕೆರಳಲು
ಹಾಗು ಸಾಕಷ್ಟು ಮಾಂತ್ರಿಕ ಕೈಗಳು ಹಾತೊರೆಯುತ್ತಿವೆ,
ಅವನ ಕೈಗಳನ್ನು ಮೃದುವಾಗಿ ಸವರಿ ಮಂತ್ರಮುಗ್ಧನನ್ನಾಗಿಸಲು
ಆದರೆ ನನ್ನ ಪ್ರಿಯಕರನಿಗೆ ಖಂಡಿತವಾಗಿಯೂ ನಾನೇ ಹಾಗು ನನ್ನದೇ
ಏಕೈಕ ಧ್ವನಿ.

ಓಹ್, ನೆಮ್ಮದಿಯ ವಿಶ್ರಾಂತಿಗಾಗಿ ಅವನ ತಲೆಯನ್ನೊರುವ ದಿಂಬಾಗಲು
ಅಲ್ಲಿ ಎಷ್ಟೋ ಮೋಹಕ ಬಗೆಬಗೆಯ ಕುಚಗಳು ಕುತೂಹಲದಿಂದ ಕಾದಿವೆ,
ಹಾಗೇ ತಮ್ಮ ಮಾದಕ ತುಟಿಗಳ ಮೇಲೆ ಅವನ ತುಟಿಗಳನ್ನಿಟ್ಟು ಅಮಲೇರಿಸಲು
ಅಲ್ಲಿ ಲೆಕ್ಕವಿಲ್ಲದಷ್ಟು ಕೆಂದುಟಿಗಳು ಕಾತುರದಿಂದ ತಳಮಳಗೊಂಡಿವೆ
ಆದರೆ, ನಾನು ಸಾಯುವವರೆಗೆ ಖಚಿತವಾಗಿ ನಾನೇ ಹಾಗು ನನ್ನದೇ
ಏಕೈಕ ಕೂಗು

ಮೂಲ ಕವಿಯತ್ರಿ : ಸಾರಾ ತೀಯಸ್ಡೇಲ್
ಕನ್ನಡಕ್ಕೆ : ಚಂದಿನ

ಕನಸಿನ ಚಿತ್ರಮಂದಿರ

ನಿನ್ನನ್ನು ಒಂದು ಸಿನಿಮಾದಲ್ಲಿ ನೋಡಿದೆ
ಪಕ್ಕದಲ್ಲಿ ನಿಂತ್ತಿದ್ದಾಗ... Lights, Camera
And Action…ನಂತರ ಎಲ್ಲವೂ ಕಪೋಲಕಲ್ಪಿತ
ಹೃದಯಗಳೇ ಅಲ್ಲಿ ನಿರ್ಮಾಪಕರು...
ಸವಿಮನಸುಗಳೇ ಅದರ ನಿರ್ದೇಶಕರು...

ದೃಶ್ಯ: 1

ನೀನು ನಿಲ್ಲದೇ ನಗುತ್ತಿದ್ದೆ
ತಂಗಾಳಿ ಏನನ್ನೋ ನಿನ್ನ ಕಿವಿಯಲ್ಲಿ ಪಿಸುಗುಡುತ್ತಿತ್ತು
“ಅವನು ನಿನ್ನನ್ನು ತುಂಬಾ ಬಯಸುತ್ತಿದ್ದಾನೆ, ಆದರೆ ಅದನ್ನು ತಿಳಿಯುವ ಆಸಕ್ತಿ ನಿನ್ನಲ್ಲಿಲ್ಲ”
ಬಾಯಿ ಹೇಳುತ್ತಿದೆ “ಅದು ತಂಬಾ ಸೊಗಸಾಗಿದೆ ” ಎಂದು
ಆಗ ದೇಹವೆಂದಿತು “ಒಲವೆಂಬ ಕಾಫಿ ಕುಡಿದ ನಂತರ ನನಗೆ ಬಹಳ ಹಿತವಾಗಿದೆ ” ಎಂದು
ನಿನ್ನ ಕಣ್ಣುಗಳು ಮಿಂಚುತ್ತಿವೆ, ಹಾಲಿವುಡ್ ನಕ್ಷತ್ರಗಳಂತೆ
ನರನಾಡಿಗಳು ಸಂಪೂರ್ಣವಾಗಿ ಚುರುಕುಗೊಂಡಿವೆ
ಪಾಪ ಊದಿಕೊಂಡ ಅಂಗಾಂಗಳೆಲ್ಲ ಮತ್ತೆ ಸಹಜವಾಗಿವೆ
ಪಿತ್ತಕೋಶದ ಒತ್ತಡವು ಕ್ರಮೇಣ ಕ್ಷೀಣಿಸುತ್ತಿದೆ
ನರಳುತ್ತಿದ್ದ ಹೃದಯ ಈಗ ನಳನಳಿಸುತ್ತಿದೆ
ಕಾಮ ಉದ್ರೇಕಿಸುವ ಕ್ಯಾನ್ಸರಸ್ ಕಣಗಳು ತೀವ್ರಗೊಂಡಿವೆ
ಕಾಡುತ್ತಿರುವ ಟ್ಯೂಮರ್ ಮೆದುಲಿನಲ್ಲಿ ಬೆಳೆಯುತ್ತಿದೆ
ಸಿಹಿ ಡೈಯಾಬಿಟಿಕ್ ಕೈಗಳು ಗಟ್ಟಿಯಾಗಿ ಮುಷ್ಟಿಯನ್ನಿಡಿದಿವೆ
ಹೌದು, ನನಗೆ ಜೇನು ಸಿಕ್ಕಂತಾಗಿದೆ. ಹಾಗಾಗಿ ಬಹಳ ಸಿಹಿಯಾಗಿದ್ದೇನೆ
ನಿನ್ನ adrenalin ತುಂಬಿಸಿದ blood sugar ನಿಂದಾಗಿ.

ದೃಶ್ಯ: 2

ನಾನೊಂದು ಸುಂದರ ತೋಟದಲ್ಲಿ ನೆಲೆಸಿದ್ದೇನೆ
ಸುಗಂಧ ಭರಿತ ಪರಿಮಳ ಎಲ್ಲೆಡೆ ಪಸರಿಸುತ್ತಿದೆ
ಹೂದೋಟವು ಅದ್ಭುತವಾಗಿ ಕಂಗೊಳಿಸುತ್ತಿದೆ
ನಾವು ಸಂತೃಪ್ತಿ ಹೊಂದುವ ಕ್ಷಣಕ್ಕೆ ಸನಿಹದಲ್ಲಿದ್ದೇವೆ... ಆದರೂ
ನೀನು ನನ್ನನ್ನು ಕಾಡುತ್ತಿರುವೆ, ನನ್ನ ಕಿಡ್ನಿಗಳನ್ನೇ ಕಬಳಿಸುತ್ತಾ...
ಹಿಗ್ಗಿದ ಕಿಡ್ನಿಗಳ (glomerulonephritis) ಕಾಯಿಲೆಯಂತೆ
ನಿನ್ನ ಮುತ್ತುಗಳು chemotherapy ಯಂತೆ
ಗುಣವಾಗುತ್ತಿವೆ ನನ್ನ ಗಾಢ ಹಂಬಲಗಳು
ನಿನಗಾಗಿ
ನಮ್ಮ ಕಣ್ಣೀರು insulin ಇದ್ದಂತೆ
Pancreas ಉದ್ವೇಗದಲ್ಲಿ ಈಜಾಡುತ್ತಿದೆ
ನೀನು ನನ್ನ painkiller ಆಗುವೆಯಾ?
Morphineನ ಮಳೆಸುರಿಸಿ ನನ್ನ ಸಂತಸದ ಶಿಖರವನ್ನೇರಿಸು
ನಾನು ನೋವಿನಲ್ಲಿದ್ದಾಗ
ನಾನು ನಿನ್ನ ಅಪ್ಪುಗೆಗಳ ಮತ್ತು ಮಾದಕ ಮೃದು ಸ್ಪರ್ಶದ
ದಾಸನಾಗಿಬಿಟ್ಟಿದ್ದೇನೆ
HIV virusಗಳಂತೆ
ನನ್ನ ಮತಿಯನ್ನು ಕೆಡಿಸಿಬಿಟ್ಟಿವೆ
ಮೃದುವಾಗಿ ಕೊಲ್ಲುತ್ತಾ
ನಿನ್ನ ಸಿಹಿ ಮಾತುಗಳೇ
ಆ ಕಿಡಿಗೇಡಿಗಳು
ನನ್ನಲ್ಲಿ ಅತಿಯಾದ ರಕ್ತದೊತ್ತಡ ಸೃಷ್ಟಿಸಿವೆ
ಈಗ ನನಗೆ ನೀನು ಬೇಕು
ರಕ್ತದೊತ್ತಡ ನಿಯಂತ್ರಿಸುವ
Beta-blocker ಔಷದಿಯಾಗಿ

ದೃಶ್ಯ:3

ಮುಸ್ಸಂಜೆ ಅಂಬೆಗಾಲಿಡುತ್ತಿದ್ದಾಗ
ನಾವು ಒಬ್ಬರ ಪಕ್ಕದಲ್ಲೊಬ್ಬರು ಅಂಗಾತ ಮಲಗಿರುತ್ತೇವೆ
Post-mortem ಹಾಸಿಗೆಯ ಮೇಲೆ
ಪೂರ್ಣ ನಗ್ನರಾಗಿ ಪರಮ ಶತ್ರುಗಳಂತೆ
ಯಾರಾದರೂ ಕತ್ತರಿಸಬಹುದು ನಮ್ಮ ದೇಹಗಳನ್ನು
ತುಂಡುತುಂಡು
ಮರಣೋತ್ತರ ಪರೀಕ್ಷೆಗಾಗಿ
ದೇವರಲ್ಲದಿದ್ದರೆ, ಯಾರಾದರೂ ಆ ಕ್ಷೇತ್ರದ ಪರಿಣತಿ ಪಡೆದವರು
ನಮ್ಮ ಪಾಪದ ಪ್ರೀತಿ
ಕಾಯಿಲೆಯ ಸೃಷ್ಟಿಗೆ, ಬೆಳವಣಿಗೆಗೆ, ಪರಿಣಾಮಗಳಿಗೆ ಕಾರಣಗಳನ್ನು
ಹುಡುಕಲು ಸಿಗಿದು ಪರಿಶೀಲಿಸಿ, ಹೃದಯದ ತೀವ್ರ ಬೇನೆಯೆಂಬ ತೀರ್ಮಾನ...
ಅದೊಂದು ಮುರಿದ ಬಾಣ...

ಮೂಲ : ಸುಲೈಮಾನ್ ಮೊಹಮ್ಮದ್ ಯುಸೋಫ್
ಕನ್ನಡಕ್ಕೆ: ಚಂದಿನ

May 18, 2009

ನಾವು ಬೇರೆಯಾದಾಗ

ಜ್ವಾಲಾಮುಖಿಯ ಗರ್ಜನೆಗೆ ಲಾವಾರಸ ಉಕ್ಕುತ್ತಿದೆ
ಚದುರಿ ಬಿದ್ದಿವೆ ಎಲ್ಲೆಡೆ ಸ್ಥಳೀಯರ ಶವಗಳು
ಹುಲ್ಲು ಕುಪ್ಪೆಗಳಿನ್ನು ಅನವಶ್ಯಕ
ಅಪಾರ ಆಸ್ತಿ, ಜೀವರಾಶಿಗಳೆಲ್ಲವೂ ಸರ್ವನಾಶ

ನಾನು ರೆಕ್ಕೆಯಂತೆ ತೇಲಾಡಬಹುದಿತ್ತು
ಆದರೆ, ನಿನ್ನ ಗಾಢ ಆರಾಧನೆಯ ತಳಪಾಯಕ್ಕೆ ಬಿದ್ದಿರುವೆ
ನಿರಂತರ ಗೊಣಗಾಡುವ ಬಾವಿಯಲ್ಲಿ ಮುಳುಗಿ,
ಮಂದಗತಿಯಲ್ಲಿ ತಳಕ್ಕೆ ತಲುಪುತ್ತಿರುವೆ

ನಿನ್ನ ಹೊಡೆತ ಜ್ವಾಲಾಮುಖಿ ಅಪ್ಪಳಿಸುವಷ್ಟೇ ಭಯಾನಕ
ನನ್ನನ್ನು ಲಕ್ಷೋಪಲಕ್ಷ ಚೂರುಗಳನ್ನಾಗಿಸಿದೆ
ಆದರೆ ನಿನ್ನ ಮಧ್ಯಭಾಗದಲ್ಲಿಯೇ ನಿಂತಿರುವೆ
ಆ ನಿನ್ನ ಭೀಕರ ಭೂತದ ದರ್ಶನಕ್ಕಾಗಿ

ನಿನ್ನ ಹಿಮಗಟ್ಟಿದ ಪುಟ್ಟ ಹೃದಯ
ನಿನ್ನ ಮಾತಿನಷ್ಟೇ ತಂಪಾಗಿರುವುದು
ಹೇಗಾದರೂ ಇರಲಿ, ಏನಾದರೂ ಆಗಲಿ
ನಾ ನಿನ್ನಲ್ಲಿಗೇ ಬರುವೆ, ಅಲ್ಲೇ ಹೋಡಾಡುವೆ

ನನ್ನಿಂದ ದಯವಿಟ್ಟು ದೂರ ಹೋಗಬೇಡ
ನಾನೇನಾದರು ನೋವುಂಟು ಮಾಡಿದರೆ
ನಿನ್ನ ಕ್ಷಮೆಯ ಬಿಕ್ಷೆ ಬೇಡಲೇ?
ನನ್ನ ಪ್ರೀತಿ ಸತ್ಯವಲ್ಲವಾದ್ದರಿಂದ

ಎಂದಾದರೂ ನನ್ನನ್ನು ಕ್ಲಿಷ್ಟ ಪರಿಸ್ಥಿತಿಯಲ್ಲಿ ಕಂಡಾಗ
ಹಾದಿಯು ಬುದ್ಧಿಭ್ರಮಣೆಯೆಡೆಗೆ ಕೊಂಡೊಯ್ಯುವಾಗ
ಯಾರಿಗೂ ಬೇಡವಾಗಿ, ದಿಕ್ಕಿಲ್ಲದವನಂತೆ ಪರದಾಡುವಾಗ
ಅದೇ ದಿನವೇ ನನ್ನ ಪ್ರೀತಿಯೂ ಸಹ ಹಾದಿ ತಪ್ಪುತ್ತದೆ

ನನ್ನ ಹೃದಯವು ಕಡುನೀಲಿಯಾದಾಗ, ಗುಲಾಬಿಯಂತಲ್ಲ
ಹೊಳಪಿನ ಕೆಂಪು, ಆಗಿನ ನಮ್ಮ ಅತೀವ ಅಪೇಕ್ಷೆಯಂತೆ
ನಿಲುಗಡೆಗಳು ಮತ್ತು ವಿರಾಮಗಳು ಇನ್ನೇಕೆ?
ಆ ವ್ಯಾಮೋಹದ ತೀವ್ರತೆ ಇನ್ನು ನೆನಪು ಮಾತ್ರ

ನಮ್ಮ ಒಲವಿನ ಕವನ ನೆನಪಿಸುತ್ತಿದೆ
ಮನುಷ್ಯರಿಗಿದು ಅತಿದೊಡ್ಡ ದುರಂತವೆಂದು
ನನ್ನ ರಕ್ತ ನೀರಿನಂತೆ ಹರಿಯುತ್ತಿದೆ
ನಿನ್ನ ಹಿಂಸಾತ್ಮಕ ಕೃತ್ಯಕ್ಕೆ ಸಾಕ್ಷಿಯಂತೆ

ವೈವಾಹಿಕ ಸಂಬಂಧ ನಾಶವಾಗಿದೆ
ಆ ಮಧುರ ಕನಸುಗಳು
ನಿನ್ನ ತೇವದ ಸಿಹಿ ಮುತ್ತುಗಳು
ಕಾಣುವಷ್ಟೂ ಸುಂದರವೆನಿಸುತ್ತವೆ

ನಾನು ಮರಳಿ ಮಣ್ಣಿಗೆ ತೆರಳುವಾಗ
ನಿನ್ನ ಹೃದಯವನ್ನು ಖಂಡಿತ ಜೊತೆಗೊಯ್ಯುವೆ
ಅಮೂಲ್ಯ ಆಸ್ತಿಯಂತೆ ಆ ಮೋಹಕ ಕ್ಷಣಗಳನ್ನು
ಮತ್ತು ನಮ್ಮ ಎಲ್ಲ ಮನಸ್ತಾಪಗಳನ್ನು
ಆ ಘಳಿಗೆಯಿಂದ ಅನನ್ಯತೆಯೆಡೆಗೆ

ಮೂಲ : ಸುಲೈಮಾನ್ ಮೊಹಮ್ಮದ್ ಯುಸೋಫ್
ಕನ್ನಡಕ್ಕೆ: ಚಂದಿನ

ಬಯಕೆ

ಬಯಕೆ ಒಂದಾಗಲು ಬಯಸುವುದು
ಅಭ್ಯಾಸ ಬಲದಿಂದ
ವಾದ-ವಿವಾದಗಳಲ್ಲಿ, ಮಹತ್ಕಾರ್ಯಗಳಲ್ಲಿ
ದೇಹ ನಿತ್ರಾಣಗೊಂಡಿದೆ...
ಮನವು ಹಾರಿದೆ ಮುಕ್ತ ಕೊಳದಲ್ಲಿ
ಜೇನು ಕರಗಿ ಹನಿಯಾಗಿ ತೊಟ್ಟಿಕ್ಕುತ್ತಿರಲು
ಜೀವ ಜೀವವನ್ನು ಅಪ್ಪಿಕೊಂಡು
ಮತ್ತೆ ಆತ್ಮರತಿಯ ಹಂಬಲ ತೀವ್ರವಾಗುತ್ತಿದೆ
ಆಗಾಧ ರಕ್ತದದಲೆಗಳು ಮುನ್ನುಗ್ಗುತ್ತಿವೆ
ಬಯಕೆ ರಕ್ತನಾಳಗಳಲ್ಲಿ ಪ್ರವಾಹವಿಟ್ಟಿದೆ
ಆ ತೀವ್ರತೆಯು ಸವಿಯನ್ನು ಆಕ್ರಮಿಸಿದೆ
ಸೂರ್ಯ ಬದುಕಿರುವವರೆಗೆ
ನಾನು ಪ್ರಕಾಶಿಸುವ ನಂಬಿಕೆಯನ್ನು ಕಾಣಬಲ್ಲೆ
ನೀಲಿ ಬಣ್ಣದಿಂದ ಚಿತ್ರಿಸಿದ ರಾತ್ರಿಗಳಿರುವವರೆಗೆ
ಈ ಬಂಧ ಸುತ್ತಿಕೊಂಡಿರುವುದನ್ನು ನಾನು ಕಾಣಬಲ್ಲೆ
ಓ ನನ್ನ ಆತ್ಮೀಯ ಗೆಳತಿ, ನನ್ನ ಒಡತಿ
ಅಪ್ಪಿಕೊ ನನ್ನನ್ನು...
ನಿನ್ನ ಕೊಳೆತ ಪ್ರೀತಿಯನ್ನು ಉಸಿರಾಡುವೆ
ಉಕ್ಕುವ ಕಾಮದ ಭಾರವನ್ನಿಳಿಸುವೆ
ನಿನ್ನ ಸ್ಮರಣೆಯ ಸಾಗರದಲ್ಲಿ ಈಜಾಡಲು ಅವಕಾಶ ಕೊಡು
ಅದರಲ್ಲಿ ನಗುನಗುತ್ತಲೇ ಮುಳುಗಿ... ಸಾಯುವೆ
ಬಯಕೆ ಬಯಕೆಯನ್ನು ಸೋಲಿಸಿದಾಗ
ಮಾದಕ ಸಂಗೀತ ಕೇಳಿಸುತ್ತದೆ

ಮೂಲ : ಸುಲೈಮಾನ್ ಮೊಹಮ್ಮದ್ ಯುಸೋಫ್
ಕನ್ನಡಕ್ಕೆ: ಚಂದಿನ

May 13, 2009

ಮತ್ತೆ ಬರುವನು ಚಂದಿರ - 22

ವೈರಾಗ್ಯ, ವ್ಯಾಮೋಹಗಳು
ಹೊಳೆವ ಮೊಣಚು ಕತ್ತಿಗಳು
ಇವರ ಜೊತೆಗೆ ಸರಸ ತರವೆ
ಸಂಯಮವಿರಲಿ ಚಂದಿರ

ಒಣ ವಿದ್ವತ್ತಿನ ಪ್ರದರ್ಶನ ಎಲ್ಲೆಡೆ
ಹಿಂಸಾತ್ಮಕ ಪ್ರವೃತ್ತಿ ಹರಡುತಿರೆ
ಸಹನೆ, ಸಂಯಮ ಬತ್ತಿ ಹೋಗಿದೆ
ಒಡಲು ಸತತ ಉರಿಯುತಿದೆ ಚಂದಿರ

ಅಂತಃಕಲಹಗಳ ತೊರೆಯುತ
ಅಂತಃಕರಣದ ಶುದ್ಧೀಕರಿಸಿ
ಆತ್ಮಾನುಸಂಧಾನ ಅಳವಡಿಸಿ
ಆತ್ಮ ವಿಮುಕ್ತಿ ಪಡೆಯೊ ಚಂದಿರ

ಅನುಭವದ ಮನನ ಬಲುಮುಖ್ಯ
ಪ್ರಾಮಾಣಿಕ ಪ್ರಯತ್ನ ಅತ್ಯಗತ್ಯ
ಪ್ರತಿಫಲದ ನಿರೀಕ್ಷೆ ತೊರೆದಾಗ
ಖಚಿತ ಪ್ರಗತಿ ಚಂದಿರ

ಭವಿಷ್ಯದ ಲೆಕ್ಕಾಚಾರ ತೊರೆದು
ದುಗುಡ, ಆತಂಕಗಳನು ದೂಡಿ
ಭಾವುಕ ಕ್ಷಣಗಳ ತೆಕ್ಕೆಯಿಂದ
ಹಾರುವ ಹಕ್ಕಿಯಾಗೊ ಚಂದಿರ

ಸಮೃದ್ಧ ಜ್ಞಾನ ತಳಹದಿಯಿಂದ
ಸಮಗ್ರ, ಸ್ಪಷ್ಟ ನಿಲುವು ಸಾಧ್ಯ
ವಿಚಿತ್ರ ವಿನ್ಯಾಸವೆ ವಿಶಿಷ್ಟವಲ್ಲ
ವಿಚಾರ ಮಾಡೊ ಚಂದಿರ

ಪರಿಪೂರ್ಣ ಪುರುಷೋತ್ತಮನ್ಯಾರು ಇಲ್ಲ
ಪರಿಶುದ್ಧ ಪಂಚಾಮೃತ ದೊರೆಯುವುದಿಲ್ಲ
ಕಲುಷಿತಗೊಂಡು ಕಲ್ಮಷವಾಗಿದೆ ಎಲ್ಲವು
ಸರಿಪಡಿಸುವ ದಾರಿ ತೋರೊ ಚಂದಿರ

ಆತ್ಮಜ್ಞಾನದ ಜೊತೆ ಸಂವಾದದಿಂದ
ಪರಿಜ್ಞಾನ ನೀಡುವ ಸರಳತೆಯಿಂದ
ಪರಿಶುದ್ಧತೆ, ಪ್ರಮಾಣಿಕತೆಗೆ ಹತ್ತಿರ-
ವಾಗುವ ಸಾಧ್ಯತೆಯಿದೆಯೊ ಚಂದಿರ

ಭ್ರಮಾಲೋಕದಿಂದಿಳಿದು ಬಾರ
ಬೇಡದ ಉಪದೇಶ ನೀಡಬೇಡ
ನೈಜ ನಡತೆ ಹಿತವೊ ಶೂರ
ನಿನ್ನ ಗೆಳೆಯನಾಗುವ ಚಂದಿರ

ಖಚಿತ ನಿಲುವು ಸುಲಭವಲ್ಲವೊ
ಪ್ರಖರ ಖ್ಯಾತಿ ಕುರುಡು, ಕೃತಕ
ವಿಷಯದ ಆಳಕಿಳಿದು ವಿಚಾರಮಾಡು
ವಿವೇಚನೆ ಪಡೆಯುವೆ ಚಂದಿರ

Apr 29, 2009

"ಮುಸ್ಸಂಜೆ ಮುಖಾಮುಖಿ" ಬಿಡುಗಡೆಗೆ - ನಿಮ್ಮ ಆಗಮನದ ನಿರೀಕ್ಷೆ..


ಆತ್ಮೀಯರೇ,
ಹೈದರಾಬಾದಿನಲ್ಲಿರುವ ಕಾರಣ ನಿಮ್ಮನ್ನು ಇದುವರೆಗೂ ಪ್ರತ್ಯಕ್ಷವಾಗಿ ಭೇಟಿಯಾಗುವ
ಅವಕಾಶ ಕೂಡಿ ಬರಲಿಲ್ಲ.
ಆದರೆ, ಇದೇ ಸೋಮವಾರ ಮೇ 04, 2009 ರ ಸಂಜೆ 5.30 ರಿಂದ 7.30 ರವರೆಗೆ ಯವನಿಕಾ, II ಮಹಡಿ, ಕಾನ್ಪರೆನ್ಸ್ ಹಾಲ್,
ನೃಪತುಂಗ ರಸ್ತೆ, ಬೆಂಗಳೂರು ಇಲ್ಲಿ ಒಂದು ಸಣ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನಿಮ್ಮನ್ನು ಭೇಟಿಯಾಗಲು ಇದೊಂದು
ಉತ್ತಮ ಅವಕಾಶವೆಂದು ಭಾವಿಸುತ್ತೇನೆ.
ಯಾವುದೇ ಕೆಲಸವಿದ್ದರೂ ದಯವಿಟ್ಟು ಈ ಕಾರ್ಯಕ್ರಮಕ್ಕೆ ಆಗಮಿಸಿ, ನಿಮ್ಮನ್ನು ಭೇಟಿಯಾಗುವ
ಅವಕಾಶವನ್ನು ತಪ್ಪದೇ ಕಲ್ಪಿಸಿಕೊಡುವಿರೆಂಬ ಒತ್ತಾಸೆಯೊಂದಿಗೆ ನಿಮಗಾಗಿ ಕಾತುರ ಹಾಗು ಕೂತೂಹಲದಿಂದ ಕಾದಿರುತ್ತೇನೆ.
ಅದೇ ಸಮಯದಲ್ಲಿ ನನ್ನ ಚೊಚ್ಚಲ ಕವನ ಸಂಕಲನ “ಮುಸ್ಸಂಜೆಯ ಮುಖಾಮುಖಿ” ಯನ್ನು
ಖ್ಯಾತ ಸಾಹಿತಿ ಹಾಗು ನಾಟಕಕಾರರಾದ ಡಾ.ಎಚ್. ಎಸ್.ವೆಂಕಟೇಶಮೂರ್ತಿಯವರು
ಬಿಡುಗಡೆ ಮಾಡಲಿದ್ದಾರೆ
ಹಾಗು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರೊ.ಬರಗೂರು ರಾಮಚಂದ್ರಪ್ಪ, ಖ್ಯಾತ ಚಿಂತಕರು ಹಾಗು ಚಲನಚಿತ್ರ
ನಿರ್ದೇಶಕರು, ವಿಶೇಷ ಅತಿಥಿಗಳಾಗಿ ಡಾ.ನಟರಾಜ್ ಹುಳಿಯಾರ್, ಹೆಸರಾಂತ ವಿಮರ್ಶಕರು ಹಾಗು ಲೇಖಕರು ಬರಲಿದ್ದಾರೆ.
ಅಧ್ಯಕ್ಷತೆಯನ್ನು ಡಾ.ನಲ್ಲೂರು ಪ್ರಸಾದ್, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಅವರು ವಹಿಸಿಕೊಳ್ಳಲಿದ್ದಾರೆ.
ಈ ಸಮಯದಲ್ಲಿ ನೀವು ಜೊತೆಯಾದರೆ ನನಗೆ ಬಹಳ ಸಂತೋಷವಾಗುತ್ತದೆ
ನಿಮ್ಮ ಆಗಮನದ ನಿರೀಕ್ಷೆಯಲ್ಲಿ,
ಧನ್ಯವಾದಗಳೊಂದಿಗೆ,
- ಚಂದಿನ
( ಚಂದ್ರಶೇಖರ್, ಈಟೀವಿ ಕನ್ನಡ, ಹೈದರಾಬಾದ್ )
09391041932
email:chandinais@gmail.com

Apr 27, 2009

ಮತ್ತೆ ಬರುವನು ಚಂದಿರ - 21

ಹೆಣ್ಣು, ಹೊನ್ನು, ಮಣ್ಣು ಮಿಥ್ಯೆ
ಮಾಯಾಜಾಲದ ಮರ್ಮವಿದು
ನಿಯಂತ್ರಣ ತೊರೆದ ಕ್ಷಣವೆ
ಲೀನವಾಗಿಬಿಡುವೆ ಚಂದಿರ

ಇತಿಮಿತಿಗಳ ಹಿಡಿತದೊಳಗೆ
ಪಕ್ವವಾಗಿ ನೀನು ಮಾಗಬೇಕು
ಅನುಭವಿಸಿದ ಅದೃಷ್ಟ ಸಾಕು
ಹೊರಗೆ ಬಾರೊ ಚಂದಿರ

ಧರ್ಮ, ಅರ್ಥ, ಕಾಮ, ಮೋಕ್ಷ
ಇವು ಯಾವ ಪರಿಯ ಪುರುಷಾರ್ಥ
ನಿಯಂತ್ರಣವೆ ಮೂಲ ಮಂತ್ರ
ಬದುಕು ಬೆಳಕಿನತ್ತ ಚಂದಿರ

ಪ್ರಕೃತಿಯ ಆರಾಧಕನಾಗು
ನಿತ್ಯ ಸಂತಸ ಸವಿಸಿ ಸವಿಯುತ
ಆಧ್ಯಾತ್ಮಿಕ ಮಾರ್ಗದಿಂದ
ಧರೆಯೆ ಸ್ವರ್ಗ ಚಂದಿರ

ಮನದಲಿ ಮನೆಮಾಡಿ ಕಾಡುವ
ದ್ವಂದ್ವ ದುಂಬಿಗಳ ಹೊರಗಟ್ಟು
ಕರ್ಮ ಧರ್ಮ ಇದುವೆ ಮರ್ಮ
ಸವಿಜೇನಿನಂತೆ ಚಂದಿರ

ನವರಸಗಳ ಮಿತ ಬಳಕೆಯಿಂದ
ಸಿಗುವ ಸುಖ, ಶಾಂತಿ ಸುಂದರ
ಸರಳ ಹಾದಿ ಸಂಕೀರ್ಣವಾಗಿದೆ
ಸುರುಳಿಗಳ ಕಡಿದು ಬಾರೊ ಚಂದಿರ

ಸಮಾನಾಂತರ ರೇಖೆಗಳ ಪಯಣ
ಎಂದಾದರು ಒಂದಾಗಲು ಸಾಧ್ಯವೆ
ಸಮತೋಲನದಿಂದ ಸರಿದೂಗುವ
ಸೂಕ್ಷ್ಮತೆಯ ಅಗತ್ಯವಿದೆ ಚಂದಿರ

ಲೋಲುಪತೆಯ ನಡುವೆ ಸಾಕ್ಷಿಪ್ರಜ್ಞೆ
ಉನ್ಮಾದ, ಉದ್ವೇಗವರಿವ ಸೂಕ್ಷಜ್ಞತೆ
ಸದಾ ಎಚ್ಚರದ ಮನೋಭಾವವಿರಲು
ಸನ್ನಿವೇಶ ಸರಳವಾಗ ಚಂದಿರ

ಆಳದ ತಳಪಾಯದಿಂದ
ರೀತಿ, ನೀತಿ, ತತ್ವ, ತರ್ಕ
ವಿಸ್ತಾರವಾಗಿರಲು ನೋಟ
ನಿಲುವು ಸ್ಪಷ್ಟವಾಗ ಚಂದಿರ

ಸತ್ವವಿರದ ನಿತ್ಯ ಕಲಹಕೆ
ಬಲಿಯಾಗಬೇಡ ಗೆಳೆಯನೆ
ಸುಂದರವೊ ಜಗದ ಹರವು
ಒಮ್ಮೆ ಇಣುಕಿ ನೋಡು ಚಂದಿರ

ಮುಸ್ಸಂಜೆಯ ಮುಖಾಮುಖಿ - ನನ್ನ ಮೊದಲ ಕವನ ಸಂಕಲನ ಶೀಘ್ರದಲ್ಲಿ...


Apr 21, 2009

ಮತ್ತೆ ಬರುವನು ಚಂದಿರ - 20

ಮನವ ಕಾಡುವ ಕೆಣಕುವ ಸಂಗತಿಗಳೆ
ಕರುಣೆಯಿರಲಿ ಕಾಲ ಕಲುಷಿತಗೊಂಡಿದೆ
ಮನೆಯೊಡಯನಿಗೇ ಮತಿಗೆಟ್ಟಿರಲು
ಮತ ನೀಡುವುದು ಯಾರಿಗೊ ಚಂದಿರ

ಪರಧಿಯಾಚೆಗೂ ಹರಹು ಚಾಚಿದೆ
ಯಾರ ಪಾತ್ರವೂ ಪೂರ್ಣವಾಗದೆ
ಸುಳಿವು ಸರಳವಾಗಿ ದೊರೆಯದಾಗ
ಸರಿಪಡಿಸುವುದೇಗೆ ಹೋಳೊ ಚಂದಿರ

ಗೋಜಲುಗಳನು ಗುಡಿಸಬೇಕೆ
ನೋವುಗಳನು ಮರೆಯಬೇಕೆ
ಸುತ್ತಿರುವ ಸುರಳಿ ಬಿಡಿಸಬೇಕೆ
ಜೊತೆಗಿರುವನು ಚಂದಿರ

ಬಿಸಿಲುಗುದುರೆ ಏರಿ ಬಂದೆ
ಬತ್ತಲಾರದ ಬಯಕೆಯಿಂದ
ಭಾರವಾಗಿವೆ ಭಾವನೆಗಳು
ಭರಿಸಲಾರೆನೊ ಚಂದಿರ

ಭಾವ ಸ್ತರದ ಮೂಲ ಸೆಳೆವಿದು
ಆಪ್ತವಾಗಿದೆ ಸುಪ್ತ ಆಕರ್ಷಣೆ
ಸವಿಯುವಷ್ಟು ಸಿಹಿಯನಿತ್ತು
ಸುಖವ ನೀಡಿತೊ ಚಂದಿರ

ಭವಬಂಧನದಲಿ ಸಿಲುಕಿತಾನು
ಭಾವಲೋಕದಿ ತಡಕುತಿರುವೆ
ಬಿಡಿಸಲಾಗದ ಒಗಟು ಗೆಳೆಯ
ಹುಸಿನಗುವ ಬೀರುವ ಚಂದಿರ

ಯಾಂತ್ರಿಕ ಬದುಕಿಗೆ ಬಡವನಾಗದೆ
ಪ್ರಕೃತಿ ಮಡಿಲಿಗೆ ಮರಳಿ ಬಾರೊ
ಗುಡುಗು ಮಿಂಚು ಸಿಡಿಲ ಸಾಲು
ಕೂಗಿ ಕರೆಯುತಿದೆ ಚಂದಿರ

ಸಂದಿಗ್ಧ ಸನ್ನಿವೇಶ ಎಚ್ಚರವಿರಲಿ
ಸಂಯಮವಿರಲು ಗೆಲುವು ಖಚಿತ
ಸಮಯಪ್ರಜ್ಞೆ ಸೂಕ್ತ ಮದ್ದು
ಎಂದು ಸಳಹೆ ಕೊಟ್ಟು ಚಂದಿರ

ಅತಿಯಾಸೆಗೆ ಬಲಿಯಾಗ ಬೇಡ
ಸರಳವಿಹುದು ಬದುಕು ಬಹಳ
ಎಲ್ಲೆಮೀರದೆ ಪಯಣ ಸಾಗಲಿ
ಸುಖವ ನೀಡುವ ಚಂದಿರ

ನಾಟಕೀಯ ವರ್ತನೆ ಅತಿರೇಕವಾಗಿದೆ
ಆತ್ಮವಂಚನೆ ದಿನವು ಸಾಮಾನ್ಯವಾಗಿದೆ
ಸಿಡಿಲು ಬಡಿಯುವ ಮುನ್ನ ಎಚ್ಚೆತ್ತುಕೊ
ಸಹಾಯ ಮಾಡುವ ಚಂದಿರ

Apr 20, 2009

ಪ್ರೀತಿ ಅಥವಾ ಕಾಮ

ಬರಗಾಲ ದಾಹವನ್ನು ಕೊಲ್ಲುತ್ತದೆ
ಫಸಲು ಸಿಗುವುದು ಬಹಳ ವಿರಳ
ಒಣಗಾಳಿಯು ನರ್ತಿಸುತ್ತಿದೆ ಮೈಸುಡುವ ಬಿಸಿಲಿನಲ್ಲಿ
ಎಳೆಗಳೆಲ್ಲಾ ಮರಗಳನ್ನು ತೊರೆಯುತ್ತಿವೆ
ಭೂಮಿ ಬಿರುಕು ಬಿಟ್ಟಿದೆ
ನಾನು ವಿಷಾದಿಂದ ನಡೆಯುತ್ತಿದ್ದೇನೆ
ಮುಳ್ಳು ಕಾಲನ್ನೇರಿದಾಗ
ಅಂಗಾಂಗಗಳು ನಡುಗುತ್ತವೆ ಬತ್ತಿಹೋಗಿ
ನನ್ನ ಹೃದಯ ಬಡಿತ ಡಂಗುರ ಬಾರಿಸಿದಂತಿದೆ
ಮಸುಕಾದ ಆಗಸದಡಿಯಲ್ಲೆಲ್ಲೋ ಮೃದುವಾಗಿ
ತೆಳುವಸ್ತ್ರವನ್ನಿಡಿದು ಮಹಿಳೆಯೋರ್ವಳು ನನ್ನತ್ತ ಬೀಸುತ್ತಿದ್ದಾಳೆ
ಅವಳ ಪಕ್ಷಕ್ಕೆ ಸೇರಿಸಿ ಕೊಳ್ಳುವುದಕ್ಕಾಗಿ
ಗುಣಿ ಅಗೆದು, ಮುಚ್ಚುತ್ತಿದ್ದಾರೆ
ಒಂದು ಭಯಾನಕ ಆಟದಂತೆ
ಸಾಕಷ್ಟು ಅಭದ್ರತೆ
ಆತಂಕ ಸೃಷ್ಟಿಸುವ ಅಪ್ರಬುದ್ಧತೆ
ನೀವು ಪರಿಶೀಲಿಸಿದಾಗ
ಗುಲಾಬಿ ಇನ್ನೂ ಉಸಿರಾಡುತ್ತಿತ್ತು
ಆದರೆ ನೀವು ಅವುಗಳ ಬೆಳೆಸಬೇಕಾದರೆ
ಆ ರುದ್ರಭೂಮಿಯಲ್ಲಿ
ಎಲ್ಲಿ ಪ್ರೀತಿ ಮತ್ತು ಕಾಮ
ಕದನಕ್ಕಿಳಿದಿರುವ ಸಂದರ್ಭದಲ್ಲಿ.

ಮೂಲ ಕವಿ : ಸುಲೈಮಾನ್ ಮೊಹಮ್ಮದ್ ಯುಸೋಫ್
ಕನ್ನಡಕ್ಕೆ : ಚಂದಿನ

ಪವಿತ್ರ ಕೋಣೆ

ಆ ಕೋಣೆಯು ಸಂಪೂರ್ಣವಾಗಿ ಅತೀವ
ಬೇಸರ, ನಿರಾಸೆ, ನೀರಸ, ಜಿಗುಪ್ಸೆಗಳಿಂದ ತುಂಬಿ ಹೋಗಿದೆ
ಮುಂದೆ ಏನೇನೂ ತೋಚದಂತಾಗಿದೆ
ಆ ನಾಲ್ಕೂ ಗೋಡೆಗಳು ಸಾಕ್ಷಿಯಾಗಿ ನಿಂತಿವೆ
ವೀರ್ಯ, ರಕ್ತ, ಬೆವರು ಮತ್ತು ಸುರಿಸಿದ ಕಣ್ಣೀರಿಗೆ
ನಡುವೆ ಉಸಿರುಗಟ್ಟಿಸುವ ಹೀನಸ್ಥಿತಿ
ಹಾಸಿಗೆ ಕಲೆಗಳಿಂದ ಕುಲಗೆಟ್ಟು ಸತ್ತೇ ಹೋಗಿದೆ
ಬಿರುಸು ನುಡಿ, ಪಿಸುನುಡಿಗಳೆಲ್ಲವೂ
ಭೂತಕಾಲದ ಐಶಾರಾಮಿ ವಸ್ತುಗಳಾಗಿವೆ
ಹೊರಗೆ ಹೋಗುವ ಬಾಗಿಲು ಇತಿಹಾಸವಾಗಿದೆ
ನಮ್ಮ ಸ್ಮಶಾನದೆಡೆಗೆ ಕರೆದೊಯ್ಯುತ್ತಿದೆ

ಬಂಧನದಿಂದ ಮುಕ್ತಿ ಪಡೆಯಲು
ಸ್ವಚ್ಛಂದವಾಗಿ ಹಾರುವ ಮೊದಲು
ಒಂದೇ ಒಂದು ಪದ ಸಾಕು
ಆ ಕೋಣೆಯನ್ನು
ಬುಡ ಸಮೇತ ಕಿತ್ತೆಸೆಯಲು
ಅದುವೇ ಭೂಕಂಪ

ಮೂಲ ಕವಿ : ಸುಲೈಮಾನ್ ಮೊಹಮ್ಮದ್ ಯುಸೋಫ್
ಕನ್ನಡಕ್ಕೆ : ಚಂದಿನ

Apr 19, 2009

ಗರ್ಭಪಾತ

ನಾಳೆಯೆಂಬುದು ಮುಗ್ಧತೆಯ
ಪಟ್ಟಿಯನ್ನು ಸುತ್ತಿಕೊಂಡಿರುವಾಗ
ನಾನು ಬಂದೆ
ನಿನ್ನ ಬೆಚ್ಚಗಿನ ಗರ್ಭದೊಳಗೆ
ತಾಯಿ....
ನಿನ್ನ ಆಯ್ಕೆಯೊಂದಿಗೆ ಅಲ್ಲ
ಅಥವಾ ನನ್ನದೂ ಅಲ್ಲ
ಸಮಯದೊಂದಿಗೆ
ನಿಶ್ಚಯಿಸಿದಂತೆ ಬದುಕಲು
ನಮ್ಮ ಮನುಕುಲದ ಮರದಲ್ಲಿ
ಆದರೆ ಪ್ರೀತಿಯು
ಶರೀರ ಮತ್ತು ಮಾತುಗಳಾಗಿ ಬೆಳೆಯುವ ಮುನ್ನವೇ
ಸಂಪೂರ್ಣವಾಗಿ ರೂಪಗೊಳ್ಳುವುದರೊಳಗೇ
ತೀವ್ರ ರಕ್ತಸ್ರಾವವು ನನ್ನ
ಪಂಚಭೂತಗಳಲ್ಲಿ ಲೀನವಾಗಿಸಿತು.

ಮೂಲ ಕವಿ : ಯೂನೂಸ್ ಪೀರ್ಬೊಕಸ್
ಕನ್ನಡಕ್ಕೆ : ಚಂದಿನ

ಸೌಂದರ್ಯ?

ಎಲ್ಲೆಮೀರಿದವರಿಗಾಗಿ
ಕೃತಜ್ಞತೆಗಳೊಂದಿಗೆ
ಧನ್ಯವಾದಗಳನ್ನು
ಅರ್ಪಿಸುವುದೇ ಸೊಗಸು

ತನ್ನ ಹಾದಿಯನ್ನೇ ಮರೆತು
ಅಲ್ಲ, ತನ್ನ ಬದುಕನ್ನೇ ಬದಿಗಿಟ್ಟು,
ಕುಂಟ ನಾಯಿಯನ್ನು ದುರಂತದಿಂದ
ಪಾರು ಮಾಡುವವನೇ ಸುಂದರ

ನಾಳೆ ಇದ್ದರೂ ಇಲ್ಲದಂತೆ
ಈ ಕ್ಷಣವನ್ನು ಆಸ್ವಾದಿಸುವುದನ್ನು,
ಅಥವಾ ವಿಧಿಯ ಕ್ರೂರ ನೋಟಕ್ಕೆ
ಎದೆಗುಂದದಿರುವುದನ್ನು ಕಲಿತಾಗ
ಹಿತವಾದ ಭಾವನೆಗಳು ಮೂಡುತ್ತವೆ

ಅತೀವ ಸಂಕಷ್ಟದಲ್ಲಿರುವಾಗ,
ಪ್ರತಿಕ್ಷಣವೂ ಅಮೂಲ್ಯವಾದಾಗ
ಅವನು ಕೊನೆಯುಸಿರೆಳೆಯುವ ಕ್ಷಣದಲ್ಲಿದ್ದರೂ
ಬೀಕರ ಯುದ್ಧದಲ್ಲಿ ನೊಂದವರ ಶುಶ್ರೂಷೆ
ಮಾಡುವವನೇ ಅತಿ ಸುಂದರ

ತೀವ್ರ ರಕ್ತದಾಹವಿರುವ ಪ್ರಪಂಚದಲ್ಲಿ
ಮೌನವಾಗಿ, ವಿನಯವಂತನಾಗಿ
ಮಾನವತ್ವವನ್ನು ಜೊತೆಗೊಯ್ಯುತ್ತಿದ್ದಾನೆ.

ಮೂಲ ಕವಿ : ಯೂನೂಸ್ ಪೀರ್ಬೊಕಸ್
ಕನ್ನಡಕ್ಕೆ : ಚಂದಿನ

Apr 18, 2009

“ನಂಬಿಕೆ” ಎಂಬುದೊಂದು ಅತ್ಯುತ್ತಮ ಆವಿಷ್ಕಾರ

“ನಂಬಿಕೆ” ಎಂಬುದೊಂದು ಅತ್ಯುತ್ತಮ ಆವಿಷ್ಕಾರ
ಸಭ್ಯ ಮಹನೀಯರು ನೋಡ ಬಹುದಾದಾಗ---
ಆದರೂ, ತುರ್ತು ಪರಿಸ್ಥಿತಿಯಲ್ಲಿ ಭೂತಗನ್ನಡಿ
ಜೊತೆಗಿರುವುದು ಬಹಳ ಕ್ಷೇಮ.

ಮೂಲ ಕವಿಯತ್ರಿ : ಎಮಿಲಿ ಡಿಕಿನ್ಸನ್
ಕನ್ನಡಕ್ಕೆ : ಚಂದಿನ

ಸರ್ “ನಿಮ್ಮನೇಕೆ ಪ್ರೀತಿಸುವೆ”

ಸರ್ “ನಿಮ್ಮನೇಕೆ ಪ್ರೀತಿಸುವೆ”
ಏಕೆಂದರೆ,
ಬೀಸುವ ಗಾಳಿಗೆ ಉತ್ತರ ನೀಡಲು
ಹಸಿರು ಹುಲ್ಲಿನ ಅಗತ್ಯವಿಲ್ಲ
ಆಲ್ಲಿಂದ ಅವನು ಸುಳಿದಾಗ
ಅವಳಿಗೆ ಅವಳ ಜಾಗವನ್ನು ರಕ್ಷಿಸಿಕೊಳ್ಳಲಾಗುತ್ತಿಲ್ಲ.

ಏಕೆಂದರೆ, ಅವನಿಗೆ ಗೊತ್ತಿತ್ತು
ಆದರೆ ನಿನಗೆ ಗೊತ್ತಿಲ್ಲ
ಹಾಗೇ ನಮಗೆ ಬೇಕಾದಷ್ಟು
ತಿಳುವಳಿಕೆಯೂ ಇರಲಿಲ್ಲ
ಜ್ಞಾನ ಎಂಬುದು ಹಾಗೇ ಅಲ್ಲವೇ

ಮಿಂಚು ಎಂದಿಗೂ ಕಣ್ಣನ್ನು ಕೇಳಲಿಲ್ಲ
ಆದುದರಿಂದಲೇ ಅವನು ಹತ್ತಿರವಿದ್ದರೂ
ಅವು ಮುಚ್ಚಿದ್ದವು
ಏಕೆಂದರೆ, ಅವನಿಗೆ ಗೊತ್ತು ಅವುಗಳು ಮಾತನಾಡಲಾರವೆಂದು
ಮಾತನಾಡಲು,
ಮತ್ತೆ ವಿಶೇಷ ಕಾರಣಗಳೇನೂ ಇರಲಿಲ್ಲ
ಅಲ್ಲಿ ಎಲ್ಲರನ್ನೂ ಆಕರ್ಷಿಸುವ ಸೂಕ್ಷ್ಮ ಸೌಂದರ್ಯವಿದೆ

ರವಿ ಮೂಡುವಾಗ, ಪ್ರಭುವೆ, ನನ್ನನ್ನು ಒತ್ತಾಯಿಸಬೇಡಿ
ಏಕೆಂದರೆ, ಅವನು ನನಗೆ ರವಿ ಮೂಡುವಂತೆ ಕಾಣುತ್ತೇನೆ
ಆದ್ದರಿಂದಲೇ,
ಅವನನ್ನು ಆಗ ಪ್ರೀತಿಸುತ್ತೇನೆ.

ಮೂಲ ಕವಿಯತ್ರಿ : ಎಮಿಲಿ ಡಿಕಿನ್ಸನ್
ಕನ್ನಡಕ್ಕೆ : ಚಂದಿನ

ನಂಬಿಕೆ ಎಂಬುದು ರೆಕ್ಕೆಗಳೊಂದಿಗೆ

ನಂಬಿಕೆ ಎಂಬುದು ರೆಕ್ಕೆಗಳೊಂದಿಗೆ ಇರುತ್ತದೆ
ಆತ್ಮದೊಳಗೆ ದೃಢವಾಗಿ ನೆಲೆಯೂರಿ
ಶಬ್ದಗಳಿಲ್ಲದ ರಾಗದಲ್ಲಿ ಹಾಡುತ್ತಿರುತ್ತದೆ
ನಿರಂತರ......

ವೇಗವಾಗಿ ಬೀಸುವ ಗಾಳಿ ಹಿತವಾಗಿ ಕಂಡರೂ
ಒಮ್ಮೆಗೇ ಅಪ್ಪಳಿಸುವ ಬಿರುಗಾಳಿ ಅತೀವ ಹಾನಿಯ
ಜೊತೆಗೆ ನೋವುಂಟುಮಾಡುತ್ತದೆ,
ಎಷ್ಟೋ ಹಕ್ಕಿಗಳಿಗೆ ನೆಮ್ಮದಿ ನೀಡಿದ
ಆ ಪುಟ್ಟ ಹಕ್ಕಿಗೆ ತೊಂದರೆ ಉಂಟುಮಾಡಬಹುದು

ಹಿಮಪ್ರದೇಶದಲ್ಲಿ ನಾನದನ್ನು ಕೇಳಿದ್ದೇನೆ
ಹಾಗೇ ಅಪರಿಚಿತ ಸಾಗರದ ಮೇಲೆ
ಅದು ಅಂತಿಮ ಘಟ್ಟದಲ್ಲಿದ್ದರೂ ಸಹ
ನನ್ನಿಂದ ಒಂದು ತುತ್ತನ್ನೂ ಬೇಡಲಿಲ್ಲ.

ಮೂಲ ಕವಿಯತ್ರಿ : ಎಮಿಲಿ ಡಿಕಿನ್ಸನ್
ಕನ್ನಡಕ್ಕೆ : ಚಂದಿನ

Apr 17, 2009

ನೀನಲ್ಲಿರುವೆಯಾ?

ನೀನಲ್ಲಿರುವೆ,
ಆಗಷ್ಟೇ ಜನಿಸಿದ ಅತಿಮೃದುವಾಗಿರುವ ಮಗುವಿನ ನಗುವಿನಲ್ಲಿ,
ನಿಶ್ಛಲವಾಗಿರುವ ಬಾವಿಯ ನೀರಿನಲ್ಲಿ,
ನಸುಕಿನ ಪಿಸುಮಾತಿನಲ್ಲಿ,
ಚಂದ್ರ, ತಾರೆಗಳ ನೀರವ ಮೌನದಲ್ಲಿ,
ಅನನ್ಯ ಅನುಬಂಧಗಳ ಸುತ್ತಿಕೊಂಡು.

ಹೌದು, ನನಗೆ ಗೊತ್ತಿದೆ ನೀನಲ್ಲಿರುವೆಯೆಂದು,
ಸರಳತೆಯೆಂಬ ಏಕಾಂಗಿ ಗೂಡಲ್ಲಿ,
ನನ್ನ ಮನದೊಳಗಿನ ಕ್ಲಿಷ್ಟತೆಯಲ್ಲಿ,
ಸುರಿಯುವ ಮಳೆಯ ಸಭ್ಯತೆಯಲ್ಲಿ,
ನಿನ್ನ ಅಮೋಘ ದೃಶ್ಯ ಆ ಶಿಖರದ ತುಟ್ಟತುದಿಯಲ್ಲಿ,
ಗುಡುಗು, ಮಿಂಚುಗಳು ಸಿಡಿಯುವುದರಲ್ಲಿ,
ನಿನ್ನ ಅತೀವ ಸಂತಸ ವ್ಯಕ್ತವಾಗುವುದು.

ಆದರೆ,

ನೀನೆಲ್ಲಿರುವೆ?
ನಿನ್ನ ಹೆಸರಿನಲ್ಲಿ,
ಸೋದರ ಸೋದರನ ಬರ್ಬರವಾಗಿ ಕೊಲೆಗೈದಾಗ,
ಭೂಮಿ ಬಾಯ್ತೆರೆದು,
ತಾಯಿಯನ್ನೇ ನುಂಗುವಾಗ, ತಂಗಿಯ ಮಾನಹರಣ ನಡೆಸುವಾಗ.
ಮಾನಸಿಕವಾಗಿ, ದೈಯಿಕವಾಗಿ ನಿರಂತರವಾಗಿ ಹಿಂಸಿಸುವಾಗ,
ಧಾರ್ಮಿಕ ನಿಯಮಾನುಸಾರದ ಹೆಸರಲ್ಲಿ
ಗೌರವ ಕೊಲೆಗಳು ಮಾಡಿ ಅಬ್ಬಿರಿಸುವಾಗ.

ಆದರೆ ನೀನೆಲ್ಲಿರುವೆ?
ಯಾವಾಗ ನಿನ್ನ ಸೃಷ್ಠಿಯಲ್ಲಿ,
ನಾನು ಹಸಿವನ್ನು ಕಾಣುತ್ತಿದ್ದೇನೆ,
ರೋಗ, ರುಜನುಗಳಿಂದ ನಾಶವಾಗುವುದು ನೋಡುತ್ತಿದ್ದೇನೆ,
ಗಂಡು ಹೆಣ್ಣಿಗೆ ಅಗೌರವ ತೋರುವುದು ಕಂಡು ನೊಂದಿದ್ದೇನೆ,
ಅನಾಥ ಮಕ್ಕಳು, ಹಾಗೇ ಯಾರಿಗೂ ಬೇಡವಾದ
ತಂದೆ-ತಾಯಿಗಳನೇಕರನ್ನು ಎದುರಲ್ಲೇ ಕಾಣುತ್ತಿದ್ದೇನೆ,
ನಿಬಂಧನೆಗಳೊಂದಿಗೆ ಪ್ರೀತಿಯನ್ನು,
ಪ್ರೀತಿ ಕೇವಲ ಹಣಕ್ಕಾಗಿ, ಮೋಜಿಗಾಗಿ ಹಾಗು ಕೇವಲ
ದೈಹಿಕ ಸಂಪರ್ಕಕ್ಕಾಗಿ ಬಳಸುವುದನ್ನು ಕಂಡು ತಳಮಳಗೊಂಡಿದ್ದೇನೆ.

ಆದರೆ, ನಾನು ಸಹ ಮನುಷ್ಯಳು,
ನಿಮ್ಮಂತೆ ಸ್ವಾಭಾವಿಕವಾಗಿ ಜನಿಸಿದವಳು,
ದಯವಿಟ್ಟು ನನ್ನನ್ನು ಹಾಗೇ ಕಾಣಿರಿ,
ಬನ್ನಿ ನೆರವಾಗಿ,
ನನಗೆ ಅನ್ಯ ಮಾರ್ಗವಿಲ್ಲ,
ಆದರೆ ನಿಮ್ಮನ್ನು ಪಡೆಯಲು ಇನ್ನೂ ಎತ್ತರಕ್ಕೇರಬೇಕು ಎಂಬುದಾದರೆ;
ದಯವಿಟ್ಟು ಒಮ್ಮೆಗೆ ಒಂದೇ ದಿನವನ್ನು ಪಡೆಯುವ ವಿಧಾನವನ್ನು ಕಲಿಸಿ ಕೊಡಿ.

ಮೂಲ : ಅಂಜಲಿ ಸಿನ್ಹಾ
ಕನ್ನಡಕ್ಕೆ : ಚಂದಿನ