Feb 29, 2008

ಚುನಾವಣಾ ಮುನ್ಸೂಚನೆ

ಬಂತು ಬಜೆಟ್ ಎರಡು ಸಾವಿರದೆಂಟು
ತಂದಿದೆ ಎಲ್ಲರಿಗೂ ಸಂತಸದ ಗಂಟು
ಖಚಿತ ಚುನಾವಣೆಯಾ ಮುನ್ಸೂಚನೆ
ಮತದಾತರೆಲ್ಲರನೊಲಿಸುವ ಆಚರಣೆ

ರೈಲ್ವೇ ಲಾಲು ರೈಲು ಬಿಟ್ಟ ನಂತರ
ವಿತ್ತ ಸಚಿವ ಚಿದಂಬರಂ ಚಮತ್ಕಾರ
ದೇಶದ ಸಮಗ್ರ ಆರ್ಥಿಕ ಅಭಿವೃದ್ದಿ
ಎಲ್ಲಾ ಕ್ಷೇತ್ರಗಳಿಗೆ ನೀಡಿ ಸಿಹಿಸುದ್ದಿ

ದೇಶಕೆ ಮೊಟ್ಟ ಮೊದಲ ಭಾರಿಗೆ
ಭಾರೀ ರಿಯಾಯಿತಿ ನಮ್ಮ ರೈತರಿಗೆ
ಕೃಷಿ ವಲಯ ಕುಸಿತದ ತಡೆಗೆ ಯತ್ನಿಸಿ
ರೈತರ ಮುಖದಲಿ ನಗುವ ಕಾಣಲಿಚ್ಚಿಸಿ

ಅಲ್ಪ ಸಂಖ್ಯಾತರಿಗೆ ದುಪ್ಪಟ್ಟು ಹಣಕಾಸು
ಶಿಕ್ಷಣ ಕ್ಷೇತ್ರಕೆ ನೀಡಿ ಸಾಕಷ್ಟು ಆಧ್ಯತೆ
ಆರೋಗ್ಯ ರಕ್ಷಣೆಗೆ ಮನಗೊಟ್ಟು ಕೊನೆಗೆ
ಎಲ್ಲರ ಮನವೊಲಿಸಿ ಮತಗಳಿಸುವಾಸೆಗೆ

ಕಡುಬಡವರಿಗೆ ಆರೋಗ್ಯ ವಿಮೆ ಯೋಜನೆ
ಮುವತೈದು ಸಾವಿರ ಸಬ್ಸಿಡಿ ಕಟ್ಟಲು ಮನೆ
ಸಾಲ ನೀಡಿ ಮಹಿಳಾ ಸ್ವಸಹಾಯ ಗುಂಪಿಗೆ
ಬಲ ಜೀವನ ಸುರಕ್ಷೆಗೆ, ಆರೋಗ್ಯ ರಕ್ಷಣೆಗೆ

ಶೇಕಡ ಐವತ್ತರ ಗೌರವಧನ ಏರಿಕೆ
ಅಂಗನವಾಡಿ ಕಾರ್ಯಕರ್ತೆಯರಿಗೆ
ಮಧ್ಯಾಹ್ನದ ಬಿಸಿಯೂಟ ಪ್ರೌಢ ಶಿಕ್ಷಣಕೆ
ಒತ್ತು ಕೊಟ್ಟು ಹಿರಿಯರ ಆರೋಗ್ಯ ರಕ್ಷಣೆಗೆ

ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗದವರಿಗೆ
ತೆರಿಗೆಗೆ ಆದಾಯ ಮಿತಿ ಏರಿಕೆಯ ಜೊತೆಗೆ
ತೆರಿಗೆ ದರಗಳ ಮಿತಿ ಮಾಡಿರುವರು ಹೆಚ್ಚಿಗೆ
ಈ ಜಾಣ ಕ್ರಮದಿಂದ ಸೆಳೆದರವರನು ತೆಕ್ಕೆಗೆ

ವಿತ್ತ ಸಚಿವರ ದಿಟ್ಟ ನಿರ್ಧಾರಗಳ ದಿಸೆಯಿಂದ
ಹೂಡಿಕೆದಾರರಿಗೆ ಉತ್ತೇಜನ ನೀಡಳಿದೆಯ?
ಸಾಮರ್ಥ್ಯ, ಸಂಪತ್ತು ಸಂಗ್ರಹ, ಬಳಕೆ ಹೆಚ್ಚುವುದೆ?
ಸರ್ವತೋಮುಖ ಆರ್ಥಿಕ ಅಭಿವೃದ್ದಿಯು ಸಾಧ್ಯವೆ?

ಈ ಪ್ರಶ್ನೆಗಳಿಗೆ ಉತ್ತರ ವರ್ಷಗಳ ನಂತರ
ಕಾದು ನೋಡುವ ಕುತೂಹಲವಿರಲಿ ನಿಮ್ಮಹತ್ತಿರ
ಸ್ಪಷ್ಟ ಮಧ್ಯಂತರ ಚುನಾವಣೆಗಿದು ತಂತ್ರ
ಮತ್ತೆ ಕೇಂದ್ರ ಸರ್ಕಾರಕೆ ಬರುವುದು ಅತಂತ್ರ

ಒತ್ತಡ

ಒತ್ತಡದಿಂದ ಹೊರಬರುವ ಕಂದ
ಒತ್ತಡ ಜೊತೆಗೆ ಇರುವುದೇನಂದ
ಒತ್ತಡ ಬಯಸದೆ ಬೇಡುವುದರಿಂದ
ಒತ್ತಡದೊಂದಿಗೆ ಬದುಕೇನು ಚಂದ

ಒತ್ತಡ, ಒತ್ತಡ ಎತ್ತಣದೊತ್ತಡ
ಅರಿಯುವ ಆಸೆಯೇ ಒತ್ತಡವು
ಹೆಜ್ಜೆ, ಹೆಜ್ಜೆಗೂ ಗುದ್ದಾಡುವನಿವ
ಗುಡ್ಡದ ಮೇಲತ್ತಿಸಿ ಒದೆಯುವನು

ನಮಗೆ ಮಾನಸಿಕ ಒತ್ತಡ, ದೈಹಿಕ ಒತ್ತಡ
ವಿದ್ಯಾಭ್ಯಾಸದ ಜೊತೆ ಉದ್ಯೋಗದೊತ್ತಡ
ಮದುವೆಯ ನಂತರ ಸಂಸಾರದ ಒತ್ತಡ
ಅನಾರೋಗ್ಯದೊಡನೆ ಮುದಿತನದೊತ್ತಡ

ಆಡಲು, ತಿನ್ನಲು, ಮಲಗಲು ಬಿಡದೆ
ಕಲಿಯಲು, ಕಲಿಸಲು ಕಷ್ಟದ ನೆಪದಿ
ಕೂಡುವ, ಕಳೆಯುವ ಲೆಕ್ಕಕೆ ಅವಸರ
ಮುಕ್ತಿ ದೊರೆಯುವುದೆಂದೋ ದಿನಕರ

ಇರದವರಿಗುಂಟು, ಇರುವವರಿಗೆ ನಂಟು,
ಇದ್ದೂ ಇರದಂತವರಿಗ ಕಟ್ಟಿದ ಕಗ್ಗಂಟು
ಸರಸಕು, ವಿರಸಕು ತೋರದೇ ಕನಿಕರ
ಯಾರು ಏನಂದರೂ ಇದಕಿಲ್ಲವೋ ಬೇಸರ

ಇಲ್ಲಿರುವವರಿಗೂ, ಅಲ್ಲಿರುವವರಿಗೂ,
ಚಿಕ್ಕ ಚಿಣ್ಣರಿಗು, ದೊಡ್ಡ ಜಾಣರಿಗು,
ಯುವಕ, ಯುವತಿಯರ ಬೆನ್ನತ್ತಿ
ಮುದುಕರನೂ ಮುತ್ತಿದ ಅವಾಂತರ

ಇರುವ ತೀವ್ರತೆಯಲ್ಲಿರುವುದು ಅಂತರ
ಈ ಸೂಕ್ಷ್ಮವೇ ನಮಗಿರುವ ಏಕೈಕ ವರ
ಎಡ ಬಿಡದೇ ಕಾಡುವನಿವ ಭಯಂಕರ
ಈ ಪೀಡೆಗೆ ತಿಳಿಯೋ ಬೇಗನೆ ಉತ್ತರ

Feb 27, 2008

ಈ ಚುಕ್ಕಿಗೂ

ಆ ಚುಕ್ಕಿಗೂ, ಈ ಚುಕ್ಕಿಗೂ
ನಡುವೆ ಏನೀ ಅಂತರ ...
ದೈತ್ಯನಾಗಿ ಬೆಳೆವ ಕಾತುರ
ಕವಲೊಡೆದು ನಿಂತಿಹ ಕಂದರ

ಬಾಳ ಬಿಗುವಿನ ಬಿಂಕದಿಂದ
ಜನನವಿದಕೆ ಅನಿವಾರ್ಯವು
ಕಳಂಕವನ್ನೇ ಕಳಶವಾಗಿಸಿ
ಕಾಣಸಿಗದಿಹ ಚಾತುರ್ಯವೋ

ತಿಳಿಯದಾಗಿದೆ ಈ ಅಗೋಚರ
ನಿಲ್ಲದೇಕಿದೂ ನಿರಂತರ
ತೂಗು ದೀಪವೊ, ದಾರಿ ದೀಪವೊ
ನೆತ್ತಿ ಮೇಲಿನ ತೂಗು ಕತ್ತಿಯೊ

ನವ ದಿಗಂತಕೆ ನಾಂದಿ ಹಾಡುತ
ಇರುವ ಇರದುದನೆಲ್ಲ ಕೆದಕುತ
ಉರಿವಬೆಂಕಿಗೆ ತೈಲವೆರೆಯುತಾ
ನಗುವೆ ಏಕೇ ನೀನು ಸತತ

ಚುಕ್ಕಿ, ಚುಕ್ಕಿಗೂ ಖಚಿತವಂತರ
ಚೆಲುವಿನ ಚಿತ್ತಾರ ಪರಿಸರ
ನೆಟ್ಟ ನೋಟಕೆ ತರವೆ ಬೇಸರ
ನಿಜವನರಿಯೋ ದಿನವು ಸುಂದರ

ಕೃತಿಗೆ ಜನ್ಮ

ಭಾವಗಳು ಹಸಿಯಾಗಿ
ನವಿರಾದ ಚಿಗುರಾಗಿ
ಎಳೆತಾದ ಕಾಯಾಗಿ
ಒಗರಿರುವ ರುಚಿಯಾಗಿ

ಮಸುಕು ಮಸುಕಾಗಿ
ಕರಗದೆ ಬಹುವಾಗಿ
ಬಯಸದೆ ತೀವ್ರವಾಗಿ
ಹಾಗೆ ನಿರಾಳವಾಗಿ

ಭಾವನೆಗೆ ಬಣ್ಣಗಳ
ಸೆಳೆವ ಮಾತುಗಳ
ಹತ್ತು ಸನ್ನಿವೇಶಗಳ
ಹೊತ್ತು ಅಂತರಾಳ

ಆಳವಾದ ಅಧ್ಯಯನ
ವಿಭಿನ್ನ ದೃಷ್ಟಿಕೋನ
ಅನುಭವದ ಹಿನ್ನಲೆ
ಅಗಾಧ ಅರಿವಿನಲಿ

ನಿಯಂತ್ರಿತ ಚಾಲನೆ
ಕ್ರಿಯಾಶೀಲ ಚಿಂತನೆ
ಪ್ರಜ್ಞಾವಂತಿಕೆಯ ಕೆನೆ
ಅಭಿವ್ಯಕ್ತಿಯೆ ಸಾಧನೆ

ಹಲವಾರು ಆಯಾಮ
ಎಲ್ಲದರ ಸಮಾಗಮ
ಕಾಯುವ ಸಂಯಮ
ಪ್ರಬುದ್ಧ ಕೃತಿಗೆ ಜನ್ಮ

Feb 26, 2008

ಹಕ್ಕಿ*

ಫಡಫಡಿಸಿ ರೆಕ್ಕೆಯ ಬಡಿಯುತಿಹ ಹಕ್ಕಿ
ಮೊನಚಾದ ಕೊಕ್ಕಿನಿಂದಿಟ್ಟು ಚುಕ್ಕಿ
ತವಕ ತಲ್ಲಣಗಳ ನಡುವೆ ನೆಟ್ಟಿರುವೆ
ನಿನ್ನ ವಾರೆನೋಟವನು ಯಾವಕಡೆಗೆ?

ಆಳದಾ ಬೇರುಗಳ ತಳಪಾಯದಲಿ
ಮೆಲ್ಲನೇ ಅಲ್ಲಿ ಮೇಲೆದ್ದ ಮರವನು
ನೆಲೆಯಾಗಿಸಿ, ಎಲ್ಲಿಂದಲೋ ಆಯ್ದು
ಪರಿಕರಗಳನೊಟ್ಟುಗೂಡಿಸಿ ಗೂಡಾಗಿಸಿದೆ.

ಜೊತೆಗಾರನನು ರಮಿಸಿ ಸರಸ ವಿರಸ
ವೇದನೆಗಳನನುಭವಿಸಿ, ಸಂತಾನ ಬೆಳೆಸಿ
ಮತ್ತದೇ ಗಾಳಿಯಲಿ ತೂರಾಡುತಾ ಹಾರಿ
ಬಾಳ ಚಕ್ರದಲಿ ತಿರುಗುತ್ತಾ, ತಡಕುತ್ತಿವೆ.

ಹುಡುಕುತಾ ಎಲ್ಲ ತಳಮಳಗಳ ಜೊತೆ
ಮನದಾಳದಲಿ ಮಿಡಿಯುತಾ ಮೀಟುತಾ
ತವಕದಲಿ ಯಾರನೋ ನೆನೆಯುತಿರುವೆ
ನೋವ ಮೀಟಿದವನ ಮರೆಯಲೆತ್ನಿಸುವೆ.

ಈ ಬದುಕಿನ ಪಯಣದಲ್ಲಿಟ್ಟು ಚುಕ್ಕಿ
ತಿರುಗಿ ನೋಡುವ ಬಯಕೆಯಲಿ ಬಿಕ್ಕಿ
ಮತ್ತೆ ಬಾರದೆಡೆಗೆ ಹಾರಿಹೋಗಿದೆ ಹಕ್ಕಿ.

ಹಳ್ಳಿಯ ನೆನಪು

ಬೇಸಿಗೆ ರಜೆಗೆ ನಾವು ಬೇಟೆಗೆ ತೆರಳಿ
ಹೊತ್ತ ಬುತ್ತಿಯ ಮಧ್ಯಾಹ್ನಕೆ ಮುಗಿಸಿ
ದಿನದಲಿ ಅದೃಷ್ಟ ಪರೀಕ್ಷೆಯ ಮಾಡಿ
ದಣಿದ ನಂತರವೇ ಮನೆಕಡೆಗೆ ಮರಳಿ

ವರ್ಷ ಪೂರ ನಾವು ಕೂಡಿಟ್ಟ ಕಾಸನು
ಜಾತ್ರೆಯ ದಿನದಿ ಕಿಸೆಯಲಿ ಸೇರಿಸಿ
ಗೆಳೆಯರೊಡನೆ ಸಂಭ್ರಮದಿ ಹೊರಡಿ
ನಮ್ಮ ಸಂತಸಕೆ ಇಲ್ಲ ಯಾರ ಅಡ್ಡಿ

ಕಾಸಿನ ಆಟವಾ ಜಾತ್ರೆಯಲಿ ಆಡುತಾ
ಮಂಡಕ್ಕಿ, ಬೋಂಡ ಗಬ ಗಬ ಮುಕ್ಕುತಾ
ಸಂಜೆಗೆ ಕುಣಿತ, ನಾಟಕವಾ ನೋಡುತಾ
ಗೆಳೆಯರ ಜೊತೆ ಗಮ್ಮತ್ತಿನ ಮಾತಾಡುತಾ

ಗಿಡದಲಿ ಮಾಗಿದ ಸೀತಾಫಲದ ರುಚಿ
ಬೇಯಿಸಿದ ಅವರೆ, ಅಲಸಂದಿಯ ಮೆಲ್ಲುತಾ
ಸುಟ್ಟ ಕಡ್ಲೆ ಕಾಯಿಯ ಜೋರು ತಿನ್ನುತಾ
ಎಳೆ ಮುಸುಕಿನ ಜೋಳವಾ ಕಚ್ಚುತಾ

ನೀರೂರಿಸುವ ತಿನಿಸುಗಳು ಅಪಾರ
ಹಸೀ ಮಾವಿನ ಕಾಯಿಗೆ ಉಪ್ಪು ಖಾರ
ಕೆರೇಲಿ ಹಿಡಿದ ಮೀನಿನಮಸಾಲೆ ಸಾರ
ನಾಟೀ ಕೋಳಿಯ ರುಚಿ ಕಂಡವ ಶೂರ

ಅಡಿಗೆಗೆ ಕಟ್ಟಿಗೆ ಕಡಿದು ತರುವೆವು
ಸಗಣಿ ಹಾಯ್ದು ತಿಪ್ಪೆಗೆ ಸುರಿವೆವು
ದನ ಕರುಗಳಿಗೆ ಮೇವು ಕೊಡುವೆವು
ಗದ್ದೆಗೆ ಸೊಪ್ಪು ಕತ್ತರಿಸಿ ತುಳಿವೆವು

ಹುಣ್ಣಿಮೆ ದಿನ ಸಂಜೆ ಗುಡಿಯಂಗಳದಲಿ
ಸಾರಿಸಿ ರಂಗೋಲಿಯಿಂದ ಸಿಂಗರಿಸಿ
ಹುಡುಗಿಯರು ತಟ್ಟಿದ ರಾಗಿಯರೊಟ್ಟಿಗೆ
ಹುಡುಗರು ಧಾಳಿಯನಿಡುವರು ಒಟ್ಟಿಗೆ

ಶ್ರಾವಣ ಮಾಸದಿ ಹುಡುಗರಿಗೆ ಹುರುಪು
ಮೂರು ನಾಮವ ಎಳೆದು ಎಲ್ಲರ ಹಣೆಗೆ
ಆರತಿ ಕಂಬವನಿಡಿದು ಗೆಳೆಯರ ಜೊತೆಗೆ
ತಾಳವನೊಡೆದು, ಡೋಲಕ್ಕನು ಬಡಿದು

ಸುತ್ತಲಿರುವ ಎಲ್ಲಾ ಊರುಗಳನು ಸುತ್ತಿ
ರಾಗಗಳರಿಯದ ಭಜನೆಯಾ ಕಿರುಚುತ
ಎಲ್ಲರೂ ಕೊಟ್ಟ ರಾಗಿಹಿಟ್ಟು, ಅಷ್ಟೂ ಅಕ್ಕಿ
ಶೆಟ್ಟರ ಅಂಗಡಿಗೆ ಭಾರೀ ತುಟ್ಟಿಗೆ ಮಾರಿ

ಬಂದ ಹಣದಿ ಟೆಂಟಲಿ ಸಿನಿಮಾ ನೋಡಿ
ಉಳಿದ ಕಾಸನು ಮದ್ಯಂತರಕೆ ಮುಗಿಸಿ
ಮುಗಿದ ನಂತರ ಶುರು ಹರಟೆ, ಗಲಾಟೆ
ಮರಳಿ ಬರುವೆವು ಮನೆಕಡೆಗೆ ಓಡೋಡಿ