Aug 28, 2015

ನಮಗಿಲ್ಲ ಯಾವ ಊರು, ಯಾವ ಸೂರು.


ನಿತ್ಯ ಶೋಷಣೆಯ ನೊಗವೊತ್ತು  ಹತಾಶೆ,  ಅಭದ್ರತೆಯ ನೆರಳಲ್ಲಿ ನೊಂದು ನಂಬಿಕೆ ಕಳೆದುಕೊಂಡ ನಿರ್ಗತಿಕ, ಕೂಲಿ ಕಾರ್ಮಿಕಬಡ ರೈತ ಹಾಗು ದೀನ ದಲಿತನ ಪಾಡು:


ಸಿವಿಗೆ ಅನ್ನ, ತೊಡಲು ಬಟ್ಟೆ,
ಗುಡಿಸಿ, ಸಾರಿಸಿ, ರಂಗೋಲೆಯಿಡಲು ಸೂರು,
ನಮ್ಮ ಕತ್ತಲಿಗೆ ಬೆಳಕು,
ಇಲ್ಲಾ, ಇಲ್ಲಾ, ಇಲ್ಲ.
ಉಳುವ ಭೂಮಿ ಕಸಿದ,
ಕೈಯಲ್ಲಿನ ಕೂಲಿ ಕದ್ದ,
ಎಲ್ಲ ಕನಸುಗಳ ಕೊಂದ,
ನಮ್ಮವನೆಂದ, ಸೇವಕನೆಂದ,
ಸ್ನೇಹಿತನೆಂದ, ನಾಯಕನಾದ
ಕಸಿದ, ಕದ್ದ, ಕೊಂದ.

ಕೆಲವರು,
ಮುಟ್ಟಸಿಕೊಳ್ಳಲೊಲ್ಲರು,
ಜೊತೆಗೆ ಕೂತು ಉಣ್ಣಲೊಲ್ಲರು,
ಎಂಜಲೆಲೆಗಳ ಮೇಲೆ ಉರುಳಿಸಿ, ಪಾದ ತೊಳೆಸಿ, ಆ ಕಲುಷಿತ ನೀರನ್ನು ಕುಡಿಸಿ,
ನಮ್ಮ ಎಲ್ಲಾ ಪಾಪ ಕರ್ಮಗಳ, ದಟ್ಟ ದಾರಿದ್ರ್ಯಗಳ, ರೋಗ-ರುಜಿನಗಳ ತೊಳೆದು
ಕೃತಾರ್ಥರಾಗಿ ಎಂದು ದೂರದಿಂದಲೇ ಅರಚಿದರು.

ಕೆಲವರ ನಯವಾದ ಸಲಹೆ ಹೇಗಿದೆ ನೋಡಿ;
ಸಾಲ-ಸೋಲ ಮಾಡಿ ಹಬ್ಬ- ಹರಿದಿನ ತಪ್ಪದೇ ಆಚರಿಸಿ.
ಮದುವೆ-ಮುಂಜಿ, ಗೃಹ ಪ್ರವೇಶ, ಪೂಜೆ-ಪುನಸ್ಕಾರ, ಪುಣ್ಯತಿಥಿ, ಎಲ್ಲಾ ಶುಭ ಕಾರ್ಯ
ಅಬ್ಬರ, ಆಡಂಬರದಿಂದ ತಮ್ಮ ಸಮಕ್ಷಮದಲ್ಲೇ,
ನಾವು ಹೇಳಿದಂತೆ ನಡೆಯಬೇಕು ಎಂದು ಪಟ್ಟು ಹಿಡಿವರು.

ಜೊತೆಗೆ,
ರಾಹು, ಗುಳಿಕಕಾಲ ನೋಡಿಕೋ ಹುಷಾರು,
ಜೋತಿಷ್ಯ,  ವಾಸ್ತುಗಳು ಶ್ರೇಷ್ಠ ನಂಬು,
ಹೋಮ, ಹವನ ಪವಿತ್ರ-ಪಾವನ,
ವಾರದ ಎಲ್ಲಾ ದಿನ ಅಲ್ಲಿ – ಇಲ್ಲಿ, ಎಲ್ಲೆಲ್ಲೋ ಹೋಗು
ವಿಶೇಷ ಪೂಜೆ ಅರ್ಚನೆ ಟಿಕೇಟು ಖರೀದಿಸಿ,
ಅರ್ಚಕರಿಗೆ ಕಾಣಿಕೆ ನೀಡಿ ಅಡ್ಡಬಿದ್ದಾಗಲೇ
ನಮಗೆ ಮನೆ, ಮದುವೆ, ಮಕ್ಕಳ ಭಾಗ್ಯ ಎಂದು ಬೊಗಳೆ ಬಿಟ್ಟು,
ಇರುವುದೆಲ್ಲವ ದೋಚಿ, ಸಿಕ್ಕಿದ್ದನ್ನೆಲ್ಲಾ  ಉಂಡು,
ತಮ್ಮ ಮೂತಿ ಒರೆಸಿಕೊಂಡು,
ಅಂಡು ತೋರಿಸಿ ಹೊರಟೇ ಹೋದರು.

ಜಾತಕ,  ಸೂತಕ ಮಹಾ ಪಾತಕ,
ಮಂಗಳ, ಶನಿ ಗ್ರಹಗಳ ಪ್ರಭಾವಕ್ಕೆ ಬಲಿಯಾಗಿರುವೆ,
ನಾಮ ಬಲ ಎಂದೋ ಎಕ್ಕುಟ್ಟೋಗಿದೆ ಎಂದು,
ಇನ್ನಿಲ್ಲದಂತೆ ಭಯಪಡಿಸಿ, ಕಾಡಿಸಿ, ಪೀಡಿಸಿ, ಓಡಿಸಿ,
ಮನಸ್ಸು ಕಲಕಿ, ಕದಡಿ ಅವರ ಬದುಕಲ್ಲಿ ಚದುರಂಗವಾಡಿ,
ಅಂದು ಬೀದಿಗೆ ಬಿದ್ದವರು ಕಳೆದುಕೊಂಡಿದ್ದು ಇನ್ನೂ ಹುಡುಕುತ್ತಿದ್ದಾರೆ.

ಇವರು ಧೀಮಂತರಂತೆ, ಸಕಲ ಸಾಧಕರಂತೆ,
ಸರ್ವಗುಣ ಸಂಪನ್ನರಂತೆ, ಸಜ್ಜನ ಸರ್ವಜ್ಞರಂತೆ,
ಎಲ್ಲಾ ಟೀವಿ-ಪತ್ರಿಕೆಗಳಲ್ಲಿ, ಸಿಕ್ಕ ಸಿಕ್ಕ ಸಭೆ-ಸಮಾರಂಭಗಳಲ್ಲಿ
ಧರ್ಮ ಶ್ರೇಷ್ಠತೆಯ ಬಗ್ಗೆ, ಒಗ್ಗಟ್ಟಿನ ಶಕ್ತಿ-ಯುಕ್ತಿಗಳ ಬಗ್ಗೆ,
ಸರಳ ಜೀವನ ಮಾರ್ಗದ ಬಗ್ಗೆ,  ಸಮ-ಸಮಾಜದ ನಿರ್ಮಾಣದ ಬಗ್ಗೆ,
ನೀತಿಪಾಠಗಳ ಬಗ್ಗೆ ನಿರರ್ಗಳವಾಗಿ ಪುಂಗಿ,
ಸವಿ ಮಾತಿನ ಲೇಪನವೆರಚಿ,
ಸಾರ್ವಜನಿಕರ ನಂಬಿಸಿ ನಾಮಗಳಿಟ್ಟು
ತಮ್ಮ ಹೊಟ್ಟೆ ಇನ್ನೂ ದುಂಡಗಾಗಿಸಿಕೊಂಡವರು.

ಇವರ ಬಂಡವಾಳ ಮತ್ತು ಜೀವಾಳ:
ಸದಾ ನಗುಮುಖ, ನಡೆ-ನುಡಿಯಲ್ಲಿ ಅತಿ ವಿನಯ-ವಿನಮ್ರತೆ,
ಹಿತನುಡಿಗಳ ಸನಿಹ, ಸಾಂಗತ್ಯ ಸವರಿ,
ಭುಜದಲ್ಲಿ ಕೈಯಿರಿಸಿ,  ಬೆನ್ನಿಗೆ ಚೂರಿ ಹಾಕಿ  
ಸದ್ದಿಲ್ಲದೇ ಪರಾರಿಯಾಗುವ ಮಹಾನ್ ನಿಪುಣರು!

ಕೊನೆಗೆ ನಮ್ಮ ಹೆಸರುಗಳೂ ಬಿಡದೆ,
ನಮ್ಮ ದೇವರ ಆಕಾರಗಳ ವಿಕಾರಗೊಳಿಸಿ
ತಮ್ಮ ವಿಕೃತ ಮನಸ್ಥಿತಿಯ ಮಟ್ಟ ಪ್ರದರ್ಶಿಸಿದವರು.

ಅವಿದ್ಯಾವಂತ, ಅಮಾಯಕ, ಅಸಹಾಯಕರ
ಮನಗಳ ಹೊಲದಲ್ಲಿ ಮೂಢನಂಬಿಕೆಯ ಬಿತ್ತನೆ ಬಿತ್ತು,
ಅಂಧಃಕಾರ, ಭಯಬೀತಿ, ಮೌಢ್ಯತೆಗಳ ಭಾರಿ ಫಸಲಿಂದ
ಭರ್ಜರಿ ಭೋಜನಮಾಡುವ  ಅನಾಗರೀಕರನ್ನು,
ಧರ್ಮ, ಪರಂಪರೆ, ಸಂಸ್ಕೃತಿ, ಆಚರಣೆಗಳ ಹೆಸರಲ್ಲಿ
ನಿತ್ಯ ಕೊಳ್ಳೆ ಹೊಡೆಯುವ ಕಾಯಕದಲ್ಲಿ ಮಗ್ನರಾದ ಭಂಡರನ್ನು,
ಸ್ವಜನ ಪಕ್ಷಪಾತಿಗಳನ್ನು,  ಕ್ರೂರ ಹಿತ ಶತ್ರುಗಳನ್ನು,
ನಿಕೃಷ್ಟ ನಯವಂಚಕರನ್ನು,  ಹಗಲು ದರೋಡೆಕೋರರನ್ನು,
ವಿಕೃತ ಪಿಶಾಚಿಗಳನ್ನು, ನಂಬಿಕೆ ದ್ರೋಹಿಗಳನ್ನು,
ಮುಗ್ಧ, ಮಹಿಳೆ, ಮಕ್ಕಳ ಶೋಷಕರನ್ನು,
ಇಡೀ ಮನುಕುಲ ಪೀಡಕರನ್ನು,
ಶತಮಾನಗಳ ಸತತ ಶ್ರಮವೂ ಸರಿಪಡಿಸಲಾಗದೆ ಸೋತು,
ಸಾಯುವ ಮುನ್ನವಾದರೂ,
ಯೇಸು, ಅಲ್ಲಾಹು, ಬುದ್ಧನಲ್ಲಿಗೆ ಓಡಿ
ಮುಕ್ತಿ ಪಡೆಯೋಣವೆಂದು ಬಯಸಿದರೆ,
ಅಲ್ಲಿಯೂ ನೆಮ್ಮದಿಯಾಗಿ ಬಿಡಲೊಲ್ಲದ ಪುಂಡರು,
ಘರ್ ವಾಪಸಿ ಎಂದು ಮತ್ತೆ ಬೊಬ್ಬಿಡುವರು,
ಭಯಪಡಿಸುವರು, ಸಾವಿರ ಸುಳ್ಳು ಭರವಸೆಗಳ ನೀಡುವರು,
ಅಯಯ್ಯೋ ಶಿವ, ಶಿವಾ ಶರಣು ಶರಣೆಂದರೆ,
ನೀವು ವೀರ ಶೈವರಲ್ಲವೆಂದು ಜರಿವರು.

ಏನು ಮಾಡಲಿ ಶಿವನೆ, ಎತ್ತ ಹೋಗಲಿ ಹರನೆ,
ಬೆತ್ತಲಾಗಿದ್ದೇನೆ, ಇನ್ನಾದರೂ ಬಿಟ್ಟುಬಿಡು ಸುಮ್ಮನೆ,
ನಮ್ಮ ಪಾಡಿಗೆನಮ್ಮ ಹಾಡಿಗೆ,
ನಾವು ಅಲ್ಪರು, ನಾವು ಅಂಧರು,
ನಾವು ಮಹಾ ಮೂರ್ಖರು, ನಾವು ಶತದಡ್ಡರು,
ನಾವು ಕಡುಬಡವರು, ನಾವು ಬಹಳ ತುಚ್ಛರು,
ನಮಗೆ ಬೇಕಿಲ್ಲ ಯಾವ ಧರ್ಮಗುರು,
ನಮಗಿಲ್ಲ ಯಾವ ಊರು, ಯಾವ ಸೂರು.




Aug 4, 2015

ನಿನಗೆ ಯಾರೆ ಮಾದರಿ?


ನೀನೇ ಆರಿಸಿದ
ಕೊತ್ತೊಂಬರಿ ಕಟ್ಟು, ತಾಜಾ ಹಣ್ಣು, ತರಕಾರಿ
ಕೊಳೆತಿದೆ ಎಂದು
ದಿನವಿಡೀ ಅವನಿಗೆ ಶಪಿಸುವೆ.
ಮನೆಗೆಲಸದವಳನ್ನು ಬೆಂಬಿಡದೆ ಇನ್ನಿಲ್ಲದಂತೆ ಕಾಡುವೆ,
ಯಾವುದೋ ಹಳೇ ಸೇಡು ತೀರಿಸಿಕೊಳ್ಳುವವಳಂತೆ. 
ಮಮ್ಮೊಕ್ಕಳಾದರೂ ನಿನ್ನ ಮಕ್ಕಳ ಕಾಳಜಿಯಲ್ಲಿ
ಇಂದಿಗೂ ತುಸು ಕರಗದ ನಿನ್ನ ಧಾವಂತ,
ಹೇಗೆ ಇನ್ನೂ ಜೀವಂತ?

ನಮಗಾಗಿ ಇಡೀ ಜಗವನ್ನೇ ಯುದ್ಧಕ್ಕೆ ಕರೆಯುವ
ನಿನ್ನ ಭಂಡ ಧೈರ್ಯಕ್ಕೊಂದು ಸಲಾಮು.
ನಿರ್ಲಜ್ಜೆಯ ಪರಾಕಾಷ್ಠೆಯ ಪ್ರಚಂಡ ಪ್ರದರ್ಶನ
ನಿನ್ನ ಮಕ್ಕಳ ಬಗ್ಗೆ ಸುಖಾಸುಮ್ಮನೆ ಕೊಚ್ಚಿಕೊಳ್ಳುವಾಗ.
ಮೈಮನಸಿನ ಕಿಂಚಿತ್ ಗಾಯಕ್ಕೂ
ಬೇಕೇ ಬೇಕು ಇಂದಿಗೂ ನಮಗೆ
ನಿನ್ನ ಪ್ರೀತಿಯ ಮುಲಾಮು.

ನಮಗಾಗಿ ಏನೆಲ್ಲಾ ಆದೆ ಕಣೇ
ಸುಳ್ಳಿಯಾದೆ, ಕಳ್ಳಿಯಾದೆ,
ಮಾತಿನ ಮಳ್ಳಿಯಾದೆ,
ಮಾರಿ-ಹೆಮ್ಮಾರಿಯಾದೆ.
ಮಾನ, ಸ್ವಾಭಿಮಾನ
ಎಲ್ಲವೂ ಅಡವಿಟ್ಟೆ.
ನೀ ಕೋಪಗೊಂಡ ಕರಾಳ ಸನ್ನವೇಶಗಳಲ್ಲಿ,
ನಮಗೆ ದನಕ್ಕೆ ಬಡಿದಂಗೆ ಬಡಿದು,
ನೆರೆಹೊರೆಯವರಿಗೆ ವಿಚಿತ್ರ ಭಯ ಕೊಟ್ಟು,
ಊರಿನವರೆಲ್ಲರನ್ನೂ ಬೆಚ್ಚಿಬೀಳಿಸಿದೆ.
ಚಂಡಿ-ಚಾಮುಂಡಿಯೂ ಆ ಘಳಿಗೆಯಲ್ಲಿ
ನಿನ್ನ ಮುಂದೆ ಮಂಡಿಯೂರಲೇಬೇಕಿತ್ತು.

ನಿನ್ನ ಆಸೆ, ಆಶಯಗಳಿಗೆ,
ಎಲ್ಲಾ ಕನಸುಗಳಿಗೆ ಕೊಲ್ಲಿಯಿಟ್ಟು,
ನಮ್ಮ ಕನಸುಗಳಿಗೆ ನಿರಂತರ ನೀರು-ಗೊಬ್ಬರವೆರೆದು,
ಜಾಗರೂಕತೆಯಿಂದ ಸಲುಹಿ, ಬೆಳೆಸಿ
ನಮಗಿಂತ ಹೆಚ್ಚಾಗಿ ನೀನೇ ಖುಷಿಪಟ್ಟೆ.

ಎಂದೂ ಅಳಿಸಲಾಗದ ಘಟನೆಗಳು;
ಅಂದು ಅವರಿತ್ತ ಮುದ್ದೆಸಾರು ನಮಗಿಟ್ಟು
ನಾವು ಅದರೊಂದಿಗೆ ಕಾಳಗವಿಟ್ಟು,
ಕ್ಷಣದಿ ಕರಗಿಸಿದ ಚಣಗಳನ್ನು,
ಆಸ್ಥೆಯಿಂದ ಆಸ್ವಾಧಿಸಿ,
ಚಂಬು ನೀರು ಕುಡಿದು ಮಲಗಿದ
ನಿನ್ನ ಎಷ್ಟೋ ರಾತ್ರಿಗಳಿಗೆ ಲೆಕ್ಕವುಂಟೇನೆ?
ದಟ್ಟ-ದಾರಿದ್ರ್ಯದ ಅಟ್ಟಹಾಸವ
ನಸು ನಗೆಯಿಂದಲೇ ಮಣಿಸಿದ
ನಿನ್ನ ಸಾಹಸಕ್ಕೆ ಶರಣು, ಶರಣು.
ಹಸಿವು,
ಅದೆಂಥಹ ಮಹಾಕ್ರೂರಿ, ನಿರ್ದಯಿ, ಕಡುಪಾಪಿ!
ನಮ್ಮ ಹಸಿವಲ್ಲಿ ನಿನ್ನ ಹಸಿವಿಗೆ 
ಆಗ ಜಾಗವೆಲ್ಲಿ.

ಆದರೂ ನೀನು ಮಾಹನ್ ಸ್ವಾರ್ಥಿ!
ಕುಡುಕ ಅಪ್ಪನ ಸಾವು ಸಹಿಸಿಕೊಂಡು,
ಒಮ್ಮೆಯಾದರೂ ಅದರ ನೋವು,
ಇಲ್ಲಾ ಅವನ ನೆನಪು ಸುಳಿಯದಂತೆ ನೋಡಿಕೊಂಡ
ನಿನಗೆ ಯಾರೆ ಮಾದರಿ?

ಅಮ್ಮ,
ಎಷ್ಟೋ ಸಲ ನಿನ್ನೊಂದಿಗೆ ಬಹಳ ಕಠುವಾಗಿ ವರ್ತಿಸಿರುವೆ,
ಕೈಮುಗಿವೆ ಒಮ್ಮೆ ಎನ್ನ ಕ್ಷಮಿಸಿಬಿಡೆ.

ಇನ್ನಾದರೂ ನೆಮ್ಮದಿಯಾಗಿ, ಆರೋಗ್ಯದಿಂದ,
ನಗುನಗುತ್ತಾ ನಮ್ಮೊಂದಿಗೆ ನೂರ್ಕಾಲ ನೂಕಿಬಿಡು.
ನೀನೆಂದೆಂದಿಗೂ ನಮಗೆ,
ಸ್ಪೂರ್ತಿಯ ಚಿಲುಮೆ,
ಸಹನೆಯ ಚಂದಿರ,
ಸ್ಥೈರ್ಯದ ಸೂರ್ಯ.







Jul 30, 2015

ಮದ್ಯ ಮಧ್ಯ ಪದ್ಯ!

ಸುಂದರ ಸಾಲಿನ ಶೇಖರಣೆ;
ಕದ್ದ ಮಾಲಿಗೆ ಒಗ್ಗರಣೆ.
ಪ್ರಭಾವಕ್ಕೆ ಉಕ್ಕಿದ;
ಪ್ರೇರಣೆಗೆ ಹಿಗ್ಗಿದ,
ಇಲ್ಲಾ ಭಾರಕ್ಕೆ ಬಾಗಿದ
ಬಾಳೆಗೊನೆ.
ಅಲ್ಲ.

ಇಲ್ಲಾ,
ಭಾವತೀರಯಾನ.
ಅರೆ ಬೆಂದ ಅನ್ನ.
ಋತು, ಮದಿರೆ, ಮಾನಿನಿ.
ಕಾವ ಕರಗಿಸುವ ಕಾವಲಿ.
ಪ್ರೀತಿ, ಗೀತಿ ಇತ್ಯಾದಿ.,
ಕಾಡು, ಕಡಲು, ಕಿನಾರೆ.
ಹೌದಾ?

ಅಥವಾ,
ಆತ್ಮವಿಲ್ಲದ, ಇಲ್ಲಾ ಏನೂ ಒಲ್ಲದ,
ಇಲ್ಲಸಲ್ಲದ ನೆವವೊಡ್ಡಿ ಎಂದೋ ಪರಾರಿಯಾದ              
ರಾಮ, ಯೇಸು, ಅಲ್ಲಾ?
ಅಲ್ಲ. ಖಂಡಿತ
ಅಲ್ಲವೇ ಅಲ್ಲ.

ಅದು ಕಾಲ, ದೇಶವ ದಾಟಿ
ಮೆಟ್ಟಿನಿಲ್ಲುವ ಆತ್ಯಾಪ್ತ ಸಖಿ.
ಕದಡಿ, ಒದ್ದಾಡಿ, ಗುದ್ದಾಡಿ,
ಎಡೆಬಿಡದೆ ಕಾಡಿ, ಕಾಡಿಸಿಕೊಳ್ಳುವ,
ಮಧುರ, ಮಾದಕ ಅನುಭಾವ,
ಇಲ್ಲಾ ನೀರವ ಮೌನ!

ಬದುಕು.
ನೀನು, ನಾನು, ಅವನು, ಅವಳು.
ದಿನ, ರಾತ್ರಿ.
ಭೂಮಿ, ಭಾನು.
ಸೂರ್ಯ, ಚಂದ್ರ.
ಉಳಿದಂತೆ ಮತ್ತದೇ
ಕಾಗುಣಿತಾ.
ಗುಣಿತಾ.
ಗುಣಿ.
ತಾ!