Mar 6, 2008

ಮೌನ ಬಂಗಾರ

ಮೌನದೊಳಾಡಿದ ಮಾತು ಮುತ್ತು
ಆಗಲಾರದಾಗ ಯಾರಿಗೂ ಆಪತ್ತು
ಊಹೆಗಳೊಡನೆ ಅವರ ಕಸರತ್ತು
ಬೇಕಾದ ಉತ್ತರವೇ ಆಗ ಸಿಕ್ಕೀತು!

ಮಾತು ಬೆಳ್ಳಿ, ಮೌನ ಬಂಗಾರ
ಆದರೂ ನಮಗೇಕೀತರದ ಆತುರ
ಆಹಾ! ಬಂಗಾರ ಮಡದಿ ಸಿಂಗಾರ
ನಗುವಿನಲೇತಕಿವಳಿಷ್ಟು ಸುಂದರ

ಇವರಂತರಾಳ ಯಾರ್ಯಾರಿಗೆ ಗೊತ್ತು
ನೋವುಂಡ ಮಹನೀಯರಿಗಿದರ ತುತ್ತು
ಅನುಭವದಾರುಂಡ ಚೆಂಡಾಡಿ ಗುಂಡ
ಆದಾನು ಇವ ನಾಳೆ ಗಂಡ ಬೇರುಂಡ

ಸುಮ್ಮನಿರಲಾರದವನಿರುವೆ ಮೇಲೆರೆದಂತೆ
ಮಾತನಾಡುತಲಿವ ಮತಿಗೆಡಸಿಕೊಂಡತೆ
ಸತಿ ನೀನು, ಮತಿ ನೀನು ಅಂದರೇನಂತೆ
ನಿಜ ನುಡಿವೆ ಜಾಣನೇ ನಿನಗಿರದು ಚಿಂತೆ

ಗುಟ್ಟು ಬಿಟ್ಟರೆ ಗೆಳೆಯ ಕಟ್ಟೆ ಹೊಡೆದಂತೆ
ಗಟ್ಟಿಯಾಗಿರು ನೀನು ಜುಟ್ಟು ಹಿಡಿದಂತೆ
ಆದಿ ಕೇಶವರಾಯ ವರ ಕೊಡುವನಂತೆ
ಮುದೆಂದಿಗಿರದು ನಿನಗಾವ ಕೊರತೆ

ಮೌನದಾಮಂತ್ರವನು ಪಠಿಸುತಾ ನೀನು
ಮರಣದಂಡನೆಯನು ನೀ ಗೆಲ್ಲ ಬಹುದು
ಸುಮ್ಮನಿರು ಕಂದ ಜೋ ಜೋ ಮುಕುಂದ
ಇದನರಿತು ನಡೆದರೆ ಚಂದ ನಿತ್ಯಾನಂದ

No comments: