Aug 4, 2015

ನಿನಗೆ ಯಾರೆ ಮಾದರಿ?


ನೀನೇ ಆರಿಸಿದ
ಕೊತ್ತೊಂಬರಿ ಕಟ್ಟು, ತಾಜಾ ಹಣ್ಣು, ತರಕಾರಿ
ಕೊಳೆತಿದೆ ಎಂದು
ದಿನವಿಡೀ ಅವನಿಗೆ ಶಪಿಸುವೆ.
ಮನೆಗೆಲಸದವಳನ್ನು ಬೆಂಬಿಡದೆ ಇನ್ನಿಲ್ಲದಂತೆ ಕಾಡುವೆ,
ಯಾವುದೋ ಹಳೇ ಸೇಡು ತೀರಿಸಿಕೊಳ್ಳುವವಳಂತೆ. 
ಮಮ್ಮೊಕ್ಕಳಾದರೂ ನಿನ್ನ ಮಕ್ಕಳ ಕಾಳಜಿಯಲ್ಲಿ
ಇಂದಿಗೂ ತುಸು ಕರಗದ ನಿನ್ನ ಧಾವಂತ,
ಹೇಗೆ ಇನ್ನೂ ಜೀವಂತ?

ನಮಗಾಗಿ ಇಡೀ ಜಗವನ್ನೇ ಯುದ್ಧಕ್ಕೆ ಕರೆಯುವ
ನಿನ್ನ ಭಂಡ ಧೈರ್ಯಕ್ಕೊಂದು ಸಲಾಮು.
ನಿರ್ಲಜ್ಜೆಯ ಪರಾಕಾಷ್ಠೆಯ ಪ್ರಚಂಡ ಪ್ರದರ್ಶನ
ನಿನ್ನ ಮಕ್ಕಳ ಬಗ್ಗೆ ಸುಖಾಸುಮ್ಮನೆ ಕೊಚ್ಚಿಕೊಳ್ಳುವಾಗ.
ಮೈಮನಸಿನ ಕಿಂಚಿತ್ ಗಾಯಕ್ಕೂ
ಬೇಕೇ ಬೇಕು ಇಂದಿಗೂ ನಮಗೆ
ನಿನ್ನ ಪ್ರೀತಿಯ ಮುಲಾಮು.

ನಮಗಾಗಿ ಏನೆಲ್ಲಾ ಆದೆ ಕಣೇ
ಸುಳ್ಳಿಯಾದೆ, ಕಳ್ಳಿಯಾದೆ,
ಮಾತಿನ ಮಳ್ಳಿಯಾದೆ,
ಮಾರಿ-ಹೆಮ್ಮಾರಿಯಾದೆ.
ಮಾನ, ಸ್ವಾಭಿಮಾನ
ಎಲ್ಲವೂ ಅಡವಿಟ್ಟೆ.
ನೀ ಕೋಪಗೊಂಡ ಕರಾಳ ಸನ್ನವೇಶಗಳಲ್ಲಿ,
ನಮಗೆ ದನಕ್ಕೆ ಬಡಿದಂಗೆ ಬಡಿದು,
ನೆರೆಹೊರೆಯವರಿಗೆ ವಿಚಿತ್ರ ಭಯ ಕೊಟ್ಟು,
ಊರಿನವರೆಲ್ಲರನ್ನೂ ಬೆಚ್ಚಿಬೀಳಿಸಿದೆ.
ಚಂಡಿ-ಚಾಮುಂಡಿಯೂ ಆ ಘಳಿಗೆಯಲ್ಲಿ
ನಿನ್ನ ಮುಂದೆ ಮಂಡಿಯೂರಲೇಬೇಕಿತ್ತು.

ನಿನ್ನ ಆಸೆ, ಆಶಯಗಳಿಗೆ,
ಎಲ್ಲಾ ಕನಸುಗಳಿಗೆ ಕೊಲ್ಲಿಯಿಟ್ಟು,
ನಮ್ಮ ಕನಸುಗಳಿಗೆ ನಿರಂತರ ನೀರು-ಗೊಬ್ಬರವೆರೆದು,
ಜಾಗರೂಕತೆಯಿಂದ ಸಲುಹಿ, ಬೆಳೆಸಿ
ನಮಗಿಂತ ಹೆಚ್ಚಾಗಿ ನೀನೇ ಖುಷಿಪಟ್ಟೆ.

ಎಂದೂ ಅಳಿಸಲಾಗದ ಘಟನೆಗಳು;
ಅಂದು ಅವರಿತ್ತ ಮುದ್ದೆಸಾರು ನಮಗಿಟ್ಟು
ನಾವು ಅದರೊಂದಿಗೆ ಕಾಳಗವಿಟ್ಟು,
ಕ್ಷಣದಿ ಕರಗಿಸಿದ ಚಣಗಳನ್ನು,
ಆಸ್ಥೆಯಿಂದ ಆಸ್ವಾಧಿಸಿ,
ಚಂಬು ನೀರು ಕುಡಿದು ಮಲಗಿದ
ನಿನ್ನ ಎಷ್ಟೋ ರಾತ್ರಿಗಳಿಗೆ ಲೆಕ್ಕವುಂಟೇನೆ?
ದಟ್ಟ-ದಾರಿದ್ರ್ಯದ ಅಟ್ಟಹಾಸವ
ನಸು ನಗೆಯಿಂದಲೇ ಮಣಿಸಿದ
ನಿನ್ನ ಸಾಹಸಕ್ಕೆ ಶರಣು, ಶರಣು.
ಹಸಿವು,
ಅದೆಂಥಹ ಮಹಾಕ್ರೂರಿ, ನಿರ್ದಯಿ, ಕಡುಪಾಪಿ!
ನಮ್ಮ ಹಸಿವಲ್ಲಿ ನಿನ್ನ ಹಸಿವಿಗೆ 
ಆಗ ಜಾಗವೆಲ್ಲಿ.

ಆದರೂ ನೀನು ಮಾಹನ್ ಸ್ವಾರ್ಥಿ!
ಕುಡುಕ ಅಪ್ಪನ ಸಾವು ಸಹಿಸಿಕೊಂಡು,
ಒಮ್ಮೆಯಾದರೂ ಅದರ ನೋವು,
ಇಲ್ಲಾ ಅವನ ನೆನಪು ಸುಳಿಯದಂತೆ ನೋಡಿಕೊಂಡ
ನಿನಗೆ ಯಾರೆ ಮಾದರಿ?

ಅಮ್ಮ,
ಎಷ್ಟೋ ಸಲ ನಿನ್ನೊಂದಿಗೆ ಬಹಳ ಕಠುವಾಗಿ ವರ್ತಿಸಿರುವೆ,
ಕೈಮುಗಿವೆ ಒಮ್ಮೆ ಎನ್ನ ಕ್ಷಮಿಸಿಬಿಡೆ.

ಇನ್ನಾದರೂ ನೆಮ್ಮದಿಯಾಗಿ, ಆರೋಗ್ಯದಿಂದ,
ನಗುನಗುತ್ತಾ ನಮ್ಮೊಂದಿಗೆ ನೂರ್ಕಾಲ ನೂಕಿಬಿಡು.
ನೀನೆಂದೆಂದಿಗೂ ನಮಗೆ,
ಸ್ಪೂರ್ತಿಯ ಚಿಲುಮೆ,
ಸಹನೆಯ ಚಂದಿರ,
ಸ್ಥೈರ್ಯದ ಸೂರ್ಯ.







Jul 30, 2015

ಮದ್ಯ ಮಧ್ಯ ಪದ್ಯ!

ಸುಂದರ ಸಾಲಿನ ಶೇಖರಣೆ;
ಕದ್ದ ಮಾಲಿಗೆ ಒಗ್ಗರಣೆ.
ಪ್ರಭಾವಕ್ಕೆ ಉಕ್ಕಿದ;
ಪ್ರೇರಣೆಗೆ ಹಿಗ್ಗಿದ,
ಇಲ್ಲಾ ಭಾರಕ್ಕೆ ಬಾಗಿದ
ಬಾಳೆಗೊನೆ.
ಅಲ್ಲ.

ಇಲ್ಲಾ,
ಭಾವತೀರಯಾನ.
ಅರೆ ಬೆಂದ ಅನ್ನ.
ಋತು, ಮದಿರೆ, ಮಾನಿನಿ.
ಕಾವ ಕರಗಿಸುವ ಕಾವಲಿ.
ಪ್ರೀತಿ, ಗೀತಿ ಇತ್ಯಾದಿ.,
ಕಾಡು, ಕಡಲು, ಕಿನಾರೆ.
ಹೌದಾ?

ಅಥವಾ,
ಆತ್ಮವಿಲ್ಲದ, ಇಲ್ಲಾ ಏನೂ ಒಲ್ಲದ,
ಇಲ್ಲಸಲ್ಲದ ನೆವವೊಡ್ಡಿ ಎಂದೋ ಪರಾರಿಯಾದ              
ರಾಮ, ಯೇಸು, ಅಲ್ಲಾ?
ಅಲ್ಲ. ಖಂಡಿತ
ಅಲ್ಲವೇ ಅಲ್ಲ.

ಅದು ಕಾಲ, ದೇಶವ ದಾಟಿ
ಮೆಟ್ಟಿನಿಲ್ಲುವ ಆತ್ಯಾಪ್ತ ಸಖಿ.
ಕದಡಿ, ಒದ್ದಾಡಿ, ಗುದ್ದಾಡಿ,
ಎಡೆಬಿಡದೆ ಕಾಡಿ, ಕಾಡಿಸಿಕೊಳ್ಳುವ,
ಮಧುರ, ಮಾದಕ ಅನುಭಾವ,
ಇಲ್ಲಾ ನೀರವ ಮೌನ!

ಬದುಕು.
ನೀನು, ನಾನು, ಅವನು, ಅವಳು.
ದಿನ, ರಾತ್ರಿ.
ಭೂಮಿ, ಭಾನು.
ಸೂರ್ಯ, ಚಂದ್ರ.
ಉಳಿದಂತೆ ಮತ್ತದೇ
ಕಾಗುಣಿತಾ.
ಗುಣಿತಾ.
ಗುಣಿ.
ತಾ!





Jun 5, 2014

ಹೈಕು


ತೀಕ್ಷ್ಣ ಚಳಿಗಾಲ –
ಕಂಡರಾಗದ ದಂಪತಿಗಳನ್ನೊಲಿಸುತ್ತದೆ ಮುಂದೂಡಲು 
ತಮ್ಮ ವಿಚ್ಛೇದನವನ್ನು. 

Nov 10, 2013

ಸೂ...ಮಗ!


ಕ್ಷಣ ಮರೆತು,
ಶಪಿಸದರು ಮತ್ತೆ
ಬೆಳೆದು ಬಂದ ಹಾದಿ.
ನೀತಿ, ನಿಯಮಗಳಲ್ಲಿ
ಸನಾತನ ಪರಂಪರೆಗಳಲ್ಲಿ,
ತಪ್ಪಿಯೂ ಹುಡುಕಬೇಡ ಯಾವ ಹುಳುಕು.
ನಾ ಬಲ್ಲೆ,
ಆ ತೊಳಸು ಬಳಸಿನ ಹಾದಿಗಳ ಒಳಮರ್ಮ.
ಆದರೂ ಇರಸುಮುರುಸಾಗುವುದು ನಾನೊಲ್ಲೆ.
ಒಗ್ಗದ, ಒಗ್ಗಿಸಿಕೊಳ್ಳಲು ಆಸಕ್ತಿ ಇಲ್ಲದ
ಹೊಸ ಆಯಾಮಗಳಿಗೆ ತೆರೆದುಕೊಳ್ಳಲು
ನಾನು ಸದ್ಯ ತಯಾರಿಲ್ಲ.
ತಾಳ್ಮೆವಹಿಸು,
ಶತಮಾನಗಳೆ ಉರುಳಿವೆಯಲ್ಲಾ ನಿರಾಯಾಸವಾಗಿ.
ದೂಷಿಸದಿರು ಮತ್ತೆ,
ಬತ್ತಳಿಕೆಯೊಳಗಿಟ್ಟುರುವೆ ಎಷ್ಟೋ ಮುಖವಾಡಗಳನ್ನು.
ಮರೆತೊ, ಇಲ್ಲಾ ಆಲಕ್ಷ್ಯದಿಂದಲೊ
ಅವುಗಳ  ಅದಲುಬದಲು
ಅಥವಾ ಮುಖಾಮುಖಿಯಿಂದ
ಗೊಂದಲ, ದ್ವಂದ್ವತೆ, ತಿಕ್ಕಾಟ ಗೋಚರಿಸುವುದು ಸಹಜ.
ಹೀರಿಕೊ ಮರುಭೂಮಿಯಂತೆ,
ಬಿಂಬಿಸದಿರು ದೊಡ್ಡ ತೊಡಕಂತೆ,
ಹೀರಿಕೊ ಸದ್ದಿಲ್ಲದೆ
ಯಾರಿಗೂ ತಿಳಿಯದ ಹಾಗೆ.
ಸದಾ ಇರಲಿ ಮೊಗದಲ್ಲಿ
ಬಾಡದ ಕಿರಿನಗು,
ನಕಲಿಯಾದರೂ ಸರಿಯೆ
ನನ್ನ ಮುಖವಾಡಗಳಂತೆ.
ಸಂಸಾರದ ಗುಟ್ಟಿನ ಮಹತ್ವ
ಹೇಳಿಕೊಡಬೇಕೆ ನಿನಗೆ
ಹೊಸದಾಗಿ.

ಏರು,
ಎಲ್ಲಾ ಮಜಲುಗಳ ಏರು,
ಸಹಕರಿಸುವೆ ಸಾವಧಾನದಿಂದ,
ತೊಡಕಾಗದಂತೆ ಎಚ್ಚರವಹಿಸುವೆ.
ಆದರೆ ನೆನಪಿರಲಿ,
ಎತ್ತರ ಎಷ್ಟಾದರೂ ಸರಿಯೆ ಸಹಿಸಿಕೊಳ್ಳುವೆ,
ಆದರೆ ನನ್ನ ಮೀರದಂತೆ ನೋಡಿಕೊ,
ಪ್ರತಿಷ್ಠೆ, ಘನತೆಗೆ ಧಕ್ಕೆಯಾಗದಂತೆ,
ನಡೆ-ನುಡಿಗಳಲ್ಲಿ ನಿಗಾವಹಿಸು.
ಸಭ್ಯತೆ, ಸೌಮ್ಯತೆ, ವಿನಯಶೀಲತೆ
ಎಲ್ಲಾ ಒಡವೆಗಳ ತೊಟ್ಟು,
ಕರ್ತವ್ಯನಿಷ್ಠೆಯಿಂದ,
ಸಾಗಲಿ ಪಯಣ
ಅಲುಗಾಡದೆ.

ನಿನಗೆ ಶುಭವಾಗಲಿ.

Oct 23, 2013

ನೀಲು ನೆನಪಲ್ಲಿ...


ನೀಲು –
ಅವಳ ಸೆಳೆಯಲು
ನೂರಾರು ಉದಯೋನ್ಮುಖ ಕವಿಗಳು ಎಷ್ಟು ಹೆಣಗಾಡಿದರೂ
ಅವಳು ಎಲ್ಲರ ಕಿವಿಹಿಂಡಿ ಕಿರುನಕ್ಕಿದ್ದು
ಅವರಿಗೆ ತುಸು ತೃಪ್ತಿ ಕೊಟ್ಟಿತ್ತು.

ನೀಲು –
ಎಲ್ಲಾ ಸಭ್ಯ,  ಸುಸಂಸ್ಕೃತರನ್ನು
ನಯವಾಗಿ ತಿರಸ್ಕರಿಸಿ
ಅಪ್ಪಟ ಒರಟನೊಬ್ಬನ ತೀವ್ರವಾಗಿ ವರಿಸಿದ್ದು
ಈಗ ಇತಿಹಾಸ.

ನೀಲು –
ಅವಳ ಗಾಢ ನಡೆ-ನುಡಿಯ ಸೊಗಡು
ಸೌಮ್ಯ ಮಾನಿನಿಯರಿಗೆ ಗರ ಬಡಿಸಿ,
ಮಹನೀಯರಿಗೆ ಬಿಸಿತುಪ್ಪವಾಗಿದ್ದು ಸುಳ್ಳಲ್ಲ.

ನೀಲು –
ಅವಳ ಮಾದಕ ಉನ್ಮಾದತೆಗೆ
ನಿಬ್ಬೆರಗಾದ ಪಡ್ಡೆ ಹುಡುಗರ ನಿಯಂತ್ರಿಸಲು
ಬಂದ ಪೋಲೀಸರು ಚಣ ಪೋಲಿಗಳಾಗಿದ್ದು ಸತ್ಯ.

Sep 26, 2013

ನಾಡಹಬ್ಬ



ತೂರಿ  ಜಿಗಿವ ಹಾಲ  ನೊರೆಯ ಜೋಗದಂತೆ
ಕನ್ನಡಿಗರೆ ಬನ್ನಿರಿ, ಮೈಗೊಡವಿಕೊಂಡು ನುಗ್ಗಿರಿ.
ಜಾತಿ ಭೇದ ತುಳಿಯುತಾ, 
ಮನದ ಮಲಿನ ತೊಳೆಯುತಾ,
ಮನುಜ ಮತವೆ ಹಿತವೆನ್ನುತಾ
ಹಾಡಿರಿ, ಕುಣಿಯಿರಿ,  ನಾಡಹಬ್ಬ ನಡೆಸಿರಿ.

ಬುದ್ಧ, ಬಸವ, ಮಹಾವೀರ, ಕಬೀರರಂತೆ
ಕ್ರಾಂತಿ, ಶಾಂತಿ, ಕಾಂತಿಧೂತರಾಗಿ,
ನೆಲೆಯ, ನುಡಿಯ ನಲಿವಿಗಾಗಿ,
ನಾಡ, ನದಿಯ ಹೃದಯವಾಗಿ,
ದಸರಾ, ದಸರಾ, ದಸರಾ ಎಂದು
ಹಾಡಿರಿ, ಕುಣಿಯಿರಿ, ನಾಡಹಬ್ಬ ನಡೆಸಿರಿ.