Mar 12, 2008

ಮುದ್ದು ಗಿಣಿಯೆ

ಮುನಿಸೇಕೆ ಮುದ್ದು ಗಿಣಿಯೆ
ಕರಗೆನ್ನ ಮುತ್ತಿನ ಮಣಿಯೆ
ಮನವನೇಕೆ ತೂರಿ ಬಿಡುವೆ
ಮತ್ತದರ ಹಿಂದೆ ಓಡುತಿರುವೆ

ಅದರ ಜೊತೆಗೆ ಕದನ ತರವೆ
ಈಸ್ಪರ್ಧೆಯಲಿ ಗೆಲುವ ಛಲವೆ
ನಗುವಿನಿಂದ ಸಿಂಗರಿಸಿ ಚೆಲುವೆ
ದಣಿದ ಮನವ ಮುಚ್ಚಿಬಿಡುವೆ

ಅಂಕು ಡೊಂಕು ಮೈಗೆ ಮೆರಗು
ಸಖಿಯ ಸಿಡುಕಿಗಂದ ಸೆರಗು
ನವಿರಾದ ನವಿಲಗರಿಯೆ ಚಂದ
ಈ ಸಿರಿಯನರಿಸಿ ಬಿಗಿದೆ ಬಂಧ

ದಿನಕೆ ನೂರು ಬಗೆಯ ಒಲವು
ಕ್ಷಣಕೆ ಸುಗಂಧ ಭರಿತ ಜಗವು
ಕಾಲ ಕ್ರಿಯಾಶೀಲ ಕವಿಯಂತೆ
ಇವಳವನು ಬರೆದ ಕವಿತೆಯಂತೆ

2 comments:

Sushrutha Dodderi said...

ಪ್ರಿಯ ಚಂದಿನ,
ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

ಚಂದಿನ | Chandrashekar said...

ಪ್ರಿಯ ಸುಶ್ರುತ ದೊಡ್ಡೇರಿ,

ಆಹ್ವಾನಕೆ ಸಂತಸವಾಗಿದೆ.

ನಾನು ದೂರದ ಹೈದರಾಬಾದ್ ನಲ್ಲಿ
ಸದ್ಯ ನೆಲೆಸಿರುವ ಕಾರಣ ಬರಲಾಗುತ್ತಿಲ್ಲ
ಕ್ಷಮೆಯಿರಲಿ.

ಮತ್ತೆ ಖಂಡಿತ ಬೇಟಿಯಾಗೋಣ.

ಧನ್ಯವಾದಗಳೊಂದಿಗೆ,

- ಚಂದಿನ