Mar 11, 2008

ಮೂಕ ಪ್ರೇಕ್ಷಕರು

ಸಾಮಾಜಿಕ ಜವಾಬ್ದಾರಿ ಮರೆತ ಜನ ನಾಯಕರು
ಉದ್ಯಮವಾಗೆಲ್ಲವನು ರೂಪಾಂತರಗೊಳಿಸಿಹರು
ಶಿಕ್ಷಣ, ಆರೋಗ್ಯ ಸಾಮಾನ್ಯರಿಗೆ ದೂರವಾಗಿ
ಭ್ರಮನಿರಸನಗೊಂಡು ನೇಪಥ್ಯಕೆ ಸರಿದವರು

ಭ್ರಷ್ಟ ರಾಜಕಾರಣಿಗಳು, ಅಮಾನವೀಯತೆ
ಮೆರೆವ ಅಧಿಕಾರಿಗಳು ಮೂಲ ಕಾರಣಕರ್ತರು
ನಿರ್ಲಿಪ್ತತೆ, ಪಾಪ ಪ್ರಜ್ಞೆಯ ಪರಿಚಯವಿರದ
ಸ್ವಾರ್ಥ ಮನೋಭಾವದಿ ಸುಲಿಗೆ ಮಾಡುವರು

ಪ್ರತಿಭಟನೆಯ ಕಿಚ್ಚಿರದ ಜನ ಸಾಮಾನ್ಯರು
ಮೌನವಾಗಿ ಮರುಗುವರು ಬಿಗಿ ನಗುವಿನಲಿ
ಆತ್ಮ ಸ್ಥೈರ್ಯವ ತೊರೆದು ಜೀವಿಸುವರಿವರು
ಯಾರದೋ ಸಹಾಯಾಸ್ತದ ನಿರೀಕ್ಷೆಯನಿಟ್ಟು

ಸರಕಾರಿ ಸಲಕರಣೆಗಳ ಅಗಾಧ ಕೊರತೆಯಿಂದ
ಗುಣಾತ್ಮಕ ಶಿಕ್ಷಣ, ಆರೋಗ್ಯ ಮರೀಚಿಕೆಯು
ಬಡವರ ಕನಸುಗಳ ಸಾಮೂಹಿಕ ಕೊಲೆಗೈದು
ಪ್ರಜಾಸತ್ತೆಗೆ ಮುಖಭಂಗ ಮಾಡಲೆತ್ನಿಸುವರು

ಸರಕಾರಿ ಸವಲತ್ತಿಗೆ ಸೀಮಿತವಾಗಿದೆ ಬದುಕು
ಸಾಮರ್ಥ್ಯವನು ಬೆಳೆಸುವ ಅವಕಾಶವಂಚಿತರು
ಉದ್ಯೋಗಕೆ ಪರದಾಡುತಾ ದಿನ ದೂಡುತಾ
ಭಾರವಾಗಿ ಸಮಾಜಕೆ ನಿರತ್ಸಾಹದ ನಿಟ್ಟುಸಿರು

ಸಕಲ ಸವಲತ್ತುಗಳು ಶ್ರೀಮಂತರ ಸ್ವತ್ತಾಗಿ
ಪ್ರಗತಿಯ ಫಲವು ಇವರಿಗೇ ಮೀಸಲಾಗಿ
ನೆರೆಹೊರೆಯವರಲಿ ಅಸಮಾಧಾನದ ಕಿಡಿ
ಎಂದು ಸಿಡಿಯುವುದೋ ಜ್ವಾಲಾಮುಖಿಯಾಗಿ

ಜಾಣನೇ ಇದನರಿತು ಒಡನೆಯೇ ಜಾಗೃತನಾಗು
ಎಲ್ಲ ಸ್ಥರಗಳ ಬೆಳವಣಿಗೆಯ ಕಾರ್ಯಕೆ ತಲೆದೂಗು
ಪ್ರತಿಭೆಯನು ಬೆಳೆಸುವ ಪರಿಸರವ ರೂಪಿಸುತಾ
ಪ್ರೋತ್ಸಾಹ ನೀಡುವಾ ಮುಕ್ತ ಮನಸಿನೊಂದಿಗೆ

ಉತ್ತಮ ಶಿಕ್ಷಣ, ಆರೋಗ್ಯವೆಲ್ಲರಿಗೆ ಸಿಗುವಂತಾಗಿ
ಮೇಲುಕೀಳು, ಮಲತಾಯಿ ಧೋರಣೆ ಬುಡಮೇಲಾಗಿ
ಈ ಕ್ಷೇತ್ರಗಳ ಉದ್ಯಮೀಕರಣಕಿಂದು ಕಡಿವಾಣವಿಟ್ಟು
ಆರೋಗ್ಯಕರ ಸಮಾಜಕೆಲ್ಲರೂ ಕೂಡಿ ದುಡಿಯೋಣ

No comments: