Jan 24, 2009

ಆಫ್ರಿಕಾ ಮಕ್ಕಳು

ನಮ್ಮಲ್ಲಿ ಎಷ್ಟೋ ಮಂದಿ,
ನಮ್ಮ ಕುಟುಂಬ ಸುಧಾರಣೆಗಾಗಿ ಮತ್ತೆ
ಮುಂಜಾವಿನ ಅದೃಷ್ಟದ ಕೋಳಿಕೂಗು
ಕೇಳಿಸಿಕೊಳ್ಳಲು ಹಂಬಲಿಸುತ್ತೇವೆ.
ಹಸನ್ಮುಖರಾಗಿ, ಕ್ಷಿಪ್ರಗತಿಯ ಲಯಕೆ ಕುಂಡಿ ತಿರುಗಿಸಿ ಕುಣಿಯುತ್ತೇವೆ.

ದೇಶದೆಲ್ಲೆಡೆಗೆ ನಾವು ಜೀವ ತುಂಬುತ್ತೇವೆ,
ಎಲ್ಲವೂ ಧೂಳಬ್ಬಿರುವ ಈ ರಸ್ತೆಗಳಲ್ಲೇ ಆಗುತ್ತದೆ,
ನಾವು ಕಂಬಳಿಗಾಗಿ, ಕೂಳಿಗಾಗಿ ಹೊಡೆದಾಡುತ್ತೇವೆ,
ಪುಟ್ಟ ತಂಗಿಯ ಜೀವಕ್ಕಾಗಿ, ಅವಳಿಗೆ ಅಗತ್ಯವಿದ್ದಾಗ
ಆ ನಿರ್ಜನ ಪೊದೆಗಳ ಮೂಲಕ ಬೆನ್ನಮೇಲೊಯ್ಯುತ್ತೇವೆ.
ಮತ್ತು ಅವಳು ಹಾಗೆ.

ನಮಗೆ ಸಾವು ಗೊತ್ತಿದೆ,
ಅದೊಂದು ಸೊಂಬೇರಿ ಕಳ್ಳ,
ನಮ್ಮ ಅಮ್ಮನನ್ನು ನಿಧಾನವಾಗಿ ತುಂಡು, ತುಂಡಾಗಿ ಕಬಳಿಸುತ್ತದೆ.
ನಾವವಳ ಬಿಸಿಯಾದ ಮೈಯನ್ನು ಸವರುತ್ತಾ,
ಸುತ್ತಲೂ ಸ್ವಶ್ಚವಾಗಿಡಲು ಯತ್ನಿಸುತ್ತೇವೆ.
ಮತ್ತೆ ಅದು ಕಿರುಚುತ್ತಾ ನಮ್ಮನ್ನು ಎಬ್ಬಿಸುತ್ತದೆ.

ಆದರೂ ನಮಗೆ ಮಾತಾಡಲು ಶಕ್ತಿಕೊಡಿ,
ಆಗ ನಾವು ನಮ್ಮ ಕರುಳಿಂದ ಹಾಡುತ್ತೇವೆ.
ನಂಬಿಕೆ, ಎಷ್ಟೋಸಾರಿ ಇವನೊಬ್ಬನೇ,
ನಮ್ಮ ಹೆಸರುಗಳ ನೆನಪಿಟ್ಟುಕೊಂಡವನು.

ನಾವು ಬಲ್ಲೆವು, ಆ ಬೆಂಕಿಯ ಚೆಂಡು ಸೂರ್ಯ
ಸ್ಥಬ್ಧ, ಭೀಕರ ಬಯಲಲ್ಲಿ ಸುಡುವ ಬಿಸಿಲಿಂದ ಕರಗುವ ದಿನ,
ಹೇಗೆ ತೂಗಾಡುವನೆಂದು,

ನಾವು ಈ ಧೂಳಿನಲ್ಲೇ ನಿದ್ರಿಸುತ್ತೇವೆ,
ಆ ನಿರ್ಭಯ ನಕ್ಷತ್ರಗಳ ಅಡಿಯಲ್ಲೇ.

(ಮೂಲಕವಿ: ನಿಕೋಲ್ ಬಿಯೋಚಾಂಪ್ )

Jan 23, 2009

ಮತ್ತೆ ಬರುವನು ಚಂದಿರ - 13

ಹೊಳೆವ ಮುಖದಲಿ ಭಯದ ನೆರಳು
ಮುಗ್ಧ ಮನಸಲಿ ಕಹಿಯ ಸಾಲು
ಸಿಗುವ ಸಿಗದಿಹ ಈ ಆಟ ದಿನವು
ಎನ್ನ ಅಲುಗಾಡಿಸದಿರೊ ಚಂದಿರ

ಊರುಕೇರಿಯ ನೆನಪಿನೊಡನೆ
ಕಳೆದ ಬಾಲ್ಯದ ಮಧುರ ಕಲ್ಪನೆ
ಕಣ್ಣಂಚ ದಾಟಿ ಹೊರಬಿದ್ದ ಮುತ್ತಿನ
ಹನಿಗಳ ಲೆಕ್ಕ ಬೇಕೆ ಚಂದಿರ

ದುಷ್ಟ ಶಕ್ತಿಯ ಪರಾಕಾಷ್ಠೆ
ನೆತ್ತಿಗೇರಿ ಸುತ್ತ ಗದ್ದಲ
ಶಿಷ್ಟ ಶಕ್ತಿಯ ಮೌನದಿಂದೆ
ಯಾವ ತಿರುಳಿದೆ ಚಂದಿರ

ಆರು ಬಂದರು ಆರು ಹೋದರು
ಲೆಕ್ಕ ಸಿಗುವುದೆ ನಾವಿಕ
ಅಲೆಗಳೆದ್ದು ಹಡಗು ಮುಳುಗಲು
ಆಳದರಿವು ಬೇಕೆ ಚಂದಿರ

ದಿನವು ಹೊಸತನು ಹುಡುಕುತಿರು
ಕ್ಷಣವು ಉಸಿರನು ಮರೆಯದಂತೆ
ಅಲೆಗಳೆಲ್ಲವು ದಡದಿ ಕರಗಲು
ಮತ್ತೆ ಎದ್ದು ಬರುವವೊ ಚಂದಿರ

ಎಲ್ಲೆ ಇರದಿಹ ಜೀವ ಸಂಕುಲ
ಇರುವ ಪರಿಯ ಅರಿವ ಛಲ
ಕಣ ಕಣಗಳು ಸೇರಿ ಸಕಲ
ಜಗದ ಉದಯವೊ ಚಂದಿರ

ಭಾರವಾದ ಏಕಾಂತ ಅನುಭವಿಸಿ
ಕಹಿಯ ಭಾವಗಳ ನೋವು ಸಹಿಸಿ
ಹಗುರಾಗಿ ಹಾರಿ ಹೋಗುವಾಸೆಗೆ
ರೆಕ್ಕೆ ಕೊಡುವನೊ ಚಂದಿರ

ಅಂತರಂಗದ ಅಗಾಧ ಏಕಾಂತದಿ
ಅನುಭವದ ವಿಶಾಲ ಅರಿವಿಂದ
ಮುಗ್ಧ ಮಗುವಂತೆ ನೀನಾದಾಗ
ಮುದ್ದಾದ ಜಗವ ಕಾಣುವೆ ಚಂದಿರ

ಮನವು ಮರಗಟ್ಟಿ ತಟಸ್ಥ
ಮಾಡುವ ಕೆಲಸ ಅಸ್ತವ್ಯಸ್ತ
ಭರಿಸಲಾಗದ ಆಯಾಸಕೆ
ವಿಶ್ರಾಂತಿ ನೀಡೊ ಚಂದಿರ

ವಿಡಂಬನಾತ್ಮಕ ನೋಟಗಳೇಕೆ
ರಕ್ಷಣಾತ್ಮಕ ನಿಲುವುಗಳು ಬೇಕೆ
ಅಂತರಂಗದ ಆಳಕಿಳಿದು ಕೇಳು
ಏಕಾಂತ ಬೇಡುವುದು ಚಂದಿರ

ತಪ್ಪೊಪ್ಪಿಗೆ

ಕವನ ಬರೆಯುವುದೇಗೆಂದು ನನಗೆ ಖಂಡಿತ ಗೊತ್ತಿಲ್ಲ,
ಆದ್ದರಿಂದಲೇ ಇತರರ ಕವನಗಳ, ವಿಶೇಷವಾಗಿ ಮೊದಲ ಸಾಲುಗಳನ್ನು
ಕುತೂಹಲದಿಂದ ಗಮನಿಸುವೆ,
ಕವನ ಹೇಗೆ ಶುರುಮಾಡುತ್ತಾರೆಂಬುದನ್ನು ಅರಿಯುವ ಆಸೆಯಿಂದ
ಕಳ್ಳ ಬೆಕ್ಕಿನಂತೆ ತುಸು ತೆರೆದ ಬಾಗಿಲಲ್ಲಿ ಹೊಂಚಿಹಾಕಿ ನೋಡುವೆ.
ನಂತರ ಅವರ ಕವನ ರಚಿಸುವ ಬಗೆಯನ್ನು ಕಿಟಕಿಯಿಂದ ಇಣುಕಿ ನೋಡುವೆ,
ಅವರು ಪದಗಳ ಸಾಂಗತ್ಯ ಸಾಧಿಸುವ ಪರಿಯನ್ನು ಪರಿಶೀಲಿಸುವೆ,
ಪದಗಳ ಕೆಣಕುವುದನ್ನು, ಜೊತೆ ಸೆಣಸಾಡುವುದನ್ನು, ಪಳಗಿಸುವುದನ್ನು,
ಹೆಕ್ಕಿ ಪೋಣಿಸಿ, ಮತ್ತೆ ಅದರ ಸೌಂದರ್ಯ ಸವಿಯುವುದನ್ನು,
ಮೊದಲು ಎಚ್ಚರಿಕೆಯಿಂದ, ನಂತರ ತೀವ್ರಗತಿಯಲ್ಲಿ ಸಂಪೂರ್ಣವಾಗಿ,
ದಯವಿಟ್ಟು ತಪ್ಪಾಗಿ ಅರ್ಥೈಸಬೇಡಿ, ನಾನಲ್ಲಿ ಹೆಚ್ಚು ಸಮಯ ಇರುವುದಿಲ್ಲ,
ಅವರು ಆ ರೊಮಾಂಚನದ ಅನುಭೂತಿ ಪಡೆಯುವ ಕ್ಷಣದವರೆಗೆ ಮಾತ್ರ ಅಲ್ಲಿರುವೆ,
ಆಮೇಲೆ ಆ ಕಿಟಕಿಯ ಬಳಿಯಿಂದ ವಾಪಸ್ಸಾಗುವೆ,
ರವಿಯ ಕಿರಣಗಳಾಗಷ್ಟೇ ಧರೆಗೆ ಚುಂಬಿಸುತ್ತಿದ್ದವು,
ಮುಂಜಾವಿನ ಮುಂದಿನ ಕೆಲಸದ ಸಲುವಾಗಿ, ಕೈಯಲ್ಲಿ ಪೆನ್ಸಿಲ್ ಹಿಡಿದು,
ರಸ್ತೆಯ ಬದಿಯಿಂದ ನಡೆದು ಬಂದೆ.

( ಮೂಲ ಕವಿ: ಗಿಲಿಯನ್ ವೆಗನರ್ )

Jan 21, 2009

ಮತ್ತೆ ಬರುವನು ಚಂದಿರ - 12

ಸದಾ ಹೊಸತು ತುಡಿಯುತಿರಲು
ಹಳೆಯ ನೆನಪು ಬಾರದಿರಲು
ದಿನವು ರವಿಯು ಮೂಡುತಿರಲು
ಮತ್ತೆ ಬರುವ ಚಂದಿರ

ದಿನವೆಲ್ಲ ಧನ್ಯತೆ ನಕ್ಕಾಗ ಸ್ನೇಹಿತೆ
ಬಚ್ಚಿಡುವ ಕಳವಳ ಎದೆಯಗೂಡೊಳಗೆ
ಬಿಚ್ಚಿಡುವ ತಳಮಳವು ತುದಿಗಾಲಲಿರಲು
ಕುಣಿದಾಡಿತೆನ್ನ ಮನ ಚಂದಿರ

ಹರಿದು ಹೋದ ಒಲವಿಗೆ
ಬಿರುಕು ಬಿಟ್ಟಿದೆ ಬಂಧನ
ಬದುಕು ತವಕ ತಲ್ಲಣ
ಬೆಳಕು ನೀಡೊ ಚಂದಿರ

ಬೆಚ್ಚನ ಮೃದು ಹಾಸಿಗೆಯಲಿ
ತೆಳುವಾದ ಹುರುಪಿನಲಿ
ಕಣ್ತುಂಬ ಕನಸುಗಳೊತ್ತು
ಕವಿಯಾದೆನೊ ಚಂದಿರ

ಎಳೆಬಿಸಿಲು ಮೈಸವರಿ
ಮೈ ಮರೆಸಿದೆ ಕಾನನ
ಗಿರಿಶಿಖರವು ಕಲೆಯಾಗಿ
ಕಣ್ತುಂಬಿತೊ ಚಂದಿರ

ನಿಗೂಢ ಪಯಣದ ಪರಧಿಯಲಿ
ಕ್ಷಣ ಕ್ಷಣವು ಕುತೂಹಲ ಬಾನಲ್ಲಿ
ತಳಮಳ, ತಲ್ಲಣಗಳು ಮನದಲ್ಲಿ
ಇದು ಯಾವ ವಿಸ್ಮಯವೊ ಚಂದಿರ

ಕ್ಷಿಪ್ರ ಗತಿಯ ರಭಸದೊಡೆತಕೆ
ಛಿದ್ರವಾಗಿದೆ ತೋರುಗನ್ನಡಿ
ವಿತಂಡ ವಾದ-ವಿವಾದದಿಂದ
ವಿಲೀನವಾಗಿದೆ ಮೌಲ್ಯ ಚಂದಿರ

ನಿಶ್ಚಲತೆಯ ನಿಗೂಢ ನಡೆಗೆ
ಸರಳತೆಯ ಸುಪ್ತ ಸ್ವಭಾವಕೆ
ಅಡತಡೆಗಳು ಬಿಗಿದಿಟ್ಟರೆ
ಅರಳುವುದೆ ಮನ ಚಂದಿರ

ಎದ್ದು ಬಾರೊ ಭಗ್ನ ಮೂರ್ತಿ
ನಿದ್ದೆ ಮಾಡುವ ಸರದಿ ಸಾಕು
ಯುದ್ದ ಸಾರಲು ಸಿದ್ದನಾಗು
ಸಾರಥಿಯಾಗುವ ಚಂದಿರ

ಸೂಕ್ಷ್ಮ ಸೆಳೆವಿನ ಅರಿವಿನಿಂದ
ಅಂತರಂಗವನಾಳೊ ಗೆಳೆಯ
ಸಮರ ಸಾರಲು ಸಹನೆಯಿರಲಿ
ಜೊತೆಗೆ ಬರುವನು ಚಂದಿರ

Jan 17, 2009

ಸಂಜೆ

ಅಂಬರ ಕಡುನೀಲಿ ಕೋಟು ಧರಿಸುತ್ತದೆ,
ಪುರಾತನ ಸಾಲು ಮರಗಳದನ್ನು ಹಿಡಿದಿಟ್ಟಿವೆ;
ನೀನು ನೋಡುತ್ತಿರು: ನೆಲ ನಿನ್ನ ಕಣ್ನೋಟದಿಂದ ದೂರ ಸರಿದಂತಾಗುತ್ತದೆ,
ಆ ಸ್ವರ್ಗದೆಡೆಗೆ ಪಯಣಿಸುವಂತೆ, ಇಲ್ಲ ಜಾರಿ ಬೀಳುವಂತೆ;

ಅದು ನಿನ್ನ ಎಲ್ಲಿಯೂ ಕೊಂಡೊಯ್ಯುವುದಿಲ್ಲ, ಯಾವ ಮನೆಯಲ್ಲೂ ಬಿಡುವುದಿಲ್ಲ,
ಆ ಕಗ್ಗತ್ತಲು ಕವಿದ ಮನೆಗಳಂತೆ, ಸ್ಥಬ್ಧ ಹಾಗು ಕತ್ತಲು ಅಲ್ಲಿಲ್ಲ,
ಪ್ರತೀ ರಾತ್ರಿ ಉತ್ಕಟಾಕಾಂಕ್ಷೆಯಿಂದ ಮೂಡಿ, ಹೊಳೆಯುವ ನಕ್ಷತ್ರದಂತೆ;
ಆ ಅನನ್ಯತೆಯೆಡೆಗೆ ಕರೆಯುವುದಿಲ್ಲ.

ಬದುಕಿನ ಅಗಾಧತೆ ಹಾಗು ಭಯ, ಈ ಲೆಕ್ಕವಿಲ್ಲದ ಪರಿಧಿಗಳಿರುವುದರಿಂದ,
ನಿನಗೆ ಬದುಕು ಅರ್ಥಪೂರ್ಣವಾಗಿಸಲು ಬಿಡುವುದಿಲ್ಲ,
ನಿನ್ನ ಹಾಗು ನಕ್ಷತ್ರದಲ್ಲಿರುವ, ಇದೊಂದು ಬಗೆಯ ಕಲ್ಲು.

( ಮೂಲ ಕವಿ: ರೈನರ್ ಮಾರಿಯ ರಿಲ್ಕ್ )

ಸಮರ್ಪಣೆ

ಇದುವರೆಗೂ ಮಾತನಾಡದ ವಿಷಯಗಳಲ್ಲಿ,
ನನಗೆ ದೃಢವಾದ ನಂಬಿಕೆಯಿದೆ.
ನನ್ನ ತೀವ್ರ ಧಾರ್ಮಿಕ ಭಾವನೆಗಳಿಂದ ಮುಕ್ತನಾಗಲು ಬಯಸುತ್ತೇನೆ
ಇದುವರೆಗೂ ಯಾರೂ ಧೈರ್ಯಮಾಡಿ, ಸಮರ್ಥಿಸದ
ಸಮಸ್ಯೆಗಳನ್ನು ಎದುರಿಸುವುದೇ ನನ್ನ ಮುಂದಿನ ಧ್ಯೇಯೋದ್ದೇಶ.

ಈ ವರ್ತನೆ ಅತಿಯಾಯಿತೆನಿಸಿದರೆ, ದೇವರೆ ಕ್ಷಮಿಸು,
ಇಷ್ಟೆ ನಾ ಹೇಳ ಬಯಸುವುದು:
ನನ್ನ ಪರಿಶ್ರಮವೇ ನನ್ನ ಬೆನ್ನೆಲುಬು, ನನಗೆ ದಾರಿದೀಪ,
ನನ್ನ ಸಂಯಮ, ಸಹನೆ ಹಾಗೂ ಆತ್ಮವಿಶ್ವಾಸವೆಲ್ಲ,
ಆ ಪುಟ್ಟ ಮಕ್ಕಳು ನಿನಗೆ ತೋರುವ ಮುಗ್ಧ ಪ್ರೀತಿಯಂತೆ.

ಇವೆಲ್ಲವೂ ಈಗ ಹೊರಹೊಮ್ಮಿ ನದಿಗಳಂತೆ ಹರಿಯುತ್ತಿವೆ,
ವಿಶಾಲ ಭೂಪ್ರದೇಶ ತನ್ನ ಕೈಚಾಚಿ, ಆ ಸುಪ್ತ ಸಾಗರ
ಸೇರಲು ಹಾತೊರೆಯುವಂತೆ,
ಎಂದೂ ಕ್ಷೀಣಿಸದೆ ಭೋರ್ಗರೆವ ಅಲೆಗಳಂತೆ
ನಿನ್ನನ್ನು ಒಪ್ಪಿಕೊಳ್ಳುತ್ತೇನೆ,
ಇದುವರೆಗೂ ಯಾರೂ ಮಾಡದ ಹಾಗೆ,
ಮತ್ತೆ ಮತ್ತೆ ಅದನ್ನೇ ಸಾರಿ ಹೇಳುತ್ತೇನೆ.

ಮತ್ತೆ ಇದು ಅಂಹಃಕಾರವೆನ್ನುವ ಧೋರಣೆ ನಿಮ್ಮದಾದರೆ
ಅಡ್ಡಿಯಿಲ್ಲ, ಅದೇ ನನ್ನ ಪ್ರಾರ್ಥನೆ ಸಮರ್ಥಿಸಲಿ
ಏಕೆಂದರೆ, ಅದು ಅಷ್ಟೊಂದು ಗಂಭೀರವಾಗಿ ಮತ್ತು ಏಕಾಂಗಿಯಾಗಿ,
ನಿಮ್ಮ ಹಣೆಯ ಮುಂದೆ ನಿಂತಿದೆ, ಮೋಡಗಳ ಸುತ್ತಿಕೊಂಡು.

( ಮೂಲ ಕವಿ: ರೈನರ್ ಮಾರಿಯ ರಿಲ್ಕೆ )

Jan 15, 2009

ಸಾವು

ನೀನು ಬಾ, ನೀನೇ ಕೊನೆಯವನು, ನಾನು ಗುರುತಿಸುವಂತವನು,
ತಡೆಯಲಾರದ ನೋವು ಈ ಶರೀರದ ಎಲ್ಲಾ ನರ-ನಾಡಿಗಳಲ್ಲಿ:
ನಾನು ನನ್ನ ಸ್ಪೂರ್ತಿಯೊಂದಿಗೆ ಉರಿಯುತ್ತೇನೆ, ನೋಡುತ್ತಿರು,
ಈಗ ನಾನು ನಿನ್ನಲ್ಲಿ ಉರಿಯುತ್ತೇನೆ: ಹತ್ತಿರ ಬರುವ ಬೆಂಕಿಯ
ಜ್ವಾಲೆಗಳಿಂದ ಈ ಕಟ್ಟಿಗೆ ಸಾಕಷ್ಟು ಸಮಯದಿಂದ ತಡೆದಿಟ್ಟಿತ್ತು,
ಆದರೆ ನೀನು ಅದನ್ನು ಹಾಗೇ ಉರಿಸುತ್ತಿದ್ದೆ,
ಈಗ ಅದನ್ನು ನನ್ನದಾಗಿಸಿಕೊಂಡು, ನಿನ್ನಲ್ಲಿ ಉರಿಯುತ್ತೇನೆ.

ನನ್ನ ಸದ್ಗುಣ, ಸರಳತೆಗಳನ್ನು ನಿನ್ನ ಕನಿಕರವಿಲ್ಲದ ಜ್ವಾಲೆ
ನರಕಸದೃಶವನ್ನಾಗಿಸಿದೆ, ಅದು ಇಲ್ಲಿರುವಂತಹುದ್ದಲ್ಲ.
ಪರಿಶುದ್ಧವಾಗಿತ್ತು, ಭವಿಷ್ಯತ್ತಿನ ಯೋಚನೆಗಳಿಂದ ಮುಕ್ತವಾಗಿತ್ತು,
ನನ್ನ ಹೆಣಸುಡಲು ಜೋಡಿಸಿರುವ ಕಟ್ಟಿಗೆಯಲ್ಲಿ, ಅಂತಿಮ ನೋವಿಗಾಗಿ
ತಯಾರಿಸಿಟ್ಟ ಜಾಗದಲ್ಲಿ ನನ್ನನ್ನು ಬಂಧಿಸಿದ್ದೇನೆ,
ಭವಿಷ್ಯತ್ತಿಗೆ ಖಂಡಿತವಾಗಿ ಏನೂ ಖರೀದಿಸಬೇಕಾಗಿಲ್ಲ ನನಗೆ,
ಆದರೆ ನನ್ನ ಹೃದಯದಲ್ಲಿ ತುಂಬಿರುವುದೆಲ್ಲಾ ಈಗ ಮೌನವಾಗಿದೆ.

ಇದು ನಾನೇನಾ, ಭೂತಕಾಲವೆಲ್ಲ ಗುರುತಿಸಲಾಗದಷ್ಟು ಸುಟ್ಟಿದೆ?
ನನಗೆ ನೆನಪುಗಳ ಹಿಡಿದಿಟ್ಟು ಹೊತ್ತು ಬರಲಾಗಲಿಲ್ಲ ಒಳಗೆ.
ಓ ಜೀವವೇ! ಓ ಬದುಕೇ! ಓ ನೀನು ಹೊರಗೇ ಇರುವೆ!
ಮತ್ತೆ ನಾನು ಈ ಜ್ವಾಲೆಗಳಲ್ಲಿದ್ದೇನೆ.
ಮತ್ತೆ ನನ್ನ ಬಲ್ಲವರು ಯಾರೂ ಇಲ್ಲಿ ಇಲ್ಲ.

( ಮೂಲಕವಿ: ರೈನರ್ ಮಾರಿಯ ರಿಲ್ಕ್ )

ಬಾಲ್ಯ

ಅದರ ಬಗ್ಗೆ ಸಾಕಷ್ಟು ಯೋಚಿಸುವುದು ಸರಿಯೆ,
ಆ ರೀತಿ ಕಳೆದುಕೊಂಡದ್ದಕ್ಕೆ ಪದಗಳನ್ನು
ಹುಡುಕುವ ಪ್ರಯತ್ನದ ಮೊದಲೇ,
ನಮಗೆ ಗೊತ್ತಿರುವಂತೆ, ಹೇಗೆ ಸಂಪೂರ್ಣವಾಗಿ ಮಾಯವಾದವಲ್ಲಾ,
ಆ ದೀರ್ಘ ಬಾಲ್ಯದ ಮಧ್ಯಾಹ್ನಗಳು, ಏಕೆ?

ನಮಗೆ ಈಗಲೂ ಕಾಡುತ್ತಿವೆ-: ಕೆಲವು ಸಲ ಈ ಮಳೆಯಿಂದಾಗಿ,
ಆದರೆ ನಾವು ಅದರ ಅರ್ಥಗಳನ್ನು ಹೇಳಲಿಕ್ಕಾಗದ ಸ್ಥಿತಿಯಲ್ಲಿದ್ದೇವೆ,
ಮತ್ತೆ ಆ ಅರ್ಥಪೂರ್ಣ ಬದುಕು ನಮಗೆಂದಿಗೂ ದಕ್ಕಲಾರದು,
ಮತ್ತೆ ಒಂದಾಗುವುದು, ಬೇಟಿಯಾಗುವುದು, ಹಾಗೇ ಕಾಲಕಳೆಯುವುದು.

ಆ ಕಾಲದಲ್ಲಿ, ನಮಗರಿವಿರದ, ನಮಗೇನೂ ಆಗದ ಆ ವಯಸಿನಲ್ಲಿ,
ಕೆಲವು ವಸ್ತುಗಳ ಹಾಗು ಜೀವಿಗಳ ಹೊರತು ಪಡಿಸಿ:
ಅವರ ಜಗದಲ್ಲಿ ಯಾವುದೊ ಮನುಷ್ಯರಂತೆ ಬದುಕುತ್ತಾ,
ಕತ್ತಿನವರೆಗೂ ಅಂಖ್ಯೆ-ಸಂಖ್ಯೆಗಳ ತಂಬಿ ಗಂಭೀರ ಸ್ಥಿತಿಯಲ್ಲಿದ್ದೇವೆ.

ಮತ್ತೆ ಈಗ ಒಬ್ಬಂಟಿಯಾಗಿ ಕುರಿಕಾಯುವವನ ಹಾಗಾಗಿದ್ದೇವೆ,
ಒತ್ತಡ, ಬಿರುಕುಗಳೊಡನೆ, ಭಾವ, ಬಂಧಗಳಿಂದ ಬಹಳ ದೂರಸಾಗಿದ್ದೇವೆ,
ಅಷ್ಟು ದೂರದಿಂದಲೇ ಸೇರಿಸುತ್ತಾ , ತೀಡಿ, ತೀಡಿ ನಿಧಾನವಾಗಿ ಹೊಸ ಹಗ್ಗವ ನೇಯ್ದು
ಚಿತ್ರದ ಮುಂದಿನ ಭಾಗಕ್ಕೆ ಸೂಕ್ತವೆಂಬಂತೆ ಸೇರಿಸಿದ್ದೇವೆ.
ಈಗ ಅದರ ಮೇಲೆ ನಡೆದು ಹೋಗಲು ನಮಗೇ ಭಯಾನಕವೆನ್ನಿಸುತ್ತಿದೆ.

(ಮೂಲ ಕವಿ: ರೈನರ್ ಮಾರಿಯ ರಿಲ್ಕ್)

Jan 14, 2009

ಕೆಂಡದ ಮಗು

ಕೆಲವು ಸಲ ಅವಳು ಆ ಪುಟ್ಟ ಕೆಂಬಣ್ಣದ ಬಟ್ಟೆಯೊಂದಿಗೆ
ಹಳ್ಳಿಯನ್ನೆಲ್ಲಾ ಸುತ್ತುತ್ತಾಳೆ.
ಎಲ್ಲವೂ ಅವಳಲ್ಲಿ ಅಡಗಿಸಿಕೊಂಡು, ಅರಗಿಸಿಕೊಂಡಂತೆ,
ಆದರೂ, ಅವಳಿಗರಿವಿಲ್ಲದೇ, ಅವಳ ಮುಂದಿನ ಬದುಕಿನ ಲಯದೊಂದಿಗೆ,
ನಿಧಾನಗತಿಯಲ್ಲಿ ಚಲಿಸುತ್ತಿದ್ದಂತೆ ತೋರುತ್ತದೆ.

ಸ್ವಲ್ಪ ಓಡುತ್ತಾಳೆ, ಹಿಂಜರಿಯುತ್ತಾಳೆ, ನಿಲ್ಲುತ್ತಾಳೆ,
ಅರ್ಧ ತಿರುಗಿ...
ಮತ್ತೆ, ಸದಾ ಹಗಲುಗನಸು ಕಾಣುತ್ತಾ, ತಲೆ ಅದರ
ಪರ ಅಥವಾ ವಿರೋಧವಾಗಿ ಅಲುಗಾಡಿಸುತ್ತಾಳೆ.

ನಂತರ, ಅವಳೇ ಕಂಡುಕೊಂಡ ಭಂಗಿಗಳೊಂದಿಗೆ,
ತುಸು ನರ್ತಿಸುತ್ತಾಳೆ ಮತ್ತೆ ಮರೆತು ಬಿಡುತ್ತಾಳೆ
ನಿಸ್ಸಂದೇಹವಾಗಿ ಅವಳ ಹಂಬಲಿಸಿದ ಬದುಕಿನ
ಹುಡುಕಾಟದಲ್ಲಿ ವೇಗವಾಗಿ ಮುನ್ನಡೆದಿದ್ದಾಳೆ.

ಯಾವಾಗಲೂ ಅವಳಿಗಂಟಿಕೊಂಡಿರುವ,
ಆ ಪುಟ್ಟ ಮಗುವನ್ನು ಬಿಟ್ಟು ಹೊರಬರುವುದು ವಿರಳ
ಮತ್ತೆ ಯಾವಾಗಲೂ ಅವಳೊತ್ತುಕೊಂಡಿರುವುದು ಅದೇ
ನಿತ್ಯ ಸೋಲು, ಸೆಣಸಾಟ, ಆಘಾತಗಳು.

ತೊಟ್ಟ ಆ ಬಟ್ಟೆ ಮಾತ್ರ ಅವಳ ನೆನಪಲ್ಲಿರುತ್ತದೆ,
ಮುಂದೆ ಅವಳ ಸಿಹಿ ಶರಣಾಗತಿಯಲ್ಲಿ;
ಅವಳ ಸಂಪೂರ್ಣ ಬದುಕು ಸಮಸ್ಯೆಗಳ ಸುಳಿಯಲ್ಲಿದ್ದಾಗ,
ಯಾವಾಗಲೂ ಆ ಪುಟ್ಟ ಕೆಂಪು ಉಡುಪು ಮಾತ್ರ ಸರಿಯೆಂದೆನಿಸುತ್ತದೆ.

(ಮೂಲ ಕವಿ: ರೈನರ್ ಮಾರಿಯ ರಿಲ್ಕ್ )

Jan 12, 2009

ಬೆಕ್ಕಿನ ನಿಯಂತ್ರಣ

ಸುಂದರ ಮಹಿಳೆಯರ ಜೊತೆಗಿರಲು ಬಯಸುತ್ತೇನೆ,
ಯಾವಾಗಲೂ ಹೀಗೇಕೆ, ನಾವು ಇಂತಹ ವಿಷಯಗಳಲ್ಲಿ ಸುಳ್ಳು ಹೇಳುತ್ತೇವೆ?
ಮತ್ತೆ ಮತ್ತೆ ಅದನ್ನೇ ಹೇಳ ಬಯಸುತ್ತೇನೆ:
ಸುಂದರ ಮಹಿಳೆಯರ ಜೊತೆ ಮಾತನಾಡಲು ನಾನು ಸದಾ ಹಾತೊರೆಯುತ್ತೇನೆ,
ನಮ್ಮ ಮಾತುಗಳು nonsense ಆದರೂ ಅಡ್ಡಿಯಿಲ್ಲ.
ಯಾವುದೋ ಕಾಣದ ಆಕರ್ಷಣೆಯೊಂದು ನಮ್ಮನ್ನು ಸೆಳೆಯುತ್ತಿರುತ್ತದೆ,
ಅದನ್ನು ಅನುಭವಿಸಲು ಅಮೋಘ ಹಾಗು ಅಹ್ಲಾದಕರವಾಗಿರುತ್ತದೆ.

( ಮೂಲಕವಿ: ಎಜ್ರ ಪೌಂಡ್ )

ಘಟನೆ

ಅವರೆಲ್ಲರೂ ಯಾವುದೋ ಹೊಸ ನೈತಿಕತೆಯ ವಿಷಯದ
ಬಗ್ಗೆ ಸುದೀರ್ಘವಾಗಿ ಮಾತನಾಡುತ್ತಿದ್ದಾರೆ,
ಅವಳ ಮಾದಕ ಕಣ್ಣುಗಳು ನನ್ನನ್ನು ತೀವ್ರವಾಗಿ ಕೆಣಕುತ್ತಿವೆ,
ಮತ್ತೆ ನಾನು ಎದ್ದು ಹೊರಡುವಾಗ,
ಅವಳ ಬೆರಳುಗಳು ಜಾಪನೀಸ್ ನ್ಯಾಪ್ಕಿನ್ ಟಿಸ್ಸ್ಯೂ
ಪೇಪರಿನಷ್ಟು ಮೃದುವಾಗಿದ್ದವು.

( ಮೂಲ ಕವಿ: ಎಜ್ರ ಪೌಂಡ್ )

ದಿಗ್ಭ್ರಮೆ

ನಾನು ಎಚ್ಚರಿಕೆಯಿಂದ ನಾಯಿಗಳ,
ಕುತೂಹಲಕರ ಹವ್ಯಾಸಗಳನ್ನು ಗಮನಿಸಿದಾಗ,
ನಾನು ಒತ್ತಾಯಪೂರ್ವಕವಾಗಿ ಮಾನವ ಪ್ರಬಲ ಹಾಗು
ಪ್ರಬುದ್ಧ ಪ್ರಾಣಿಯೆಂದು ತೀರ್ಮಾನಿಸಿದ್ದೇನೆ.

ಆದರೆ,
ನಾನು ಮಾನವನ,
ಕುತೂಹಲಕರ ಹವ್ಯಾಸಗಳನ್ನು ಗಮನಿಸಿದಾಗ,
ಸ್ನೇಹಿತರೆ,
ನಾನು ದಿಗ್ಭ್ರಮೆಗೊಂಡಿದ್ದನ್ನು ನಿಸ್ಸಂಕೋಚವಾಗಿ
ಒಪ್ಪಿಕೊಳ್ಳುತ್ತೇನೆ.

( ಮೂಲಕವಿ: ಎಜ್ರ ಪೌಂಡ್ )

ಮತ್ತಷ್ಟು ಸೂಚನೆಗಳು

ಬನ್ನಿ ನನ್ನ ಹಾಡುಗಳೇ, ನಮ್ಮ ಭಾವಗಳ, ಉತ್ಕಟಾಕಾಂಕ್ಷೆಗಳ
ವ್ಯಕ್ತಪಡಿಸೋಣ.
ಭವಿಷ್ಯತ್ತಿನ ಪರಿವಿರದೆ, ಸ್ಥಿರ ಹಾಗು ನಿಧಾನಗತಿಯ ಕಾಯಕದಲ್ಲಿ
ಮಗ್ನನಾಗಿರುವ ಆ ವ್ಯಕ್ತಿಯ ಮೇಲೆ ನಮಗಿರುವ ದ್ವೇಷ, ಅಸೂಹೆಗಳ ತಿಳಿಸೋಣ.
ನೀವೇಕೆ ಸುಮ್ಮನಿರುವಿರಿ ನನ್ನ ಹಾಡುಗಳೇ,
ನೀವು ಭಯಾನಕವಾಗಿ ಅಂತ್ಯಗೊಳ್ಳುವಿರೆಂದು ನನಗೆ ಭಯವಾಗುತ್ತಿದೆ.
ನೀವು ನಡುರಸ್ತೆಗಳಲ್ಲಿ, ಸಂದು-ಗೊಂದುಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಪರದಾಡುವಿರಿ,
ನೀವು ಸಂಪೂರ್ಣವಾಗಿ ನಿಷ್ಪ್ರಯೋಜಕರಾಗುವಿರಿ.

ನೀವು ನಮ್ಮಲ್ಲಡಗಿರುವ ಸಹಜ ಒಳಭಾವಗಳ ತಿಳಿಸಲು ಹಿಂಜರಿಯುವಿರಿ,
ನೀವು ಖಂಡಿತ ಭಯಾನಕ ಅಂತ್ಯ ಕಾಣುವಿರಿ.

ಮತ್ತೆ ನಾನು, ನಾನಾಗಲೇ ಅರ್ಧ ಹುಚ್ಚನಾಗಿದ್ದೇನೆ.
ನಾನು ನಿಮ್ಮೊಂದಿಗೆ, ನಿಮ್ಮಂತಾಗುವಷ್ಟು ಮಾತಾಡಿದ್ದೇನೆ,
ನೀವು ಕೆಟ್ಟ ಹುಳಗಳು, ನಾಚಿಕೆಯಿಲ್ಲದ ನಗ್ನ ಮೂರ್ತಿಗಳು.

ಅದರೆ ನೀನು, ಈಗಷ್ಟೇ ಜನ್ಮಪಡೆದ ಹೊಸ ಹಾಡು,
ನಿನಗಿನ್ನೂ ಚೇಷ್ಟೆ ಮಾಡುವಷ್ಟು ವಯಸ್ಸಾಗಿಲ್ಲ ಬಿಡು.
ನಾನು ನಿನಗೆ ಡ್ರಾಗನ್ ಚಿತ್ರ ಬಿಡಿಸಿರುವ,
ಹಸಿರು ಕೋಟು ಚೈನಾದಿಂದ ತರಿಸುತ್ತೇನೆ.
ಸಂತ ಮಾರಿಯ ನೊವೆಲ್ಲಾದ, ಬಾಲವಿಗ್ರಹ ಕ್ರೈಸ್ತನಿಂದ;
ನಿನಗೆ ಹೊಳೆವ ರೇಷ್ಮೆ ಪ್ಯಾಂಟನ್ನು ತರಿಸುತ್ತೇನೆ.
ನಮಗೆ ಸದಭಿರುಚಿಯಿಲ್ಲವೆಂದು ಅವರು ದೂರಬಹುದಷ್ಟೇ,
ಅಥವಾ ನಮ್ಮ ಕುಟುಂಬದಲ್ಲಿ ಜಾತಿಗಳೇ ಇಲ್ಲವೆನ್ನಬಹುದು.

( ಮೂಲ ಕವಿ: ಎಜ್ರ ಪೌಂಡ್ )

ಗೆಳತಿ

ನೀನು ಕಗ್ಗತ್ತಲಿಂದ ಹೊರಬಂದವಳು,
ಕೈಯಲ್ಲಿ ಕಂಗೊಳಿಸುವ ಪರಿಮಳ ಭರಿತ ಹೂಗಳೊಂದಿಗೆ,
ಈಗ ನಿನ್ನ ಬಗ್ಗೆ ತೀವ್ರ ಕಹಿ ಮಾತುಗಳಾಡುವವರಿಂದ,
ಗೊಂದಲಗಳಲ್ಲಿ ಸಿಕ್ಕಿ ನರಳುವವರಿಂದ ಖಂಡಿತ ಹೊರಬರುವೆ.

ಏಕೆಂದರೆ, ನಾನು ನಿನ್ನ ಅತ್ಯಂತ ಶ್ರೇಷ್ಠ,
ಹಾಗು ಸಂತೃಪ್ತಿಯ ಕ್ಷಣಗಳನ್ನು ಕಂಡಿದ್ದೇನೆ.
ನಿನ್ನ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುವರ ಕಂಡು ಕೋಪಗೊಂಡಿದ್ದೇನೆ.
ನನ್ನ ಮನಸು ಸ್ಥಿರ ಹಾಗು ಶಾಂತವಾಗಿರಲೆಂದು ಸದಾ ಪ್ರಾರ್ಥಿಸುತ್ತೇನೆ, ಆದರೂ
ಈ ಜಗತ್ತು ಸತ್ತು ಒಣಗಿದ ಎಲೆಗಳಂತಾಗಬೇಕು, ಅಥವಾ
ಹೊಳೆಯಲ್ಲಿ ಕೊಚ್ಚಿಕೊಂಡೋಗುವ ಕಸ - ಕಡ್ಡಿಯಂತಾಬೇಕೆಂದು ಬಯಸುತ್ತೇನೆ.
ಆಗಲೇ ನಿನ್ನ ಒಬ್ಬಂಟಿಯಾಗಿ ಮತ್ತೆ ಕಾಣುವ ಸದಾವಕಾಶ
ನನ್ನದಾಗುತ್ತದೆ.

(ಮೂಲ ಕವಿ: ಎಜ್ರ ಪೌಂಡ್ )

Jan 11, 2009

ಪರಿಪೂರ್ಣವಲ್ಲ

ಮತ್ತೆ ದಿನಗಳು ಪರಿಪೂರ್ಣವಲ್ಲ
ಮತ್ತೆ ರಾತ್ರಿಗಳೂ ಪರಿಪೂರ್ಣವಲ್ಲ
ಮತ್ತೆ ಬದುಕು ಮಾತ್ರ ಉರುಳುತ್ತಿದೆ,
ಬಯಲ ಇಲಿಯೊಂದು ಹುಲ್ಲನ್ನೂ ಸಹ
ಅಲುಗಾಡಿಸದೆ ಮುನ್ನುಗ್ಗುವ ಹಾಗೆ.

( ಮೂಲ ಕವಿ: ಎಜ್ರ ಪೌಂಡ್ )

ಮತ್ತೆ ಬರುವನು ಚಂದಿರ - 11

ಭವ್ಯ ಕನಸೊಂದ ತುಳುಕು ಹಾಕಿಸಿ
ಕಲ್ಪನೆಯ ಸಿರಿಯನ್ನು ದಯಪಾಲಿಸಿ
ಮತ್ತದೇ ಸ್ಥಿತಿಯೊಂದಿಗೆ ನನ್ನ ಉಳಿಸಿ
ಮರೆಯಾಗುವ ಚೋರ ಚಂದಿರ

ಸಹಜ ಸೌಂದರ್ಯವೇ ಮೂಲ ಆಕರ್ಷಣೆ
ಇತಿಮಿತಿಗಳ ಹಿನ್ನಲೆಯಲ್ಲಿಯೆ ವೈವಿಧ್ಯತೆ
ಸೃಜನಶೀಲತೆಯೆ ಮಾನವನ ಸಾಧ್ಯತೆ
ಸಿದ್ದನಾಗಿರುವನವ ನೋಡ ಚಂದಿರ

ನಸುಬೆಳಕು ಮನೆಯೊಳಗೆ ಎಸೆದವರು ಯಾರು
ಜೋಡಿನೆರಳುಗಳ ತೆಕ್ಕೆ ಹೆಣೆದವರು ಯಾರು
ಬಿಸಿಲು ಕಣ್ಮರೆಯಾಗಿ ಸೂರ್ಯನ ನೆರಳು
ಇರುಳಲ್ಲಿ ನಗುತಿರುವನಾ ಚಂದಿರ

ಬೆಳಕು ಮೌನವಾಗಿ ಕರಗಿತು
ಕತ್ತಲು ನೆರಳ ಜೊತೆಗೂಡಿತು
ಇತ್ತಲಮರ ಕಪ್ಪಾದ ಸಮಯ
ಮೆಲ್ಲಗೆ ಹೊರಬರುವನಾಗ ಚಂದಿರ

ಅರೆಗತ್ತಲ ಹರೆಯಕೆ ಮರುಗ ಬೇಡ
ಬಾಗಿಲನು ತೆರೆದು ಗಾಳಿ ಬೆಳಕರಿಸು
ಬೆಳಕಿನ ವಿಸ್ತಾರವಿಹದು ಅಪಾರ
ಜಗದ ಉದ್ದಗಲ ಕಾಣೊ ಚಂದಿರ

ಶಕ್ತಿ ಸಾಮರ್ಥಗಳ ಕುಗ್ಗಿಸ ಬಲ್ಲ
ಜಾಣ ಸಾವಾಲುಗಳೆದುರಿಸ ಬಲ್ಲ
ಸಾಧು, ಸಂತರನೆಲ್ಲ ಸಲಹ ಬಲ್ಲ
ಅತೀವ ಚಾಣಾಕ್ಷನಿವ ಚಂದಿರ

ವಿಷಾದದರಿವೆಯಲಿ ಸುತ್ತಿಟ್ಟು
ತೀವ್ರವಾಗಿ ಉರಿಯುತಿಹ ಸಿಟ್ಟು
ಹೊತ್ತಿ ಉರಿಯುವ ಸಮಯಕೆ
ಎದ್ದು ಚುರುಕಾದನೊ ಚಂದಿರ

ಪುಳಕಗೊಂಡ ಪರಿಮಳ ಒಪ್ಪಿಸಿಕೊಂಡು
ಹಾತೊರೆಯುತ ಹೆಜ್ಜೆ ಮುಂದಿಟ್ಟು
ನಿಟ್ಟುಸಿರು ಪಿಸುಮಾತಿಗೆ ಮುತ್ತಿಟ್ಟು
ಮತ್ತಿನಲಿ ತೇಲಾಡುವನೊ ಚಂದಿರ

ನೀರವ ದೂರದಲಿ ಮಳೆಯಾದ ಘಮಲು
ತಂಗಾಳಿ ಜೊತೆಯಲ್ಲಿ ತೇಲಿ ಬರುತಿರಲು
ಮಬ್ಬುಗತ್ತಲಲಿ ಸಖಿ ಸನಿಹದಲ್ಲಿರಲು
ಮೈಸವರಿ ಮೈಮರೆಸುವ ಚತುರ ಚಂದಿರ

ಹೊರಟ ಹಾದಿಯಲ್ಲೆಡೆ ಹೊಂಬಿಸಿಲು
ಹಳದಿ ಹೂವುಗಳ ಸಾಲು ಸಾಲು
ತೆರೆದ ಹಾದಿಯಲೆಲ್ಲಾ ಹೂ ಹಾಸಿಗೆ
ರೋಮಾಂಚನ ಆ ಸ್ಪರ್ಶಕೆ ಚಂದಿರ

Jan 10, 2009

ಪ್ರಶ್ನೆ

ಪ್ರೀತಿ, ಒಂದು ಪ್ರಶ್ನೆ ನನ್ನ
ಸಂಪೂರ್ಣ ನಾಶಮಾಡಿತು.

ನಿನ್ನಲ್ಲಿಗೆ ಮತ್ತೆ ಮರಳಿದ್ದೇನೆ,
ಅನಿಶ್ಚಿತತೆಯಿಂದ ಪಾರಾಗಿ.

ನನಗೆ ನೀನು ಬೇಕೇಬೇಕು,
ಆ ಖಡ್ಗ, ಅಥವಾ ಆ ದಾರಿಯಂತೆ.

ಆದರೆ ನೀನು,
ಆ ಕಹಿ ನೆರಳನ್ನು ಒತ್ತಾಯವಾಗಿ
ಬೇಕೆನ್ನುವೆ, ನನಗೆ ಇಷ್ಟವಿಲ್ಲದಿದ್ದರೂ.

ಓ ಪ್ರಿಯೆ,
ಅರ್ಥ ಮಾಡಿಕೊ,
ನಿನ್ನ ಸಂಪೂರ್ಣವಾಗಿ ಪ್ರೀತಿಸುವೆ,
ಕಣ್ಣಿಂದ ಕಾಲಿನವರೆಗೂ, ತುದಿ ಬೆರಳಿನವರೆಗೂ,
ಒಳಗೂ,
ನಿನ್ನಲ್ಲಡಗಿರುವ ಎಲ್ಲ ಹೊಳಪನ್ನೂ.

ಸಖಿ,
ನಾನೇ ನಿನ್ನ ಬಾಗಿಲನ್ನು ಬಡಿಯುವವನು,
ಮತ್ತೊಂದು ಸಲ ಕಿಟಕಿಯಾಚೆಗೆ ನಿಂತವನು,
ಅದು ಖಂಡಿತ ಭೂತವಲ್ಲ.
ನಿನ್ನ ಬಾಗಿಲು ತಟ್ಟಿ,
ನಿನ್ನ ಬಾಳ ಪ್ರವೇಶ ಮಾಡಿ,
ನಿನ್ನ ಹೃದಯದಲ್ಲಿ ನೆಲೆಸುವೆ,
ನಿನಗೆ ಸಹಿಸಲಾಗದಷ್ಟು.

ನೀನು ಒಂದೊಂದೇ ಬಾಗಿಲನ್ನು ತೆರೆಯುತ್ತಿರಬೇಕು,
ನನ್ನ ಸೂಚನೆಗಳ, ಯಥಾವತ್ ಪಾಲಿಸಬೇಕು,
ನಿನ್ನ ಕಣ್ಣುಗಳನ್ನು ತೆರೆದಿಡಬೇಕು, ಏಕೆಂದರೆ
ಅಲ್ಲಿಯೂ ಸಹ ನಾನು ಹುಡುಕಾಡಬೇಕು,
ನೀನು ನನ್ನ ಬಾರದ ನಡೆಯನ್ನು,
ನನಗಾಗಿ ಕಾದಿದ್ದ ಎಲ್ಲ ಮುಚ್ಚಿದ ದಾರಿಗಳು,
ತೆರೆದುಕೊಳ್ಳುವುದನ್ನು ನೋಡಲೇ ಬೇಕು.

ಭಯಪಡಬೇಡ,
ನಾನು ನಿನ್ನವನು,
ಆದರೆ,
ನಾನು ಪಯಣಿಗ ಅಥವಾ ಬಿಕ್ಷುಕನಲ್ಲ,
ನಾನು ನಿನ್ನ ಮಾರ್ಗದರ್ಶಕ,
ನೀನು ಕಾಯುತ್ತಿದ್ದೆಯಲ್ಲಾ ಅವನು.
ನಾನು ಈಗ ನಿನ್ನ ಬಾಳ ಪ್ರವೇಶಿಸುವೆ,
ಮತ್ತೆಂದೂ ಬಿಟ್ಟು ಹೋಗದಂತೆ,
ಪ್ರೀತಿ, ಪ್ರೀತಿ, ಪ್ರೀತಿಯಿಂದ
ಅಲ್ಲೇ ನೆಲೆಸಲು.

(ಮೂಲ ಕವಿ:ಪ್ಯಾಬ್ಲೊ ನೆರುದ)

ನಿನ್ನ ನಗು

ನನಗೆ ಹಸಿವಾದಾಗ ಈ ಊಟದಿಂದ ದೂರವಿಡು, ಅದು ನಿನಗೆ ಇಷ್ಟವಾದರೆ,
ನಾನು ಉಸಿರಾಡುವ ಗಾಳಿಯನ್ನೂ ಸಹ ತೆಗೆದುಕೊಂಡು ಹೋಗು,
ಆದರೆ,
ಆ ನಿನ್ನ ಮಾದಕ ನಗುವನ್ನು ಮಾತ್ರ,
ನನ್ನಿಂದ ದೂರಮಾಡಬೇಡ.

ನನ್ನನು, ಆ ಕೆಂಗುಲಾಬಿಯಿಂದ ದೂರವಿಡಬೇಡ ದಯವಿಟ್ಟು,
ಆ ಸುಂದರ ಹೂವನ್ನು ನೀನೇ ಕಿತ್ತು ಕೊಟ್ಟಿದ್ದೆ ನೆನಪಿರಲಿ,
ಇದ್ದಕಿದ್ದಂತೆ ಆ ನೀರು ಖುಷಿಯಿಂದ ಕುಣಿದಾಡುತ್ತದೆ,
ಸುಂದರ ಪರಿಮಳ ಆಗ ನಿನ್ನಿಂದ ಹೊರ ಹೊಮ್ಮುತ್ತದೆ.

ನಾನು ತಂಬ ಕಷ್ಟದ ಕೆಲಸ ಮುಗಿಸಿ ಮನೆಗೆ ಮರಳಿದಾಗ,
ನನ್ನ ಕಣ್ಣುಗಳು ಸೋತಿರುತ್ತವೆ,
ಕೆಲವು ಸಲ ಏಕತಾನತೆಯಿಂದ ಬೇಸರಗೊಂಡಿರುತ್ತೇನೆ,
ಆದರೆ ನೀನು ನಗುವಾಗ, ಅದು ಆಗಸದೆತ್ತರಕ್ಕೆ ಹಾರಿ,
ನನ್ನನ್ನೇ ಹುಡುಕುತ್ತಾ ಬರುತ್ತದೆ,
ಅದು ನನಗೆ ಸಂತಸದ ಎಲ್ಲಾ ಬಾಗಿಲುಗಳನ್ನು
ತೆರೆಯುತ್ತದೆ.

ನನ್ನ ಪ್ರೀತಿಯೇ, ಕಗ್ಗತ್ತಲಲ್ಲಿ ನೀ
ನಗು ಬೀರಿದಾಗ, ತಕ್ಷಣವೇ ಕಾಣುವೆ
ನನ್ನ ರಕ್ತ ರಸ್ತೆಯ ಕಲ್ಲುಗಳಿಗೆ ರಾಚಿರುವುದನ್ನು,
ನಗು, ನಗುತ್ತಲೇ ಇರು, ಏಕೆಂದರೆ
ನಿನ್ನ ನಗುವೇ, ನನ್ನ ಕೈಗಳಿಗೆ
ಸಿಕ್ಕ ಹೊಸ ಖಡ್ಗ.

ಸಾಗರದಂಚಿಗೆ ಆ ಶ್ರಾವಣದಲ್ಲಿ,
ನಿನ್ನ ನಗು ಮಾದಕತೆಯಿಂದ ಹುರಿದುಂಬಿಸುವುದು,
ಮತ್ತೆ, ವಸಂತದಲ್ಲಿ, ನನ್ನ ಸಖಿ,
ನಿನ್ನ ನಗು ನಾನಿಷ್ಟಪಟ್ಟು ಕಾಯುತ್ತಿದ್ದ
ಆ ಮೋಹಕ ಹೂವಿನಂತಿಹುದು, ತಿಳಿನೀಲಿ ಗುಲಾಬಿ
ತೂಗಾಡಿದಾಗ, ಸಂಗೀತದಂತೆ ಮನ ಸೆಳೆವುದು.

ರಾತ್ರಿಯಲ್ಲಿ ನಗು, ದಿನದಲ್ಲಿ ನಗು,
ಚಂದ್ರನ ಕಾಣುತ್ತಾ ನಗು,
ಸುಳಿದಾಡುವ ರಸ್ತೆಗಳತ್ತ ನೋಡುತ್ತಾ ನಗು,
ನಿನ್ನ ತೀವ್ರವಾಗಿ ಪ್ರೀತಿಸುವ,
ಈ ಕೊಳಕು ಹುಡುಗನತ್ತ ನೋಡಿ ನಗು,
ಆದರೆ ನಾನು ಕಣ್ತೆರೆದು ಮುಚ್ಚಿದಾಗ,
ನಾನು ಎಲ್ಲೋ ನಡೆದು ಹೋದಾಗ,
ಮತ್ತೆ ದಣಿದು ಮರಳಿದಾಗ,
ನನಗೆ ಊಟ, ಗಾಳಿ, ನೀರು,
ಬೆಳಕು, ನೆರಳು ಯಾವುದೂ ಬೇಡ,
ಆದರೆ ನಿನ್ನ ನಗುವಿರದಿದ್ದರೆ,
ನಾನು ಖಂಡಿತ ಬದುಕಿರಲಾರೆ.


(ಮೂಲ ಕವಿ: ಪ್ಯಾಬ್ಲೊ ನೆರುದ)

Jan 9, 2009

ಅಸ್ಥಿಪಂಜರ!

ಆಹಾ! ಏನಾಶ್ಚರ್ಯ, ಅದ್ಭುತ!
ಎಷ್ಟು ಸುಂದರ,
ಈ ಅಸ್ಥಿಪಂಜರ!
ಇದರ ಹೆಸರು,
ಕುಲ, ಗೋತ್ರ,
ದರ್ಮ, ವರ್ಣ,
ಕರ್ಮ, ಕಾಯಕ,
ಬಡವ, ಬಿಕಾರಿ,
ಶ್ರೀಮಂತ, ಧೀಮಂತ
ಈ ಯಾವ ಕಾಯಿಲೆ
ಇದಕೆ ಕಾಡವುದಿಲ್ಲ ಈಗ.
ಎಲ್ಲರಿಂದ ತಪ್ಪಿಸಿಕೊಂಡು
ಜೀವ ತೊರೆದು,
ಚಿರಶಾಂತಿಯಿಂದ,
ನಿಜವಾದ ಮುಕ್ತಿ
ಪಡೆದಿದೆ ಈಗ.

ವಿರಹ ಗೀತೆ

ತೀವ್ರ ನೋವಿನ ಸಾಲುಗಳ ನಾ ಬರೆಯಬಲ್ಲೆ ಈ ರಾತ್ರಿ

ಈ ರೀತಿ: ಈ ರಾತ್ರಿ ಬಿರುಕುಬಿಟ್ಟಿದೆ,
ನಡುಗುತ್ತಿದೆ ಆ ನೀಲಾಕಾಶ, ಆ ನಕ್ಷತ್ರಗಳೆಲ್ಲೋ ದೂರದಲ್ಲಿ.

ಈ ರಾತ್ರಿಯ ತಂಗಾಳಿ ಸುತ್ತಿ ಸುತ್ತಿ ಹಾಡುತ್ತಿದೆ ಯಾವುದೋ ರಾಗದಲ್ಲಿ.
ತೀವ್ರ ನೋವಿನ ಸಾಲುಗಳ ನಾ ಬರೆಯಬಲ್ಲೆ ಈ ರಾತ್ರಿ
ನಾ ಅವಳ ಪ್ರೀತಿಸಿದೆ, ಅವಳೂ ಸಹ ಆಗಾಗ ನನ್ನ ಪ್ರೀತಿಸಿದಳು.

ಈ ತಂಪು ರಾತ್ರಿಗಳಲ್ಲಿ ನಾ ಅವಳ ಆಲಂಗಿಸಿ,
ತೃಪ್ತಿಯಾಗುವವರೆಗೂ ಮತ್ತಿನ ಮಳೆ ಸುರಿಸುತ್ತಿದ್ದೆ,
ಆ ವಿಶಾಲ ಆಗಸದಡಿಯಲ್ಲಿ.

ಅವಳು ನನ್ನ ಪ್ರೀತಿಸಿದಳು, ನಾನು ಸಹ ಆಗಾಗ ಅವಳ ಪ್ರೀತಿಸಿದೆ
ಅದ್ಭುತ ವಿಶಾಲಾಕ್ಷಿಯುಳ್ಳವಳ ನಾ ಹೇಗೆತಾನೆ ಪ್ರೀತಿಸದಿರಲು ಸಾಧ್ಯ

ತೀವ್ರ ನೋವಿನ ಸಾಲುಗಳ ನಾ ಬರೆಯಬಲ್ಲೆ ಈ ರಾತ್ರಿ
ಅವಳಿಲ್ಲದಂತೆ, ಅವಳ ಕಳೆದುಕೊಂಡಂತೆ ಯೋಚಿಸುವಾಗ.

ಕೇಳಿಸಿಕೊ, ಈ ದೀರ್ಘ ರಾತ್ರಿ, ಇನ್ನೂ ದೂರವಾಗಿದೆ ಅವಳಿಲ್ಲದೆ
ಅಗಲಿಕೆಯ ಸಾಲುಗಳು ಬೀಳುತ್ತಿವೆ ಹೃದಯದ ಮೇಲೆ,
ಮಂಜು ಸುರಿಯುವಂತೆ ಆ ಹಸಿರು ಹುಲ್ಲಿನ ಮೇಲೆ

ಅವಳು ಜೊತೆಗಿರದಿದ್ದರೇನಂತೆ, ದೊಡ್ಡ ವಿಷಯವೇನಲ್ಲ
ಈ ರಾತ್ರಿ ಬಿರುಕು ಬಿಟ್ಟಿದೆ, ಅವಳು ಜೊತೆಗಿಲ್ಲ

ಅಷ್ಟೆ, ಯಾರೋ ಹಾಡುತ್ತಿದ್ದಾರೆ ದೂರದಲ್ಲಿ, ಬಹಳ ದೂರದಲ್ಲಿ,
ಅವಳ ಕಳೆದುಕೊಂಡ ಅತೃಪ್ತಿ ಕಾಡುತ್ತಿದೆ ಈಗ.

ಅವಳ ಹತ್ತಿರ ಹೋಗಲು, ನನ್ನ ಕಣ್ಣು ಹುಡುಕುತ್ತಿದೆ,
ನನ್ನ ಹೃದಯ ಹುಡುಕುತ್ತಿದೆ: ಅವಳು ನನ್ನ ಜೊತೆಗಿಲ್ಲ.

ಈ ರಾತ್ರಿ, ಆ ಮರದ ರೆಂಬೆಗಳೂ ಸಹ ನೀರಸವಾಗಿವೆ.
ನಾವು ಸಹ ಆ ಸಮಯದಿಂದ, ಮೊದಲಿನಂತಿಲ್ಲ.

ಖಂಡಿತ ನಾನವಳ ಪ್ರೀತಿಸಿಲ್ಲ, ಆದರೂ ಹೇಗೆ ಪ್ರೀತಿಸಿದೆ.
ನನ್ನ ದನಿ ಏಕೋ ತಂಪಾಗಲು ಯತ್ನಿಸುತ್ತಿದೆ, ಅವಳ ಮತ್ತೆ ಸೇರಲು.

ಯಾರದೋ ಮುತ್ತುಗಳು ಅವಳಿಗೆ ಈಗ, ನನ್ನ ಮುತ್ತುಗಳಂತೆ.
ಅವಳ ಮಾತು, ದೇಹ, ಆ ವಿಶಾಲ ಕಣ್ಣುಗಳು.

ನಾನವಳ ಪ್ರೀತಿಸುವುದಿಲ್ಲ, ಖಂಡಿತ, ಆದರೂ ಪ್ರೀತಿಸುತ್ತೇನೆ.
ಈ ಪ್ರೀತಿ ಕ್ಷಣಿಕ: ಮರೆಯಲು ಹೆಚ್ಚು ಸಮಯ ಬೇಕಾಗಬಹುದು.

ಇಂಥಹ ರಾತ್ರಿಗಳಲ್ಲಿ, ನಾ ಅವಳ ಅಪ್ಪಿಕೊಳ್ಳುತ್ತಿದ್ದೆ ಗಟ್ಟಿಯಾಗಿ,
ಈ ಜೀವಕ್ಕೆ ನೋವಾಗಿದೆ ಈಗ, ಅವಳಿಲ್ಲದಾಗಿನಿಂದ.

ಆದರೂ ಇದೇ ಕೊನೆಯ ಸಲ ಅವಳು ನನಗೆ ನೋವು ಕೊಡುಲು ಸಾಧ್ಯ,
ಮತ್ತೆ, ಇದೇ ಕೊನೆಯ ಸಾಲು ನಾನು ಅವಳಿಗಾಗಿ ಬರೆಯುವುದು ಸತ್ಯ.

( ಮೂಲ ಕವಿ: ಪ್ಯಾಬ್ಲೊ ನೆರುದ )

Jan 7, 2009

ಭಾರತಿಯೆ

ಶಿರಬಾಗಿ ವಂದಿಸುವೆ ತಾಯಿ ಭಾರತಿಯೆ
ನೀ ಸರ್ವಧರ್ಮವ ಸಲಹೊ ಕರುಣಾಮಯಿ
ಸಕಲ ವರ್ಣಗಳ ರೂಪ ನೀ ಶ್ವೇತಾಂಬರಿ
ಮನುಕುಲಕೆ ಮಾದರಿ ನಿನ್ನೊಲವು ತಾಯೆ

ಶಿರಬಾಗಿ ವಂದಿಸುವೆ ತಾಯಿ ಭಾರತಿಯೆ
ಸಿಹಿನೀರನರಿಸುವೆ ನೀ ನಡೆವ ನೆಲದಲ್ಲಿ
ಫಲಪುಷ್ಪಗಳ ತೇರು ಆ ನಿನ್ನ ಮುಡಿಯಲ್ಲಿ
ಶಾಂತಿ, ಸಂತಸವ ಸಿದ್ಧಿಸುವ ಮಾಯೆ

ಶಿರಬಾಗಿ ವಂದಿಸುವೆ ತಾಯಿ ಭಾರತಿಯೆ
ಮಲಯ ಮಾರುತದಿ ತಂಪುಗೊಂಡವಳೆ
ವನ, ಕಾನನಗಳಿಂದ ಇಂಪುಗೊಂಡವಳೆ
ಚರಣ ಸ್ಪರ್ಶಕೆ ಸ್ಪರ್ಗ ತಾಯಿ ಭಾರತಿಯೆ

ಶಿರಬಾಗಿ ವಂದಿಸುವೆ ತಾಯಿ ಭಾರತಿಯೆ
ಬೆಳ್ಳಿ ಬೆಳದಿಂಗಳಿಗೆ ನೀ ಪುಲಕಗೊಂಡಿರುವೆ
ಹೊಳೆವ ಕಣ್ಣುಗಳಿಂದ ನೀನಿರುಳ ಬೆಳಗುವೆ
ನಿನ್ನ ನಗುವಿಂದಲೇ ನಮ್ಮ ಮನಗೆಲ್ಲುವೆ

ಶಿರಬಾಗಿ ವಂದಿಸುವೆ ತಾಯಿ ಭಾರತಿಯೆ
ಸರ್ವಮತಗಳ ಊರು ನಿನ್ನ ತವರೂರು
ಸಹನೆ, ಸಂಯಮಗಳಿಗೆ ನೀನೆ ಕಲ್ಪತರು
ಸರ್ವರಿಗೂ ಸದ್ಗತಿಯ ಸನ್ಮಾರ್ಗ ತೋರು

Jan 1, 2009

ಮತ್ತೆ ಬರುವನು ಚಂದಿರ - 10

ಬೆತ್ತಲ ಮೈಯೊಡ್ಡಿ ರವಿಕಿರಣ ಸ್ಪರ್ಶಕೆ
ಶಿಶಿರದಲಿ ಉದುರಿ ಚೈತ್ರದಲಿ ಚಿಗುರಿ
ಹಸಿರ ಮೈತುಂಬಿ ಚಿರಯೌವನ ಸೆಳೆತಕೆ
ಮೆರುಗು ನೀಡುವನೊ ಚಂದಿರ

ಅಭದ್ರತೆಯ ಭಯ ಕಾಡುತಿದೆ ಸತತ
ಒಂಟಿ ಬದುಕಿನ ಬೇನೆ ಬಿಡಲೊಪ್ಪದು
ಮುಚ್ಚಿದಷ್ಟೂ ಸೂರು ಸೋರುತಿದೆ ನಿರತ
ದಣಿದಿರುವೆ ದಾಹನೀಗೊ ಚಂದಿರ

ತೂಗುಯ್ಯಾಲೆಯಲಿ ತೇಲಿಹೋದ ಹಾಗೆ
ಜೀವ ಮಿಡುಕುತಿದೆ ಸಖಿಯ ಬರುವಿಕೆಗೆ
ಹಾತೊರೆವ ಮನಕೆ ಮೌನವೇ ಮಾತು
ತವಕ ತಣಿಸುವ ಬಯಕೆ ಚಂದಿರ

ನಿಗೂಢ ಮೌನ ಆ ದಿವ್ಯ ಸಮ್ಮಿಲನ
ಗಂಭೀರ ಸಂವಾದಕೆ ಇಲ್ಲ ಜನನ
ಅಲೆಯುವ ಮನ ಸೆರೆಸಿಕ್ಕ ಕ್ಷಣವೆ
ಇಹವ ಮರೆಯುವೆನಾಗ ಚಂದಿರ

ಬರಡುಬಾಳಿಗೆ ಚಿಗುರುವ ಬೇಡಿಕೆ
ಸಾಮರಸ್ಯದ ಸರಸ ಪಡೆವ ಬಯಕೆ
ನಿತ್ಯ ನಿರಾಸೆಯಾದರೂ ಇದೆ ನಂಬಿಕೆ
ನವಿಲಗರಿಯ ತರುವನಾ ಚಂದಿರ

ಕಾಮನಬಿಲ್ಲಲ್ಲಿ ತೂಗಾಡುವಾಸೆ
ಜಲಪಾತದಲ್ಲಿ ಜಾರಿಬಿಡುವಾಸೆ
ಸೋನೆಮಳೆಗೆ ತೋಯುವಾಸೆ
ಕಡೆಗೆ ನಿನ್ನ ಸೇರುವಾಸೆ ಚಂದಿರ

ಕ್ಷಣ ದಿನವಾಗಲಿ ದಿನ ಋತುವಾಗಲಿ
ಋತು ದಶಕವಾಗಿ, ದಶಕ ಶತಮಾನ
ಯಾಂತ್ರಿಕತೆಯ ಯಾತನೆ ಕೊನೆಯಾಗಿ
ಚಿರಾಯುವಾಗಿರಲಿ ಶಾಂತಿ ಚಂದಿರ

ಬದುಕಿನ ಇತಿಮಿತಿಗಳನು ಅರಿತು
ಪ್ರೀತಿ ಸ್ನೇಹಗಳು ಸಿಕ್ಕಷ್ಟು ಸವಿದು
ಮಧುರ ಅನುಭೂತಿ ಪಡೆದ
ಹಿತವಾದ ನೆನಪಿರಲಿ ಚಂದಿರ

ಮತ್ತೆ ಮತ್ತೆ ಕಾಡುತಿದೆ ಬಾಳ ಗೆಳತಿ ನೆನಪು
ಕಳೆದ ಮಧುರ ಕ್ಷಣದಲಿ ಬಿಡಿಸಿಟ್ಟ ಅವಳ ಒಲವು
ಮಿಡಿದ ಹೃದಯದಿ ಬೆಸೆದಾಗ ಚೆಲುವು
ಕಣ್ಣಲ್ಲೇ ಕವನ ಬರೆದೆ ನಾನಾಗ ಚಂದಿರ

ಮನಸು ತುಡಿಯುತಿದೆ ಮರಳಿ ನಿನ್ನಲ್ಲಿಗೆ
ಮೌನ ಮಾತಾಗಿದೆ ನಮ್ಮ ಎದೆಯೊಳಗೆ
ಎಲ್ಲ ತಳಮಳಗಳೋಡಿಸುವ ಹಂಬಲಕೆ
ಬಚ್ಚಿಟ್ಟ ಭಾವಗಳ ಬಿಡಿಸಿಡುವನಾ ಚಂದಿರ