Dec 20, 2008

ಎಲ್ಲೆಮೀರಿ

ಹಲವು ಚಿಂತೆಗಳೆನ್ನ ಮನವನು
ಕಾಲುಚೆಂಡಾಗಿಸಿ ಸೆಣಸುತಿಹವು,
ಬಿಡದೆ ಕ್ಷಣವು ಮೈದಾನದೆಲ್ಲೆಡೆ
ತೀವ್ರಗತಿಯಲಿ ಸಿಡಿಯುತ

ಮನದ ಅಳಲು ಸುಪ್ತ ಕಡಲು
ಉರಿವ ಜ್ವಾಲೆಯೊಳಗೆ ಒಡಲು
ಉಕ್ಕಿ ಬರುತಿರೆ ಆವಿಯಾಗಿ
ಮೋಡವಾಗಲು ಮುಕ್ತಿಯೇ

ಸಿಡಿಲು, ಮಿಂಚಿನ ಆಟ ನೋಡಲು
ಕಿಕ್ಕಿರಿದ ಜನರು ಸಾವಿರಾರು
ಅಬ್ಬರದ ಕೇಕೆ ಮೊಳಗಿದೆ ಅಲ್ಲಿ
ಆಡಂಬರ, ಅಂಧಕಾರ ಮೆರೆದು

ಭೂತಕಾಲದ ಭೂತಹಿಡಿದಿದೆ
ಸಿಗದ ಉಜ್ವಲ ಭವಿಷ್ಯತ್ ಕಾಲ
ತೊಳಗಿ ಒಮ್ಮೆಗೆ ವರ್ತಮಾನದಿಂದ
ತಿಳಿಯಾಗಲಿ ಮನವು ಈ ದಿನ

ಹೊತ್ತ ಹೊರೆಯಿದು ಕಾಲದಿಂದ
ಕಲೆಯಾಕುವ ಉತ್ಕಟ ತವಕದಿ
ಬೇಡವೆಂದರು ಬಿಡದು ಜಡಜಗ
ಭಾರವಾಗಿ ಕುಸಿವ ಭಯವೀಗ

ಸೋತು, ಸೊರಗಿ ಬಾಡಿದ ಮನಸು
ಸತತ ಕಹಿಯನು ಸಹಿಸಲಾಗದೆ
ಕರುಣೆ ತೋರೊ ಕೊನೆಯ ಕ್ಷಣದಲಿ
ಕಳೆದು ಹೋಗುವ ಮುನ್ನವೇ

No comments: