Apr 30, 2008

ಭವತೀ ಭಿಕ್ಷಾಂದೇಹಿ

ಭವತೀ ಭಿಕ್ಷಾಂದೇಹಿ ಅಂದ ರಾವಣ
ಸೀತೆಯ ಅಪಹರಿಸಿದ ಲಂಕೆಗೆ
ಅಶೋಕವನದಲಿರಿಸಿದ ಅವಳ
ಬೇಟಿಯಾದ ಹನುಮಂತ
ಕಂಡು ಬಾರಯ್ಯ ಎಂದ
ಮಾತ್ರಕೆ ಸುಟ್ಟು ಬಂದ

ಕಲಿಯುಗವೇನು ಭಿನ್ನವೇ
ಇಲ್ಲಿಹರು ರಾಮ, ಹನುಮ ,
ರಾವಣ, ಸೀತೆಯರು
ಯಂತ್ರ ಮಂತ್ರ ತಂತ್ರ
ಕಲಿತ ಕಿರಾತಕರು
ನಿನ್ನೆ ಇಂದು ನಾಳೆ
ಬಲ್ಲ ಬಲಾಢ್ಯರು

ಕ್ಷಣಕೆ ಇಲ್ಲಿ ಮರುಕ್ಷಣಕೆ ಅಲ್ಲಿ
ಅಲ್ಲಿ ಇಲ್ಲಿ ಎಲ್ಲೆಲ್ಲೂ ಇಹರು
ಇವರ ಮುಂದೆ ಬೇರೆ
ಎಲ್ಲ ಸಪ್ಪೆ, ಇವರಿಂದ
ತಿಳಿಯಬೇಕು ಬೆಟ್ಟದಷ್ಟು
ಇವರು ಯಾರಿಗೇನು
ಕಡಿಮೆ ಬಲ್ಲೆಯೇನು

ರಾಮಾಯಣದೊಳಗೇನಿದೆ
ಕಲಿಯುಗದಲೆಲ್ಲ ಅಡಗಿದೆ
ಶಾಂತಿ, ಸುಖ, ಸಂತಸಕೆ
ಹಣ ಸಾಕಷ್ಟು ಬಳಿಯಿದೆ
ಹಣದ ಮುಂದೆ ಎಲ್ಲ ಗೌಣ
ಧನವೇ ಮೂಲ ಮಂತ್ರ ಜಾಣ
ಮೌಲ್ಯಗಳ ಮೊದಲು ಹಣ
ನೆಮ್ಮದಿಗೆ ಬೇರೇನು ಬೇಕಣ್ಣ

ಏಕೆ ಹೇಗೆ ಎಂಬ ಪ್ರಶ್ನೆ ಬೇಕೆ
ಹಳೆಯ ಪುಟವು ನೆಪ ಮಾತ್ರಕೆ
ಸರಳ ಜೀವನ ಮಂತ್ರವೇಕೆ
ಮೌಲ್ಯದ ನೀತಿಪಾಠಗಳೇಕೆ
ಅದು ಮೀಸಲಿರಲಿ ರಾಮಾಯಣಕೆ
ಕಲಿಯುಗದ ಪಾಪದ ಜನಕೆ

Apr 29, 2008

ಕರುಣಿಸು

ಕರುಣಿಸು ಕಮಲಾಕ್ಷಿ ಕಾಲ ಕಳೆದಾಗಿದೆ
ನೆನಪಿಸು ನೆನ್ನೆಗಳ ಹೆಸರು ಹಸಿರಾಗಿದೆ

ನಿನ್ನೆ ನೆನ್ನೆಗಳ ಬೆಳದಿಂಗಳಿನ ಇರುಳ
ನನ್ನ ನಿನ್ನಯ ನಡುವೆ ನಡೆದ ಬಹಳ

ಮೂಕ ವೀಕ್ಷಕರೆಲ್ಲ, ಅಂಧ ರಕ್ಷಕರೆಲ್ಲ
ಜಾಣರೆಂಬುವರ ಜಗಕೆ ಉತ್ತರವಿಲ್ಲ

ನಿನ್ನೆಗೆ ನೆಲೆಯಿಲ್ಲ, ಇಂದು ನೀನೆ ಎಲ್ಲ
ಇನ್ನು ನಾಳೆ ನಾಳೆಗಳ ಚಿಂತೆ ನನಗಿಲ್ಲ

ಕೂಡಿ ಕಳೆಯುವ ಆಟವಾಡುವ ಜನರು
ಕೂಡಿ ಬಾಳುವ ಪಾಠ ಪಠಿಸುತಿಹರು

ಮುಗುದೆ ಮುನಿಸೇಕೆ ವಿರಸ ನಮಗೇಕೆ
ಬೇಹುಗಾರರ ತಂತ್ರಕೆ ಮಣಿಯಲೇಕೆ

ಇಂದಿರುವ ಕ್ಷಣಗಳು ಮತ್ತೆಂದು ಬಾರದು
ಮುಂಬರುವ ದಿನಗಳ ಲೆಕ್ಕವಿಡಬಾರದು

ಕರುಣಿಸು ಕಲ್ಪತರು ನಿನಗೆ ಕೋಪ ತರವಲ್ಲ
ಜಗದ ಜೊತೆಯಲೇ ಹೋಗುವ ನಿಯಮವಿಲ್ಲ

ಚುನಾವಣೆ ಬಿಸಿ

ಚುನಾವಣೆ ಬಿಸಿಯೇರುತಿದೆ
ಭರವಸೆಗಳ ಮಳೆ ಸುರಿಯುತಿದೆ
ರಾಷ್ಟ್ರೀಯ ಪಕ್ಷಗಳೊಂದಿಗೆ
ಪ್ರಾಂತೀಯ ಪಕ್ಷ ಕಣದಲ್ಲಿದೆ

ಭಿನ್ನ ವಿಭಿನ್ನ ಆಶ್ವಾಸನೆಗಳು
ಬಣ್ಣ ಬಣ್ಣದ ಟೀವಿ, ಸೈಕಲ್ಲುಗಳು
ಎರಡು ರೂಗೆ ಕಿಲೋ ಅಕ್ಕಿ
ಕಡಿಮೆ ಬಡ್ಡಿದರ, ಕೃಷಿ ಸಾಲಮನ್ನಾ

ಉಚಿತ ವಿದ್ಯುತ್ ಸರಬರಾಜು
ಶುದ್ಧ ಕುಡಿಯುವ ನೀರು
ಒಳ ಚಂರಂಡಿ ವ್ಯವಸ್ಥೆ
ನಮಗೆ ಅತ್ಯುತ್ತಮ ರಸ್ತೆ

ಆರೋಪ ಪ್ರತ್ಯಾರೋಪಗಳು
ಅವರ ಪ್ರಣಾಳಿಕೆ ನಮ್ಮದೆ
ನಮ್ಮ ಪ್ರಣಾಳಿಕೆ ಕದ್ದಂತಿದೆ
ಮತದಾತರಿಗೆ ಗೊಂದಲವಾಗಿದೆ

ರಾಜಕಾರಣಿಗಳ ಆಕಾಶವಾಣಿ
ಜ್ಯೋತಿಷಿಗಳ ಭವಿಷ್ಯವಾಣಿ
ಟಿಕೆಟ್ಟಿಗಾಗಿ ಮಾಟಮಂತ್ರ
ಓಲೈಸುವ ತಂತ್ರ ಯಂತ್ರ

ಅಧಿಕಾರದ ಲಾಲಸೆಗೆ
ಹಣದ ವ್ಯಾಮೋಹಕೆ
ಮುದುಕರು ಮತಿಗೆಟ್ಟು
ಕುಣಿವರು ಮೂರೂಬಿಟ್ಟು

ಬಂಡಾಯ ಭುಗಿಲೆದ್ದಿದೆ
ಅಟ್ಟಹಾಸ ಮೆರೆಯುತಿದೆ
ಹಣದ ಅಹಂಕಾರ ಕುಣಿದು
ವಿಕೃತ ಪ್ರದರ್ಶನ ನೀಡಿದೆ

ವಿಚಿತ್ರ ಘೋಷಣೆಗಳು
ವಿಶೇಷ ಸೂಚನೆಗಳು
ಗ್ರಾಮೀಣಪರ ನೀತಿಗಳು
ನಗರಪರ ಯೋಜನೆಗಳು

ಹೇಳುವುದೊಂದು ಮಾಡುವುದೊಂದು
ಹತ್ತುಕೋಟಿ ನಗದು, ಕೋಟಿಗಳ ಮದ್ಯ
ಇಪ್ಪತ್ತು ಲಕ್ಷ ಮೌಲ್ಯದ ಸೀರೆ ಸಿಕ್ಕಿತ್ತು
ಸಿಗದಿದ್ದು ಇನ್ನೂ ಎಷ್ಟೋ ಇದ್ದೀತು

ಬುಡಬುಡುಕೆ ಬೂಟಾಟಿಕೆ
ಜನ ನಂಬುವರೆಂಬ ನಂಬಿಕೆ
ನಾಚಿಕೆ ಪರಿಚಯವಿಲ್ಲದಕೆ
ನೈತಿಕತೆ ನೀತಿಪಾಠ ಬೇಕೆ

ಅಧಮರಲ್ಲಿ ಉತ್ತಮನಿಗೆ
ಮತನೀಡುವ ಅನಿವಾರ್ಯತೆ
ಹಣ ಚೆಲ್ಲುವ ಅಂಧರಿಗೆ
ಪಾಠ ಕಲಿಸವ ಅವಶ್ಯಕತೆ

ಮುದುಕರಲ್ಲಿ ಯುವಕರ
ಯುವಕರಲ್ಲಿ ಅರಿತವರ
ಅವಕಾಶವಿರೆ ಹೊಸಬರ
ಖಚಿತ ಕನ್ನಡಿಗರ ಆರಿಸಿ

Apr 28, 2008

ಹನಿಗಳು*

- 1 -

ಮುತ್ತಿಗಾಗಿ
ಮುತ್ತಿನಸರ
ಮತ್ತಿಗಾಗಿ
ಮದ್ಯಸಾರ.

- 2 -

ಒಲವಿಗಾಗಿ
ಬಾಲೆ
ಬಾಲೆಗಾಗಿ
ಬಲೆ.

- 3 -

ನೀರೆಗಾಗಿ
ಸೀರೆ
ಸೀರೆಗಾಗಿ
ಸೆರೆ.

- 4 -

ನಡೆಯುವಾಗ
ನವಾಬ
ನಡೆಯದಾಗ
ಗರೀಬ.

- 5 -

ನಲಿವಿನಾಗ
ಕಬಾಬು
ನೋವಿನಾಗ
ಶರಾಬು

- 6 -

ಗೆಳತಿಗಾಗಿ
ಗುಲಾಬಿ
ಮಡದಿಗಾಗಿ
ಗೋಬಿ

- 7 -

ಹೆಂಡತಿಯಿಂದಾಗಿ
ಹೆಂಡ
ಹೆಂಡದಿಂದಾಗಿ
ದಂಡ.

- 8 -

ಹುಡುಗಿಗಾಗಿ
ಹೂವಾಡಿಗ
ಮಡದಿಗಾಗಿ
ಹಾವಾಡಿಗ.


- 9 -

ನೀ ನಕ್ಕರೆ
ಬರುವೆ
ನೀ ನಗದಿದ್ದರೆ
ಬರವೆ.

- 10 -

ನೀ ಸಿಕ್ಕರೆ
ಸಕ್ಕರೆ
ನೀ ಸಿಗದಿದ್ದಾಗ
ಸಿಗಾರೇ.

- 11 -

ನೀ ಜೊತೆಗಿದ್ದರೆ
ಮೋಜು
ನೀನಿರದಿದ್ದರೆ
ಜೂಜು

- 12 -

ಸುಮ್ಮನಿದ್ದರೆ
ಸಿಗುವೆ
ಸಿಗದಿದ್ದರೆ
ಇರುವೆ.

ತವರೂರ ನೆನಪ

ತಂಗಾಳಿ ಬೀಸುತ ತಂದಿತು ತವರೂರ ನೆನಪ
ಸದಾ ಬೆಳಗುತಿರಲಿ ಆ ಮನೆಯ ನಂದಾದೀಪ

ಮನೆಯಂಗಳದಿ ಅಮ್ಮ ರಂಗೋಲಿಯ ಬಿಡಿಸಿ
ಒಳ ಹೊರಗೆ ನಿಲ್ಲದಲೇ ಎಲ್ಲರ ನಿದ್ದೆಯಿಂದೆಬ್ಬಿಸಿ

ನನ್ನಪ್ಪನಂದು ಪೇಟೆಗೆ ಹೊರಡುವ ಸಮಯ
ಪಟ್ಟಿ ಮರೆಯದಿರಿ ಎನುವ ಅಮ್ಮನ ವಿನಯ

ಆಕಳು ಬಿಡಿಸಿ ಹಾಲುಣಿಸುವುದು ತಮ್ಮನ ಕೆಲಸ
ಶಾಲೆಗೆ ಹೊರಡುವ ತಯಾರಿಗಿಲ್ಲ ಒಂದು ನಿಮಿಶ

ಕರಿಯ ಕಂಬಳಿಯೆಸೆದು ಹೊರಟ ಹಸುಗಳೊಂದಿಗೆ
ನೀರು ಹರಿಸಲು ತೋಟದ ಕಡೆಗೆ ಸನಿಕೆಯೊಂದಿಗೆ

ಬೆಲ್ಲದುಂಡೆಯ ಬಿಸಿ ಬಿಸಿ ಕಾಫಿ ನನ್ನಜ್ಜಿಯ ಕರೆದಿತ್ತು
ಹಗಲೆಲ್ಲ ಹಬ್ಬರಿಸಲು ಅವಳಿಗಿದರಿಂದ ಶಕ್ತಿ ಸಿಕ್ಕೀತು

Apr 26, 2008

ಛಲಗಾತಿ

ಛಲಗಾತಿ ನನ್ನೊಡತಿ ಮುನಿಸವಳ ಮೂಗುತಿ
ಕನವರಿಕೆ ನೆಪವಷ್ಟೇ ದಿಟ ನುಡಿದ ಮಾರುತಿ

ಮುಂಗೋಪ ಮುಖದವಳ ಸಿಡುಕು ಸಿಂಗಾರ
ಮಣಿಯುವೆನು ಜಾಣ ನನ್ನ ಬದುಕು ಬಂಗಾರ

ದೂರ ದೂರಕೇ ಇರಲಿ ಹಸಿರಾದರೇನಂತೆ
ಹತ್ತಿರವಿರುವ ಜಗವು ಅವಳ ನಿಯಮದಂತೆ

ದುಡುಕಿದರೆ ಮರುಕ್ಷಣವೇ ದಾರಿ ಕಾಣದಯ್ಯ
ಬಯಸಿ ಬೇಡಿದರು ಬಳಿಗೆ ಬೆಳಕರಿಯದಯ್ಯ

ಹುಲಿರಾಯ ನಾ ಹೊರಗೆ ಒಳಗೆ ಇಲಿಯಂತೆ
ಇದ್ದರಾಯಿತು ಗೆಳೆಯ ನನಗಿರದಾಗ ಚಿಂತೆ

ಶನಿವಾರ ಸಂತೆಗೆ ತಡಮಾಡಿದೆ ಬೇಕಂತೆ
ರವಿವಾರ ಖಚಿತ ನನ್ನ ಮುಖ ಬಾಡಿದಂತೆ

ಅಂದು ಮಂಗಳವಾರ ಮಡದಿ ಮನೆಯಲ್ಲಿಲ್ಲ
ಬಿಡದಿಯ ಬಸ್ಸತ್ತಿದವಳು ಮತ್ತೆ ಇಳಿದಿರಲಿಲ್ಲ

ಗೊಂದಲದ ಗೂಡಿನೊಳಗೆ

ದಟ್ಟ ಕಾಡಿನ ಮಧ್ಯೆ ಎತ್ತರದ ಮರದಲ್ಲಿ
ಗೊಂದಲದ ಗೂಡಿನೊಳಗೆ ನಿದ್ರಿಸುವ
ನಟನೆಯಲಿ ಹಗಲುಗನಸು ಕಾಣುತ್ತಿರೆ
ಸುತ್ತಲಿನ ಹಸಿರು ಹೊರ ಜಗಕೆ ಹಣತೆ

ನಿಟ್ಟುಸಿರನಿಟ್ಟು ಮತ್ತದೇ ಸಾಗರದಲಿ
ದಿಕ್ಕೆಟ್ಟ ಹಕ್ಕಿಯಂತೆ ದುಗುಡದಿಂದಿರೆ
ಚಟ ಪಟನೆ ರೆಕ್ಕೆ ಹೊಡೆದು ಮೋಹಕ
ಮೊಗದವಳು ಪಟ ಪಟನೆ ಹಾರುತಲಿ

ರೆಂಬೆ ಕೊಂಬೆಗಳಲಿ ನಿಂತು ನಿಲ್ಲದೆ
ಹಾಗೆ ನಗುವ ಕಾರಂಜಿ ಹೊಮ್ಮಿಸಿತ್ತು
ಕ್ಷಣದಲೇ ಮರೆತೆ ನೋಡುತ ಬೆರಗಾದೆ
ನಿತ್ಯ ಸೌಂದರ್ಯವತಿ ರೋಮಾಂಚನ

ಅಂಬೆಗಾಲಿಡುತ ತೊದಲ ಮಾತಿನಲಿ
ಮೆಲ್ಲ ಮೆಲ್ಲಗೆ ಹಾಗೆ ಹತ್ತಿರ ಹೋಗಲು
ಎದೆಯ ಏರಿಳಿತದ ವೇಗ ಕೇಳಿಸಿತ್ತು
ಮೈ ಬೆವರಿದರು ಸಹಜತೆ ಬಯಸಿತ್ತು

ದಟ್ಟ ಕಾಡಲ್ಲಿ ಗೊಂದಲದ ಗೂಡಿನಲಿ
ಕಳೆದು ಹೋಗುವ ಭಯ ಕಾಡುತ್ತಿತ್ತು
ಎದುರಾದ ಅಡತಡೆಗಳ ದಾಟದಲೆ
ನೂರೆಂಟು ನೆವಗಳನು ಹುಡುಕುತ್ತಿತ್ತು

ಎದುರಿದ್ದ ಚಂಚಲೆ ಮಿಂಚಂತೆ ಬಂದಳೆ
ಕಳೆದುಕೊಂಡರೆ ಮತ್ತೆ ನೆನಪಾಗುವಳೆ
ದಿಕ್ಕೆಟ್ಟ ಬದುಕಿಗೆ ಬೆಳಕಾಗಿ ಬಂದವಳು
ಆಗಲೇ ಸ್ಪಷ್ಟ ಗುರಿಯೊಂದ ಮುಂದಿಟ್ಟಳೆ

Apr 24, 2008

ನನ್ನದೇ...

ನನ್ನದೇ ...
ಈ ಭೂಮಿ, ಆ ಆಕಾಶ
ಆ ಸೂರ್ಯ, ಆ ಚಂದ್ರ
ಈ ಗಾಳಿ, ಈ ಬೆಳಕು
ಆ ಕತ್ತಲು, ಆ ಬೆಳದಿಂಗಳು

ನನ್ನದೇ... ಎಲ್ಲ ನನ್ನದೆ

ನನ್ನದೇ ...
ಈ ಕಣ್ಣು, ಈ ಬಣ್ಣ
ಈ ಸ್ಪರ್ಷ, ಈ ಹರ್ಷ
ಈ ನೋಟ, ಈ ಆಟ
ಈ ಉಸಿರು, ಈ ಹಸಿರು

ನನ್ನದೇ... ಎಲ್ಲ ನನ್ನದೆ

ನನ್ನದೇ ...
ಈ ಮನ, ಈ ಜನ
ಈ ರಸ್ತೆ, ಈ ಓಣಿ
ಈ ಊರು, ಈ ಭಾಷೆ
ಈ ನಾಡು, ಈ ದೇಶ
ನನ್ನದೇ... ಎಲ್ಲ ನನ್ನದೆ

ನನ್ನದೇ ...
ಆ ಹಣ್ಣು, ಆ ಹೂವು
ಆ ಚಿಗುರು, ಆ ನೆರಳು
ಆ ಹಕ್ಕಿ, ಆ ಚುಕ್ಕಿ
ಆ ಮಿಂಚು, ಮಳೆಬಿಲ್ಲು
ನನ್ನದೇ... ಎಲ್ಲ ನನ್ನದೆ

ನನ್ನದೇ ...
ಆ ಗುಡ್ಡ, ಆ ಕಾಡು
ಈ ನವಿಲು, ಆ ಮುಗಿಲು
ಈ ನದಿ, ಈ ಸಾಗರ
ಆ ಜಲಚರ, ಆ ವಿಸ್ಮಯ
ನನ್ನದೇ... ಎಲ್ಲ ನನ್ನದೆ

ನನ್ನದೇ... ಎಲ್ಲ ನನ್ನದೆ

ಇರುವುದನೆಲ್ಲಾ ಇದ್ದಂತಿರಿಸಿ
ಇರದುದಕೆಲ್ಲಾ ಆಸೆಗಳಿರಿಸಿ
ಇರುವುದು ನನ್ನದೇ,
ಇರದುದು ನನ್ನದೇ,

ನನ್ನದೇ... ಎಲ್ಲ ನನ್ನದೆ

ಓಡುತಿಹರು

ಓಡುತಿಹರೋ ಅಣ್ಣ ಓಡುತಿಹರೋ
ಒಬ್ಬರ ಹಿಂದೊಬ್ಬರು ಓಡುತಿಹರು

ಮುಗಿಬಿದ್ದು
ಗುಳೆ ಎದ್ದು
ಅತ್ತಿತ್ತ ನೋಡದೆ
ತಿರುಗಿ ಮಾತಾಡದೆ
ಓಡುತಿಹರೋ ಅಣ್ಣ ಓಡುತಿಹರೋ
ಒಬ್ಬರ ಹಿಂದೊಬ್ಬರು ಓಡುತಿಹರು

ನೆಟ್ಟು ನೇರಕೆ ನೋಟ
ಬಿಟ್ಟು ಚಂದದ ತೋಟ
ಕೆಟ್ಟ ಮಂದಿಯ ಕಾಟ
ತಿಳಿಯದಾಗಿದೆ ಆಟ
ಆದರೂ ...
ಓಡುತಿಹರೋ ಅಣ್ಣ ಓಡುತಿಹರೋ
ಒಬ್ಬರ ಹಿಂದೊಬ್ಬರು ಓಡುತಿಹರು

ಅಂಕು ಡೊಂಕಿನ ಮೈಮಾಟ
ತಳಕು ಬಳುಕಿನ ಜೂಜಾಟ
ಬಣ್ಣ ಬಣ್ಣದ ಲೈಟು
ಅರ್ಥವಾಗದ ಬೀಟು
ಆಗಿ ಇದರಲೇ ಟೈಟು
ಓಡುತಿಹರೋ ಅಣ್ಣ ಓಡುತಿಹರೋ
ಒಬ್ಬರ ಹಿಂದೊಬ್ಬರು ಓಡುತಿಹರು

ಬಹಳ ವೇಗದ ಓಟ
ಎಡವಿ ಬಿದ್ದರೆ ಟಾಟಾ
ಸುಮ್ಮನಿದ್ದರೆ ಔಟು
ಬಾರದಿದ್ದರೆ ಏಟು
ದಿನವು ...
ಓಡುತಿಹರೋ ಅಣ್ಣ ಓಡುತಿಹರೋ
ಒಬ್ಬರ ಹಿಂದೊಬ್ಬರು ಓಡುತಿಹರು

ತಂದೆ ತಾಯಿಯ ಚಟ
ಮಡದಿ ಮಕ್ಕಳ ಕೂಟ
ಅಕ್ಕ ಪಕ್ಕದ ಸೈಟು
ನಿದ್ದೆ ಬಾರದ ನೈಟು
ನಿಲ್ಲದೆ ...
ಓಡುತಿಹರೋ ಅಣ್ಣ ಓಡುತಿಹರೋ
ಒಬ್ಬರ ಹಿಂದೊಬ್ಬರು ಓಡುತಿಹರು

Apr 23, 2008

ಬದುಕು ಬೆತ್ತಲು

ಅಯ್ಯ ಕೇಳಾ ಬದುಕು ಬೆತ್ತಲು
ಸುತ್ತ ಮುತ್ತಿದೆ ಕುಹು ಕಗ್ಗತ್ತಲು
ಬೇಡ ಎನಗೆ ಮಹಡಿ ಮಹಲು
ಸಾಕು ಮೂರು ತುತ್ತು ತಿನ್ನಲು

ಕಾಸು, ಕನಸುಗಳಿರಲು ಲೇಸು
ಕಷ್ಟ ನಷ್ಟಗಳಿರಲು ಸೊಗಸು
ಇರುವುದೆಲ್ಲಾ ಇರಲಿ ನಿನಗೆ
ಇರದುದೆಲ್ಲಾ ಬರಲಿ ನನಗೆ

ಹಗಲುಗನಸು, ಹಗಲುವೇಶ
ಹೊತ್ತುಕೊಂಡು ನೂರು ಕಲಶ
ಪಾಪ ಕಾರ್ಯಗಳಲ್ಲಿ ಹರುಶ
ತೊದಲು ನುಡಿಗಳಿಗೆಲ್ಲಿ ಕೆಲಸ

ಸಿರಿಯ ಪೊಗರು ಸಹಜ ಜೋರು
ವ್ಯಗ್ರ ವರ್ತನೆ ದಿನವು ಅರ್ಪಣೆ
ಕಹಿಗೆ ಸೀಮಿತ ಸಿಹಿಯ ರಹಿತ
ಇರುವೆನಯ್ಯ ಮೌನ ಸಹಿಸುತ

ಧರೆಯು ನಿನ್ನದೆ, ಧನವು ನಿನ್ನದೆ
ದೊರೆಯು ನೀನೆ, ಧಣಿಯು ನೀನೆ
ಧಿಮಾಕು ನಿನ್ನದೆ, ಆರ್ಭಟ ನಿನ್ನದೆ
ದಣಿದಿರುವೆನಾದರು ಸುಮ್ಮನಿರುವೆ

ನನ್ನ ಬದುಕು ನನಗೆ ಬಿಟ್ಟುಬಿಡಿ
ನನ್ನ ಹಸಿವಿಗೆ ಹುಸಿ ಬೆಳಕ ನೀಡಿ
ನನ್ನ ನೆಮ್ಮದಿಗೆ ಭಂಗ ತರದಿರಿ
ನನ್ನ ನಗುವಲೇ ಎಲ್ಲ ಮರೆವೆನು

Apr 22, 2008

ಮುದ್ದು ಮಗುವೆ

ಮುದ್ದು ಮಗುವೆ ನನ್ನ ಜಗವೆ
ಸದ್ದು ಮಾಡಿ ಬಿದ್ದು ನಗುವೆ
ನಗುವ ನಲಿವ ತರವೆ ದಿನವು
ನೀನಿರುವ ಮನೆಯೆ ಸ್ವರ್ಗವು

ಎದ್ದು ಬಿದ್ದು, ಬಿದ್ದು ಎದ್ದು
ಮರಳು, ಮಣ್ಣು, ಜಲ್ಲಿಕಲ್ಲು
ಸಿಗುವ ನೀರಿನಲ್ಲಿ ನೆನೆದು
ಮೈ ಮುಖಕೆ ಬಣ್ಣದ ಓಕುಳಿ

ನಿನಗಿಲ್ಲ ಯಾವ ಬದ್ಧತೆ
ಇರುವುದೊಂದೇ ಮುಗ್ಧತೆ
ಮುಂಜಾಗ್ರತೆ ನಿನ್ನ ಕೊರತೆ
ಇದೇ ನನಗೆ ಬಿಡದ ಚಿಂತೆ

ನೇರ ಮುಖಾಮುಖಿಯೊಂದಿಗೆ
ಮುಖವಾಡ ಕಳಚಿಬಿತ್ತು ಮಂದಿಗೆ
ನೀನು ಸದಾ ನಗುವ ಕಾರಂಜಿ
ಈ ಬಾಳ ಅಪೂರ್ವ ಅಪರಂಜಿ

ಮುಗ್ಗರಿಸದಿರು ಮುದ್ದು ಮಗುವೆ
ನಿನ್ನ ನೋವು ಸಹಿಸಲು ಅಸಾಧ್ಯ
ನಿನಗೆ ತಿಳಿಹೇಳಲು ಕಷ್ಟಸಾಧ್ಯ
ಈ ಅಸಹಾಯಕತೆ ನನ್ನ ವ್ಯಥೆ

Apr 21, 2008

ಸೀಮಿತ

ಇತಿಮಿತಿಗಳ ಸೀಮಿತದಲೇ ನಡೆ
ಅಲ್ಲಿ ಕಾಣುವೆ ಪರದಾಡುವ ಪಡೆ
ಗೆರೆಯಾಚೆ ಈಚೆಗೆ ಜಗ ನೋಡೋ
ಕುತೂಹಲ ಸಹಜ ಎಲ್ಲರಿಗೆ

ಸುತ್ತಲೂ ಇಹವು ಎಷ್ಟೊಂದು ರೇಖೆ
ದಿಟ್ಟಸಿ ನೋಡಲು ಹೊಮ್ಮಿತ್ತು ಸೆಕೆ
ಮತಿಗೆಟ್ಟು ಎಡವಿ ಬಿದ್ದಿತ್ತು ಮನ
ನಿಲ್ಲದಂತಿತ್ತು ಇತಿಮಿತಿಗಳ ಜನನ

ಆತ್ಮಸ್ಥೈರ್ಯ, ದಿಟ್ಟ ಪರಿಶ್ರಮ
ಮರಳಿಯತ್ನ ಮಾಡುವ ಛಲ
ಪುಸ್ತಕದ ಬದನೇಕಾಯಿ
ಒಮ್ಮೆ ನೋಡು ಹೊರ ಜಗವ

ಮತಿಹೀನ ಬಲಹೀನ ಆದರೂ
ಬಹಳವೇ ಬೇಕಿತ್ತು ಅದಕಿಷ್ಟು ಜೇನು
ಇಷ್ಟಿಷ್ಟೇ ಎಲ್ಲದಕೂ ಇಡುತಲೇ ಕೊಕ್ಕು
ಮುಂದೆ ಸಾಗಲು ಹೇಗೆ ಇಲ್ಲವೇ ಕಿಕ್ಕು

ಮನೆಯಂಗಳದಿ ಹುಡುಕು ಸುಖ ಶಾಂತಿ
ಹೊರಗೇನಿಹುದು ಎಂಬ ತಾಕೀತು
ಆದರೂ ಹುಚ್ಚು ಮನ ಸುಮ್ಮನಿರಲೊಪ್ಪದು
ಧಿಮಾಕು ದೊಡ್ಡವರ ಭಯ ತಪ್ಪದು

ಹತ್ತರ ನಂತರ ಹನ್ನೊಂದು ಖಚಿತ
ಅಲ್ಲಿ ಏನೂ ಇಲ್ಲವೆಂಬುದೂ ನಿಶ್ಚಿತ
ಅನುಭವದ ಮಾತು ತಮ್ಮ ನಂಬು
ಇಲ್ಲವಾದರೇ ಖಂಡಿತ ನಿನಗೆ ಚಂಬು

ಗಣಪ ಸುತ್ತಿದ್ದು ಮಾತಾಪಿತರ ಸುತ್ತ
ಸುತ್ತೋಲೆ ಹೊರಡಿಸಿದ ಜಗದ ಸುತ್ತ
ಸುಬ್ರಮಣ್ಯನೇನು ಅಷ್ಟು ಮೂರ್ಖನೇ
ಅವನ ಅನುಭವಕ್ಕಿಲ್ಲವೇ ಸ್ವಲ್ಪ ಬೆಲೆ

ಇತಿಮಿತಿಗಳು ಸಹಜ ಒಪ್ಪುವೆನು ನಿಜ
ನೆಪವಲ್ಲ ಇಹವೊಂದು ದೊಡ್ಡ ಖನಿಜ
ಗೆರೆಯಾಚೆಗೊಮ್ಮೆ ಬಂದು ನೋಡಾ
ನಂತರ ಮಾತಾಡೋ ಮಹಾಶೂರ

ಮೌನವಾಗಿ ಜನನ

ಮೌನವಾಗಿ ಜನನ ಮರುಘಳಿಗೆ ಶುರು ಕದನ
ಮೂಲ ನೆಪವಷ್ಟೇ ಹಿಂದೆ ತಿರುಗದವಳ
ಇನ್ನು ಇರದ ಹಾದಿಯ ಬಗ್ಗೆ ಚಿಂತಿಸುವಳೇ
ಇದ್ದ ಇರದುದರ ಮೇಲೆದ್ದು ನಡೆಯುವವಳ
ಅಡತಡೆಗಳಿಗೆ ಎದೆಗೊಟ್ಟು ಗುಡುಗುವವಳ
ಹಿಂಬಾಲಕರಿಗೆ ಹಿತವ ಬಯಸುತಲೇ
ನಿಲ್ಲದಲೇ ಎಲ್ಲೂ ನಲಿದಾಡುವವಳು

ಜಡಿಮಳೆ ಸದ್ದಿಗೆ ಜಗ್ಗುವವಳಿವಳಲ್ಲ
ಕವಿದ ಕಾರ್ಮೋಡಗಳ ಗುಡುಗು
ಮಿಂಚುಗಳಿವಳಿಗೆ ಹೊಸತಲ್ಲ
ಹಗಲಿರಲಿ ಇರುಳಿರಲಿ ಅದರ ಪರಿವಿಲ್ಲ
ನಿತ್ಯ ನುಸುಳುವ ಛಲವ ಬಿಡಲೊಲ್ಲದೆ
ಬಿಸಿಲಿರಲಿ ನೆರಳಿರಲಿ ನಿರ್ಲಿಪ್ತವೇ ಮುಖದಲ್ಲಿ
ಸಿಕ್ಕ ಸನ್ನಿವೇಶಗಳಿಂದ ಸ್ಪೂರ್ತಿ ಪಡೆಯುತಲೇ
ನೇರ ಮುಖಾಮುಖಿ ಇವಳ ಜಗದ ನಿಯಮ

ಸಿಡುಕು, ಸಿಂಗಾರಗಳ ಕೊರತೆ ಇರದವಳು
ಸರಳ ಸಜ್ಜನಿಕೆಯಿಂದ ನವರಸಗಳ
ರುಚಿಯ ನೀಡುವವಳು
ಬಿಂಕ ಬಿನ್ನಾಣಗಳ ಜೊತೆ ಜೋರು
ಹುಳಿ ಒಗರಿನ ಪೊಗರು ನೆನಪಿರಲಿ
ಸುಳಿಗೆ ಸಿಕ್ಕಿದವರ ಸೆರಗಿನಿಂದ
ಸುತ್ತಿ ಸೆಳೆಯುವಳು ಜೋಕೆ
ಜಾರು ಮನವನು ಬಿಗಿದಿಟ್ಟು
ಎಚ್ಚರದಿ ನಡೆ ನೀನದರ ಬಳಿಗೆ

Apr 4, 2008

ಎರಡೇ ಎರಡು ತುತ್ತು

ಕಾವೇರಿ ಮಳೆಯ ಕೃಪೆಯಿಂದ
ಈಗ ತಣ್ಣಗಿದ್ದಂತಿದೆ
ಜನತೆಗೆ, ಉಲ್ಲಾಸ, ಉತ್ಸಾಹ
ಹಾಗು ಕುತೂಹಲ ಭರಿತ
ಮನರಂಜನೆಯೊಂದಿಗೆ
ಟ್ವೆಂಟಿ ಟ್ವೆಂಟಿ ಸಿಎಂ ಕಪ್
ಅಮೋಘ ಪ್ರದರ್ಶನ ಕಂಡಿದೆ

ಅತ್ತ ಮೋದಿಯ ಮೋಡಿ
ಇತ್ತ ಮಯಾವತಿ ಮಾಯೆ
ರೈಲು ಲಾಲು ಬಿಟ್ಟ ರೀಲು
ಚಿದಂಬ “ರಂ” ಚಮತ್ಕಾರ
ರಾಜ್ ಠಾಕ್ರೆ ಬಿಹಾರಿ ಬಹಿಷ್ಕಾರ
ಗುಜರಾತ್ ಮಾದರಿ ಅಭಿವೃದ್ಧಿ
ಠಾಕ್ರೆ ಮಾದರಿ ಹೊರಾಟಕ್ಕೆ
ಸ್ಥಳೀಯ ತಳಿಗಳ ತಡಕಾಟ
ಅಲ್ಪವಿರಾಮ ಕಂಡಿದೆ

ಕಮರ್ಷಿಯಲ್ ಬ್ರೇಕ್ ನಂತರ
ಹೊಗೇನಕಲ್ ಜಲಪಾತಕ್ಕೆ
ಈಗ ಜಾತಕ ಕೂಡಿ ಬಂದಿದೆ
ಕೋರ್ಟು, ಕಛೇರಿ ಇದ್ದೇ ಇದೆ
ಎದ್ದು ಬಿದ್ದು, ಬಿದ್ದು ಎದ್ದು
ಸಿಕ್ಕ ಸುವರ್ಣಾವಕಾಶ
ಸುಮ್ಮನಿರಲಾದೀತೆ

ಹೋಟಲ್ ಬಂದ್, ಸಿನಿಮಾ ಬಂದ್
ತಮಿಲು ಚಾನೆಲ್ಲುಗಳು ಗಪ್ ಚುಪ್
ಬಸ್ಸು ಲಾರಿಗಳಿಗೆ ಸಾಕಷ್ಟು ಕಿಕ್
ಅತ್ತ ಮಚ್ಚು, ಇತ್ತ ಲಾಂಗ್
ಇನ್ನೇಕೆ ತಡ ಕೊಚ್ಚು ಮಗ
ಅಸಹಾಯಕ ಬಡವರ
ನೂರು ರೂಪಾಯಿಗೆ
ಸಿಕ್ಕೇ ಸಿಗ್ತಾರ

ಇದ್ದವರು ಜುಮ್... ಅಂಥ ಇರ್ತಾರ
ಬರ್ತಾರ, ಹೇಳ್ತಾರ, ಎದ್ದು ಹೋಗ್ತಾರ
ಇರದವರು ಅನಾಯಸವಾಗಿ,
ಇವರ ಬಲೆಗೆ ಸಿಗ್ತಾರ
ಗುಂಡೀಗೆ ಬೀಳ್ತಾರ
ಬದುಕಿದ್ರೆ ನಗ್ತಾರ
ಇಲ್ದಿದ್ರೆ ಅಟೇ
ಮರಿತ್ಬಿಡ್ತಾರ

ಅಯ್ಯೋ ಶಿವನೇ ಫ್ರೀ ಪಬ್ಲಿಸಿಟೀಗೆ ಇಟೆಲ್ಲಾ ಮಾಡ್ತಾರ
ಇದ್ದ ಬದ್ದ ಚಾನಲ್ಗಳೆಲ್ಲಾ ಇದೇ ತೋರಿಸ್ತಾರ
ಮುಂಜಾನೆ ಪೇಪರ್ನೋರು ಇದೇ ಬರೀತಾರ
ಸಾಲದ್ದಕ್ಕೆ ಬುದ್ಧಿಜೀವಿಗಳು ಸುಮ್ಮನಿರುವರೇ
ಇದನ್ನೇ ವಿಮರ್ಶೆ, ವಿಶ್ಲೇಷಣೆ ಮಾಡಿ
ಉಪ್ಪು, ಖಾರ ಹಾಕಿ ಅವರ
ಹೊಟ್ಟೆ ತುಂಬಿಸ್ಕೊತಾರ

ಮಧ್ಯಮ, ಮೇಲ್ಮಧ್ಯಮ ವರ್ಗದವರು ಇದನ್ನೇ
ಮನರಂಜನೆಗಾಗಿ ನೋಡಿ, ನೋಡಿ
ಅವರ ಕಷ್ಟಗಳ ಸ್ವಲ್ಪ ಮಟ್ಟಿಗೆ
ಸಮಾಧಾನ ಮಾಡ್ಕೊಂಡು
ಅದೇ ಮಾತಾಡ್ತಾ ಮತಾಡ್ತಾ
ದಿನ ದೂಡ್ತಾರ

ಹೆಸರು, ಟಿಕಟ್ಟು, ಮತಗಳು, ಅಧಿಕಾರ ಅವರಿಗೆ,
ಮಾಧ್ಯಮದವರಿಗೆ ಭರ್ಜರಿ ವ್ಯಾಪಾರ
ಜನ ಸಾಮಾನ್ಯರಿಗೆ ಮನರಂಜನೆ
ಮಿಕ್ಕವರಿಗೆ ಅದೃಷ್ಟ ಚೆನ್ನಾಗಿದ್ರೆ
ಎರಡೇ ಎರಡು ತುತ್ತು
ಅಟೇಯ

ಗೆಳೆಯ

ಹೊರಡ ಬೇಡವೋ ಗೆಳೆಯ
ಹೊರೆಟೆಯಾದರೂ ಎಲ್ಲಿಗೆ
ಕಳೆದ ನೆನ್ನೆಯ ನೆನಪುಗಳು
ಬೆನ್ನತ್ತಿ ಬರುವವು ನಿನ್ನಲ್ಲಿಗೆ

ಸ್ನೇಹದಿಂದ ಕೊಡ ತುಂಬಿತ್ತು
ಇಟ್ಟವರಾರದಕೆ ಸಣ್ಣ ತೂತು
ಸೋರುತಿದೆ, ಸಹಜ ಕೊಡಕೆ
ಖಾಲಿಯಾದೀತೆಂಬ ಭಯಕೆ

ಮನಸಿಗೇನೋ ಕೊರತೆ ಇದೆ
ಪ್ರಶ್ನೆಗಳೆಷ್ಟೋ ಕೇಳುವುದಿದೆ
ತಕ್ಷಣಕೇ ಉತ್ತರ ಸಿಗದಂತಿದೆ
ಮೌನವಾಗೇ ಪರೀಕ್ಷೆ ಬರೆದಿದೆ

ದುಗುಡವೇಕೊ ಒಳ ಹೊಕ್ಕಿದೆ
ತಿಳಿಯದುದನೇ ಹುಡುಕುತಿದೆ
ಸಹನೆ ಎಲ್ಲೆ ಮೀರಿ ಸಹಕರಿಸದೆ
ಕಾದ ಕಾವಲಿಯಾಗಿ ಕಾಯುತಿದೆ

ಸೋರುತಿಹ ಕೊಡ ತುಂಬಿಸಲೇ
ಸಣ್ಣ ತೂತನು ಮುಚ್ಚಲೆತ್ನಿಸಲೇ
ಸನ್ನಿವೇಶ ನೋಡಿ ಸುಮ್ಮನಿರಲೇ
ಕಾಲಚಕ್ರದಲಿ ಕಳೆದು ಹೋಗಲೇ

ನಿನ್ನ ಅಗಲಿಕೆಗೆ ದುಃಖ ನನಗೇಕೆ
ಅತ್ತಿತ್ತ ಉತ್ತರಕೆ ನಾ ಹುಡುಕಲೇಕೆ
ಭಾವಗಳನೆಲ್ಲ ಬಿಗಿದಿಡಲಿ ಹೇಗೆ
ಎನ್ನ ಭವದ ಕೇಡಿಗೆ ದೂರಲೇಕೆ

ನಿನ್ನ ದಾರಿ ಯಾವುದಾದರೇನು
ನೀನಿದ್ದ ಮನೆಯ ಬಿಟ್ಟರೇನು
ಹೋಗು ಗೆಳೆಯ ನೆಲೆಯ ತಿಳಿಸಿ
ಬರುವೆ ನಾನು ಜೊತೆಯ ಬಯಸಿ

Apr 3, 2008

ಹಿಲರಿ ಒಬಾಮ

ಅಮೇರಿಕದಲ್ಲಿ ಹಿಲರಿ, ಬರಾಕ್ ಒಬಾಮ
ಕರಿಯರ ಬಿಳಿಯರ ನಡುವೆ ಸಂಗ್ರಾಮ
ಇಲ್ಲಿ ಯಡ್ಯೂರಿ, ಕೃಷ್ಣ, ಕುಮಾರ ರಾಮ
ಕುಲಗಳ ಕಣದಲಿ ಗೆದ್ದವನಿಗೇ ಸಂಭ್ರಮ

ಜಾತಿ ಲೆಕ್ಕಾಚಾರ ಮಾಡುವರು ಅಪಾರ
ಭ್ರಷ್ಟಾಚಾರದ ಆರೋಪಗಳು ಅವರಿವರ
ರೈತರ ಸಾಲಮನ್ನಾ, ಕಡಿಮೆ ಬಡ್ಡಿದರ
ಅಭಿವೃದ್ಧಿ ಮಂತ್ರ, ಚಂದದ ಮುಂಗಡಪತ್ರ

ಬದಲಾವಣೆಗಾಗಿ ಬರಾಕ್ ಒಬಾಮ
ಮೊದಲ ಮಹಿಳಾ ಅಮೇರಿಕ ಅಧ್ಯಕ್ಷೆ
ಸ್ಥಾನಕೆ ಹಿಲರಿ ಕ್ಲಿಂಟನ್ ದಿಟ್ಟ ಪರಿಶ್ರಮ
ಕಾದುನೋಡುವುದೇ ನಮ್ಮ ಸದ್ಯದ ಕ್ರಮ

ಅಲ್ಲಿ ಒಂದೇ ಪಕ್ಷದ ಅಭ್ಯರ್ಥಿಗಳ ಸ್ಪರ್ಧೆ
ಅಧ್ಯಕ್ಷಗಿರಿಗೆ ಅವರಿಬ್ಬರ ಮಧ್ಯೆ ಹೋರಾಟ
ಇಲ್ಲಿ ಪಕ್ಷ ಪಕ್ಷಗಳ ನಡುವೆ ಭಾರಿ ಗುದ್ದಾಟ
ಸಿಎಂ ಕುರ್ಚಿಗೆ ಈ ಗಣ್ಯರೆಲ್ಲರ ಕಿರುಚಾಟ

ಇರಲಿ ಅದು ಅಮೇರಿಕ, ಇದು ಕರ್ನಾಟಕ
ಅವರಿಗೆ ವರ್ಣಭೇದ, ನಮಗೆ ಜಾತಿಭೇದ,
ಸ್ಥಳೀಯ, ಜಾಗತಿಕ ಸಮಸ್ಯೆಗೆ ಜೀವಂತಿಕೆ
ಬೇಕಲ್ಲವೇ ವಿಷಯ ಚುನಾವಣೆ ಸಮಯಕೆ

Apr 1, 2008

ಕೆಂಡಸಂಪಿಗೆ

ವ್ಹಾ.ವ್ಹಾ.. ಕೆಂಡಸಂಪಿಗೆ!
ಮೊದಲ ನೋಟಕೇ ಬಿದ್ದೆ
ನಾ ನಿನ್ನ ಬುಟ್ಟಿಗೆ

ಮತ್ತೆ ನಿನ್ನ ಪರಿಮಳದ ಮಾತೇಕೆ
ನಾನೊಬ್ಬನೇ ಸವಿಯುವೆ
ಮೆಲ್ಲಗೆ

ಇನ್ನು ನಾಚಿಕೆ ಏಕೆ?
ನಾ ಬರುವೆ ದಿನವು
ನಿನ್ನ ಬಳಿಗೆ

ಅತ್ತಿತ್ತ ನೋಡದಿರು ಸುಮ್ಮನೆ
ಈಗ ಇಲ್ಲಿರುವವನು
ನಾನೊಬ್ಬನೆ

ಸದ್ದು ಮಾಡದೆ ಸಂಪಿಗೆ
ಸರಸವಾಡೋಣ
ಒಟ್ಟಿಗೆ

ನೆಲಕೆ ನೆಲೆ

ನೆಲಕೆ ನೆಲೆಯಿಲ್ಲದೆ ನರಳುತಿದೆ
ಅತಿಯಾಗಿ ರಸಗೊಬ್ಬರ ಸುರಿದು
ಸಾರವನ್ನೆಲ್ಲಾ ಹೀರಿ ಬೆಂಡಾಗಿ
ಬಾಡಿ ಬರಡಾಗಿ ಬಾಯಿ ಬಿಟ್ಟಿದೆ

ಅವ್ವನ ಹಸಿವ ಬಲ್ಲವರು ಎಲ್ಲಿ
ಕೊರಳಿನ ಕೂಗು ಕೇಳಿದವರೆಲ್ಲಿ
ನೋವಿನ ತಿರುಳು ತಿಳಿದವರೆಲ್ಲಿ
ಮೌನವಾಗಿ ಮರುಗುತಿಹಳು

ಬೋರು ಕೊರೆದು ರಕ್ತ ಎಳೆದು
ಕೃತಕ ಹಸಿರು ಹರಡಿ ಹರುಷಕೆ
ಮತ್ತೆ ಹರಡಿ ಮತ್ತೆ ಅಳಿಸಿ ಅದೇ
ಅಮಾನುಷ ಅಮಾನವೀಯತೆ

ಅಸ್ತಿತ್ವದ ಆಳಕೆ ಹಾನಿಯಾಗಿ
ದಾಹ ನೀಗಲು ಸಿಗದು ನೀರು
ಧಣಿದ ದೇಹಕಿಲ್ಲ ಹನಿ ಬೆವರು
ಭಾರವಾಗಿ ಎಳೆದೆಳೆದು ಉಸಿರು