Apr 30, 2008

ಭವತೀ ಭಿಕ್ಷಾಂದೇಹಿ

ಭವತೀ ಭಿಕ್ಷಾಂದೇಹಿ ಅಂದ ರಾವಣ
ಸೀತೆಯ ಅಪಹರಿಸಿದ ಲಂಕೆಗೆ
ಅಶೋಕವನದಲಿರಿಸಿದ ಅವಳ
ಬೇಟಿಯಾದ ಹನುಮಂತ
ಕಂಡು ಬಾರಯ್ಯ ಎಂದ
ಮಾತ್ರಕೆ ಸುಟ್ಟು ಬಂದ

ಕಲಿಯುಗವೇನು ಭಿನ್ನವೇ
ಇಲ್ಲಿಹರು ರಾಮ, ಹನುಮ ,
ರಾವಣ, ಸೀತೆಯರು
ಯಂತ್ರ ಮಂತ್ರ ತಂತ್ರ
ಕಲಿತ ಕಿರಾತಕರು
ನಿನ್ನೆ ಇಂದು ನಾಳೆ
ಬಲ್ಲ ಬಲಾಢ್ಯರು

ಕ್ಷಣಕೆ ಇಲ್ಲಿ ಮರುಕ್ಷಣಕೆ ಅಲ್ಲಿ
ಅಲ್ಲಿ ಇಲ್ಲಿ ಎಲ್ಲೆಲ್ಲೂ ಇಹರು
ಇವರ ಮುಂದೆ ಬೇರೆ
ಎಲ್ಲ ಸಪ್ಪೆ, ಇವರಿಂದ
ತಿಳಿಯಬೇಕು ಬೆಟ್ಟದಷ್ಟು
ಇವರು ಯಾರಿಗೇನು
ಕಡಿಮೆ ಬಲ್ಲೆಯೇನು

ರಾಮಾಯಣದೊಳಗೇನಿದೆ
ಕಲಿಯುಗದಲೆಲ್ಲ ಅಡಗಿದೆ
ಶಾಂತಿ, ಸುಖ, ಸಂತಸಕೆ
ಹಣ ಸಾಕಷ್ಟು ಬಳಿಯಿದೆ
ಹಣದ ಮುಂದೆ ಎಲ್ಲ ಗೌಣ
ಧನವೇ ಮೂಲ ಮಂತ್ರ ಜಾಣ
ಮೌಲ್ಯಗಳ ಮೊದಲು ಹಣ
ನೆಮ್ಮದಿಗೆ ಬೇರೇನು ಬೇಕಣ್ಣ

ಏಕೆ ಹೇಗೆ ಎಂಬ ಪ್ರಶ್ನೆ ಬೇಕೆ
ಹಳೆಯ ಪುಟವು ನೆಪ ಮಾತ್ರಕೆ
ಸರಳ ಜೀವನ ಮಂತ್ರವೇಕೆ
ಮೌಲ್ಯದ ನೀತಿಪಾಠಗಳೇಕೆ
ಅದು ಮೀಸಲಿರಲಿ ರಾಮಾಯಣಕೆ
ಕಲಿಯುಗದ ಪಾಪದ ಜನಕೆ

Apr 29, 2008

ಕರುಣಿಸು

ಕರುಣಿಸು ಕಮಲಾಕ್ಷಿ ಕಾಲ ಕಳೆದಾಗಿದೆ
ನೆನಪಿಸು ನೆನ್ನೆಗಳ ಹೆಸರು ಹಸಿರಾಗಿದೆ

ನಿನ್ನೆ ನೆನ್ನೆಗಳ ಬೆಳದಿಂಗಳಿನ ಇರುಳ
ನನ್ನ ನಿನ್ನಯ ನಡುವೆ ನಡೆದ ಬಹಳ

ಮೂಕ ವೀಕ್ಷಕರೆಲ್ಲ, ಅಂಧ ರಕ್ಷಕರೆಲ್ಲ
ಜಾಣರೆಂಬುವರ ಜಗಕೆ ಉತ್ತರವಿಲ್ಲ

ನಿನ್ನೆಗೆ ನೆಲೆಯಿಲ್ಲ, ಇಂದು ನೀನೆ ಎಲ್ಲ
ಇನ್ನು ನಾಳೆ ನಾಳೆಗಳ ಚಿಂತೆ ನನಗಿಲ್ಲ

ಕೂಡಿ ಕಳೆಯುವ ಆಟವಾಡುವ ಜನರು
ಕೂಡಿ ಬಾಳುವ ಪಾಠ ಪಠಿಸುತಿಹರು

ಮುಗುದೆ ಮುನಿಸೇಕೆ ವಿರಸ ನಮಗೇಕೆ
ಬೇಹುಗಾರರ ತಂತ್ರಕೆ ಮಣಿಯಲೇಕೆ

ಇಂದಿರುವ ಕ್ಷಣಗಳು ಮತ್ತೆಂದು ಬಾರದು
ಮುಂಬರುವ ದಿನಗಳ ಲೆಕ್ಕವಿಡಬಾರದು

ಕರುಣಿಸು ಕಲ್ಪತರು ನಿನಗೆ ಕೋಪ ತರವಲ್ಲ
ಜಗದ ಜೊತೆಯಲೇ ಹೋಗುವ ನಿಯಮವಿಲ್ಲ

ಚುನಾವಣೆ ಬಿಸಿ

ಚುನಾವಣೆ ಬಿಸಿಯೇರುತಿದೆ
ಭರವಸೆಗಳ ಮಳೆ ಸುರಿಯುತಿದೆ
ರಾಷ್ಟ್ರೀಯ ಪಕ್ಷಗಳೊಂದಿಗೆ
ಪ್ರಾಂತೀಯ ಪಕ್ಷ ಕಣದಲ್ಲಿದೆ

ಭಿನ್ನ ವಿಭಿನ್ನ ಆಶ್ವಾಸನೆಗಳು
ಬಣ್ಣ ಬಣ್ಣದ ಟೀವಿ, ಸೈಕಲ್ಲುಗಳು
ಎರಡು ರೂಗೆ ಕಿಲೋ ಅಕ್ಕಿ
ಕಡಿಮೆ ಬಡ್ಡಿದರ, ಕೃಷಿ ಸಾಲಮನ್ನಾ

ಉಚಿತ ವಿದ್ಯುತ್ ಸರಬರಾಜು
ಶುದ್ಧ ಕುಡಿಯುವ ನೀರು
ಒಳ ಚಂರಂಡಿ ವ್ಯವಸ್ಥೆ
ನಮಗೆ ಅತ್ಯುತ್ತಮ ರಸ್ತೆ

ಆರೋಪ ಪ್ರತ್ಯಾರೋಪಗಳು
ಅವರ ಪ್ರಣಾಳಿಕೆ ನಮ್ಮದೆ
ನಮ್ಮ ಪ್ರಣಾಳಿಕೆ ಕದ್ದಂತಿದೆ
ಮತದಾತರಿಗೆ ಗೊಂದಲವಾಗಿದೆ

ರಾಜಕಾರಣಿಗಳ ಆಕಾಶವಾಣಿ
ಜ್ಯೋತಿಷಿಗಳ ಭವಿಷ್ಯವಾಣಿ
ಟಿಕೆಟ್ಟಿಗಾಗಿ ಮಾಟಮಂತ್ರ
ಓಲೈಸುವ ತಂತ್ರ ಯಂತ್ರ

ಅಧಿಕಾರದ ಲಾಲಸೆಗೆ
ಹಣದ ವ್ಯಾಮೋಹಕೆ
ಮುದುಕರು ಮತಿಗೆಟ್ಟು
ಕುಣಿವರು ಮೂರೂಬಿಟ್ಟು

ಬಂಡಾಯ ಭುಗಿಲೆದ್ದಿದೆ
ಅಟ್ಟಹಾಸ ಮೆರೆಯುತಿದೆ
ಹಣದ ಅಹಂಕಾರ ಕುಣಿದು
ವಿಕೃತ ಪ್ರದರ್ಶನ ನೀಡಿದೆ

ವಿಚಿತ್ರ ಘೋಷಣೆಗಳು
ವಿಶೇಷ ಸೂಚನೆಗಳು
ಗ್ರಾಮೀಣಪರ ನೀತಿಗಳು
ನಗರಪರ ಯೋಜನೆಗಳು

ಹೇಳುವುದೊಂದು ಮಾಡುವುದೊಂದು
ಹತ್ತುಕೋಟಿ ನಗದು, ಕೋಟಿಗಳ ಮದ್ಯ
ಇಪ್ಪತ್ತು ಲಕ್ಷ ಮೌಲ್ಯದ ಸೀರೆ ಸಿಕ್ಕಿತ್ತು
ಸಿಗದಿದ್ದು ಇನ್ನೂ ಎಷ್ಟೋ ಇದ್ದೀತು

ಬುಡಬುಡುಕೆ ಬೂಟಾಟಿಕೆ
ಜನ ನಂಬುವರೆಂಬ ನಂಬಿಕೆ
ನಾಚಿಕೆ ಪರಿಚಯವಿಲ್ಲದಕೆ
ನೈತಿಕತೆ ನೀತಿಪಾಠ ಬೇಕೆ

ಅಧಮರಲ್ಲಿ ಉತ್ತಮನಿಗೆ
ಮತನೀಡುವ ಅನಿವಾರ್ಯತೆ
ಹಣ ಚೆಲ್ಲುವ ಅಂಧರಿಗೆ
ಪಾಠ ಕಲಿಸವ ಅವಶ್ಯಕತೆ

ಮುದುಕರಲ್ಲಿ ಯುವಕರ
ಯುವಕರಲ್ಲಿ ಅರಿತವರ
ಅವಕಾಶವಿರೆ ಹೊಸಬರ
ಖಚಿತ ಕನ್ನಡಿಗರ ಆರಿಸಿ

Apr 28, 2008

ಹನಿಗಳು*

- 1 -

ಮುತ್ತಿಗಾಗಿ
ಮುತ್ತಿನಸರ
ಮತ್ತಿಗಾಗಿ
ಮದ್ಯಸಾರ.

- 2 -

ಒಲವಿಗಾಗಿ
ಬಾಲೆ
ಬಾಲೆಗಾಗಿ
ಬಲೆ.

- 3 -

ನೀರೆಗಾಗಿ
ಸೀರೆ
ಸೀರೆಗಾಗಿ
ಸೆರೆ.

- 4 -

ನಡೆಯುವಾಗ
ನವಾಬ
ನಡೆಯದಾಗ
ಗರೀಬ.

- 5 -

ನಲಿವಿನಾಗ
ಕಬಾಬು
ನೋವಿನಾಗ
ಶರಾಬು

- 6 -

ಗೆಳತಿಗಾಗಿ
ಗುಲಾಬಿ
ಮಡದಿಗಾಗಿ
ಗೋಬಿ

- 7 -

ಹೆಂಡತಿಯಿಂದಾಗಿ
ಹೆಂಡ
ಹೆಂಡದಿಂದಾಗಿ
ದಂಡ.

- 8 -

ಹುಡುಗಿಗಾಗಿ
ಹೂವಾಡಿಗ
ಮಡದಿಗಾಗಿ
ಹಾವಾಡಿಗ.


- 9 -

ನೀ ನಕ್ಕರೆ
ಬರುವೆ
ನೀ ನಗದಿದ್ದರೆ
ಬರವೆ.

- 10 -

ನೀ ಸಿಕ್ಕರೆ
ಸಕ್ಕರೆ
ನೀ ಸಿಗದಿದ್ದಾಗ
ಸಿಗಾರೇ.

- 11 -

ನೀ ಜೊತೆಗಿದ್ದರೆ
ಮೋಜು
ನೀನಿರದಿದ್ದರೆ
ಜೂಜು

- 12 -

ಸುಮ್ಮನಿದ್ದರೆ
ಸಿಗುವೆ
ಸಿಗದಿದ್ದರೆ
ಇರುವೆ.

ತವರೂರ ನೆನಪ

ತಂಗಾಳಿ ಬೀಸುತ ತಂದಿತು ತವರೂರ ನೆನಪ
ಸದಾ ಬೆಳಗುತಿರಲಿ ಆ ಮನೆಯ ನಂದಾದೀಪ

ಮನೆಯಂಗಳದಿ ಅಮ್ಮ ರಂಗೋಲಿಯ ಬಿಡಿಸಿ
ಒಳ ಹೊರಗೆ ನಿಲ್ಲದಲೇ ಎಲ್ಲರ ನಿದ್ದೆಯಿಂದೆಬ್ಬಿಸಿ

ನನ್ನಪ್ಪನಂದು ಪೇಟೆಗೆ ಹೊರಡುವ ಸಮಯ
ಪಟ್ಟಿ ಮರೆಯದಿರಿ ಎನುವ ಅಮ್ಮನ ವಿನಯ

ಆಕಳು ಬಿಡಿಸಿ ಹಾಲುಣಿಸುವುದು ತಮ್ಮನ ಕೆಲಸ
ಶಾಲೆಗೆ ಹೊರಡುವ ತಯಾರಿಗಿಲ್ಲ ಒಂದು ನಿಮಿಶ

ಕರಿಯ ಕಂಬಳಿಯೆಸೆದು ಹೊರಟ ಹಸುಗಳೊಂದಿಗೆ
ನೀರು ಹರಿಸಲು ತೋಟದ ಕಡೆಗೆ ಸನಿಕೆಯೊಂದಿಗೆ

ಬೆಲ್ಲದುಂಡೆಯ ಬಿಸಿ ಬಿಸಿ ಕಾಫಿ ನನ್ನಜ್ಜಿಯ ಕರೆದಿತ್ತು
ಹಗಲೆಲ್ಲ ಹಬ್ಬರಿಸಲು ಅವಳಿಗಿದರಿಂದ ಶಕ್ತಿ ಸಿಕ್ಕೀತು

Apr 26, 2008

ಛಲಗಾತಿ

ಛಲಗಾತಿ ನನ್ನೊಡತಿ ಮುನಿಸವಳ ಮೂಗುತಿ
ಕನವರಿಕೆ ನೆಪವಷ್ಟೇ ದಿಟ ನುಡಿದ ಮಾರುತಿ

ಮುಂಗೋಪ ಮುಖದವಳ ಸಿಡುಕು ಸಿಂಗಾರ
ಮಣಿಯುವೆನು ಜಾಣ ನನ್ನ ಬದುಕು ಬಂಗಾರ

ದೂರ ದೂರಕೇ ಇರಲಿ ಹಸಿರಾದರೇನಂತೆ
ಹತ್ತಿರವಿರುವ ಜಗವು ಅವಳ ನಿಯಮದಂತೆ

ದುಡುಕಿದರೆ ಮರುಕ್ಷಣವೇ ದಾರಿ ಕಾಣದಯ್ಯ
ಬಯಸಿ ಬೇಡಿದರು ಬಳಿಗೆ ಬೆಳಕರಿಯದಯ್ಯ

ಹುಲಿರಾಯ ನಾ ಹೊರಗೆ ಒಳಗೆ ಇಲಿಯಂತೆ
ಇದ್ದರಾಯಿತು ಗೆಳೆಯ ನನಗಿರದಾಗ ಚಿಂತೆ

ಶನಿವಾರ ಸಂತೆಗೆ ತಡಮಾಡಿದೆ ಬೇಕಂತೆ
ರವಿವಾರ ಖಚಿತ ನನ್ನ ಮುಖ ಬಾಡಿದಂತೆ

ಅಂದು ಮಂಗಳವಾರ ಮಡದಿ ಮನೆಯಲ್ಲಿಲ್ಲ
ಬಿಡದಿಯ ಬಸ್ಸತ್ತಿದವಳು ಮತ್ತೆ ಇಳಿದಿರಲಿಲ್ಲ